ಆಧಾರ್ ಬಯೋಮೆಟ್ರಿಕ್ ಡಾಟಾ ಸೇಫ್, ಆತಂಕದ ಅಗತ್ಯವಿಲ್ಲ: ರವಿಶಂಕರ್ ಪ್ರಸಾದ್
ಎಷ್ಟೇ ಬಾರಿ ಹ್ಯಾಕ್ ಮಾಡಲು ಪ್ರಯತ್ನಿಸಿದರೂ ಆಧಾರ್ ಬಯೋಮೆಟ್ರಿಕ್ ಡಾಟಾ ಹ್ಯಾಕ್ ಆಗಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಮೂಲಕ ಆಧಾರ್ ಮಾಹಿತಿ ಸುರಕ್ಷಿತವಾಗಿದ್ದು, ನಾಗರೀಕರು ಆತಂಕ ಪಡುವ ಅಗತ್ಯವಿಲ್ಲ ಎಂಬ ಸೂಚನೆ ರವಾನಿಸಿದ್ದಾರೆ.

ಭಾನುವಾರ ಗೋವಾದ ಪಣಜಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ಫಿಂಗರ್ಪ್ರಿಂಟ್ ಮತ್ತು ಐರಿಸ್ ಗುರುತುಗಳು ಸುರಕ್ಷಿತವಾಗಿದ್ದು, ಎಷ್ಟೇ ಬಾರಿ ಅವುಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದರು, ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಭಾಷಣದ ಅನೇಕ ಅಂಶಗಳು ಡಿಜಿಟಲ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದವು. ಆ ಅಂಶಗಳು ಕೆಳಗಿನಂತಿವೆ.

ಸೆಕೆಂಡ್ಗೆ 1 ಕೋಟಿ ಆಧಾರ್ ದೃಢೀಕರಣ
ಆಧಾರ್ ನಿಗಮ ಸೆಕೆಂಡ್ಗೆ ಸುಮಾರು 1 ಕೋಟಿ ಆಧಾರ್ ದೃಢೀಕರಣ ಮಾಡುತ್ತಿದೆ. ಪ್ರತಿ ಮೂರು ಸೆಕೆಂಡ್ಗೆ ಮೂರು ಕೋಟಿ ಆಧಾರ್ ದೃಢೀಕರಣ ಆಗುತ್ತಿದೆ.

80 ಕೋಟಿ ಬ್ಯಾಂಕ್ ಖಾತೆಗಳು ಜೋಡಣೆ
ಇದುವರೆಗೂ ಆಧಾರ್ನ್ನು 80 ಕೋಟಿ ಬ್ಯಾಂಕ್ ಖಾತೆಗಳಿಗೆ ಜೋಡಣೆ ಮಾಡಲಾಗಿದೆ. ಮತ್ತು ಪ್ರತಿ ವ್ಯಕ್ತಿಯ ಆಧಾರ್ ಮಾಹಿತಿಯನ್ನು ರಕ್ಷಿಸಲು ಸುಮಾರು ಒಂದು ಡಾಲರ್ ಹಣ ಖರ್ಚು ಮಾಡುತ್ತಿದ್ದು, ನಿಗದಿತ ಸಂಸತ್ ಅನುಮೋದನೆಯೊಂದಿಗೆ ಆಧಾರ್ ಮಾಹಿತಿ ಸುರಕ್ಷಿತವಾಗಿದೆ.

ಕಾನೂನು ಕ್ರಮ
ಆಧಾರ್ ಫಿಂಗರ್ಪ್ರಿಂಟ್ ಮತ್ತು ಐರಿಸ್ ಗುರುತುಗಳನ್ನು ಯಾರ ಜೊತೆಯಾದರೂ ನಾನು ಹಂಚಿಕೊಂಡರೆ, ರಾಷ್ಟ್ರೀಯ ಭದ್ರತೆಯ ಹೊರತಾಗಿದ್ದರೆ ನನ್ನ ಮೇಲೂ ಕಾನೂನು ಕ್ರಮ ಕೈಗೊಳ್ಳುವ ರೀತಿ ಕಾನೂನನ್ನು ಬಲಪಡಿಸಲಾಗಿದೆ.

