ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ರಾಜಕೀಯ ಪಕ್ಷಗಳಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದು, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಟಾಸ್ಕ್ ಫೋರ್ಸ್ ರಚಿಸುತ್ತೇನೆಂದು ಶನಿವಾರ ಹೇಳಿದೆ. ಹೌದು, 2019ರಲ್ಲಿ ಭಾರತದ ರಾಜಕೀಯದಲ್ಲಿ ಮತ್ತೊಂದು ಮಹಾಪರ್ವ ಶುರುವಾಗುತ್ತದೆ. ಹೀಗಾಗಲೇ ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿರುವ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವನ್ನು ಶುರು ಮಾಡಿಕೊಂಡಿವೆ.
2019ರ ಬಿಗ್ ಕದನಕ್ಕೆ FBಯಿಂದ ಟಾಸ್ಕ್ ಪೋರ್ಸ್..! ಸೋಷಿಯಲ್ ಪ್ರಚಾರಕ್ಕೆ ಬೀಳುತ್ತಾ ಅಂಕುಶ..?
ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರೀಲ್ನಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಲೇ ರಾಜಕೀಯ ಮೇಲಾಟಗಳು ನಡೆಯುತ್ತಿದ್ದು, ಸೋಷಿಯಲ್ ಮೀಡಿಯಾದ ಮೂಲಕ ಜನರನ್ನು ತಲುಪಲು ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಆದ್ದರಿಂದ ಸಾಮಾಜಿಕ ಜಾಲತಾಣದ ದುರ್ಬಳಕೆಯನ್ನು ತಪ್ಪಿಸಲು ಫೇಸ್ಬುಕ್ ತಂತ್ರವೊಂದನ್ನು ಎಣೆದಿದ್ದು, ವಿಶೇಷ ಕಾರ್ಯಪಡೆಯನ್ನು ರಚಿಸಲು ಮುಂದಾಗಿದೆ. ಈ ವಿಶೇಷ ಕಾರ್ಯಪಡೆಯಲ್ಲಿ ರಾಷ್ಟ್ರದ ನೂರಾರು ಜನರು ಇರಲಿದ್ದಾರೆ.
ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದೆ. ಆದ್ದರಿಂದ ಫೇಸ್ಬುಕ್ನಲ್ಲಿ ನಡೆಯುವ, ನಡೆಯುತ್ತಿರುವ ಚುನಾವಣಾ ಸಂಬಂಧಿತ ಹಸ್ತಕ್ಷೇಪವನ್ನು ನಿಭಾಯಿಸಲು ಟಾಸ್ಕ್ಫೋರ್ಸ್ ರಚನೆಗೆ ಮುಂದಾಗಿದೆ. 2019ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳೊಂದಿಗೆ ಕಾರ್ಯನಿರ್ವಹಿಸಲು ನಾವು ವಿಶೇಷ ತಜ್ಞರನ್ನು ನೇಮಿಸುತ್ತಿದ್ದೇವೆ ಎಂದು ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ (EMEA)ನೀತಿಗಳ ಉಪಾಧ್ಯಕ್ಷ ರಿಚರ್ಡ್ ಅಲನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗಾಗಿ ಫೇಸ್ಬುಕ್ ರಚಿಸುತ್ತಿರುವ ವಿಶೇಷ ಕಾರ್ಯ ಪಡೆಯಲ್ಲಿ ಭದ್ರತಾ ತಜ್ಞರು, ವಿಷಯ ಪರಿಣತರು ಸೇರಿ ಮತ್ತಿತರರು ಇರಲಿದ್ದು, ಚುನಾವಣಾ ಸಂಬಂಧಿತ ಫೇಸ್ಬುಕ್ ದುರ್ಬಳಕೆಯ ಎಲ್ಲಾ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ದೆಹಲಿಯಲ್ಲಿ ಆಯೋಜಿಸಿದ್ದ ಫೇಸ್ಬುಕ್ನ "ಸಮುದಾಯದ ಮಾನದಂಡಗಳು" ಎಂಬ ಕಾರ್ಯಗಾರದಲ್ಲಿ ಅಲನ್ ಮಾತನಾಡಿದ್ದಾರೆ.
