12.8 ಲಕ್ಷ ಬಹುಮಾನದ ಆಸೆಗೆ 25 ಲಕ್ಷ ಕಳೆದುಕೊಂಡ ಮಹಿಳೆ!..ವ್ಯಥೆ ಹೇಳತೀರದು!!
ಆನ್ಲೈನ್ ಪ್ರಪಂಚದಲ್ಲಿ ಸಾಮಾನ್ಯ ಜನರು ಹೆಚ್ಚಾಗಿ ಮೋಸಹೋಗುವುದನ್ನು ನಾವು ನೋಡಿದ್ದೇವೆ. ಆದರೆ, ಬ್ಯಾಂಕಿನಲ್ಲೇ ಕೆಲಸ ಮಾಡಿ ಸ್ವಯಂ ನಿವೃತ್ತಿ ಹೊಂದಿದ್ದ ಮಹಿಳೆಯೋರ್ವರು ವಂಚಕರ ಗಾಳಕ್ಕೆ ಸಿಲುಕಿ ನಲುಗಿಹೋಗಿದ್ದಾರೆ. 12.8 ಲಕ್ಷದ ಬಹುಮಾನ ಹಣ ಪಡೆಯುವ ಆಸೆಗೆ ಬಿದ್ದು 25 ಲಕ್ಷ ಕಳೆದುಕೊಂಡಿರುವ ಮಹಿಳೆಯೋರ್ವರ ವ್ಯಥೆ ಹೇಳತೀರದಂತಾಗಿದೆ.
ಹೌದು, 27 ವರ್ಷ ವಿಜಯಾ ಬ್ಯಾಂಕ್ನಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಹೊಂದಿದ್ದ 63 ವರ್ಷದ ಮಹಿಳೆ ಶೈಲಜಾ ಎಂಬುವವರು ವಂಚಕರಿಂದ ಮೋಸಹೋಗಿದ್ದಾರೆ. ಆನ್ಲೈನ್ ವಹಿವಾಟು ಸಂಸ್ಥೆ ನ್ಯಾಪ್ಟಾಲ್ನಲ್ಲಿ ಬಟ್ಟೆ ಖರೀದಿಸಿದ ನೀವು, 12.8 ಲಕ್ಷ ಬಹುಮಾನ ಗೆದ್ದಿದ್ದೀರಿ ಎಂದು ವಂಚಕರು ಕಳುಸಿದ್ದ ಒಂದು ಸಂದೇಶವನ್ನು ತೆರೆದು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ.

ಆನ್ಲೈನ್ ಮೂಲಕ ನ್ಯಾಪ್ಟಾಲ್ ಎಂಬಲ್ಲಿ ಬಟ್ಟೆ ಖರೀದಿಸಿದ್ದ ಶೈಲಜಾ ಅವರ ಮೊಬೈಲ್ ಸಂಖ್ಯೆ ಬಹುಮಾನ ಬಂದಿರುವುದಾಗಿ ಮರುದಿನವೇ ಸಂದೇಶ ಬಂದಿದೆ. ಕೂಡಲೇ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾಗಿ ಶೈಲಜಾ ಅವರು ಹೇಳಿದ್ದಾರೆ. ಹಾಗಾದರೆ, ಶೈಲಜಾ ಅವರು 25 ಲಕ್ಷ ಹಣ ಕಳೆದುಕೊಂಡದ್ದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಂಚಕರ ಬಲೆಗೆ ಬಿದ್ದದ್ದು ಹೇಗೆ?
ಮೊದಲೇ ಹೇಳಿದಂತೆ, ಆನ್ಲೈನ್ ಮೂಲಕ ನ್ಯಾಪ್ಟಾಲ್ ಎಂಬಲ್ಲಿ ಬಟ್ಟೆ ಖರೀದಿಸಿದ್ದ ಶೈಲಜಾ ಅವರ ಮೊಬೈಲ್ ಸಂಖ್ಯೆ ಬಹುಮಾನ ಬಂದಿರುವುದಾಗಿ ಮರುದಿನವೇ ಸಂದೇಶ ಬಂದಿದೆ. ಕೂಡಲೇ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಶೈಲಜಾ ಕರೆ ಮಾಡಿದ್ದಾರೆ. ಸಂದೇಶದಲ್ಲಿದ್ದ 12.8 ಲಕ್ಷ ಬಹುಮಾನ ಬಂದಿದೆ ಎಂದು ತಿಳಿದು ವಂಚಕರ ಬಲೆಗೆ ಬಿದ್ದಿದ್ದಾರೆ.

ಅತಿಆಸೆ ಗತಿಗೇಡು!
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶೈಲಜಾ ಅವರ ಪತಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯಾಗಬೇಕಿತ್ತು. ಬಹುಮಾನದ ರೂಪದಲ್ಲಿ ಹಣ ಬಂದರೆ, ಚಿಕಿತ್ಸೆಗೆ ನೆರವಾಗುತ್ತದೆ ಎಂದು ಭಾವಿಸಿ ಕರೆ ಮಾಡಿದ್ದ ವ್ಯಕ್ತಿಯ ಬಲೆಗೆ ಶೈಲಜಾ ಅವರು ಬಿದ್ದಿದ್ದರು. ಹಣ ಬಂದರೆ ಬಂಗಾರ ಅಡವಿಡುವ ಪರಿಸ್ಥಿತಿ ಬರುವುದಿಲ್ಲ ಎಂದುಕೊಂಡು ಅವರು ತಪ್ಪು ಕೆಲಸ ಮಾಡಿದ್ದರು.

