5 ಲೀಟರ್ ಡೀಸೆಲ್ ಕೊಟ್ಟು ಅರ್ಧ ಗಂಟೆ ಮೊಬೈಲ್ ನೆಟ್ವರ್ಕ್ ಪಡೆದರು!!
ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಸ್ಥಿತಿ ಎಷ್ಟು ಗಂಭೀರವಾಗಿ ಹದಗೆಟ್ಟಿದೆ ಎಂಬುದಕ್ಕೆ ಇತ್ತೀಚಿಗೆ ರಾಜ್ಯದಲ್ಲಿ ನಡೆದ ಒಂದು ಘಟನೆ ಉದಾಹರಣೆಯಾಗಿದೆ. ಗ್ರಾಮೀಣ ಭಾಗದ ವ್ಯಕ್ತಿಯೊರ್ವರ ನಿಧನದ ಸುದ್ದಿಯನ್ನು ತಿಳಿಸಲು ಬಿಎಸ್ಎನ್ಎಲ್ ಟವರ್ಗೆ ಡೀಸೆಲ್ ಹಾಕಿಸಿ ನೆಟ್ವರ್ಕ್ ಪಡೆದ ಘಟನೆ ಸುಬ್ರಹ್ಮಣ್ಯದ ಬಳಿ ಇರುವ ಕಲ್ಮಕಾರಿ ಎಂಬ ಹಳ್ಳಿಯೊಂದರಿಂದ ವರದಿಯಾಗಿದೆ.
ಹೌದು, ಗ್ರಾಮದ ಕಿನ್ನಾನ ಮನೆ ವೆಂಕಟ್ರಮಣ ಗೌಡ ಎಂಬುವರು ನಿಧನರಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲೆಂದು ಹೊರಟಾಗ ಮೊಬೈಲ್ನಲ್ಲಿ ನೆಟ್ವರ್ಕ್ ಇರಲಿಲ್ಲ. ವಿದ್ಯುತ್ ಕೈ ಕೊಟ್ಟಿರುವುದರಿಂದ ನೆಟ್ವರ್ಕ್ ಸಂಪರ್ಕ ಇಲ್ಲ. ಜನರೇಟರ್ ಬಳಸಲು ಡೀಸೆಲ್ಗೆ ಹಣ ಬಿಎಸ್ಎನ್ಎಲ್ ಒದಗಿಸುತ್ತಿಲ್ಲವಾದ್ದರಿಂದ ಸೇವೆ ಸ್ಥಗಿತವಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಆದರೆ, ನಿಧನ ಸುದ್ದಿಯನ್ನು ಶೀಘ್ರವೇ ಸಂಬಧಿಕರಿಗೆ ತಿಳಿಸಬೇಕಾದ ಕಾರಣ ಬಿಎಸ್ಎನ್ಎಲ್ ಟವರ್ನ ಜನರೇಟರ್ಗೆ ಮನೆಯವರೇ 5 ಲೀಟರ್ ಡೀಸೆಲ್ ಖರೀದಿಸಿ ನೀಡಿದ್ದಾರೆ.! ಟವರ್ ನಿರ್ವಾಹಕರು ಜನರೇಟರ್ ಚಾಲನೆ ಮಾಡಿದ ನಂತರ ನೆಟ್ವರ್ಕ್ ಬಂದಿದ್ದು, ಅರ್ಧ ಗಂಟೆ ಮಾತ್ರ ಲಭ್ಯವಿದ್ದ ನೆಟ್ವರ್ಕ್ ಮೂಲಕ ಬಂಧುಗಳಿಗೆ ನಿಧನ ಸುದ್ದಿ ಮುಟ್ಟಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಸದ್ಯ ಬಿಎಸ್ಎನ್ಎಲ್ ಬಳಕೆದಾರರ ಸಂಕಷ್ಟಕ್ಕೆ ಇದು ಜ್ವಲಂತ ಉದಾಹರಣೆಯಾಗಿದ್ದು, ಅಲ್ಲಿನ ಗ್ರಾಮಗಳಾದ ಹರಿಹರ ಪಲ್ಲತ್ತಡ್ಕ, ಬಾಳುಗೋಡು, ನಡುಗಲ್ಲು, ಮಡಪ್ಪಾಡಿ ಪ್ರದೇಶಗಳ ಜನತೆ ಇದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬಿಎಸ್ಎನ್ಎಲ್ ಬಿಟ್ಟರೆ ವಿಧಿಯಿಲ್ಲ. ಅದು ಇದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ.

ಆರ್ಥಿಕ ನಷ್ಟದಿಂದ ಬಿಎಸ್ಎನ್ಎಲ್ ಸಂಸ್ಥೆ ತನ್ನ ಟವರ್ನ ಜನರೇಟರ್ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಲೋ ವೋಲ್ಟೇಜ್, ಪವರ್ ಕಟ್ ಸಮಸ್ಯೆ ಇಲ್ಲಿ ನಿರಂತರವಾಗಿದೆ. ತಿಂಗಳಿಗೆ 15 ದಿನಕ್ಕೂ ಹೆಚ್ಚು ದಿನ ಈ ಭಾಗದಲ್ಲಿನ ಟವರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬಿಎಸ್ಎನ್ಎಲ್ ಸಿಬ್ಬಂದಿಯೇ ಹೇಳಿರುವುದು ಬಿಎಸ್ಎನ್ಎಲ್ ಸ್ಥಿತಿಯನ್ನು ತೋರಿಸುತ್ತಿದೆ.


Click it and Unblock the Notifications