ಬೆಂಗಳೂರಿನಲ್ಲಿ ನಡೆದಿದೆ 61.58 ಲಕ್ಷ ರೂಪಾಯಿಗಳ ಮಹಾವಂಚನೆ! ಏನಿದು ಈ ಚಿದಂಬರ ರಹಸ್ಯ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆನ್ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಂಚನೆ ಪ್ರಕರಣಗಳಲ್ಲಿ ಪ್ರಮುಖವಾಗಿ ಪಾರ್ಟ್ ಟೈಂ ಜಾಬ್ ಹೆಸರಿನ ವಂಚನೆಗಳು ಅಧಿಕವಾಗಿದೆ. ಈ ವಂಚನೆಗಳಿಗೆ ಬಲಿಯಾಗುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯವರು ಟೆಕ್ಕಿಗಳು ಅನ್ನೋದು ವಿಪರ್ಯಾಸ. ಇದೀಗ ಇಂತಹದ್ದೆ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.
ಹೌದು, ಬೆಂಗಳೂರು ಮೂಲದ 41 ವರ್ಷದ ಉದಯ್ ಉಲ್ಲಾಸ್ ಎಂಬ ಟೆಕ್ಕಿಗೆ ವಂಚಕರು 61.58 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ. ಟೆಲಿಗ್ರಾಮ್ ನಲ್ಲಿ ಸುಹಾಸಿನಿ ಎಂಬ ಹೆಸರಿನ ಮೂಲಕ ಪರಿಚಯವಾದ ವಂಚಕರು ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಉಂಡೆನಾಮ ತಿಕ್ಕಿದ್ದಾರೆ. ಟೆಲಿಗ್ರಾಮ್ನಲ್ಲಿ ಸ್ಟಾಕ್ ಮಾರ್ಕೆಟ್ ಟ್ರೆಂಡ್ಗಳನ್ನು ಪರಿಶೀಲಿಸುವುದು ಉದಯ್ ಉಲ್ಲಾಸ್ ಅವರ ಹವ್ಯಾಸವಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಟೆಕ್ಕಿಯನ್ನು ಸುಲಭವಾಗಿ ವಂಚಿಸಿದ್ದಾರೆ.

ಪಾರ್ಟ್ ಟೈಂ ಜಾಬ್ ಆಫರ್ ಇದು ಟೆಕ್ಕಿಗಳನ್ನು ಸುಲಭವಾಗಿ ವಂಚಿಸುವುದಕ್ಕೆ ವಂಚಕರು ಬಳಸುತ್ತಿರುವ ಅಸ್ತ್ರವಾಗಿದೆ. ಇತ್ತೀಚಿಗೆ ನಡೆದಿರುವ ಬಹುತೇಕ ಆನ್ಲೈನ್ ವಂಚನೆ ಪ್ರಕರಣಗಳು ಪಾರ್ಟ್ ಟೈಮ ಜಾಬ್ಗೆ ಸಂಬಂಧಿಸಿದಂತೆ ನಡೆದಿದೆ. ಈ ಘಟನೆಯಲ್ಲಿಯೂ ಸಹ ಟೆಕ್ಕಿಯನ್ನು ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ವಂಚಿಸಲಾಗಿದೆ. ಹಣ ಹೂಡಿಕೆ ಮಾಡುವ ಮೂಲಕ ಅದನ್ನು ಡಬಲ್ ಮಾಡಿಕೊಳ್ಳುವ ಅವಕಾಶ ನೀಡುವ ಉದ್ಯೋಗದ ಭರವಸೆ ನೀಡಿ ವಂಚಿಸಲಾಗಿದೆ.
ಅಂದರೆ ಟೆಲಿಗ್ರಾಮ್ನಲ್ಲಿ ಸುಹಾಸಿನಿ ಎಂಬ ಹೆಸರಿನ ಮೂಲಕ ಪರಿಚಯವಾದ ವಂಚಕರು ಉದಯ್ಗೆ ಹೊಸ ಟ್ರೆಂಡಿಂಗ್ ಯೋಜನೆಯ ಬಗ್ಗೆ ವಿವರಿಸಿದ್ದಾರೆ. ಈ ಯೋಜನೆಯು ಆರ್ಥಿಕ ಹೂಡಿಕೆಗಳಿಗೆ ಬೇಡಿಕೆಯಿರುವ ಕಾರ್ಯಗಳನ್ನು ಕೈಗೊಳ್ಳುವುದನ್ನು ಒಳಗೊಂಡಿರುತ್ತದೆ. ಇದು ಲಾಭದಾಯಕ ಆದಾಯವನ್ನು ನೀಡಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದರ ಹೆಚ್ಚಿನ ವಿವರಗಳಿಗೆ ವೆಬ್ಸೈಟ್ಗೆ ಬೇಟಿ ನೀಡಿ ಎಂದು URL ಕಳುಹಿಸಿದ್ದಾರೆ. ಅದನ್ನು ಕ್ಲಿಕ್ ಮಾಡಿದ ಟೆಕ್ಕಿ Skscanner-job23 ಹೆಸರಿನ ವೆಬ್ಸೈಟ್ನಲ್ಲಿ 10,000 ರೂ. ಗಳ ಆರಂಭಿಕ ಹೂಡಿಕೆಯನ್ನು ಮಾಡಿದ್ದಾರೆ. ಅಲ್ಲದೆ ಆರಂಭಿಕ ಹೂಡಿಕೆಯ ಮೂಲಕ 20 ಲಕ್ಷ ಲಾಭ ಗಳಿಸಿರುವುದಾಗಿ ಸಂದೇಶ ಬಂದಿದೆ.

