2023ರ ಹೊತ್ತಿಗೆ ಬೆಂಗಳೂರು ಆಗಲಿದೆ ಇ-ಬಸ್ ನಗರಿ..!
ಮುಂದಿನ 5 ವರ್ಷಗಳಲ್ಲಿ ಬೆಂಗಳೂರು ಸಂಪೂರ್ಣ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಹೊಂದಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಡಿಸೇಲ್ನಿಂದ ಕಾರ್ಯನಿರ್ವಹಿಸುವ ಬಿಎಂಟಿಸಿ ಬಸ್ಗಳ ಬದಲಿಗೆ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಬ್ಯಾಟರಿ ಚಾಲಿತ ವಿದ್ಯುನ್ಮಾನ ಬಸ್ಗಳನ್ನು ಬಳಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ವಿವರಣೆ ನೀಡಿದ್ದಾರೆ.

ಹೌದು, ಹಲವು ಮಹತ್ವದ ಬದಲಾವಣೆಗಳನ್ನು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತಂದು ರಾಷ್ಟ್ರ ಸಾರಿಗೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ರಾಜಧಾನಿಯಲ್ಲಿ ಪರಿಸರ ಸ್ನೇಹಿ ಬಸ್ನ್ನು ರಸ್ತೆ ಮೇಲಿಳಿಸಲು ತಯಾರಾಗಿದೆ. ಹೀಗಾಗಲೇ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿರುವ ಬಿಎಂಟಿಸಿ ಮುಂದಿನ 5 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಬಸ್ಗಳನ್ನು ಸಂಚರಿಸುವ ಮಹತ್ವದ ಯೋಜನೆಯನ್ನು ತಯಾರಿಸಿದೆ.

ಪರಿಸರ ಸ್ನೇಹಿ ಸಾರಿಗೆ
ಪರಿಸರ ಸ್ನೇಹಿ ಸಾರಿಗೆಯನ್ನು ತರಲು ಸತತ ಪ್ರಯತ್ನ ನಡೆಸುತ್ತಿರುವ ರಾಜ್ಯ ಸರ್ಕಾರ ಡಿಸೇಲ್ನಿಂದ ಕಾರ್ಯನಿರ್ವಹಿಸುವ ವಾಹನಗಳಿಂದ ಆಗುತ್ತಿರುವ ಮಾಲಿನ್ಯವನ್ನು ತಪ್ಪಿಸಲು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬಸ್ಗಳನ್ನು ಬೆಂಗಳೂರಿನಲ್ಲಿ ಜಾರಿಗೆ ತರಲು ಮುಂದಾಗಿದೆ. ಅದಲ್ಲದೇ ವೆಚ್ಚವನ್ನು ಸಹ ತಗ್ಗಿಸಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ಎರಡು ದಶಕದಲ್ಲಿ ಏರಿಕೆ ಕಂಡ ವಾಹನ ಪ್ರಮಾಣ
ಕಳೆದ 20 ವರ್ಷಗಳಲ್ಲಿ ರಾಜಧಾನಿಯಲ್ಲಿನ ವಾಹನಗಳ ಪ್ರಮಾಣ ಭಾಗಶಃ ಶೇ.100ರಷ್ಟು ಏರಿಕೆ ಕಂಡಿದ್ದು, ವಾಹನಗಳ ಸಂಖ್ಯೆ 70 ಲಕ್ಷ ದಾಟಿದೆ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬಸ್ಗಳನ್ನು ಬಳಸುವುದರಿಂದ ಕೇವಲ ವಾಯು ಮಾಲಿನ್ಯ ತಗ್ಗುವುದಲ್ಲದೇ ಪ್ರಯಾಣಿಕರ ಜತೆ ಸಂವಹನವನ್ನು ಹೆಚ್ಚಿಸಲಿದೆ ಎಂದು ಜಿ.ಪರಮೇಶ್ವರ್ ವಿವರಿಸಿದರು.