ಫೇಸ್ಬುಕ್ನ ಸಮುದಾಯದ ಮಾನದಂಡಗಳನ್ನು ಕಾಯ್ದುಕೊಳ್ಳಲು ಪ್ರಪಂಚದ ನೈಜ ಹಿಂಸಾಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತಿದೆ. ಇದನ್ನು ಬಿಟ್ಟು, ಇತರೆ ದೋಷಗಳನ್ನು ನಿವಾರಿಸಲು ಬೇರೆ ಬೇರೆ ಫ್ಯಾಕ್ಟ್ ಚೇಕಿಂಗ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅಲನ್ ಹೇಳಿದ್ದಾರೆ.
ಭಾರತದಲ್ಲಿ ವಿಶೇಷ ಕಾರ್ಯಪಡೆಗೆ ಸವಾಲಾಗುವುದು ರಾಜಕೀಯ ಸುದ್ದಿ ಮತ್ತು ರಾಜಕೀಯ ಯೋಜಿತ ಪ್ರಚಾರದ ನಡುವಿನ ವ್ಯತ್ಯಾಸ ತಿಳಿಯುವುದು ಎಂದು ಅಲನ್ ಭಾವಿಸಿದ್ದಾರೆ. ಕಾರ್ಯಪಡೆ ದೇಶದಲ್ಲಿ ಹೆಚ್ಚು ಆಧರಿತವಾಗಿದ್ದು, ಇಂತಹ ವಿಷಯಗಳ ಮೇಲೆ ಸಂಪೂರ್ಣ ಅಧ್ಯಯನ ನಡೆಸುತ್ತದೆ. ಅಗತ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಕಂಪನಿ ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಅಮೇರಿಕಾದಲ್ಲಿ 2016ರ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ರಷ್ಯಾದಿಂದ ಕಾರ್ಯನಿರ್ವಹಿಸುವ ಅನೇಕ ಫೇಸ್ಬುಕ್ ಖಾತೆಗಳು ಅನೇಕ ವಿವಾದತ್ಮಕ ಸಂದೇಶಗಳನ್ನು ಹರಡಲು ಸಾಮಾಜಿಕ ಜಾಲತಾಣದ ವೇದಿಎಯನ್ನು ಬಳಸಿಕೊಂಡಿದ್ದು, ಯುಎಸ್ನಲ್ಲಿ ಫೇಸ್ಬುಕ್ ತನ್ನ ನೀತಿಗಳ ಬಗ್ಗೆ ತೀವ್ರ ಪರಿಶೀಲನೆಗೆ ಒಳಪಟ್ಟಿತ್ತು. ಅಂದಿನಿಂದ, ಫೇಸ್ಬುಕ್ ತನ್ನ ಜಾಹೀರಾತು ನೀತಿಗಳು ಸೇರಿದಂತೆ ವ್ಯವಹಾರಗಳಿಗೆ ಹೆಚ್ಚಿನ ಪಾರದರ್ಶಕತೆ ತರುವ ಮೂಲಕ ಸಾಮಾಜಿಕ ಜಾಲತಾಣದ ದುರುಪಯೋಗವನ್ನು ನಿಯಂತ್ರಿಸುತ್ತಿದೆ.
ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ವಿಶ್ವದ ಚುನಾವಣೆಗಳ ಕುರಿತು ಹೀಗಾಗಲೇ ಅನೇಕ ಸಲ ಮಾತನಾಡಿದ್ದಾರೆ. ಅವರೇಳಿದಂತೆ ಭಾರತ ಸೇರಿ ವಿಶ್ವ ಎಲ್ಲಾ ರಾಷ್ಟ್ರಗಳಲ್ಲೂ ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆ ನಡೆಯಬೇಕೆನ್ನುವುದು ಫೇಸ್ಬುಕ್ನ ಉದ್ದೇಶವಾಗಿದೆ. ಇದೇ ಏಪ್ರೀಲ್ನಲ್ಲಿ ಜುಕರ್ಬರ್ಗ್ ನಮ್ಮ ಸಾಮಾಜಿಕ ಜಾಲತಾಣದ ವೇದಿಕೆಯನ್ನು ಭಾರತ ಹಾಗೂ ಯಾವುದೇ ರಾಷ್ಟ್ರದ ಚುನಾವಣೆಯಲ್ಲಿ ದುರ್ಬಳಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರು.
