ಡೇಟಿಂಗ್ ವೆಬ್ಸೈಟ್ ನಂಬಿ 62 ಲಕ್ಷ ಕಳೆದುಕೊಂಡ ಭೂಪ!.ಮೋಸ ಹೋಗಿದ್ದು ಹೇಗೆ ಗೊತ್ತಾ?!
ಜೊತೆಗಿರುವವರನ್ನೇ ನಂಬಲು ಕಷ್ಟವಿರುವಾಗ ಆನ್ಲೈನ್ ಡೇಟಿಂಗ್ ಆಪ್ನಲ್ಲಿನ ಮಹಿಳೆಯನ್ನು ನಂಬಿ ಲಕ್ಷಾಂತರ ರೂ.ಹಣವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಬ್ಬ್ಯುಸಿನೆಸ್ ಮ್ಯಾನ್ ಒಬ್ಬರಿಗೆ ವೈದ್ಯೆ, ಶಿಕ್ಷಕಿ ಎಂದು ಪರಿಚಯಿಸಿಕೊಂಡ ಪಶ್ಚಿಮ ಬಂಗಾಳದ ಮಹಿಳೆ ಬರೋಬರಿ 62 ಲಕ್ಷ ರೂ. ವಂಚಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಕೋಲ್ಕತ್ತದ ರೂಪಾಲಿ ಮಜುಂದಾರ್ ಮತ್ತು ಆಕೆಯ ಪತಿ ಕುಶನ್ ಮಜುಂದಾರ್ ಎಂಬುವವರು ಸೇರಿಕೊಂಡು ನಗರದ ಶ್ರೀನಾಥ್ ಎಂಬ ಯುವಕನನ್ನು ಪರಿಚಯಸಿಕೊಂಡು ಪಂಗನಾಮ ಹಾಕಿದ್ದಾರೆ. ಮಿಂಗಲ್ ಟು.ಡಾಟ್ ಕಾಮ್ ಎಂಬ ಡೇಟಿಂಗ್ ವೆಬ್ಸೈಟ್ ಮೂಲಕ ಅರ್ಪಿತಾ ಎಂಬ ಹೆಸರಿನ ಅಕೌಂಟ್ ತೆರೆದು ಶ್ರೀನಾಥ್ ಅವರಿಗೆ ಮೋಸ ಮಾಡಲಾಗಿರುವ ಘಟನೆ ನಡೆದಿದೆ.

ಈ ಘಟನೆಯ ನಂತರ ರೂಪಾಲಿ ಮಜುಂದಾರ್ ಮತ್ತು ಆಕೆಯ ಪತಿ ಕುಶನ್ ಮಜುಂದಾರ್ ಅವರನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಮತ್ತಷ್ಟು ಮಾಹಿತಿಗಳನ್ನು ಬಾಯಿಬಿಡಿಸಿದ್ದಾರೆ. ಈ ಪ್ರಕರಣ ಆನ್ಲೈನ್ ಡೇಟಿಂಗ್ ಆಪ್ ಹಿಂದೆ ಬಿದ್ದಿರುವ ಯುವಕರಿಗೆ ಇದು ಪಾಠವಾಗಲಿದ್ದು, ಏನಿದು ಸ್ಟೋರಿ ಎಂಬುದನ್ನು ಮುಂದೆ ತಿಳಿಯಿರಿ.

ಮಿಂಗಲ್ ಟು.ಡಾಟ್ ಕಾಮ್!
2017ರಲ್ಲಿ ಮಿಂಗಲ್ ಟು.ಡಾಟ್ ಕಾಮ್ ಎಂಬ ಡೇಟಿಂಗ್ ವೆಬ್ಸೈಟ್ ಮೂಲಕ ಅರ್ಪಿತಾ ಎಂಬ ಹೆಸರಿನಿಂದ ನಗರದ ಶ್ರೀನಾಥ್ ಎಂಬ ಸಾಫ್ಟ್ವೇರ್ ಯುವಕನನ್ನು ಪರಿಚಯಸಿಕೊಂಡಿದ್ದ ರೂಪಾಲಿ, ಪೋಷಕರಿಗೆ ಅನಾರೋಗ್ಯವಾಗಿದೆ ಎಂದು ಹೇಳಿ ಹಂತ-ಹಂತವಾಗಿ ಒಟ್ಟು 62 ಲಕ್ಷ ರೂ. ಹಣ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.

