Ayodhya: ರಾಮಮಂದಿರದ ವಿಐಪಿ ಪಾಸ್ಬೇಕೆ? ಅದಕ್ಕೂ ಮೊದಲು ಈ ಸುದ್ದಿ ಗಮನಿಸಿ!
ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರಾರಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಇಡೀ ವಿಶ್ವವೇ ಜನವರಿ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ ಬೆರಗುಗಣ್ಣಿನಿಂದ ಕಾಯುತ್ತಿದೆ. ಆದರೆ ಇದೇ ಸಮಯದಲ್ಲಿ ಸೈಬರ್ ವಂಚಕರು ತಮ್ಮ ಕೈ ಚಳಕವನ್ನು ತೋರಿಸುವುದಕ್ಕೆ ಮುಂದಾಗಿದ್ದಾರೆ.
ಹೌದು, ಅಯೋದ್ಯೆ (Ayodhya) ಶ್ರೀರಾಮ ಮಂದಿರದ ರಾಮ್ಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕಾಗಿ ಈಗಾಗಲೇ ರಾಮಮಂದಿರ ಟ್ರಸ್ಟ್ನಿಂದ ಆಹ್ವಾನ ಪತ್ರಿಕೆಗಳನ್ನು ನಿಡಲಾಗುತ್ತಿದೆ. ಆದರೆ ಇದನ್ನೆ ಆಧಾರವಾಗಿಟ್ಟುಕೊಂಡಿರುವ ವಂಚಕರು ಆನ್ಲೈನ್ನಲ್ಲಿ ವಿಐಪಿ ಪಾಸ್ನ ಆಮಿಷ ತೋರಿಸುವ ಮೂಲಕ ಹಣ ಎಗರಿಸುವ ಕಾರ್ಯವನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟಕ್ಕೂ ರಾಮಮಂದಿರದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಏನು? ಇದರ ಬಗ್ಗೆ ಕಂಪ್ಲೀಟ್ ಡಿಟೈಲ್ಸ್ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಯೋದ್ಯ ಶ್ರೀರಾಮ ಮಂದಿನ ಕಾರ್ಯಕ್ರಮಕ್ಕೆ ವಿಐಪಿ ಪಾಸ್ ನೀಡುವುದಾಗಿ ಹೇಳಿಕೊಂಡು ಸೈಬರ್ ವಂಚಕರು ವಂಚಿಸುತ್ತಿರುವ ಪ್ರಕರಣಗಳು ದಾಖಲಾಗಿದೆ. ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭ ಹತ್ತಿರವಾಗುತ್ತಿದ್ದ ಹಾಗೇ ಸೈಬರ್ ಕ್ರಿಮಿನಲ್ಗಳು ವಾಟ್ಸಾಪ್ ವಂಚನೆಗೆ ಇಳಿದಿದ್ದಾರೆ. ಶ್ರೀರಾಮ ಭಕ್ತರನ್ನೇ ಗುರಿಯಾಗಿಸಿಕೊಂಡು ವಂಚನೆಯ ಜಾಲಕ್ಕೆ ಕೈ ಹಾಕಿದ್ದಾರೆ. ವರದಿಗಳ ಪ್ರಕಾರ, ಕೆಲವು ಭಕ್ತರು ರಾಮಮಂದಿರ ಕಾರ್ಯಕ್ರಮಕ್ಕೆ ನಕಲಿ ವಿಐಪಿ ಪ್ರವೇಶವನ್ನು ನೀಡುವ ಸಂದೇಶಗಳನ್ನು ಈಗಾಗಲೇ ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ವಂಚಕರು ವಿಐಪಿ ಪಾಸ್ ಹೆಸರಿನಲ್ಲಿ ಸಂದೇಶ ಕಳುಹಿಸಿ ಅಪರಿಚಿತ APK ಫೈಲ್ ಅನ್ನು ಡೌನ್ಲೋಡ್ ಮಾಡಲು ಸೂಚನೆ ನೀಡಿದ್ದಾರೆ. ಈ ಫೈಲ್ ಸ್ಪೈವೇರ್ ಅಥವಾ ಮಾಲ್ವೇರ್ ಅನ್ನು ಹೊಂದಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಇದು ಬಳಕೆದಾರರಿಂದ ಡೇಟಾ ಕದಿಯುವ ನಿರೀಕ್ಷೆಯಿದೆ ಎನ್ನಲಾಗಿದೆ. ಸದ್ಯ ವಿಐಪಿ ಹೆಸರಿನ ಸಂದೇಶ ಸ್ವೀಕರಿಸಿದವರಿಗೆ ಅಭಿನಂದನಾ ಸಂದೇಶವನ್ನು ಕಳುಹಿಸಲಾಗಿದೆ. ಈ ಸಂದೇಶದಲ್ಲಿ ನೀವು "ಜನವರಿ 22 ರಂದು ರಾಮಮಂದಿರದ ಉದ್ಘಾಟನೆಯಲ್ಲಿ ಭಾಗವಹಿಸಲು ವಿಐಪಿ ಪ್ರವೇಶವನ್ನು ಪಡೆಯುತ್ತಿದ್ದೀರಿ ಎಂದು ಹೇಳಲಾಗಿದೆ.

