Google Map ಯಡವಟ್ಟು?: ಕೇರಳದ ಇಬ್ಬರು ವೈದ್ಯರ ಸಾವು, ಮೂವರ ರಕ್ಷಣೆ!
ಗೂಗಲ್ ಮ್ಯಾಪ್ (Google Map) ಇತ್ತೀಚಿನ ದಿನಗಳಲ್ಲಿ ತನ್ನ ಮೇಲೆ ಕೆಟ್ಟ ಆರೋಪಗಳ ಸುರಿಮಳೆಯನ್ನೇ ಎದುರಿಸುವಂತೆ ಆಗಿದೆ. ಈ ಮೂಲಕ ಜನರು ಇದನ್ನು ಬಳಕೆ ಮಾಡಲು ಹಿಂದು ಮುಂದು ನೋಡುವಂತೆ ಆಗಿದೆ. ಉತ್ತರ ಕೆರೊಲಿನಾದ ಹಿಕೋರಿಯಲ್ಲಿ, ಗೂಗಲ್ ಮ್ಯಾಪ್ ನಿರ್ದೇಶನಗಳನ್ನು ಅನುಸರಿಸುವಾಗ ಕುಸಿದ ಸೇತುವೆ ಮೇಲೆ ಚಾಲನೆ ಮಾಡಿ ಫಿಲಿಪ್ ಪ್ಯಾಕ್ಸನ್ ಎಂಬ ವ್ಯಕ್ತಿ ಸಾವಿಗೀಡಾಗಿದ್ದ. ಈ ರೀತಿಯ ಘಟನೆ ಈಗ ನಮ್ಮ ದೇಶದಲ್ಲಿ ನಡೆದಿದ್ದು, ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿದ್ದಾರೆ.
ಹೌದು, ಗೂಗಲ್ ಮ್ಯಾಪ್ ನಂಬಿ ಸಾವಿಗೀಡಾಗುತ್ತಿದ್ದ ವರದಿಗಳು ಈವರೆಗೂ ವಿದೇಶದಿಂದ ಕೇಳಿಬರುತ್ತಿದ್ದವು. ಆದರೆ, ಈಗ ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಪಕ್ಕದ ರಾಜ್ಯದಲ್ಲೇ ನಡೆದಿದೆ. ಇದರಿಂದಾಗಿ ಇಬ್ಬರು ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಏನಿದು ಘಟನೆ?, ಗೂಗಲ್ ಮ್ಯಾಪ್ನಿಂದ ಆದ ಯಡವಟ್ಟು ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಜಿಪಿಎಸ್ ನಿಂದಾಗಿ ಕೇರಳದ ಇಬ್ಬರು ಯುವ ವೈದ್ಯರು ಸಾವು: ಕೇರಳದಲ್ಲಿ 29 ವರ್ಷದ ಇಬ್ಬರು ವೈದ್ಯರು ಸೇರಿದಂತೆ ಇತರರು ತಮ್ಮ ಕಾರಿನಲ್ಲಿ ಸಂಚಾರ ಮಾಡುತ್ತಿದ್ದರು. ಈ ವೇಳೆ ಇವರು ಗೂಗಲ್ ಮ್ಯಾಪ್ ತೋರಿಸಿದ ಮಾರ್ಗವನ್ನು ಅನುಸರಿಸಿಕೊಂಡು ಹೋಗುವಾದ ಪೆರಿಯಾರ್ ನದಿಗೆ ಎಂಟ್ರಿ ಕೊಟ್ಟಿದ್ದಾರೆ. ಪರಿಣಾಮ ಇಬ್ಬರೂ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಪ್ರಯಾಣಿಕರನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ನ್ಯಾವಿಗೇಷನ್ ಆಪ್ಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯ ಪ್ರಾಮುಖ್ಯತೆ ಅಗತ್ಯವಾಗಿದೆ. ಗೂಗಲ್ ಮ್ಯಾಪ್ ವಿವಿಧ ಸಂದರ್ಭಗಳಲ್ಲಿ ನಿರ್ವಿವಾದವಾಗಿ ಉಪಯುಕ್ತವಾಗಿದೆ. ಆದಾಗ್ಯೂ, ನೀವು ಅದನ್ನು ಕುರುಡಾಗಿ ಅನುಸರಿಸಿದರೆ ಈ ರೀತಿಯ ಸಾವಿನ ಸ್ಥಿತಿಗೆ ಹೋಗುವುದು ಖಾಯಂ ಎನ್ನಲಾಗಿದೆ. ಪ್ರಮುಖ ವಿಷಯ ಏನೆಂದರೆ 29 ವರ್ಷ ವಯಸ್ಸಿನ ಇಬ್ಬರು ಕೇರಳ ಮೂಲದ ವೈದ್ಯರು ಈ ರೀತಿಯ ಘಟನೆಯಲ್ಲಿ ಸಾವಿಗೀಡಾಗಿರುವುದು ದುರಂತವೇ ಸರಿ.