6,500 ಬಸ್ ಕಾರ್ಯನಿರ್ವಹಣೆ
ಸದ್ಯ ಬಿಎಂಟಿಸಿ ದಿನನಿತ್ಯ ಬೆಂಗಳೂರಿನಲ್ಲಿ 6,500 ಡಿಸೇಲ್ ಬಸ್ಗಳನ್ನು ಕಾರ್ಯನಿರ್ವಹಣೆ ಮಾಡುತ್ತಿದೆ. ಇವುಗಳಿಂದ ರಾಜಧಾನಿಯ ಒಂದು ಕೋಟಿ ಜನರಲ್ಲಿ 50 ಲಕ್ಷ ಜನರನ್ನು ಬಿಎಂಟಿಸಿ ತಲುಪುತ್ತಿದೆ. ಎಲೆಕ್ಟ್ರಿಕ್ ಬಸ್ಗಳಿಂದ ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.

ಅಧಿಕಾರಿಗಳ ಜತೆ ಸಿಎಂ ಚರ್ಚೆ
ಹೀಗಾಗಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಯೋಜನೆಯ ಬಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಇದರಿಂದ ಯಾವ ರೀತಿ ಪರಿಸರ ಮಾಲಿನ್ಯ ತಗ್ಗುತ್ತದೆ ಮತ್ತು ಕಾರ್ಯನಿರ್ವಹಣೆಯ ವೆಚ್ಚವನ್ನು ಯಾವ ರೀತಿ ಕಡಿಮೆ ಮಾಡುತ್ತದೆ ಎಂದು ಚರ್ಚೆ ನಡೆಸಿದ್ದು, ಆದಷ್ಟು ಬೇಗ ಇ-ಬಸ್ ಬೆಂಗಳೂರನ್ನು ಆವರಿಸಿಕೊಳ್ಳಲಿದೆ.

ಬಸ್ ವರ್ಲ್ಡ್ ಇಂಟರ್ನ್ಯಾಷನಲ್
ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ಬಸ್ ವರ್ಲ್ಡ್ ಇಂಟರ್ನ್ಯಾಷನಲ್ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಲೆಕ್ಟ್ರಿಕ್ ಬಸ್ಗಳ ಕುರಿತು ಮಾತನಾಡಿದ್ದಾರೆ. ಮೂರು ದಿನಗಳ ಕಾಲ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ ಉತ್ಪನ್ನಗಳನ್ನು, ನೂತನ ತಂತ್ರಜ್ಞಾನ, ಸೇವೆಗಳು ಮತ್ತು 120ಕ್ಕೂ ಹೆಚ್ಚು ಬಸ್ ಹಾಗೂ ಕೋಚ್ ತಯಾರಕರು ಮತ್ತು ಬಿಡಿ ಭಾಗಗಳು ಮತ್ತು ತಂತ್ರಜ್ಞಾನದ ಪೊರೈಕೆದಾರರಿಂದ ಅನೇಕ ಸಲಹೆಗಳು ಪ್ರದರ್ಶನಕ್ಕಿವೆ.

ಪರಿಸರ ಮಾಲಿನ್ಯವೇ ಮುಖ್ಯ ವಿಷಯ
ಬಸ್ವರ್ಲ್ಡ್ ಅಧ್ಯಕ್ಷ ಡೈಡಿರ್ ರಾಮ್ಧೂತ್ ಮಾತನಾಡಿ, ನಮಗೆಲ್ಲ ಪ್ರಮುಖ ಸಮಸ್ಯೆಯೇನೆಂದರೆ ನಗರಗಳಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಹಾಗೂ ಜನದಟ್ಟಣೆಯಾಗಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಎಕ್ಸ್ಫೋ ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ಈ ವಸ್ತು ಪ್ರದರ್ಶನದಲ್ಲಿ ಪ್ರಮುಖ ಸಾರಿಗೆ ವಾಹನ ತಯಾರಕ ಟಾಟಾ ಮೋಟಾರ್ಸ್ 5 ಹೊಸ ಮ್ಯಾಕ್ಷಿ ಹಾಗೂ ಮಿನಿ ಬಸ್ಗಳನ್ನು ಸಾರ್ವಜನಿಕ ಸಾರಿಗೆಗಾಗಿ ಪ್ರದರ್ಶನಕ್ಕಿಟ್ಟಿತ್ತು.

