ಇನ್ಮುಂದೆ 'ಮೊಬೈಲ್ ಆಪ್' ಮೂಲಕವೇ ನಿಮ್ಮ ಮನೆ ಕಾಯಲು ಪೊಲೀಸರಿಗೆ ಹೇಳಿ!!
ಸಾರ್ವಜನಿಕರನ್ನು ರಕ್ಷಿಸಲು ಪೊಲೀಸರು ತೆಗೆದುಕೊಳ್ಳುವ ಕ್ರಮಗಳಿಗೆ ಇಂದು ತಂತ್ರಜ್ಞಾನ ಕೂಡ ಸೇರಿಕೊಂಡಿದೆ. ಮೊದಲೆಲ್ಲಾ ದೂರು ದಾಖಲಿಸಲು, ಮಾಹಿತಿ ಪಡೆಯಲು ಮೊಬೈಲ್ ಆಪ್ಗಳನ್ನು ಅಭಿವೃದ್ದಿಪಡಿಸಿಕೊಳ್ಳುತ್ತಿದ್ದ ಪೊಲೀಸರು ಈಗ ಒಂದೆಜ್ಜೆ ಮುಂದೆ ಹೋಗಿದ್ದಾರೆ. ಅಂದರೆ, ನೀವು ಈಗ ನಿಮ್ಮ ಮನೆ ಕಾಯಲು ಪೊಲೀಸರಿಗೆ ಆಪ್ ಮೂಲಕ ತಿಳಿಸಬಹುದು.
ಹೌದು, ಇಂತಹದೊಂದು ಮೊಬೈಲ್ ಆಪ್ಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಮೊರೆಹೋಗಿದೆ. ಜಿಲ್ಲೆಯ ಪೊಲೀಸ್ ಇಲಾಖೆಯ ಬತ್ತಳಿಕೆಯಲ್ಲಿರುವ ಆಪ್ ಮೂಲಕ ಪೊಲೀಸರಿಗೆ ಸಂದೇಶ ಕಳುಹಿಸಿದರೆ ಸಾಕು ನೀವು ಬರುವವರೆಗೆ ಬೀಟ್ ಪೊಲೀಸರು ನಿಮ್ಮ ಮನೆ ಮೇಲೆ ನಿಗಾ ಇಟ್ಟಿರುತ್ತಾರೆ. ಅಂದರೆ, ಪೊಲೀಸರು ನಿಮ್ಮ ಮನೆಯನ್ನು ಪೊಲೀಸರು ಕಾಯುತ್ತಾರೆ.

ಕೇಳಲು ಇದು ತಮಾಷೆಯಾಗಿ ಕಂಡರೂ, ಮನೆಗೆ ಬೀಗ ಹಾಕಿ ಬೇರೆ ಊರಿಗೆ ಹೋಗುತ್ತಿದ್ದಾಗ, ಕಳ್ಳ ಕಾಕರಿಂದ ಮನೆಯನ್ನು ರಕ್ಷಿಸುವುದು ಹೇಗಪ್ಪಾ ಎಂಬ ಯೋಚನೆ ಇದರಿಂದ ದೂರಾಗಲಿದೆ. ಹಾಗಾದರೆ. ಬೀಟ್ ಪೊಲೀಸರು ನಿಮ್ಮ ಮನೆ ಮೇಲೆ ನಿಗಾ ಇಡಲು ಹೇಳುವಂತಹ ಆಪ್ ಯಾವುದು? ಆಪ್ ಬಳಕೆ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಇಂತಹ ಒಂದು ಆಪ್ ಏಕೆ?
‘ದೀರ್ಘ ಸಮಯದವರೆಗೆ ಮನೆಯಿಂದ ಹೊರಗಡೆ ಹೋಗುವಾಗ ಬೀಟ್ ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ, ಯಾರೂ ಅದನ್ನು ಮಾಡುತ್ತಿಲ್ಲ. ಜೊತೆಗೆ ಪೊಲೀಸರು ಬೀಟ್ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಹಾಗಾಗಿ, ಪೊಲೀಸರಿಗೆ ಸಾರ್ವಜನಿಕರು ಸಂದೇಶ ಕಳುಹಿಸಬಹುದಾದ ವ್ಯವಸ್ಥೆಯನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ಪರಿಚಯಸಿದೆ.