ಸಮುದಯದ ಮಾನದಂಡಗಳನ್ನು ಉಲ್ಲಂಘಿಸುವ ವಿಷಯಗಳನ್ನು ಗುರುತಿಸಲು ಫೇಸ್ಬುಕ್ ಯಂತ್ರ ಕಲಿಕೆ (ML) ಮತ್ತು ಕೃತಕ ಬುದ್ಧಿಮತ್ತೆ (AI)ಯ ತಂತ್ರಜ್ಞಾನದ ಸಂಯೋಜನೆಯನ್ನು ಬಳಸುತ್ತಿದೆ. ಅದಲ್ಲದೇ, ಭಾರತದ ಪ್ರಮುಖ 12 ಭಾಷೆಗಳು ಸೇರಿ ವಿಶ್ವದ 50ಕ್ಕೂ ಹೆಚ್ಚು ಭಾಷೆಗಳಲ್ಲಿ ಅಪ್ಡೇಟ್ ಆಗುವ ವಿಷಯವನ್ನು "ಸಮುದಾಯ ಕಾರ್ಯಾಚರಣೆ" ತಂಡದ ಸದಸ್ಯರು ಪರಿಶೀಲಿಸುತ್ತಿದ್ದಾರೆ.
2018ರ ಅಂತ್ಯಕ್ಕೆ ಸಮುದಾಯ ಮಾನದಂಡಗಳ ಪರಿಶೀಲನಯಲ್ಲಿ 20 ಸಾವಿರ ಜನರು ಕೆಲಸ ಮಾಡಲಿದ್ದಾರೆ. ಈ ಪ್ರಮಾಣ ಕಳೆದ ವರ್ಷಕ್ಕಿಂತ ದ್ವಗುಣಗೊಂಡಿದೆ. ನಿಯಮಗಳ ಉಲ್ಲಂಘನೆಯನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಅಲನ್ ಹೇಳಿದ್ದಾರೆ.
ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ರಣತಂತ್ರ ಎಣೆಯುತ್ತಿರುವಾಗ ಫೇಸ್ಬುಕ್ನ ಈ ನಡೆ ಪಕ್ಷಗಳಿಗೆ ಮುಳುವಾಗುವುದರಲ್ಲಿ ಯಾವ ಸಂಶಯವಿಲ್ಲ. ಬಿಜೆಪಿ ಸೇರಿದಂತೆ ಕಾಂಗ್ರೆಸ್, ಎಎಪಿ ಮತ್ತು ಇತರ ಪಕ್ಷಗಳು ವೋಟ್ಬ್ಯಾಂಕ್ಗಾಗಿ ಸಾಮಾಜಿಕ ಜಾಲತಾಣವನ್ನೇ ಅವಲಂಭಿಸಿವೆ ಎನ್ನುವುದು ಕೂಡ ಸತ್ಯ. ಆದರೆ, ಯಾವ ಯಾವ ಅಂಶಗಳ ಮೇಲೆ ಫೇಸ್ಬುಕ್ ಕಣ್ಣಿಡುತ್ತೆ ಎನ್ನುವುದು ಇನ್ನು ಬಹಿರಂಗವಾಗಿಲ್ಲದಿರುವುದು, ರಾಜಕೀಯ ಪಕ್ಷಗಳ ಸೋಷಿಯಲ್ ಮೀಡಿಯಾ ಅಸ್ತ್ರ ಇನ್ನು ಮುಂದುವರೆಯುತ್ತಿದೆ.