ಡ್ರೋನ್ ತಯಾರಿಸಿ ಸುದ್ದಿಯಾದ ಪ್ರತಾಪ್ನ ಜೀವನ ಕಹಾನಿ!
ಯುವ ವಿಜ್ಞಾನಿಯಾಗಿ ಕನ್ನಡಿಗನೋರ್ವ ಈಗ ವಿಶ್ವ ವಿಜ್ಞಾನಿಗಳ ಗಮನಸೆಳೆದಿದ್ದಾನೆ. ತ್ಯಾಜ್ಯ ವಸ್ತುಗಳಿಂದ ಡ್ರೋನ್ ಸೃಷ್ಟಿಸುತ್ತಿದ್ದ ಅತನ ಮುಂದೆ ಈಗ ವಿಶ್ವದ ಹಲವು ರಾಷ್ಟ್ರಗಳು ಹಲವು ಅವಕಾಶಗಳ ಮಳೆ ಸುರಿಸಿವೆ. ಆದರೆ, ತನ್ನ ಸಾಧನೆಯ ಹಾದಿ ಕಲ್ಲುಮುಳ್ಳುಗಳಿಂದ ಕೂಡಿದ್ದರೂ ಸಹ ದೇಶಕ್ಕಾಗಿ ಮಾತ್ರ ದುಡಿಯಬೇಕು ಎಂದು ಹೇಳುವ ಈತನ ಮಾತುಗಳು ಎಲ್ಲರಿಗೂ ಸ್ಫೂರ್ತಿ ತುಂಬುತ್ತವೆ. ಕನ್ನಡಿಗನೋರ್ವನ ಈ ಸಾಧನೆ ನಮ್ಮ ಹೆಮ್ಮೆಯಾಗಿಯೂ ಕಾಣುತ್ತಿದೆ.
ಹೌದು, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ನೆಟ್ಕಲ್ ಗ್ರಾಮದ ಪ್ರತಿಭೆ 'ಡ್ರೋಣ್ ಪ್ರತಾಪ್' ಈಗ ವಿಶ್ವ ವಿಜ್ಞಾನಿಗಳಿಂದ ಪ್ರಶಂಸೆಯನ್ನು ಪಡೆದಿದ್ದಾನೆ. ತನ್ನ 22 ವರ್ಷ ವಯಸ್ಸಿನಲ್ಲೇ ಜಪಾನ್, ಜರ್ಮನಿ ಹಾಗೂ ಫ್ರಾನ್ಸ್ ದೇಶಗಳ ವಿಜ್ಞಾನಿಗಳ ಮನಗೆದ್ದಿರುವ ಈ ಪ್ರತಿಭೆ ನಮ್ಮ ದೇಶದ ಹೆಮ್ಮೆಯನ್ನು ಎತ್ತಿಹಿಡಿದಿದ್ದಾನೆ.

ದೇಶಕ್ಕೆ ಉಪಯುಕ್ತವಾಗುವ ಡ್ರೋನ್ ಸೃಷ್ಟಿಸಬೇಕೆಂಬ ಅದಮ್ಯ ಆಸೆಯಿಂದ ಕಡುಬಡತನದ ನಡುವೆಯೂ ಕಲ್ಪನೆಗಳಿಗೆ ಬಣ್ಣ ತುಂಬುತ್ತಾ ಹೋದ ಆ ಹುಡುಗ ಈಗ ಜಗತ್ಪ್ರಸಿದ್ಧ ಯುವ ವಿಜ್ಞಾನಿಯಾಗಿದ್ದಾನೆ. ಈಗ ವಿಶ್ವದಾಧ್ಯಂತ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ 'ಡ್ರೋಣ್ ಪ್ರತಾಪ್' ಕಥೆ ಕೂಡ ಬೆಂಕಿಯಲ್ಲಿ ಹೂ ಒಂದು ಅರಳಿದಂತೆ ಕಾಣುತ್ತಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ವಿಜ್ಞಾನ ಲೋಕದಲ್ಲಿ ಅರಳುತ್ತಿರುವ ಈ ಪ್ರತಿಭೆಯ ಸಾಧನೆ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುವ ಹಂಬಲದ ಜೊತೆಗೆ ಇದು ನಮ್ಮ ಕರ್ತವ್ಯ ಕೂಡ ಹೌದು.

