ಮೊಬೈಲ್ ಕಂಪೆನಿಗಳಿಗೆ ಬಿಗ್ ಶಾಕ್!..ಇನ್ಮುಂದೆ ಮೊಬೈಲ್ ಕೆಟ್ಟರೆ ಕ್ಷಣಾರ್ಧದಲ್ಲಿ ಪರಿಹಾರ!!
ಮೊಬೈಲ್ ಖರೀದಿಗೂ ಮುನ್ನ ಒಂದು ವರ್ಷ ವಾರೆಂಟಿ ನೀಡಲಾಗುವುದು ಎಂದು ಹೇಳಿ ಗ್ರಾಹಕರಿಗೆ ವಂಚಿಸುವ ಮೊಬೈಲ್ ಕಂಪೆನಿಗಳಿಗೆ ಈಗ ಭಯ ಶುರುವಾಗಿದೆ. ವಾರಂಟಿ ಅವಧಿಯಲ್ಲಿ ಮೊಬೈಲ್ ಕೆಟ್ಟರೆ ಕಂಪನಿಯೇ ತಕ್ಷಣ ರಿಪೇರಿ ಮಾಡಿಕೊಡಬೇಕು ಅಥವಾ ಮಾರಾಟ ಮಾಡಿದ ಮಳಿಗೆ ರಿಪೇರಿ ಮಾಡಿಕೊಡಬೇಕು ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹೇಳಿದೆ.
ಹೌದು, ಮೊಬೈಲ್ ಕಂಪೆನಿಗಳು ಇಷ್ಟು ದಿನ ಅದು ಇದು ಸಬೂಬು ಹೇಳಿ ಗ್ರಾಹಕರನ್ನು ವಂಚಿಸುತ್ತಿದ್ದ ಪ್ರಕರಣಗಳು ಹಲವಿದ್ದವು. ಆದರೆ, ವೈದ್ಯರೊಬ್ಬರು ಮೊಬೈಲ್ ಕಂಪನಿಯೊಂದರ ವಿರುದ್ಧ ನೀಡಿದ್ದ ದೂರಿನ ವಿಚಾರಣೆಯಲ್ಲಿ ಮೊಬೈಲ್ ಕೆಟ್ಟರೆ ಕಂಪನಿಯೇ ತಕ್ಷಣ ರಿಪೇರಿ ಮಾಡಿಕೊಡಬೇಕು ಅಥವಾ ಮಾರಿದ ಮಳಿಗೆ ರಿಪೇರಿ ಮಾಡಿಕೊಡಬೇಕು ಎಂದು ತಿಳಿಸಿದೆ.

ವ್ಯಕ್ತಿಯೊಬ್ಬ ಉತ್ಪನ್ನವೊಂದನ್ನು ಖರೀದಿ ಮಾಡುವುದು ಅದರ ಪ್ರಯೋಜನ ಪಡೆಯಲೇ ಹೊರತು ಸಮಸ್ಯೆ ಎದುರಿಸಲು ಅಲ್ಲ. ವಾರಂಟಿ ಅವಧಿಯಲ್ಲಿ ದುರಸ್ತಿ ಮಾಡಿಕೊಡುವುದು ಕಂಪನಿಯ ಹೊಣೆ ಎಂದು ಗ್ರಾಹಕರ ವೇದಿಕೆಯು ಅಂತಿಮ ತೀರ್ಪಿನಲ್ಲಿ ಹೇಳಿದೆ. ಹಾಗಾದರೆ, ಏನಿದು ಸಿಹಿ ಸುದ್ದಿ? ಈ ಘಟನೆ ನಡೆದಿರುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ತಿಳಿಯಿರಿ.

ಏನಿದು ಪ್ರಕರಣ
ಬನಶಂಕರಿ ನಿವಾಸಿಯಾಗಿರುವ ಡಾ.ಎ.ಎಸ್ ಅಮೃತವರ್ಷಿಣಿ ಎಂಬುವರು 2014ರ ಫೆ.14ರಂದು ದೇವೇಂದ್ರ ಟೆಲಿಕಾಂ ಎಂಬ ಅಂಗಡಿಯಲ್ಲಿ ಜ್ಹೋಲೊ ಕಂಪನಿಯ ಕ್ಯೂ2000 ಮೊಬೈಲ್ ಅನ್ನು ಖರೀದಿಸಿದ್ದರು. ಆದರೆ, ಮೊಬೈಲ್ ಮರುದಿನವೇ ಹ್ಯಾಂಗ್ ಆಗಲು ಶುರುವಾಗಿತ್ತು. ಹೀಗಾಗಿ ಅವರು ಮಳಿಗೆಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದರು. ಸೆಟ್ಟಿಂಗ್ ಸಮಸ್ಯೆಯಿದೆ ಎಂದಿದ್ದ ಮಳಿಗೆ ಸಿಬ್ಬಂದಿ, ಆಗ ದುರಸ್ತಿ ಮಾಡಿಕೊಟ್ಟಿದ್ದರು.