‘ಸುಭಹು’ ಎಂಬ ಆಪ್
ಚಾಮರಾಜನಗರ ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆಯನ್ನು ಸುಧಾರಿಸಲು ‘ಸುಭಹು' ಎಂಬ ಆಪ್ ಒಂದನ್ನು ಅಭಿವೃದ್ದಿಪಡಿಸಲಾಗಿದೆ. ಈ ಆಪ್ ಜೊತೆಗೆ ಮೂರು ಆಪ್ಗಳ ಗುಚ್ಛವಿದ್ದು, ಸುಭಹು ಅಡ್ಮಿನ್, ಸುಭಹು ಗಾರ್ಡ್ ಮತ್ತು ಸುಭಹು ಸಿಟಿಜನ್ ಆಪ್ಗಳಲ್ಲಿ ಜನರಿಗೆ ಪೊಲೀಸರೊಂದಿಗೆ ಸಂವಹನ ನಡೆಸಲು ಪ್ರತ್ಯೇಕ ಆಪ್ ಒಂದನ್ನು ಮೀಸಲಿಡಲಾಗಿದೆ.

ಆಪ್ ಕಾರ್ಯನಿರ್ವಹಣೆ ಹೇಗೆ?
'ಸುಭಹು ಸಿಟಿಜನ್' ಎಂಬ ಆಪ್ ಅನ್ನು ಯಾರೂ ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಕಾರ್ಯನಿರ್ವಹಣಾ ತಂತ್ರಾಂಶದ ಮೊಬೈಲ್ಗಳಲ್ಲಿ ಲಭ್ಯವಿದೆ. ಹೆಸರು, ವಿಳಾಸ, ದೂರವಾಣಿ ಸೇರಿದಂತೆ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಈ ಆಪ್ ಮೂಲಕ ಪೊಲೀಸರಿಂದ ಸೇವೆಯನ್ನು ಪಡೆದುಕೊಳ್ಳಬಹುದು.

ಪೊಲೀಸರ ಕೆಲಸ ಹೇಗೆ?
ನೀವು ಈ ಸುಭಹು ಆಪ್ ಮೂಲಕ ಸಂದೇಶ ಕಳುಹಿಸಿದರೆ, ಅದು ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ಇನ್ಸ್ಪೆಕ್ಟರ್ ಗಮನಕ್ಕೆ ಬರುತ್ತದೆ. ಅವರು ಅದನ್ನು ಬೀಟ್ ಪೊಲೀಸರ ಗಮನಕ್ಕೆ ತರುತ್ತಾರೆ. ಆ ಸಿಬ್ಬಂದಿ ರಾತ್ರಿ ಹೊತ್ತು ಗಸ್ತು ತಿರುಗುವಾಗ ಆ ಮನೆ ಬಳಿ ತಪಾಸಣೆ ನಡೆಸುತ್ತಾರೆ. ಅದನ್ನು ಅವರು ಆಪ್ನಲ್ಲಿ ನಮೂದಿಸಿದಾಗ, ಮಾಲೀಕರಿಗೆ ಸಂದೇಶ ಹೋಗುತ್ತದೆ.

ಏಳು ತಿಂಗಳ ಪ್ರಯೋಗ
ಸುಭಹು ಸಿಟಿಜನ್ ಆಪ್ ಒಂದನ್ನು ಬಿಟ್ಟು ಉಳಿದ ಆಪ್ಗಳನ್ನು ಜಿಲ್ಲಾ ಪೊಲೀಸರು ಏಳು ತಿಂಗಳುಗಳಿಂದ ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಕೊಳ್ಳೇಗಾಲಗಳಲ್ಲಿ ಬಳಸುತ್ತಿದ್ದಾರೆ ‘ಈ ಆಪ್ ಮೂಲಕ ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡಬಹುದಾಗಿದ್ದು, ಕಂಟ್ರೋಲ್ ರೂಮ್ನಿಂದಲೇ ಅವರ ಮೇಲೆ ನಿಗಾ ಇಡಬಹುದಾಗಿದೆ.

ಆಪ್ನಲ್ಲಿ ಇನ್ನೇನಿದೆ?
ಪೊಲೀಸರ ಗಮನಕ್ಕೆ ತರಲು ಸಂದೇಶವನ್ನು ಕಳುಹಿಸಬಹುದಾದ ಸೇವೆ ಇರುವ ಈ ಆಪ್ನಲ್ಲಿ, ರೌಡಿ ಶೀಟರ್ಗಳು, ಅಪರಾಧ ಹಿನ್ನೆಲೆಯುಳ್ಳವರ ಪಟ್ಟಿ ಸಹ ಇರಲಿದೆ. ರಾತ್ರಿ ಹೊತ್ತು ಅನುಮಾನಾಸ್ಪದವಾಗಿ ಸುಳಿದಾಡುತ್ತಿರುವ ವ್ಯಕ್ತಿ, ವಾಹನಗಳ ಫೋಟೋ ತೆಗೆದು ಕಳುಹಿಸುವ ವ್ಯವಸ್ಥೆಯೂ ಇದೆ. ಇನ್ನು ಇದರ ಫಲಿತಾಂಶ ಸಕಾರಾತ್ಮಕವಾಗಿದೆ ಎಂದು ಹೇಳಲಾಗಿದೆ.


Click it and Unblock the Notifications