ಡಿಜಿಟಲ್ ಇಂಡಿಯಾ
ಡಿಜಿಟಲ್ ಇಂಡಿಯಾದ ಕಡೆ ನೋಡಿದರೆ, ಭಾರತದ ಜನಸಂಖ್ಯೆ 130 ಕೋಟಿಯಾಗಿದೆ. 121 ಕೋಟಿ ಮೊಬೈಲ್ ಫೋನ್ಗಳ ತವರು ಭಾರತವಾಗಿದೆ. 450 ಮಿಲಿಯನ್ ಸ್ಮಾರ್ಟ್ಫೋನ್, 50 ಕೋಟಿಗೂ ಹೆಚ್ಚು ಇಂಟರ್ನೆಟ್ ಸಂಪರ್ಕ ಮತ್ತು 122 ಕೋಟಿ ಆಧಾರ್ ಕಾರ್ಡ್ಗಳಿವೆ. ಇದು ಡಿಜಿಟಲ್ ಇಂಡಿಯಾದ ಪ್ರೊಪೈಲ್.

ಡಿಜಿಟಲ್ ಕ್ರಾಂತಿ
ಸಾಮಾನ್ಯ ಭಾರತೀಯನು ಸಹ ತಂತ್ರಜ್ಞಾನದ ಸಹಾಯದಿಂದ ಅನುಕೂಲ ಪಡೆಯುವಂತಾಗಲೂ ಡಿಜಿಟಲ್ ಇಂಡಿಯಾ ಯೋಜನೆ ಜಾರಿಗೆ ತರಲಾಗಿದೆ. ಭಾರತವು ಡಿಜಿಟಲ್ ಕ್ರಾಮತಿಯ ನಾಯಕನಾಗಿ ಕಾಣುತ್ತಿದೆ. ನಾವು 60 ಮತ್ತು 70ರ ದಶಕದಲ್ಲಿ ನಡೆದ ಕೈಗಾರಿಕಾ ಕ್ರಾಂತಿ ಹಾಗೂ ಉದ್ಯಮಶೀಲ ಕ್ರಾಂತಿಯನ್ನು ಮಿಸ್ ಮಾಡಿಕೊಂಡಿದ್ದೇವೆ. ಆದರೆ, ಡಿಜಿಟಲ್ ಕ್ರಾಂತಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಡಿಜಿಟಲ್ ಕ್ರಾಂತಿಗೆ ನಾವೇ ನಾಯಕರು, ಇದೇ ಡಿಜಿಟಲ್ ಇಂಡಿಯಾದ ಸಿದ್ಧಾಂತ.

ಸಂಪರ್ಕ ಸೇತುವೆ
ಡಿಜಿಟಲ್ ಇಂಡಿಯಾವು ಡಿಜಿಟಲ್ ಮತ್ತು ಡಿಜಿಟಲೇತರ ಜಗತ್ತಿಗೂ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ. ಇದನ್ನು ಅಭಿವೃದ್ಧಿ, ಒಳಗೊಳ್ಳುವಿಕೆ ಮತ್ತು ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಸೇರ್ಪಡೆಗೆ ಮಾಡಲಾಗುತ್ತದೆ.

ತಂತ್ರಜ್ಞಾನ ಆಧಾರಿತ ಯೋಜನೆಗಳು
ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ತಂತ್ರಜ್ಞಾನ ಆಧಾರಿತವಾಗಿದ್ದು, ಸಾಮಾನ್ಯ ಭಾರತೀಯರನ್ನು ಉತ್ತೇಜನಗೊಳಿಸಲು, ಸರ್ಕಾರದೊಂದಿಗೆ ಭಾಗವಹಿಸುವಂತೆ ಮಾಡಲು ಈ ಯೋಜನೆಗಳನ್ನು ತರಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.


Click it and Unblock the Notifications