ವಂಚನೆ ನಡೆದದ್ದು ಹೇಗೆ?
ಸಂದೇಶದಲ್ಲಿದ್ದ ಮೊಬೈಲ್ ಸಂಖ್ಯೆಗೆ ಶೈಲಜಾ ಅವರು ಕರೆ ಮಾಡಿದ್ದರು. ರಾಹುಲ್ ಸಹಾಯ್ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡ ವ್ಯಕ್ತಿ ನಿಮಗೆ ಟಾಟಾ ಸಫಾರಿ ಕಾರು ಅಥವಾ 12.8 ಲಕ್ಷ ಬಹುಮಾನ ಬಂದಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ' ಎಂದು ಕೇಳಿದ್ದಾನೆ. ಹಣದ ಅವಶ್ಯಕತೆ ಇದ್ದುದರಿಂದ ಶೈಲಜಾ ನಗದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ವಂಚನೆ ಬಲೆ ಹೆಣೆದಾಯ್ತು!
ಅದಾದ ಎರಡು ದಿನಗಳ ಕರೆ ಮಾಡಿದ ಆತ,ಬಹುಮಾನದ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನೀವು ಆರ್ಬಿಐ ಶುಲ್ಕವೆಂದು 3.5 ಲಕ್ಷ ಪಾವತಿಸಬೇಕು. ಆ ಶುಲ್ಕವನ್ನು ಬಹುಮಾನದ ಹಣದ ಜತೆ ನಿಮಗೆ ಮರಳಿಸುತ್ತೇವೆ' ಎಂದು ಹೇಳಿದ. ಆತನ ಮಾತುಗಳನ್ನು ನಂಬಿದ ಶೈಲಜಾ ಅವರು ಚಿನ್ನಾಭರಣ ಅಡವಿಟ್ಟು ಹಣ ಪಾವತಿಸಿದ್ದರು.

ಜಿಎಸ್ಟಿ ಪಾವತಿಸಬೇಕು!
ಇದಾದ ನಂತರ ಆಕಾಶ್ ರಾನವತ್ ಎಂಬಾತನ ಹೆಸರಿನಲ್ಲಿ ಶೈಲಜಾ ಅವರಿಗೆ ಕರೆ ಬಂದಿದೆ. ಬಹುಮಾನ ಹಣವನ್ನು ಪಡೆಯಲು ನೀವು ಜಿಎಸ್ಟಿ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾನೆ. ಅಂತೆಯೇ ಕಿಂಗ್ ಜುರ್ಸ್ ಭಾಟಿಯಾ ಎಂಬಾತನ ಖಾತೆಗೆ 2.5 ಲಕ್ಷ ಜಮೆ ಮಾಡಿದ್ದಾರೆ. ಹೀಗೆ, ವಿವಿಧ ಶುಲ್ಕಗಳ ರೂಪದಲ್ಲಿ 25 ಲಕ್ಷ ರೂ. ಸುಲಿಗೆ ಮಾಡಿದ್ದಾರೆ.

ಬೀದಿಗೆ ಬಂದ ಮಹಿಳೆ!
ವಂಚಕರ ಬೆಲೆಗೆ ಬಿದ್ದು ಹೊರಬರಲಾಗದ ಶೈಲಜಾ ಅವರು, ಒಡವೆಯಲ್ಲದೇ, ಕುಟುಂಬದ ಎಲ್ಲರ ಆಭರಣಗಳನ್ನೂ ಗಿರವಿ ಇಟ್ಟು ಹಣ ಹೊಂದಿಸಿದ್ದಾರೆ. ಅಷ್ಟೇ ಅಲ್ಲದೆ, 8.5 ಲಕ್ಷ ರೂ. ಕೈಸಾಲವನ್ನೂ ಮಾಡಿದ್ದಾರೆ. ಆದರೆ, ಇಷ್ಟೆಲ್ಲಾ ಆದ ನಂತರ ವಂಚಕರು ಮೊಬೈಲ್ಗಳನ್ನು ಸ್ವಿಚ್ಡ್ಆಫ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಈಗ ದೂರು ಸಲ್ಲಿಸಿದ್ದಾರೆ.

ಬಡ್ಡಿ ಕಟ್ಟುವುದಕ್ಕೂ ಕಷ್ಟವಾಗಿದೆ!
25 ಲಕ್ಷವನ್ನು ವಂಚಕರಿಗೆ ಕೊಡುವ ಬದಲು, ಅದೇ ಹಣದಲ್ಲಿ ಗಂಡನಿಗೆ ಚಿಕಿತ್ಸೆ ಕೊಡಿಸಬಹುದಿತ್ತು. ಆದರೆ, ಬಹುಮಾನದ ಹಣ ಬಂದರೆ ಬಂಗಾರ ಅಡವಿಡುವ ಪರಿಸ್ಥಿತಿ ಬರುವುದಿಲ್ಲ ಎಂದುಕೊಂಡು, ಈಗ ಪತಿಗೆ ಚಿಕಿತ್ಸೆ ಕೊಡಿಸುವುದು ಇರಲಿ, ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೂ ಪರದಾಡುತ್ತಿದ್ದೇನೆ ಎಂದು ಶೈಲಜಾ ಅವರು ಕಣ್ಣೀರು ಹಾಕುತ್ತಿದ್ದಾರೆ.


Click it and Unblock the Notifications