ಆರಂಭಿಕ ಹಂತದಲ್ಲಿಯೇ 20 ಲಕ್ಷ ಗಳಿಕೆ ಮಾಡಿದ ಖುಷಿಯಲ್ಲಿ ಉಲ್ಲಾಸ್ ಹಣವನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಇಲ್ಲಿ ಹಣವನ್ನು ಹಿಂಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ನಂತರ ಸುಹಾಸಿನಿಯ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಂಚಕರು ಹಣ ಹಿಂಪಡೆಯ ಬೇಕಾದರೆ ಹೆಚ್ಚುವರಿ 10 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ಹೇಳಿದ್ದಾರೆ. ಹೇಗಿದ್ದರೂ 20 ಲಕ್ಷ ಗೆದ್ದಿರುವೇ ನಂತರದ ದಿನಗಳಲ್ಲಿ ಹೆಚ್ಚಿನ ಹಣ ಗೆಲ್ಲಬಹುದು ಎಂಬ ಆಸೆಗೆ ಉದಯ್ ಉಲ್ಲಾಸ್ ಬಿದ್ದಿದ್ದಾರೆ. ಅದರಂತೆ ತಮ್ಮ ಸ್ನೇಹಿತರ ಬಳಿ ಸಾಲ ಮಾಡಿ ಹಣವನ್ನು ಪಾವತಿಸಿದ್ದಾರೆ.
ಹೆಚ್ಚುವರಿ ಹಣವನ್ನು ಪಾವತಿಸಿದ ನಂತರವೂ ಸಹ ಹಣ ಬಿಡುಗಡೆ ಆಗಿಲ್ಲ. ಏಕೆಂದರೆ ಇದರಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದೆ, ಆದರಿಂದ ಒಟ್ಟು 20 ಲಕ್ಷ ರೂಪಾಯಿಗಳ ಹೆಚ್ಚುವರಿ ಪಾವತಿ ಮಾಡಿರಿ ಎಂಬ ಸಂದೇಶ ಕಾಣಿಸಿಕೊಂಡಿದೆ. ಹೀಗೆ ಹಂತ ಹಂತವಾಗಿ ಉಲ್ಲಾಸ್ ಅವರಿಂದ 61.5 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲಾ ಕಳೆದುಕೊಂಡ ನಂತರ ಉದಯ್ ಉಲ್ಲಾಸ್ ಅವರಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ.

ತಕ್ಷಣವೇ ಉಲ್ಲಾಸ್ ಅವರು ಬೆಂಗಳೂರು ದಕ್ಷಿಣ CEN ಪೊಲೀಸರಿಗೆ ದೂರು ನೀಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯನ್ನು ತಲುಪಿಸಲು ಪ್ರೇರೇಪಿಸುವುದು) ಮತ್ತು 419 (ವ್ಯಕ್ತಿಯಿಂದ ವಂಚನೆಗೆ ಶಿಕ್ಷೆ) ಜೊತೆಗೆ ಐಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇಂತತಹ ಪ್ರಕರಣಗಳನ್ನು ಪರಿಹರಿಸುವಲ್ಲಿ ಎಚ್ಚರಿಕೆಯ ಪ್ರಯತ್ನಗಳ ಅಗತ್ಯವನ್ನು ಸೈಬರ್ ಕ್ರೈಮ್ ತಜ್ಞರು ಒತ್ತಿಹೇಳುತ್ತಾರೆ.


Click it and Unblock the Notifications