ಯಾರು ಈ 'ಡ್ರೋಣ್ ಪ್ರತಾಪ್'?
ಮೊದಲೇ ಹೇಳಿದಂತೆ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ನೆಟ್ಕಲ್ ಗ್ರಾಮದ ಸಾಮಾನ್ಯ ರೈತರೋರ್ವರ ಪುತ್ರ ಈ ಎನ್.ಎಂ. ಪ್ರತಾಪ್.! ಯುವ ವಿಜ್ಞಾನಿಯಾಗಿ ಹೊರಹೊಮ್ಮಿರುವ ಪ್ರತಾಪ್ ಮರಿಮಾದಯ್ಯ- ಸವಿತಾ ಎಂಬ ದಂಪತಿಯ ಪ್ರೀತಿಯ ಪುತ್ರ. ಎಸ್ಸೆಸ್ಸೆಲ್ಸಿವರೆಗೆ ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಓದಿ, ನಂತರ ಪಿಯುಸಿಯನ್ನು ಭಾರತೀನಗರದ ಜಿ.ಮಾದೇಗೌಡ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದ್ದಾರೆ. ಈಗ ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ (ಸಿಬಿಜಡ್) ಕಲಿಯುತ್ತಿದ್ದಾರೆ.

ನೆಟ್ಕಲ್ ಗ್ರಾಮದಿಂದ ಜಪಾನ್ಗೆ!
2017, ನವೆಂಬರ್ 27ರಿಂದ ಡಿಸೆಂಬರ್ 2ರವರೆಗೆ ಜಪಾನ್ನ ಟೋಕಿಯೊದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ಪ್ರತಾಪ್ ಯಾರು ಮತ್ತು ಆತನ ಶಕ್ತಿ ವಿಶ್ವಕ್ಕೆ ತಿಳಿಯಿತು. 100ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಈ ಪ್ರದರ್ಶನದಲ್ಲಿ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಅಪಘಾತದ ಸಂದರ್ಭದಲ್ಲಿ ಔಷಧಿ ಪೂರೈಸುವ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಹಲವಾರು ಉದ್ದೇಶಗಳಿಂದ ಅವರು ಸೃಷ್ಟಿಸಿದ್ದ ‘ಈಗಲ್' ಹೆಸರಿನ ಒಂದು ಡ್ರೋನ್ ಅಪಾರ ಮೆಚ್ಚುಗೆಗೆ ಪಾತ್ರವಾಗಿ ಚಿನ್ನದ ಪದಕಕ್ಕೆ ಕೊರಳೊಡ್ಡುವಂತೆ ಮಾಡಿತ್ತು.

ಹೇಗಿದೆ ‘ಈಗಲ್' ಡ್ರೋಣ್?
ಪ್ರತಾಪ್ ತಯಾರಿಸಿರುವ ‘ಈಗಲ್' ಹೆಸರಿನ ಡ್ರೋಣ್ ಮೂಲಕ, ಕೃಷಿ ಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮನ್ಸೂಚನೆ ನೀಡುತ್ತದೆ. ಮೀನುಗಾರರು ಸಮುದ್ರದ ನಡುವೆ ಅಪಾಯಕ್ಕೆ ಸಿಲುಕಿದರೆ ಜಿಪಿಆರ್ಎಸ್ ತಂತ್ರಜ್ಞಾನದ ಮೂಲಕ ಅವರನ್ನು ತಕ್ಷಣ ಗುರುತಿಸಿ ರಕ್ಷಣೆ ಮಾಡಬಹುದಾಗಿದೆ. ರಸ್ತೆ ಅಪಘಾತ, ರೈಲು ಅಪಘಾತಗಳು ಸಂಭವಿಸಿದಾಗ ಘಟನಾ ಸ್ಥಳಕ್ಕೆ ಔಷಧಿ ಪೂರೈಸುವ, ರಕ್ಷಣಾ ಉಪಕರಣ, ಆಹಾರ ಪೂರೈಸಲು ಇದನ್ನು ಬಳಸಬಹುದಾಗಿದ್ದು, ದೇಶದ ಭದ್ರತೆ ದೃಷ್ಟಿಯಿಂದಲೂ ನೆರವಾಗುತ್ತದೆ.

