ಆಧಾರ್ ನಿಂದ ವೈಯಕ್ತಿಕ ಮಾಹಿತಿ ಸೋರಿಕೆ?..ಯಕ್ಷ ಪ್ರಶ್ನೆಗೆ ನಿಲೇಕಣಿ ಉತ್ತರ!
ಆಧಾರ್ ಎಂಬುದು ಕೇವಲ ಗುರುತಿನ ಸಂಖ್ಯೆಯಷ್ಟೇ, ನಾವು ಆಧಾರ್ ಅನ್ನು ಕೇವಲ ಒಂದು ಗುರುತಿನ ಸಂಖ್ಯೆಯಾಗಿ ನೋಡಬೇಕು. ಇದರಿಂದ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರು ಸಮರ್ಥಿಸಿಕೊಂಡಿದ್ದಾರೆ. ಆರ್ಥಿಕತೆ ಮತ್ತು ಉದ್ಯಮದ ಮೇಲೆ ಡಿಜಿಟಲ್ ಭಾರತದ ಪ್ರಭಾವ ವಿಷಯದ ಕುರಿತು ಮಾತನಾಡುವಾಗ, ಹೆಚ್ಚು ಸುದ್ದಿಯಲ್ಲಿರುವ ಇಂತಹದೊಂದು ಪ್ರಮುಖ ಮಾಹಿತಿಯನ್ನು ಸಾರ್ವಜನಿಕವಾಗಿ ಮುಂದಿಟ್ಟಿದ್ದಾರೆ.
ಹೌದು, ಸೋಮವಾರ ಬೆಂಗಳೂರಿನಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ 'ಆರ್ಥಿಕತೆ ಮತ್ತು ಉದ್ಯಮದ ಮೇಲೆ ಡಿಜಿಟಲ್ ಭಾರತದ ಪ್ರಭಾವ' ವಿಷಯದ ಕುರಿತು ಅವರು ಮಾತನಾಡಿದರು. ಈ ವೇಳೆ ಅವರು ದೇಶದ ಆರ್ಥಿಕತೆಯ ಪುನಶ್ಚೇತನ ಪ್ರಕ್ರಿಯೆಯಲ್ಲಿ ಡಿಜಿಟಲ್ ಮೂಲಸೌಕರ್ಯಗಳು ಪ್ರಮುಖ ಪಾತ್ರ ವಹಿಸಲಿದೆ ಮತ್ತು ಆಧಾರ್ ನಿಂದ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ತಿಳಿಸಿದರು.

ಆಧಾರ್ ಎಂಬುದು ವ್ಯಕ್ತಿಯ ಗುರುತನ್ನು ಪ್ರಮಾಣಿಕರಿಸಲು ಇರುವ ಒಂದು ಸಂಖ್ಯೆಯಾಗಿದೆ. ಇದು ಅತ್ಯಂತ ಸರಳೀಕೃತ ವ್ಯವಸ್ಥೆಯಾಗಿದೆ. ಇದರಿಂದ ಒಬ್ಬರ ಮೇಲೆ ನಿಗಾ ಇಡಲು ಇದನ್ನು ದುರ್ಬಳಕೆ ಮಾಡಲು ಮತ್ತು ಖಾಸಗಿ ಸಂಸ್ಥೆಗಳು ಆಧಾರ್ ಸಂಖ್ಯೆಯನ್ನು ಸಂಗ್ರಹಿಸಿ ಇಡಲು ಸಾಧ್ಯವಿಲ್ಲ. ಒಂದು ವೇಳೆ ಅದರ ಸಂಗ್ರಹವಾದರೂ ಯಾವುದೇ ರೀತಿಯ ಖಾಸಾಗಿ ಮಾಹಿತಿ ದುರುಪಯೋಗವಾಗುವುದು ಅಸಾಧ್ಯವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ದೇಶದ ಆರ್ಥಿಕತೆಯ ಪುನಶ್ಚೇತನ ಪ್ರಕ್ರಿಯೆಯಲ್ಲಿ ಡಿಜಿಟಲ್ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸಲಿದೆ. ಡಿಜಿಟಲ್ ದತ್ತಾಂಶ ವ್ಯವಸ್ಥೆಯಿಂದ ಉದ್ದಿಮೆ ವಹಿವಾಟುಗಳ ಪುನಶ್ಚೇತನ ಸಾಧ್ಯ. ನಿರ್ಧಾರ ತೆಗೆದುಕೊಳ್ಳಲು ದತ್ತಾಂಶವೇ ಮೂಲವಾದಾಗ ಹಲವು ವಲಯಗಳಲ್ಲಿ ಭಾರಿ ಬದಲಾವಣೆಗಳನ್ನು ಕಾಣಬಹುದು.ಜನಸಾಮಾನ್ಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ 'ಆಧಾರ್ ಆಧಾರಿತ ಇ-ಕೆವೈಸಿ ಮತ್ತು ಆನ್ಲೈನ್ ಪಾವತಿ ವ್ಯವಸ್ಥೆಗಳು ಕ್ರಾಂತಿಕಾರಕ ನಿರ್ಧಾರಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಇಂದು ಯಾವುದೇ ವಲಯದಲ್ಲಾದರೂ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಬಳಸಬಹುದಾಗಿದೆ. 'ತಂತ್ರಜ್ಞಾನ ಆಧಾರಿತ ವ್ಯವಸ್ಥೆಗೆ ಜಿಎಸ್ಟಿಎನ್ ಒಂದು ಉತ್ತಮ ಉದಾಹರಣೆಯಾಗಿದೆ. ಬ್ಯಾಂಕ್ ಖಾತೆಗಳಿಗೆ ಆರ್ಎಫ್ಐಡಿ ಟ್ಯಾಗ್ ಸಂಪರ್ಕಿಸಿರುವುದು ಇನ್ನೊಂದು ಅತಿದೊಡ್ಡ ಸುಧಾರಣೆ ಎಂದು ಹೇಳಿದ ಅವರು, ಕೆಲವೊಂದು ಮಿತಿಗಳ ನಡುವೆಯೂ ದೇಶದ ಆರ್ಥಿಕತೆಯ ಪುನಶ್ಚೇತನ ಪ್ರಕ್ರಿಯೆಯಲ್ಲಿ ಡಿಜಿಟಲ್ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.


Click it and Unblock the Notifications