Chandrayaan-3: ಇಂದು ನಿದ್ರೆಯಲ್ಲಿರುವ ರೋವರ್ ಎಚ್ಚರವಾಗ್ತಾನಾ? ಇಸ್ರೋ ವಿಜ್ಞಾನಿಗಳು ಹೇಳಿದ್ದೇನು?
ಚಂದ್ರನ ದಕ್ಷಿಣ ದ್ರುವ ಭಾಗದಲ್ಲಿ ಚಂದ್ರಯಾನ 3 ನೌಕೆ ಯಶಸ್ವಿಯಾಗಿ ಇಳಿಸಿದ್ದ ಇಸ್ರೋ ಇತಿಹಾಸ ಸೃಷ್ಟಿಮಾಡಿತ್ತು. ಇದೀಗ ಮತ್ತೊಮ್ಮೆ ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಮೇಲೆ ಇಡೀ ವಿಶ್ವವೇ ಕಾತುರದಿಂದ ನೋಡುತ್ತಿದೆ. ಇಷ್ಟು ದಿನ ನಿದ್ರೆಗೆ ಜಾರಿದ್ದ ಲ್ಯಾಂಡರ್ ಮತ್ತು ರೋವರ್ ಮತ್ತೆ ಎಚ್ಚರವಾಗಲಿವೆಯಾ ಅನ್ನೋ ಪ್ರಶ್ನೆ ಮೂಡಿದೆ.
ಹೌದು, ಚಂದ್ರನ ಅಂಗಳದಲ್ಲಿ 14 ದಿನಗಳ ಕಾಲ ಸಂಶೋಧನೆ ನಡೆಸಿ ನಂತರ ನಿದ್ರೆಗೆ ಜಾರಿದ್ದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಇಂದು ಎಚ್ಚರಗೊಳಲಿದೆಯಾ ಅನ್ನೋ ಚರ್ಚೆ ಶುರುವಾಗಿದೆ. ಭಾರತದ ಇಸ್ರೋ ಕೂಡ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಮತ್ತು ರೋವರ್ ಅನ್ನು ಎಚ್ಚರಗೊಳಿಸುವ ಸಾಹಸಕ್ಕೆ ಕೈ ಹಾಕಿದೆ. ಇದು ಯಶಸ್ವಿಯಾಗಲಿದೆಯಾ? ಇದರ ಬಗ್ಗೆ ಇಸ್ರೋ ವಿಜ್ಞಾನಿಗಳು ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದ ಚಂದ್ರಯಾನ 3 ಮಿಷನ್ ಕಳೆದ ತಿಂಗಳು ಅಂದರೆ ಆಗಸ್ಟ್ 23ರಂದು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವಭಾಗದಲ್ಲಿ ಲ್ಯಾಂಡ್ ಆಯಿತು. ಲ್ಯಾಂಡ್ ಆದ ನಂತರ ಹದಿನಾಲ್ಕು ದಿನಗಳ ಕಾಲ ರೋವರ್ ಮತ್ತು ಲ್ಯಾಂಡರ್ ಚಂದ್ರನ ಮೇಲ್ಮೈ ಅಂಗಳದಲ್ಲಿ ಸಂಶೋಧನೆಗೆ ಬೇಕಾದ ಅಗತ್ಯ ಮಾಹಿತಿಯನ್ನು ಇಸ್ರೋಗೆ ರವಾನಿಸಿದ್ದವು. ನಂತರ ಚಂದ್ರನ ಅಂಗಳದಲ್ಲಿ ಕತ್ತಲಾಗ್ತಿದ್ದ ಹಾಗೇ ನಿದ್ರಗೆ ಜಾರಿದ್ದವು. ಇದೀಗ ಚಂದ್ರನಲ್ಲಿ ಮತ್ತೆ ಹಗಲು ಬಂದಿದ್ದು, ನಿದ್ರೆಗೆ ಜಾರಿರುವ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಂಡರೆ ಅದು ಮತ್ತೊಂದು ಸಾಧನೆ ಆಗಲಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿನ ವಾತಾವರಣ ಅತ್ಯಂತ ಶೀತದಿಂದ ಕೂಡಿದೆ. ಇದೇ ಕಾರಣಕ್ಕೆ ಚಂದ್ರನ ಅಂಗಳದಲ್ಲಿ ಒಂದು ಹಗಲು ಭೂಮಿಯ ಹದಿನಾಲ್ಕು ದಿನಕ್ಕೆ ಸಮವಾಗಿದೆ. ಈ ಸಮಯದಲ್ಲಿ ಮಾತ್ರವೇ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್ಗಳು ಕಾರ್ಯನಿರ್ವಹಿಸುವಂತೆ ಸಿದ್ಧಮಾಡಲಾಗಿತ್ತು. ಆದರಿಂದ ಇದೀಗ ನಿದ್ರೆಯಲ್ಲಿರುವ ಲ್ಯಾಂಡರ್ ರೋವರ್ ಸೂರ್ಯನ ಬೆಳಕಿನ ಶಾಖದಿಂದ ಮತ್ತೆ ಎಚ್ಚರವಾದರೆ ಇಸ್ರೋದ ಹಿರಿಮೆಗೆ ಇನ್ನೊಂದು ಗರಿಸಿಕ್ಕಂತಾಗಲಿದೆ.
ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಎಚ್ಚರಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇದರ ನಡುವೆ ಸರ್ಕಾರ ಕೂಡ ಲ್ಯಾಂಡರ್ ಮತ್ತು ರೋವರ್ ಮತ್ತೆ ಸಕ್ರಿಯಗೊಳ್ಳಲು ಎಚ್ಚರಿಕೆಯ ಕರೆಗಾಗಿ ಕಾಯುತ್ತಿವೆ ಎಂದು ಹೇಳಿದೆ. ಲಭ್ಯ ಮಾಹಿತಿಯ ಪ್ರಕಾರ ಲ್ಯಾಂಡರ್ ಮತ್ತು ರೋವರ್ ಉಪಕರಣಗಳ ಸೌರ ಬ್ಯಾಟರಿಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲಾಗಿದೆ. ಆದರಿಂದ ವಿಕ್ರಮ್ ಮತ್ತು ಪ್ರಗ್ಯಾನ್ ಎಚ್ಚರವಾಗಬೇಕಾದರೆ ಚಂದ್ರನ ಮೇಲ್ಮೈಯಲ್ಲಿ ತಾಪಮಾನ ಹೆಚ್ಚಾಗಬೇಕಿದೆ, ಇದಕ್ಕಾಗಿ ವಿಜ್ಞಾನಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಚಂದ್ರಯಾನ 3 ಅನ್ನು ಎಚ್ಚರಗೊಳಿಸುವ ಬಗ್ಗೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಕೂಡ ಹೇಳಿಕೆಯನ್ನು ನೀಡಿದ್ದಾರೆ. ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಳ್ಳುವ ಬಗ್ಗೆ ನಮಗೆ ತಿಳಿಯುವ ಮಾರ್ಗವಿದ್ದರೆ ಸುಲಭವಾಗುತ್ತಿತ್ತು. ಆದರೆ ಚಂದ್ರನಂಗಳದಲ್ಲಿ ಸೂರ್ಯೋದಯದ ನಂತರ ವ್ಯವಸ್ಥೆಗಳು ಹೇಗೆ ವರ್ತಿಸಲಿವೆ ಎಂಬುದರ ಮೇಲೆ ಅವರು ಎಚ್ಚರಗೊಳ್ಳುವುದರ ಬಗ್ಗೆ ಹೇಳಬಹುದು ಎಂದಿದ್ದಾರೆ.
ಈಗಾಗಲೇ ಭಾರತದ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿದೆ. ಒಂದು ವೇಳೆ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಂಡರೆ ಇನ್ನು ಹದಿನಾಲ್ಕು ದಿನ ಸಂಶೋಧನೆ ನಡೆಸುವುದಕ್ಕೆ ಅವಕಾಶ ಸಿಗಲಿದೆ. ಒಂದು ವೇಳೆ ಎಚ್ಚರಗೊಳ್ಳದೆ ಹೋದರೆ ಚಂದ್ರನ ಅಂಗಳದಲ್ಲಿ ಭಾರತದ ಗುರತಾಗಿ ಅಮರವಾಗಿ ಉಳಿದುಹೋಗಲಿವೆ. ಇನ್ನು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದ್ದ ವಿಕ್ರಮ್ ಲ್ಯಾಂಡರ್ ಮತ್ತು ರೋವರ್ ಇಸ್ರೋಗೆ ಮಹತ್ವದ ಮಾಹಿತಿ ರವಾನಿಸಿವೆ. ಅದರಲ್ಲೂ ರೋವರ್ ಚಂದ್ರನಂಗಳದಲ್ಲಿ ನೂರು ಮೀಟರ್ ದೂರವನ್ನು ಕ್ರಮಿಸಿರೋದು ದಾಖಲೆಯಾಗಿದೆ.


Click it and Unblock the Notifications