ಮತ್ತೆ ಮತ್ತೆ ಸಮಸ್ಯೆ ಎದುರಾಯ್ತು!
ಹೀಗೆ ಸರಿಪಡಿಸಲಾಗಿದೆ ಎಂದು ತಿಳಿದಿದ್ದ ಮೊಬೈಲ್ 15 ದಿನದಲ್ಲಿ ಮತ್ತೆ ಕೆಲಸ ಮಾಡದಂತೆ ಆಯಿತು. ಈ ವೇಳೆ ಜ್ಹೋಲೊ ಸರ್ವಿಸ್ ಸೆಂಟರ್ಗೆ ತೆಗೆದುಕೊಂಡು ಹೋಗಲು ಅಲ್ಲಿನ ಸಿಬ್ಬಂದಿ ಹೇಳಿದ್ದರು. ಅಲ್ಲಿ 'ಹೆಚ್ಚು ಆಪ್ಗಳು ಓಪನ್ ಆಗಿದ್ದ ಕಾರಣ ಸಮಸ್ಯೆಯಾಗಿದೆ' ಎಂದು ಹೇಳಿದ್ದ ಸರ್ವಿಸ್ ಸೆಂಟರ್ ಸಿಬ್ಬಂದಿ ಮೊಬೈಲ್ ವಾಪಸ್ ಕೊಟ್ಟಿದ್ದರು. ಇದಾದ ಬಳಿಕ ಕೆಲವೇ ದಿನಗಳಲ್ಲಿ ಮೊಬೈಲ್ನ ಅಡಾಪ್ಟರ್ ಸೇರಿದಂತೆ ಎಲ್ಲ ಆಕ್ಸೆಸರಿಗಳು ಹಾಳಾಗಿದ್ದವು.

ಪ್ರತಿ ದಿನವೂ ಅಲೆದಾಟ!
ಏನೇ ಆದರೂ ರಿಪೇರಿಯಾಗದ ಮೊಬೈಲ್ ಅನ್ನು ಮತ್ತೆ ಸರ್ವಿಸ್ ಸೆಂಟರ್ಗೆ ತೆಗೆದುಕೊಂಡು ಹೋದಾಗ ಸಾಫ್ಟ್ವೇರ್ ಬದಲಿಸುವುದಾಗಿ ಹೇಳಿ ಮೊಬೈಲ್ ಇಟ್ಟುಕೊಂಡು, ಕೆಲವು ದಿನಗಳ ಬಳಿಕ ವಾಪಸ್ ಕೊಟ್ಟಿದ್ದರು. ಆದರೆ, ಸಮಸ್ಯೆ ಬಗೆಹರಿದಿರಲಿಲ್ಲ. ಜತೆಗೆ ಆಕ್ಸೆಸರಿಗಳನ್ನು ಕೂಡ ವಾಪಸ್ ಕೊಟ್ಟಿರಲಿಲ್ಲ. ಇದಾದ ಬಳಿಕ ಮೊಬೈಲ್ನಲ್ಲಿ ಬಿಸಿಯಾಗುವುದು, ಟಚ್ ಸ್ಕ್ರೀನ್ ಸಮಸ್ಯೆ, ಲಾಕ್ ಮತ್ತು ಅನ್ಲಾಕ್, ಆಟೋ ರಿಸ್ಟಾರ್ಟ್ ಮತ್ತಿತರ ಸಮಸ್ಯೆಗಳು ಕಂಡು ಬಂದಿದ್ದವು.

