ಇಸ್ರೋ ವಿಜ್ಞಾನಿಗಳು ರಾಕೆಟ್ ಉಡಾವಣೆಗೂ ಮುನ್ನ ತಿರುಪತಿಗೆ ಭೇಟಿ ನೀಡುವುದು ಯಾಕೆ?
ಇಡೀ ವಿಶ್ವವೇ ಎದುರು ನೋಡುತ್ತಿರುವ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ -3ರ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರಯಾನ -3 ಉಡಾವಣೆಗೆ ಸಕಲ ರೀತಿಯಲ್ಲೂ ಸಿದ್ಧತೆ ನಡೆಸಿದೆ. ಇದರ ನಡುವೆ ಇಸ್ರೋ ವಿಜ್ಞಾನಿಗಳು ಯೋಜನೆ ಯಶಸ್ವಿಯಾಗಲಿ ಅಂತಾ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.
ಹೌದು, ವಿಜ್ಞಾನ ಇಂದು ಎಷ್ಟೇ ಮುಂದುವರೆದರೂ ಕೂಡ ನಮ್ಮ ಧಾರ್ಮಿಕ ನಂಬಿಕೆಗಳನ್ನು ಹೊರತುಪಡಿಸಲು ಸಾಧ್ಯವಿಲ್ಲ. ಇದಕ್ಕೆ ಇಸ್ರೋ ವಿಜ್ಞಾನಿಗಳು ಕೂಡ ಹೊರತಾಗಿಲ್ಲ, ಇಸ್ರೋ ಯಾವುದೇ ಹೊಸ ಉಡಾವಣೆಗೂ ಮುನ್ನ ತಿರುಪತಿಗೆ ಬೇಟಿ ನೀಡಿ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ಚಂದ್ರಯಾನ -3 ಯಶಸ್ಸಿಗೆ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ತಿರುಪತಿ ತಿಮ್ಮಪ್ಪನಿಗೂ ಇಸ್ರೋ ವಿಜ್ಞಾನಿಗಳ ನಡುವಿನ ಬೇಟಿಗೂ ಇರುವ ಸಂಬಂಧಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಸ್ರೋ ವಿಜ್ಞಾನಿಗಳು ಚಂದ್ರಯಾನ -3 ಉಡಾವಣೆಗೂ ಮುನ್ನವೇ ತಿರುಪತಿ ತಿಮ್ಮಪ್ಪನ ಆಲಯಕ್ಕೆ ಬೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಯಾನ -3 ರಾಕೆಟ್ ಮಾದರಿಯನ್ನು ತಿಮ್ಮಪ್ಪನ್ನ ಸನ್ನಿಧಿಯಲ್ಲಿರಿಸಿ ಪೂಜೆ ಸಲ್ಲಿಸಿದ್ದಾರೆ. ದೇಶದ ಮಹತ್ವಾಕಾಂಕ್ಷಿ ಯೋಜನೆಯು ಯಾವುದೇ ವಿಘ್ನವಿಲ್ಲದೆ ನಡೆಯಲಿ ಅಂತಾ ಬೇಡಿಕೊಂಡಿದ್ದಾರೆ. ಈ ಮೂಲಕ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ದಾರ್ಮಿಕ ನಂಬಿಕೆಗಳಿಗೆ ವಿಜ್ಞಾನಿಗಳು ಕೂಡ ಹೊರತಾಗಿಲ್ಲ ಅನ್ನೊದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇನ್ನು ಗುರುವಾರವೇ ತಿರುಪತಿಗೆ ಬಂದಿದ್ದ ಎಂಟಕ್ಕೂ ಹೆಚ್ಚು ವಿಜ್ಞಾನಿಗಳ ತಂಡ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿರುವ ಇಸ್ರೋ ವಿಜ್ಞಾನಿಗಳು, ಶುಕ್ರವಾರ ಚಂದ್ರಯಾನ ಮಿಷನ್ ಇದೆ. ಇಸ್ರೋ ಹಮ್ಮಿಕೊಂಡಿರುವ ಈ ಇಡೀ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವಂತೆ ತಿಮ್ಮಪ್ಪನ ಬಳಿ ಕೋರಿದ್ದೇವೆ ಎಂದಷ್ಟೇ ಹೇಳಿದರು.

ತಿಮ್ಮಪ್ಪನಿಗೂ ರಾಕೆಟ್ಗೂ ಏನು ಸಂಬಂಧ?