ಇದಕ್ಕಾಗಿ ನೀವು ಈ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಮೂಲಕ ವಿಐಪಿ ಪಾಸ್ ಅನ್ನು ಡೌನ್ಲೋಡ್ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ರಾಮಮಂದಿರ ಟ್ರಸ್ಟ್ ಇಲ್ಲಿಯವರೆಗೆ ಯಾವುದೆ ರೀತಿಯ ವಿಐಪಿ ಪಾಸ್ಗಳನ್ನು ನೀಡಿರುವುದಿಲ್ಲ ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ. ಇಲ್ಲಿಯವರೆಗೆ ರಾಮಮಂದಿರ ಟ್ರಸ್ಟ್ ಆಹ್ವಾನ ಪತ್ರಗಳನ್ನು ಖುದ್ದಾಗಿ ನೀಡಿದ್ದು, ಮಾನ್ಯ ಆಮಂತ್ರಣಗಳನ್ನು ಹೊಂದಿರುವ ಅಥವಾ ಅಧಿಕೃತ ಸರ್ಕಾರಿ ಕರ್ತವ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಮಾತ್ರ ಜನವರಿ 22 ರಂದು ಅಯೋಧ್ಯೆಗೆ ಪ್ರವೇಶಿಸಲು ಅವಕಾಶವಿರುತ್ತದೆ.
ಇದರೊಂದಿಗೆ ವಿಐಪಿ ಪಾಸ್ ಮಾತ್ರವಲ್ಲದೆ ಅಯೋಧ್ಯೆ ರಾಮಮಂದಿರದಿಂದ ಉಚಿತ ಪ್ರಸಾದವನ್ನು ನೀಡುವುದಾಗಿ ಕೂಡ ನಕಲಿ ವೆಬ್ಸೈಟ್ಗಳು ವಂಚನೆ ಮಾಡುತ್ತಿವೆ. ಈ ಸೈಟ್ಗಳು ಭಕ್ತರಿಗೆ ಪ್ರಸಾಧವನ್ನು ನೇರವಾಗಿ ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಲು ಶಿಪ್ಪಿಂಗ್ ಚಾರ್ಜ್ ಅನ್ನು ನೀಡಬೇಕಾಗುತ್ತದೆ ಎಂದು ಹೇಳುತ್ತಿವೆ. ಆದರಿಂದ ಭಕ್ತರು ಆನ್ಲೈನ್ನಲ್ಲಿ ಜಾಗರೂಕರಾಗಿರಿ ಮತ್ತು ವಿಶ್ವಾಸಾರ್ಹ ವೆಬ್ಸೈಟ್ಗಳೊಂದಿಗೆ ಮಾತ್ರ ಸಂವಹನ ನಡೆಸುವಂತೆ ಸಲಹೆ ನೀಡಲಾಗಿದೆ.

ಇಡೀ ದೇಶವೇ ರಾಮಮಂದಿರದ ಸಮಾರಂಭಕ್ಕಾಗಿ ಕಾಯುತ್ತಿರುವಾಗ ಭಕ್ತರ ಭಕ್ತಿಯನ್ನೆ ಬಂಡವಾಳವಾಗಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಸೈಬರ್ ವಂಚಕರು ಮುಂದಾಗಿದ್ದಾರೆ. ಇದರ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವುದು ಭಕ್ತರಿಗೆ ದೊಡ್ಡ ಸವಾಲಾಗಿದೆ. ಏಕೆಂದರೆ ಭಕ್ತಿಯ ಪರಾಕಾಷ್ಟೆಯಲ್ಲಿ ನಕಲಿ ವೆಬ್ಸೈಟ್ಗಳ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಹೋಗದಿರುವ ಸಾಧ್ಯತೆ ಕೂಡ ಇರುತ್ತದೆ. ಆದರಿಂದ ರಾಮಮಂದಿರ ಸಮಾರಂಭದ ಹೆಸರಿನಲ್ಲಿ ಸಂದೇಶ ಕಳುಹಿಸುವ ವೆಬ್ಸೈಟ್ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.


Click it and Unblock the Notifications