ನಾಳೆ ಬನ್ನಿ, ನಾಳೆ ಬನ್ನಿ
ಮೊಬೈಲ್ನಲ್ಲಿ ಬಿಸಿಯಾಗುವುದು, ಟಚ್ ಸ್ಕ್ರೀನ್ ಸಮಸ್ಯೆ, ಲಾಕ್ ಮತ್ತು ಅನ್ಲಾಕ್, ಆಟೋ ರಿಸ್ಟಾರ್ಟ್ ಮತ್ತಿತರ ಸಮಸ್ಯೆಗಳು ಡಾ.ಎ.ಎಸ್ ಅಮೃತವರ್ಷಿಣಿಯವರಿಗೆ ಸಿಟ್ಟು ತರಿಸುತ್ತಿತ್ತು. ಆದರೆ, ಇದಕ್ಕಿಂತ ಸಿಟ್ಟು ತರಸಿದ್ದು, ಸರ್ವಿಸ್ ಸೆಂಟರ್ಗೆ ಹೋದಾಗಲೆಲ್ಲ 'ನಾಳೆ ಬನ್ನಿ' ಎಂದು ಹೇಳಿ ಅವರು ವಾಪಸ್ ಕಳುಹಿಸುತ್ತಿದ್ದುದು. ಇದರಿಂದ ಬೇಸತ್ತ ಅಮೃತವರ್ಷಿಣಿ ಅವರು ಪರಿಹಾರ ಕೋರಿ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ಪರಿಹಾರ ಕೊಡಿಸಿದ ಗ್ರಾಹಕರ ವೇದಿಕೆ
ಈ ಪ್ರಕರಣ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಹೋದ ನಂತರ, ರಿಪೇರಿ ಹೆಸರಲ್ಲಿ ಗ್ರಾಹಕರನ್ನು ಅಲೆದಾಡಿಸುವುದು ಗ್ರಾಹಕ ಸೇವೆಯಲ್ಲಿ ಲೋಪ ಎಸಗಿದಂತೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಭಿಪ್ರಾಯಪಟ್ಟಿದೆ. ಮೊಬೈಲ್ ಕಂಪನಿಯು ಗ್ರಾಹಕರ ವೇದಿಕೆಯ ಮುಂದೆ, ವಾರಂಟಿ ನಿಯಮ ಉಲ್ಲಂಘಿಸಲಾಗಿದೆ ಎಂದು ಹೇಳಿಕೊಂಡರೂ, ಮೊಬೈಲ್ನಲ್ಲಿ ದೋಷ ಇರುವುದನ್ನು ಒಪ್ಪಿಕೊಂಡಿದೆ ಹೀಗಾಗಿ ವೇದಿಕೆಯು ಕಂಪನಿಯ ಗ್ರಾಹಕ ಸೇವಾ ಲೋಪ ಎಂದು ಪರಿಗಣಿಸಿ ಆದೇಶ ನೀಡಿದೆ.

ಮೊಬೈಲ್ ಹಣ ವಾಪಸ್!
ಅಲೆದು ಅಲೆದು ಕಂಪೆನಿ ವಿರುದ್ಧ ಬೇಸತ್ತಿದ್ದ ವೈದ್ಯರಿಗೆ ಈ ಪ್ರಕರಣದಲ್ಲಿ ಮೊಬೈಲ್ ಫೋನ್ನ ಮೂಲ ದರ 13, 500 ಹಾಗೂ ಕಾನೂನು ಹೋರಾಟ ಶುಲ್ಕವಾಗಿ 10 ಸಾವಿರ ರೂ. ನೀಡುವಂತೆ ಕಂಪನಿಗೆ ಆದೇಶಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಮೊಬೈಲ್ ಕಂಪೆನಿ ವಿರುದ್ಧ ಹೋರಾಟ ನಡೆಸಿದ ವೈದ್ಯರಿಗೆ ಈಗ ನ್ಯಾಯ ಸಿಕ್ಕಿದೆ. ಆದರೆ, ಇನ್ಮುಂದ ಇಂತಹ ಪ್ರಕರಣಗಳು ಕಂಡುಬಂದರೆ, ಆ ತಕ್ಷಣ ದುರಸ್ಥಿ ಮಾಡಿಕೊಡಬೇಕು. ಇಲ್ಲವಾದಲ್ಲಿ ಹೆಚ್ಚು ದಂಡ ತೆರಬೇಕಾಗಬಹುದು ಎಂಬ ಮಾತುಗಳನ್ನು ಸಹ ವೇದಿಕೆ ಹೇಳಿದೆ.


Click it and Unblock the Notifications