ಯಾವ್ಯಾವ ಕಂಪನಿ ಭಾಗವಹಿಸಿತ್ತು..?
ಬಸ್ವರ್ಲ್ಡ್ ಇಂಟರ್ನ್ಯಾಷನಲ್ನಲ್ಲಿ ಹೈದ್ರಾಬಾದ್ ಆಧಾರಿತ ಒಲೆಕ್ಟ್ರಾ ಗ್ರೀನ್ಟೆಕ್ ಸಾರ್ವಜನಿಕ ಸಾರಿಗೆಗಾಗಿ ಚೀನಾ ಕಂಪನಿ ಬಿವೈಡಿ ಆಟೋಮೊಬೈಲ್ ಜತೆ ಪಾಲುದಾರಿಕೆ ಮಾಡಿಕೊಂಡು 3 ಹೊಸ ವಾಹನಗಳನ್ನು ಬಿಡುಗಡೆಗೊಳಿಸಿತು. ಫೋರ್ಸ್ ಮೋಟಾರ್ಸ್, ಬಿವೈಡಿ, ಎಂಜಿ ಆಟೋಮೋಟಿವ್ ಸಂಸ್ಥೆಗಳು ಭಾರತ್ಬೆಂಜ್, ಬ್ರಿಡ್ಜ್ಸ್ಟೋನ್, ಎಂಆರ್ಎಫ್ ಮತ್ತಿತರ ಪ್ರಮುಖ ಕಂಪನಿಗಳ ಸಹಭಾಗಿತ್ವದಲ್ಲಿ 12 ರಿಂದ 22 ಸೀಟ್ಗಳನ್ನು ಹೊಂದಿರುವ ಎಲೆಕ್ಟ್ರಿಕ್ ಬಸ್ಗಳನ್ನು ಸಾರ್ವಜನಿಕ ಸಾರಿಗೆಗಾಗಿ ಪ್ರದರ್ಶನಕ್ಕಿಟ್ಟಿವೆ.

ವಿದೇಶಿ ಕಂಪನಿಗಳಿಂದಲೂ ಪ್ರದರ್ಶನ
ಬಸ್ವರ್ಲ್ಡ್ ಇಂಟರ್ನ್ಯಾಷನಲ್ನಲ್ಲಿ ದೇಶಿ ಕಂಪನಿಗಳಷ್ಟೇ ಅಲ್ಲದೇ ಆಸ್ಟ್ರೀಯಾ, ಬೆಲಾರಸ್, ಬೆಲ್ಜಿಯಂ, ಚೀನಾ, ಜರ್ಮನಿ, ಕೋರಿಯಾ ಮತ್ತು ಟರ್ಕಿ ದೇಶದ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಿವೆ.

ಯಾವಾಗ ಪ್ರಾರಂಭ..?
ಬಸ್ವರ್ಲ್ಡ್ ಇಂಟರ್ನ್ಯಾಷನಲ್ ವಸ್ತು ಪ್ರದರ್ಶನವನ್ನು 2005 ರಿಂದ 2015ರವರೆಗೆ ಮುಂಬೈನಲ್ಲಿ ಆಯೋಜಿಸಲ್ಪಡುತ್ತಿತ್ತು. 2016ರಿಂದ ಮುಂಬೈನಿಂದ ಬೆಂಗಳೂರಿಗೆ ಈ ಎಕ್ಸ್ಪೋ ಸ್ಥಳಾಂತರಗೊಂಡಿತು. ಬೆಂಗಳೂರಿಗೆ ಸ್ಥಳಾಂತರವಾದ ನಂತರ ಎಕ್ಸ್ಪೋ ಷೇರುದಾರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.


Click it and Unblock the Notifications