ನಶೆಯಲ್ಲಿ ತೆಲಾಡಿದ ಊಬರ್ ಡ್ರೈವರ್..! ಕಾರನ್ನು ಓಡಿಸಿದ ಪ್ರಯಾಣಿಕ..!
ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ಓಲಾ, ಊಬರ್ ಕ್ಯಾಬ್ ಗಳು ಗ್ರಾಹಕರಿಗೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಿವೆ ಎಂಬುದೇನೋ ನಿಜ. ಆದರೆ ಸಂಚಾರದ ವಿಚಾರದಲ್ಲಿ ಎಷ್ಟು ಪ್ರಸಿದ್ಧಿಯನ್ನು ಇವು ಪಡೆದವೋ ಅಷ್ಟೇ ಸುದ್ದಿಯನ್ನು ಕೆಟ್ಟ ಕಾರಣಗಳಿಂದಲೂ ಮಾಡಿವೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುವಂತದ್ದು. ಪ್ರಯಾಣಿಕರಿಗೆ ಬೇರೆಬೇರೆ ಕಾರಣಗಳಿಂದಾಗಿ ಈ ಕ್ಯಾಬ್ ಸೇವೆಗಳಲ್ಲಿ ಕಿರುಕುಳವಾಗಿದೆ ಎಂಬುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ನಾವು ನೋಡಿಯಾಗಿದೆ. ಈಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ನಡೆದ ಘಟನೆ:
ಹೌದು ಪ್ರಯಾಣಿಕರೊಬ್ಬರು ಊಬರ್ ಕ್ಯಾಬ್ ನಿಂದಾಗಿ ಸಮಸ್ಯೆ ಎದುರಿಸಿದ ಪ್ರಕರಣವೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಚೆನ್ನಾಗಿ ಕುಡಿದು ಡ್ರೈವ್ ಮಾಡುತ್ತಿದ್ದ ಡ್ರೈವರ್ ಒಬ್ಬ ಪ್ರಯಾಣಿಕರೊಬ್ಬರಿಗೆ ಸಮಸ್ಯೆ ಮಾಡಿದ್ದ. ಅದರ ವೀಡಿಯೋವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸೂರ್ಯ ಉರುಗಂಟಿ ಎಂಬ ಹೆಸರಿನ ಪ್ರಯಾಣಿಕರೊಬ್ಬರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಊಬರ್ ಕ್ಯಾಬ್ ಬುಕ್ ಮಾಡಿ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಬದಲ್ಲಿ ಈ ಘಟನೆ ಸಂಭವಿಸಿದೆ. ಅವರು ಕ್ಯಾಬ್ ಡ್ರೈವರ್ ಬಳಿ ಪ್ರಶ್ನಿಸುವ ಮತ್ತು ಕ್ಯಾಬ್ ಡ್ರೈವರ್ ಯಾವುದೇ ಪ್ರಪಂಚ ಜ್ಞಾನವಿಲ್ಲದವನಂತೆ ಉತ್ತರಿಸುವ ವೀಡಿಯೋ ಇದೀಗ ವೈರಲ್ ಆಗಿದೆ.
“ ಊಬರ್ ನಲ್ಲಿ ಭಾರತದಲ್ಲಿ ಸಂಚರಿಸುವುದು ನಾನು ಅಂದುಕೊಂಡಷ್ಟು ಉತ್ತಮವಾಗಿರಲಿಲ್ಲ. ಡ್ರೈವರ್ ಚೆನ್ನಾಗಿ ಕುಡಿದಿದ್ದ ಮತ್ತು ನಷೆಯಲ್ಲಿದ್ದ. ನಾನು ಕಾರನ್ನು ರಸ್ತೆಯ ಬದಿಗೆ ತಳ್ಳಬೇಕಾಯಿತು ಮತ್ತು ಮನೆಗೆ ಸ್ವತಃ ನಾನೇ ಕಾರನ್ನು ನನ್ನ ಮನೆಗೆ ಡ್ರೈವ್ ಮಾಡಿಕೊಂಡು ತೆರಳಬೇಕಾಯಿತು. ಈ ಸಮಸ್ಯೆಯನ್ನು ನೀವು ಬಗೆಹರಿಸಬೇಕು” ಎಂದು ಸೂರ್ಯ ಅವರು ವೀಡಿಯೋ ಸಹಿತ ತಮ್ಮ ಅಭಿಪ್ರಾಯವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಅವರಿಗೆ ಆಪ್ ನಲ್ಲಿ ಕಾಣಿಸಿದ ಡ್ರೈವರ್ ಆತ ಆಗಿರಲಿಲ್ಲ ಎಂಬ ಸಂಗತಿಯನ್ನೂ ಕೂಡ ಆತ ಹಂಚಿಕೊಂಡಿದ್ದಾರೆ. ಇಂತಹ ಸಮಸ್ಯೆ ಹೆಚ್ಚಾದಲ್ಲಿ ಭದ್ರತೆ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ ಇದು ಗಂಭೀರ ಭದ್ರತಾ ವಿಚಾರ ಆಗಿರುವುದರಿಂದಾಗಿ ಕೂಡಲೇ ಇಂತಹ ಡ್ರೈವರ್ ಗಳನ್ನು ಹಿಡಿದು ಕ್ರಮ ತೆಗೆದುಕೊಳ್ಳಬೇಕು. ಭಾರತದಲ್ಲಿ ಏರ್ ಪೋರ್ಟ್ ಗಳಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿ ಕಾಣಿಸುತ್ತಿದೆ. ನಮ್ಮ ಸಂಚಾರ ಆರಂಭವಾಗುವ ಮುನ್ನವೇ ಆಪ್ ನಲ್ಲಿ ರಿಜಿಸ್ಟ್ರರ್ ಆಗಿರುವ ಡ್ರೈವರ್ ಇದ್ದಾರೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸಿ ನಂತರ ಒಂದು ವೇಳೆ ಇಲ್ಲದೇ ಇದ್ದರೆ ಕೂಡಲೇ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂಬ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ.
ದುರದೃಷ್ಟವಶಾತ್ ಊಬರ್ ಸೇಫ್ಟೀ ಟೀಮ್ ಅವರಿಗೆ 20 ಘಂಟೆಗಳ ನಂತರ ಪ್ರತ್ಯುತ್ತರ ನೀಡಿದ್ದು ಡ್ರೈವರ್ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದೆ ಜೊತೆಗೆ ಡ್ರೈವರ್ ಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಬಗ್ಗೆ ಭರವಸೆ ನೀಡಿದೆಯಂತೆ.
ಊಬರ್ ವಕ್ತರಾರು ಈ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಆಪ್ ನಿಂದ ಡ್ರೈವರ್ ಪ್ರೊಫೈಲ್ ನ್ನು ತೆಗೆದುಹಾಕಲಾಗಿದ್ದು, ಆತನ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ತಿಳಿಸಿದ್ದಾರೆ ಮತ್ತು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ. ಭದ್ರತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕೂಡ ಊಬರ್ ತಿಳಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಕಠಿಣ ನಿಯಮಗಳ ಜಾರಿಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದೆ.


Click it and Unblock the Notifications