ಜರ್ಮನಿ, ಫ್ರಾನ್ಸ್ನಲ್ಲೂ ಬಹುಮಾನ
2017ರಲ್ಲಿ ಜಪಾನ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಪ್ರತಾಪ್, 2018, ಜೂನ್ನಲ್ಲಿ ಜರ್ಮನಿಯಲ್ಲಿ ನಡೆದ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ ಪ್ರತಾಪ್ ಆಲ್ಬರ್ಟ್ ಐನ್ಸ್ಟಿನ್ ಇನೊವೇಷನ್ ಮೆಡಲ್ಗೆ ಕೊರಳೊಡ್ಡಿದ್ದಾರೆ. ಅಲ್ಲೇ ಇದ್ದು ಸಂಶೋಧನೆ ನಡೆಸಲು ಸ್ಕಾಲರ್ಶಿಪ್ ಸಹ ಪಡೆದುಕೊಂಡಿದ್ದಾರೆ. ಇದಾದ ನಂತರ, ಕಳೆದ ಜುಲೈ, 2018ರಲ್ಲಿ ಜರ್ಮನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಂಶೋಧನಾ ಪದಕವನ್ನು (ಸಿಇಬಿಐಟಿ-ಅವಾರ್ಡ್) ಪಡೆದು ಆಶ್ಚರ್ಯ ಮೂಡಿಸಿದ್ದಾರೆ.

ಹೇಗೆ ಸಾಗಿತ್ತು ಪ್ರತಾಪ್ ಸಾಧನೆ?
ಸಣ್ಣ ವಯಸ್ಸಿನಲ್ಲೇ ಆಕಾಶಕಾಯಗಳ ಮೇಲೆ ಕೂತೂಹಲ ಬೆಳೆಸಿಕೊಂಡಿದ್ದ ಪ್ರತಾಪ್ನ ಕುತೂಹಲಕ್ಕೆ ಶಾಲೆಯ ವಿಜ್ಞಾನ ವಸ್ತುಪ್ರದರ್ಶನಗಳು ವೇದಿಕೆಯಾಗಿದ್ದವು. ಕೈಗೆ ಸಿಕ್ಕ ವಸ್ತುಗಳಿಂದ ಮಾದರಿ ರೂಪಿಸುತ್ತಿದ್ದ, ಕಸದಿಂದ ರಸ ಸೃಷ್ಟಿಸುತ್ತಿದ್ದ. ಕ್ರಮೇಣ ಹುಡುಗನ ಚಿತ್ತ ಡ್ರೋನ್ಗಳತ್ತ ಹರಿಯಿತು. ದೇಶಕ್ಕೆ ಉಪಯುಕ್ತವಾಗುವ ಡ್ರೋನ್ ಸೃಷ್ಟಿಸಬೇಕೆಂಬ ಅದಮ್ಯ ಆಸೆ ಚಿಗುರಿತು. ಹೀಗೆ ರಾಜ್ಯ, ರಾಷ್ಟ್ರೀಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಯುವ ವಿಜ್ಞಾನಿ ಕೀರ್ತಿಗೂ ಪಾತ್ರರಾಗಿದ್ದರು. ನಂತರ ಡ್ರೋನ್ ಕ್ಷೇತ್ರದಲ್ಲಿ ಗಂಭೀರ ಸಂಶೋಧನೆಯಲ್ಲಿ ತೊಡಗಿ ಈಗ ವಿಶ್ವ ಯುವ ವಿಜ್ಞಾನಿಯಾಗಿ ರೂಪುಗೊಂಡಿದ್ದಾರೆ.