'ವೈದ್ಯೆ ಮತ್ತು ಶಿಕ್ಷಕಿ'
ಗೂಗಲ್ನಿಂದ ಡೌನ್ಲೋಡ್ ಮಾಡಿಕೊಂಡ ಮಾಡೆಲ್ಗಳ ಫೋಟೋಗಳನ್ನು ತನ್ನ ಖಾತೆಗೆ ಹಾಕಿ ಅಮಾಯಕ ವ್ಯಕ್ತಿಗಳನ್ನು "ವೈದ್ಯೆ ಮತ್ತು ಶಿಕ್ಷಕಿ' ಹೆಸರಿನಲ್ಲಿ ಪರಿಚಯಿಸಿಕೊಂಡು ಹತ್ತಾರು ಮಂದಿಗೆ ಇವರು ವಂಚಿಸಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಕೃತ್ಯವೆಸಗಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.

ಏಳು ತಿಂಗಳಿಗೆ 62 ಲಕ್ಷ ವಂಚನೆ
ಬೆಂಗಳೂರಿನ ಶ್ರೀನಾಥ್ರನ್ನು ಮಿಂಗಲ್ ಟು.ಡಾಟ್ ಕಾಮ್ ವೆಬ್ಸೈಟ್ ಮೂಲಕ ಅರ್ಪಿತಾ ಎಂಬ ಹೆಸರಿನಲ್ಲಿ ಪರಿಚಯಸಿಕೊಂಡ ರೂಪಾಲಿ, ಆರಂಭದಲ್ಲಿ ಕೊಲ್ಕತ್ತಾದಲ್ಲಿ ಶಿಕ್ಷಕಿಯಾಗಿದ್ದೇನೆ. ಉತ್ತಮ ಸಂಬಳ ಬರುತ್ತಿದ್ದು, ಮನೆ ಕಡೆಯೂ ಆರ್ಥಿಕವಾಗಿ ಸಬಲವಾಗಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ನಂತರ ಏಳು ತಿಂಗಳಿಗೆ 62 ಲಕ್ಷ ವಂಚನೆ ಮಾಡಿದ್ದಾಳೆ.

62 ಲಕ್ಷ ಹಣ ನೀಡಿದ್ದು ಹೇಗೆ?
ಕೆಲ ದಿನಗಳ ಪರಿಚಯದ ನಂತರ ಶ್ರೀನಾಥ್ ಮತ್ತು ರೂಪಾಲಿ ಇಬ್ಬರು ಮೊಬೈಲ್ ನಂಬರ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ತನ್ನ ತಂದೆಅನಾರೋಗ್ಯವಾಗಿದ್ದು, ಚಿಕಿತ್ಸೆಗಾಗಿ ಲಕ್ಷಾಂತರ ರೂ. ಹಣ ಬೇಕಾಗಿದೆ ಎಂದು ಕೇಳಿಕೊಂಡಿದ್ದಾರೆ. ಇದನ್ನು ನಂಬಿದ ಶ್ರೀನಾಥ್ ರೂಪಾಲಿ ಖಾತೆಗೆ ಮೊದಲಿಗೆ 30 ಲಕ್ಷ ರೂ. ನಂತರ 18 ಲಕ್ಷ ರೂ. ಹೀಗೆ ನಾಲ್ಕೈದು ಹಂತದಲ್ಲಿ ಒಟ್ಟು 62 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ವಂಚನೆ ತಿಳಿದದ್ದು ಹೇಗೆ?
ಹಣ ವರ್ಗಾವಣೆಯ ನಂತರ ಅರ್ಪಿತಾಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದರಿಂದ ಆತಂಕಗೊಂಡ ಶ್ರೀನಾಥ್ ಮಿಂಗಲ್ ಟು.ಡಾಟ್ ಕಾಮ್ನಲ್ಲಿ ಆಕೆಯ ಖಾತೆ ಪರಿಶೀಲಿಸಿದಾಗ ವಂಚನೆಗೊಳ್ಳಗಾಗಿರುವುದು ತಿಳಿದು ಬಂದಿದೆ. ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಆನಂದ್ ನೇತೃತ್ವದ ತಂಡ ಪಶ್ಚಿಮ ಬಂಗಾಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಅವರದ್ದು ಇದೇ ಕೆಲಸ!
ರೂಪಾಲಿ ಮಜುಂದಾರ್ ಬಿ.ಕಾಂ ಪದವಿಧರೆಯಾಗಿದ್ದು, ಕೆಲ ವರ್ಷಗಳ ಹಿಂದೆ ಕುಶನ್ ಮಜುಂದಾರ್ನನ್ನು ವಿವಾಹವಾಗಿದ್ದಾರೆ. 2009ರಿಂದ ದಂಪತಿ ಯಾವುದೇ ನಿರ್ದಿಷ್ಟವಾದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹಾಗಾಗಿ, ರೂಪಾಲಿ ಮತ್ತು ಕುಶನ್ ಮಜುಂದಾರ್ ಸೇರಿ ಡೇಟಿಂಗ್ ಆಪ್ಗಳ ಮೂಲಕವೇ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


Click it and Unblock the Notifications