ಇನ್ಫೋಸಿಸ್ನಲ್ಲಿ ಈಗಲೂ ಎಲ್ಲವೂ ಸರಿಯಿಲ್ಲ?!
ಇನ್ಫೋಸಿಸ್ನಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿಯೇ ಕಳೆದ ತ್ರೈಮಾಸಿಕದಲ್ಲಿ ಇನ್ಫಿ ಉದ್ಯೋಗಿಗಳ ವಲಸೆಯ ಪ್ರಮಾಣ ಹೆಚ್ಚಿದೆ ಎಂದು ತಿಳಿದುಬಂದಿದೆ.ಅದರಲ್ಲಿಯೂ ಮುಖ್ಯವಾಗಿ, ಕಂಪನಿಯಲ್ಲಿ 18 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಮುಖ್ಯ ಹಣಕಾಸು ಅಧಿಕಾರಿ ಎಂ.ಡಿ ರಂಗನಾಥ್ ಅವರು ಸಹ ರಾಜೀನಾಮೆ ಸಲ್ಲಿಸಿರುವುದು ಊಹಾಪೋಹಕ್ಕೆ ಕಾರಣವಾಗಿದೆ.
2015ರಲ್ಲಿ ರಾಜೀವ್ ಬನ್ಸಾಲ್ ರಾಜೀನಾಮೆಯ ನಂತರ ಮುಖ್ಯ ಹಣಕಾಸು ಅಧಿಕಾರಿಯಾಗಿ ಸಾರಥ್ಯ ವಹಿಸಿದ್ದ ಎಂ.ಡಿ ರಂಗನಾಥ್ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಎಂ.ಡಿ ರಂಗನಾಥ್ ಸಲ್ಲಿದಸಿದ ದಿನದಿಂದಲೇ ಇನ್ಫೋಸಿಸ್ ಕಂಪೆನಿ ಇದೀಗ 4ನೇ ಮುಖ್ಯ ಹಣಕಾಸು ಅಧಿಕಾರಿಯ ನೇಮಕಕ್ಕೆ ಹುಡುಕಾಟ ನಡೆಸುತ್ತಿರುವುದು ಕಾರ್ಪೊರೇಟ್ ವಲಯಕ್ಕೆ ಅಚ್ಚರಿ ಮೂಡಿಸಿದೆ.

ಇನ್ಫೋಸಿಸ್ ಕಂಪನಿಯಿಂದ ಉದ್ಯೋಗಿಗಳ ವಲಸೆ ಹೋಗುವಿಕೆಯ ಪ್ರಮಾಣ ಹೆಚ್ಚಾದ ಹೊರತಾಗಿಯೂ, ಬೃಹತ್ ಗುತ್ತಿಗೆಗಳು ಮತ್ತು ಗ್ರಾಹಕರ ಸಂಖ್ಯೆಯ ಹೆಚ್ಚಳ ದೃಷ್ಟಿಯಿಂದ ಎಲ್ಲವೂ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಭಾವಿಸಲಾಗಿತ್ತು. ಆದರೆ, ಇನ್ಫೋಸಿಸ್ನಲ್ಲಿ ಉನ್ನತ ಮಟ್ಟದದಲ್ಲಿಯೇ ರಾಜೀನಾಮೆ ಪರ್ವ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ಫೋಸಿಸ್ನಲ್ಲಿ ರಂಗನಾಥ್, ಸಂಗೀತಾ ಸಿಂಗ್, ನಿತೀಶ್ ಬಾಂಗಾ ಹೀಗೆ ಪ್ರಮುಖರ ಇತ್ತೀಚಿನ ನಿರ್ಗಮನ ಅಂಥ ಒಳ್ಳೆಯ ಲಕ್ಷಣವಲ್ಲ. ಹಿರಿಯರ ರಾಜೀನಾಮೆ ಪರಿಣಾಮ ಕಂಪನಿಯಲ್ಲಿ ನಾಯಕತ್ವದ ಬಲ ತೆಳುವಾಗಬಹುದು. ಮಧ್ಯಂತರ ಅವಧಿಗೆ ಇನ್ಫೋಸಿಸ್ನ ನಾಯಕತ್ವದ ಸ್ತರದಲ್ಲಿ ಸ್ಥಿರತೆ ಮುಖ್ಯ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಸಂಸ್ಥೆ ಹೇಳಿದೆ.

ಏಪ್ರಿಲ್-ಜೂನ್ ತ್ರೈಮಾಸಿಕದ ವೇಳೆಗೆ ಕಂಪೆನಿಯ ವಲಸೆಯ ಪ್ರಮಾಣ ಶೇ.20.6ಕ್ಕೆ ಏರಿಕೆಯಾಗಿದ್ದರೆ, ಜನವರಿ-ಮಾರ್ಚ್ ಅವಧಿಯಲ್ಲಿ ಇದು ಶೇ.16.6 ಇದೆ. ಇದೇ ಸಮಯದಲ್ಲಿ ಹಿರಿಯರು ಕೂಡ ಹೊರಹೋಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗಳು ಕಂಪೆನಿ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಕಾರ್ಪೊರೇಟ್ ವಲಯದ ಪ್ರಮುಖರು ಅಭಿಪ್ರಾಯಪಡುತ್ತಿದ್ದಾರೆ.


Click it and Unblock the Notifications