ಸಾಮಾನ್ಯವಾಗಿ ವಿಜ್ಞಾನಿಗಳ ಪರಿಶ್ರಮದಿಂದ ನಡೆಯುವ ರಾಕೆಟ್ ಉಡಾವಣೆ ಪ್ರಕ್ರಿಯೆಯಲ್ಲಿ ದೇವರ ದರ್ಶನದ ಔಚಿತ್ಯವೇನು ಅನ್ನೊದು ಎಲ್ಲರ ಪ್ರಶ್ನೆ. ಆದರೆ ನಮ್ಮ ದೇಶದಲ್ಲಿ ದೇವರ ಮೇಲಿನ ದಾರ್ಮಿಕ ನಂಬಿಕೆಗಳಿಗೇನು ಕಡಿಮೆಯಿಲ್ಲ. ಅದರಂತೆ ತಿರುಪತಿ ತಿಮ್ಮಪ್ಪ ಕಲಿಯುಗ ದೈವ, ಬೇಡಿದ್ದನ್ನು ಕರುಣಿಸುವ ದೈವ ಅಂತೆಲ್ಲಾ ಪ್ರಸಿದ್ಧಿ. ಅಷ್ಟೇ ಅಲ್ಲ ವಿಷ್ಣುವಿನ ಅವತಾರವಾಗಿರುವ ತಿಮ್ಮಪ್ಪನ ವಾಹನ ಕೂಡ ಗರುಡವಾಗಿದ್ದು, ಅಗಸದಲ್ಲಿ ಮುಗಿಲೆತ್ತರಕ್ಕೆ ಕ್ಷಣಾರ್ಧದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ತಿರುಪತಿ ತಿಮ್ಮಪ್ಪ ಧರಿಸುವ ಕಿರೀಟ ಕೂಡ ರಾಕೆಟ್ ಮಾದರಿಯಲ್ಲಿಯೇ ಇರಲಿದೆ. ಇದು ಕೂಡ ರಾಕೆಟ್ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿಮ್ಮಪ್ಪನನ್ನು ದರ್ಶನ ಮಾಡುವುದಕ್ಕೆ ಒಂದು ಕಾರಣ ಎಂದು ನಂಬಲಾಗಿದೆ.
ಇನ್ನು ಈಗಾಗಲೇ ಸರ್ವ ರೀತಿಯಲ್ಲಿ ಸಿದ್ಧವಾಗಿರುವ ಚಂದ್ರಯಾನ -3 ಉಡಾವಣೆ ಇಂದು (ಜುಲೈ 14ರ ಶುಕ್ರವಾರ) ಮಧ್ಯಾಹ್ನ 2.35 ಸುಮಾರಿಗೆ ನಡೆಯಲಿದೆ. ಚಂದ್ರಯಾನ ನೌಕೆಯನ್ನು ಹೊತ್ತ ಲಾಂಚ್ ವೆಹಿಕಲ್ ಮಾರ್ಕ್- 3 ರಾಕೆಟ್, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಉಡಾವಣೆಯಾಗಲಿದೆ. ಇದು ಪ್ರೊಪಲ್ಷನ್ ಮಿಷನ್, ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ಕಕ್ಷೆಯ 100 ಕಿಮೀ ಒಳಗಿನವರೆಗೂ ಸಾಗಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಉಡಾವಣೆಗೆ ದೇಶೀಯವಾಗಿ ನಿರ್ಮಾಣ ಮಾಡಲಾದ ಲಾಂಚಿಂಗ್ ವಾಹನ ಬಳಸಲಾಗುತ್ತಿದ್ದು, ಲ್ಯಾಂಡರ್ ಮತ್ತು ರೋವರ್ಗಳನ್ನು ಸಹ ದೇಶೀಯವಾಗಿ ತಯಾರಿಸಲಾಗಿದೆ. ಎಲ್ಲವೂ ಅಂದುಕೊಂಡತೆ ಯಶಸ್ವಿಯಾದರೆ ಲ್ಯಾಂಡರ್ ಆಗಸ್ಟ್ನಲ್ಲಿ ಚಂದ್ರನ ಮೇಲೆ ಇಳಿಯಲಿದೆ ಎಂದು ಹೇಳಲಾಗಿದೆ.


Click it and Unblock the Notifications








