ಪ್ರಧಾನಮಂತ್ರಿಗಳಿಂದ ಹೊಸ ಮೊಬೈಲ್ ಆಪ್ ಲಾಂಚ್- ಉಮಂಗ್
ದೇಶದ ಪ್ರಜೆಗಳು ಸರಕಾರದ ಸೇವೆಗಳನ್ನು ಒಂದು ಸಿಂಗಲ್ ಪ್ಲ್ಯಾಟ್ಫಾರ್ಮ್ ನಿಂದ ಪಡೆಯುವಂಥಾಗಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸದೊಂದು ಮೊಬೈಲ್ ಆಪ್ ಅನ್ನು ಲಾಂಚ್ ಮಾಡಿದ್ದಾರೆ. ಅದುವೇ ಉಮಂಗ್ ( ಉನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ ಏಜ್ ಗವರ್ನೆನ್ಸ್)

ಉಮಂಗ್ ಆಪ್ ಮೂಲಕ ಸರಕಾರದ 162 ವಿವಿಧ ಸೇವೆಗಳನ್ನು ಒಂದೇ ಮೊಬೈಲ್ ಆಪ್ನಲ್ಲಿ ಒಟ್ಟಾಗಿ ತರುವ ಪ್ರಯತ್ನ ಮಾಡಿದ್ದು, ಪ್ರಜೆಗಳಿಗೆ ಮೊಬೈಲ್ ಮೂಲಕ ಸರಕಾರವನ್ನು ಮತ್ತಷ್ಟು ಹತ್ತಿರವಾಗಿಸುವ ಗುರಿ ಹೊಂದಿದೆ ಎಂದು ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಹೊಸ ಆಪ್ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮತ್ತು ಯುಟಿಲಿಟಿ ಸೇವೆಗಳ 1200 ಕ್ಕೂ ಅಧಿಕ ಸೇವೆಗಳನ್ನು ಜನರಿಗೆ ನೀಡಲಿದ್ದು 13 ಭಾರತೀಯ ಭಾಷೆಗಳಲ್ಲಿ ವ್ಯವಹರಿಸಬಹುದಾಗಿದೆ. ಅಲ್ಲದೆ ಜನರ ಅಗತ್ಯಗಳಿಗೆ ತಕ್ಕಂತೆ ಇದನ್ನು ವಿಸ್ತರಿಸಬಹುದಾಗಿದೆ ಕೂಡ.
ಈ ಆಪ್ ಮೂಲಕ ಪ್ರಜೆಗಳು ಎಮ್ಪ್ಲಾಯಿ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (EPFO) ಸೇವೆಗಳು, ನೂತನ ಪ್ಯಾನ್ (PAN) ಸಂಖ್ಯೆ ವಿನಂತಿ ಮೊದಲಾದ ಸೇವೆಗಳನ್ನು ಪಡೆಯಬಹುದಲ್ಲದೆ, ಉದ್ಯೋಗದ ಹುಡುಕಾಟದಲ್ಲಿರುವವರು ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನಾ ದಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದಾಗಿದೆ.ಈ ಆಪ್ ವಿಂಡೋಸ್, ಆಂಡ್ರಾಯ್ಡ್ ಮತ್ತು ಐಓಎಸ್ ಫೋನ್ಗಳಲ್ಲಿ ಲಭ್ಯವಾಗಲಿದೆ.