ಕೃಷಿಯತ್ತಲೂ ಪ್ರತಾಪ್ ದೃಷ್ಟಿಯಿತ್ತು!
ದೇಶಕ್ಕೆ ಉಪಯುಕ್ತವಾಗುವ ಡ್ರೋನ್ ಸೃಷ್ಟಿಸಬೇಕೆಂಬ ಅವರ ಅದಮ್ಯ ಆಸೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಹಾಯ ಮಾಡುವ ಸಾಧನವಾಗಿಯೂ ಡ್ರೋಣ್ ಅನ್ನು ಸೃಷ್ಟಿಸಿದ್ದಾರೆ. ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು ಡ್ರೋನ್ ಹುಡುಕಾಟದಲ್ಲಿ ಕೃಷಿಯನ್ನೂ ಸೇರಿಸಿಕೊಂಡಿದ್ದಾರೆ. ಈ ಮೂಲಕ ಇವರು ಕೃಷಿ ಪ್ರಧಾನ ಮಂಡ್ಯ ಜಿಲ್ಲೆ, ಕರ್ನಾಟಕ ಹಾಗೂ ಭಾರತ ದೇಶಕ್ಕೂ ಸಹ ಕೀರ್ತಿ ತಂದಿದ್ದಾ ವಿಮಾನಯಾನ, ಮೀನುಗಾರಿಕೆ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಆಸ್ತಿಯಾಗಬಲ್ಲ ಡ್ರೋನ್ ಕೃಷಿಗೂ ಸಹಾಯವಾದರೇ ಅದು ಕೂಡ ದೇಶಕ್ಕೆ ನಾನು ನೀಡಿದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಯುವ ವಿಜ್ಞಾನಿ ಪ್ರತಾಪ್.

ಭಾರತಕ್ಕೆ ಮಾತ್ರ ನನ್ನ ಸೇವೆ
ಡ್ರೋನ್ ತಂತ್ರಜ್ಞಾನಕ್ಕೆ ಹೊಸ ರೂಪ ಕೊಟ್ಟಿರುವ ಪ್ರತಾಪ್ ಸಾಧನೆಗೆ ಹಲವು ರಾಷ್ಟ್ರಗಳು ತಲೆದೂಗಿವೆ. ತಾಯಿ ಮಾಂಗಲ್ಯವನ್ನು ಅಡವಿಟ್ಟು ವಿದೇಶದಲ್ಲಿ ಹೆಸರು ಗಳಿಸಿ ದ ಪ್ರತಾಪ್ಗೆ ಲಕ್ಷ ಲಕ್ಷ ಸಂಬಳ ಕೊಟ್ಟು ಸೇವೆ ಪಡೆಯಲು ವಿದೇಶದವರು ಮುಂದೆ ಬಂದಿದ್ದಾರೆ. ಆದರೆ, ಪ್ರತಾಪ್ ದೇಶಕ್ಕೆ ಮಾತ್ರ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ. ದೇಶಕ್ಕೆ ಕೊಡುಗೆ ನೀಡಬೇಕು ಎಂಬ ಗುರಿಯೊಂದಿಗೆ ಹೆಜ್ಜೆ ಇಟ್ಟೆ. ಈಗ ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ. ಬೇರೆ ದೇಶಗಳ ಹಣಕ್ಕೆ ನನ್ನ ಸೇವೆಯನ್ನು ಮಾರಿಕೊಳ್ಳಲಾರೆ. ನನ್ನ ಸೇವೆ ನನ್ನ ಭಾರತಕ್ಕೆ ಮಾತ್ರ ಎಂದು ಹೆಮ್ಮೆಯಿಂದ ಹೇಳುತ್ತಿರುವ ಪ್ರತಾಪ್ಗೆ ನಮ್ಮದೊಂದು ಸಲಾಂ.!


Click it and Unblock the Notifications