ಈ ಸಂಬಂಧ ಪಿಟಿಐ ವರದಿ ಮಾಡಿದೆ. ಅದರಂತೆ, ಅದ್ವೈತ್ ಹಾಗೂ ಇತರ ಪ್ರಯಾಣಿಕರು ಹೋಂಡಾ ಸಿವಿಕ್ನಲ್ಲಿ ಸಂಚಾರ ಮಾಡುತ್ತಿದ್ದರು. ಭಾರೀ ಮಳೆ ಮತ್ತು ಅಪರಿಚಿತ ಸ್ಥಳವಾದ್ದರಿಂದ ಅದ್ವೈತ್ ಸಂಪೂರ್ಣವಾಗಿ ಗೂಗಲ್ ನಕ್ಷೆಗಳು ತೋರಿಸಿದ ಮಾರ್ಗವನ್ನೇ ಅವಲಂಬಿಸಿದ್ದರಂತೆ. ಅದರಂತೆ ಗೂಗಲ್ ನಕ್ಷೆ ಸೂಚಿಸಿದ ನಿರ್ಣಾಯಕ ತಿರುವನ್ನು ಚಾಲಕ ಅನುಸರಿಸಿಲ್ಲವಂತೆ. ಬದಲಾಗಿ ನೇರವಾಗಿ ಮುಂದಕ್ಕೆ ಸಾಗಿದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ರಸ್ತೆ ನೇರವಾಗಿ ಜಲಾವೃತ ಪ್ರದೇಶಕ್ಕೆ ಕರೆದುಕೊಂಡು ಹೋಗಿದೆ. ಪರಿಣಾಮ ವಾಹನವು ಪೆರಿಯಾರ್ ನದಿಯಲ್ಲಿ ಮುಳುಗಿದೆ
ಆ ಸಮಯದಲ್ಲಿ ಭಾರೀ ಮಳೆ ಇದ್ದುದ್ದರಿಂದ ಎಲ್ಲಿ ಏನಾಗುತ್ತಿದೆ ಎಂಬುದೇ ಯಾರಿಗೂ ತಿಳಿಯದಂತೆ ಆಗಿದೆ ಎನ್ನಲಾಗಿದೆ. ಈ ಸಂಬಂಧ ಅಧಿಕಾರಿಗಳು ಮಾಹಿತಿ ನೀಡಿದ್ದು, ಭಾರೀ ಮಳೆಯಿಂದಾಗಿ ಗೋಚರತೆ ತುಂಬಾ ಕಡಿಮೆ ಇತ್ತು. ಅವರು ಗೂಗಲ್ ನಕ್ಷೆ ತೋರಿಸಿದ ಮಾರ್ಗವನ್ನು ಅನುಸರಿಸುತ್ತಿದ್ದರು. ಆದರೆ, ನಕ್ಷೆ ಸೂಚಿಸಿದಂತೆ ಎಡ ತಿರುವು ತೆಗೆದುಕೊಳ್ಳುವ ಬದಲು, ಅವರು ತಪ್ಪಾಗಿ ಮುಂದೆ ಸಾಗಿ ನದಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.
ಸ್ಥಳೀಯ ನಿವಾಸಿಗಳು ಕ್ಷಿಪ್ರವಾಗಿ ಪ್ರತಿಕ್ರಿಯಿಸಿ, ನೀರಿನಲ್ಲಿ ಮುಳುಗಿದ್ದ ವಾಹನದಿಂದ ಮಹಿಳೆ ಸೇರಿದಂತೆ ಮೂವರು ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಬ್ಬರು ವೈದ್ಯರನ್ನು ಉಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಜೊತೆಗೆ ಅಧಿಕಾರಿಗಳು ಸ್ಕೂಬಾ ಡೈವಿಂಗ್ ತಂಡವನ್ನು ತ್ವರಿತವಾಗಿ ಸಜ್ಜುಗೊಳಿಸಿದರು ಮತ್ತು ಮೃತ ವೈದ್ಯರ ದೇಹಗಳನ್ನು ಹೊರ ತೆಗೆದಿದ್ದಾರೆ. ಈ ನಡುವೆ ಬದುಕುಳಿದವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದಾಗ್ಯೂ, ಗೂಗಲ್ ಮ್ಯಾಪ್ನಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕಳೆದ ಸೆಪ್ಟೆಂಬರ್ನಲ್ಲಿ ನಡೆದ ದುರಂತ ಘಟನೆಯಲ್ಲಿ, ಯುಎಸ್ ನೌಕಾಪಡೆಯ ಅನುಭವಿ ಫಿಲಿಪ್ ಪ್ಯಾಕ್ಸನ್, ನ್ಯಾವಿಗೇಷನ್ ಆಪ್ನ ಅಪಘಾತದಿಂದಾಗಿ ತನ್ನ ಜೀವವನ್ನು ಕಳೆದುಕೊಂಡರು. ತನ್ನ ಮಗಳ ಒಂಬತ್ತನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ, ಫಿಲಿಪ್ ತನ್ನ ಮನೆಗೆ ಹೋಗಲು ಗೂಗಲ್ ನಕ್ಷೆ ಬಳಕೆ ಮಾಡಿದ್ದಾನೆ. ಆದರೆ ಆಪ್ ತಪ್ಪಾದ ಮಾರ್ಗ ಸೂಚಿಸಿ ಆತ ಸಾಯುವಂತೆ ಮಾಡಿದೆ.

ಉತ್ತರ ಕೆರೊಲಿನಾದ ಹಿಕೋರಿ ವಿಷಯಕ್ಕೆ ಬರುವುದಾದ್ರೆ ಇಲ್ಲಿ ಗೂಗಲ್ ಅನ್ನೇ ನೇರವಾಗಿ ಆರೋಪ ಮಾಡಬಹುದು.ಯಾಕೆಂದರೆ ಕುಸಿತ ಸೇತುವೆಯ ವಾರ್ಗವನ್ನೇ ಈ ವೇಳೆ ನಿರ್ದೇಶಿಸಲಾಗಿದೆ. ಆದರೆ, ಕೇರಳದ ಘಟನೆಯಲ್ಲಿ ಸರಿಯಾದ ಮಾರ್ಗವನ್ನು ತೋರಿಸಿದರೂ ಸಹ ಆ ವೈದ್ಯರು ಅದನ್ನು ಅನುಸರಿಸದೆ ಈ ರೀತಿ ಯಡವಟ್ಟು ಮಾಡಿಕೊಂಡಿದ್ದಾರೆ.


Click it and Unblock the Notifications