ಮಾನ್ಯ ಪ್ರಧಾನಮಂತ್ರಿಯವರು ದೆಹಲಿಯಲ್ಲಿ ನಡೆಯುತ್ತಿರುವ ಗ್ಲೋಬಲ್ ಕಾನ್ಫರೆನ್ಸ್ ಆನ್ ಸೈಬರ್ಸ್ಪೇಸ್ 2017 ರನ್ನು ಉದ್ಘಾಟಿಸುವ ವೇಳೆ ಈ ಆಪ್ ಅನ್ನು ದೇಶದ ಜನತೆಗೆ ಸಮರ್ಪಿಸಿದ್ದಾರೆ. ಇದು ಜಿಸಿಸಿಎಸ್ ನ ಐದನೇ ಆವೃತ್ತಿಯಾಗಿದ್ದು ಅನೇಕ ಪ್ರಮುಖ ಜಾಗತಿಕ ಮುಖಂಡರು, ಪಾಲಿಸಿಮೇಕರ್ಗಳು, ಉದ್ಯಮ ತಜ್ಞರು, ಬುದ್ಧಿ ಜೀವಿಗಳು ಮತ್ತು ಸೈಬರ್ ತಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದು, ಸೈಬರ್ ಸ್ಪೇಸ್ ಅನ್ನು ಸರಿಯಾಗಿ ಬಳಸಿಕೊಳ್ಳಲು ಇರುವ ಅಡ್ಡಿ ಆತಂಕಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಗ್ಲೋಬಲ್ ಸೈಬರ್ ಪಾಲಿಸಿಯಲ್ಲಿ ಮಾನವ ಹಕ್ಕುಗಳ ಸೇರ್ಪಡೆ ಮತ್ತದರ ಪ್ರಾಮುಖ್ಯತೆಯನ್ನು ಸಾರುವುದು, ಒಂದು ತೆರೆದ ಮತ್ತು ಅನಿಯಂತ್ರಿತ ಸೈಬರ್ಸ್ಪೇಸ್ ಅನ್ನು ಬೆಂಬಲಿಸಿವುದು, ಡಿಜಿಟಲ್ ಡಿವೈಡ್ ಅನ್ನು ಸರಿಪಡಿಸಲು ಮತ್ತು ದೇಶಗಳಿಗೆ ಸಹಾಯಮಾಡಲು ಅಗತ್ಯ ಪರಿಹಾರಗಳನ್ನು ಕಂಡುಕೊಳ್ಳಲು ರಾಜಕೀಯ ಸಹಾಯ ಪಡೆಯುವುದು ಮತ್ತು ಖಾಸಗಿ ಉದ್ಯಮ ಮತ್ತು ತಾಂತ್ರಿಕ ಸಮುದಾಯದವರಿಬ್ಬರ ಮಹತ್ವವನ್ನು ಎತ್ತಿಹಿಡಿಯುವ ರೀತಿಯಲ್ಲಿ ಸುರಕ್ಷತಾ ಪರಿಹಾರಗಳನ್ನು ಕಂಡುಕೊಳ್ಳುವುದು ಈ ಸಮ್ಮೇಳನದ ಮೂಲ ಉದ್ದೇಶವಾಗಿದೆ.
"ಭಾರತ ಸುರಕ್ಷಿತ ಸೈಬರ್ ಸ್ಪೇಸ್ ನ ಹುಡುಕಾಟದಲ್ಲಿದ್ದು, ಎಲ್ಲರನ್ನೂ ಒಳಗೊಂಡಿರುವ ಡಿಜಿಟಲ್ ಜಗತ್ತನ್ನು ಸ್ಥಾಪಿಸುವ ಮೂಲಕ ಎಲ್ಲರ ಅಭಿವೃದ್ಧಿಯನ್ನು ಸಾಧಿಸುವ ಪ್ರಯತ್ನಗಳತ್ತ ಭಾರತದ ನಿಷ್ಠೆಯೇ ಈ ಹುಡುಕಾಟಕ್ಕೆ ಕಾರಣ. ಮಾನವ ಜನಾಂಗಕ್ಕೆ ಸುರಕ್ಷಿತ ಮತ್ತು ಸಮರ್ಥನೀಯ ಡಿಜಿಟಲ್ ಭವಿಷ್ಯವನ್ನು ನೀಡುವ ಸಲುವಾಗಿ ಇಲ್ಲಿ ನೆರೆದಿರುವ 131 ದೇಶಗಳ 4000 ಕ್ಕೂ ಅಧಿಕ ಪ್ರತಿಭಾವಂತ ಪ್ರತಿನಿಧಿಗಳನ್ನು ಸ್ವಾಗತಿಸಿ ಸತ್ಕರಿಸುತ್ತಿರುವುದು ಭಾರಕ್ಕೆ ಹೆಮ್ಮೆಯ ವಿಷಯವಾಗಿದೆ" ಎಂದು ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ಸಚಿವ ಹಾಗೂ ಕಾನೂನು ಸಚಿವರಾದ ಶ್ರೀ ರವಿಶಂಕರ್ ಪ್ರಸಾದ್ ಅವರು ತಿಳಿಸಿದ್ದಾರೆ.


Click it and Unblock the Notifications








