ಇಬ್ಬನಿ ನಾಡು ಕೊಡಗಿಗೆ ಆನ್ಲೈನ್ನಲ್ಲಿ ನೆರವು ನೀಡಿ..!

ಮಂಜಿನ ನಾಡು ಕೊಡಗು ಕುಂಭದ್ರೋಣ ಮಳೆಗೆ ಅಕ್ಷರಶಃ ತತ್ತರಿಸಿದ್ದು, ಸಾವಿರಾರು ಜನರು ಭೀಕರ ನೆರೆಯಿಂದ ಸಂತ್ರಸ್ತರಾಗಿದ್ದಾರೆ. ಕೊಡಗಿನ ಜನತೆಯ ನೆರವಿಗೆ ರಾಜ್ಯಾದ್ಯಂತ ಅನೇಕ ಸಂಘಟನೆಗಳು, ಸ್ವಯಂ ಸೇವಕರು, ವಿಪತ್ತು ನಿರ್ವಹಣಾ ದಳ, ಸೇನೆ ಹೀಗೆ ಎಲ್ಲರೂ ಬಂದಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ಚಾಚಿರುವ ರೀತಿಗೆ ಎಲ್ಲ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದ್ದು, ಹಲವು ಕಡೆ ಪರಿಹಾರ ಕಾರ್ಯ ನಡೆಯುತ್ತಿದೆ.

ಈಗ ಕೊಡಗು ಪ್ರವಾಹ ಸಂತ್ರಸ್ತರಿಗೆ ಪೇಟಿಎಂ ಮೂಲಕವೂ ಸಹಾಯ ಹಸ್ತ ಚಾಚಬಹುದಾಗಿದ್ದು, ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀವು ಮಾಡುವ ಹಣ ಸಹಾಯ ಸಂದಾಯವಾಗುತ್ತದೆ. ಪೇಟಿಎಂ ಜನರು ನೀಡಿದ ಸಹಾಯಕ್ಕೆ ಸಮನಾಗಿ ಹಣ ಕೂಡಿಸಿ ಸಹಾಯ ಹಸ್ತ ನೀಡುತ್ತಿದೆ. ಹೀಗಾಗಲೇ ಕೇರಳ ಪ್ರವಾಹ ಪೀಡಿತರಿಗೆ ಪರಿಹಾರ ನಿಧಿಯನ್ನು ಪ್ರಾರಂಭಿಸಿ ಜನರ ಪ್ರಶಂಸೆಗೆ ಪಾತ್ರವಾಗಿತ್ತು. ಇದರ ಜತೆಗೆ ಕೇರಳ ಪ್ರವಾಹ ಸಂತ್ರಸ್ತರ ನೆರವಿಗೆ ಅಮೆಜಾನ್, ಫ್ಲಿಪ್ಕಾರ್ಟ್ ಕೂಡ ವೇದಿಕೆ ಕಲ್ಪಿಸಿದ್ದವು. ಹಾಗಾದರೆ, ಪೇಟಿಎಂನಲ್ಲಿ ಕೊಡಗು ಪ್ರವಾಹ ಸಂತ್ರಸ್ತರಿಗೆ ಹೇಗೆ ನೆರವು ನೀಡುವುದೆಂಬುದನ್ನು ಮುಂದೆ ನೋಡಿ.

ಪೇಟಿಎಂನಲ್ಲಿ ನೆರವಾಗಿ
ಭಾರತದ ಪ್ರಮುಖ ಮೊಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ ಪೇಮೆಂಟ್ ಸೇವೆ ನೀಡುತ್ತಿರುವ 99 ಕಮ್ಯೂನಿಕೇಷನ್ ಮಾಲೀಕತ್ವದ ಪೇಟಿಎಂ ಆಪ್ನಲ್ಲಿ ಪ್ರತ್ಯೇಕವಾದ ಐಕಾನ್ ನೀಡಿದ್ದು, ಕೊಡಗು ಪ್ರವಾಹ ಪೀಡಿತರಿಗೆ ನೇರವಾಗಿ ನೆರವಾಗಲು ವೇದಿಕೆಯನ್ನು ಕಲ್ಪಿಸಿದೆ. ಇದರ ಮೂಲಕ ನೀವು ನೇರವಾಗಿ ಸಹಾಯ ಮಾಡಬಹುದು. ಪ್ರತ್ಯೇಕ ಡೋನೆಟ್ ಕೇರಳ/ ಕೊಡಗು ಪ್ಲೂಡ್ ಎಂಬ ಆಯ್ಕೆಯನ್ನು ನೀಡಿದೆ.

ಹೀಗೆ ಸಹಾಯ ಹಸ್ತ ಚಾಚಿ
ನಿಮ್ಮದು ಅಪ್ಡೇಟೆಡ್ ಪೇಟಿಎಂ ಆಪ್ ಆಗಿದ್ದರೆ ಡೋನೆಟ್ ಕೇರಳ/ ಕೊಡಗು ಪ್ಲೂಡ್ ಎಂಬ ಆಯ್ಕೆ ನಿಮಗೆ ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿ. ನಂತರ ನಿಮಗೆ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಪರ್ಕ ಕಲ್ಪಿಸುವ ವಿಂಡೋ ನಿಮಗೆ ದೊರೆಯುತ್ತದೆ. ನೀವು ಕೊಡಗಿಗೆ ಸಹಾಯ ಮಾಡುತ್ತಿರಿ ಎಂದಾದರೆ, ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಆಯ್ಕೆ ಕ್ಲಿಕ್ ಮಾಡಿ, ನಿಮ್ಮ ಹೆಸರು ನಮೂದಿಸಿ ನೀವು ಸಹಾಯ ಮಾಡಬೇಕಾದಷ್ಟು ಹಣವನ್ನು ನಮೂದಿಸಿ ಮುಂದುವರೆಯುವ ಆಯ್ಕೆ ಕ್ಲಿಕ್ ಮಾಡಿದರೆ, ಕೊಡಗು ಪರಿಹಾರ ಕಾರ್ಯಕ್ಕೆ ನಿಮ್ಮ ಸಹಾಯವು ಸಂದಾಯವಾಗುತ್ತದೆ.

ಟ್ವಿಟರ್ನಲ್ಲಿ ನೆಟ್ಟಿಗರ ಆಕ್ರೋಶ
ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ಮಾಡಲು ಕೇವಲ ಡಿಡಿ ಅಥವಾ ಚೆಕ್ ನೀಡಬೇಕಾಗಿತ್ತು. ಅದಕ್ಕಾಗಿ ಟ್ವಿಟರ್ನಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಬೆರಳ ತುದಿಯಲ್ಲಿ ಆನ್ಲೈನ್ ಪೇಮೆಂಟ್ ಮಾಡುವ ಆಯ್ಕೆಯಿದ್ದರೂ ರಾಜ್ಯ ಸರ್ಕಾರ ಬ್ಯಾಂಕ್ ಅಕೌಂಟ್ ವಿವರಗಳನ್ನು ಪ್ರಕಟಿಸಿಲ್ಲ. ಆದ್ದರಿಂದ ಕೊಡಗು ಜಿಲ್ಲಾಧಿಕಾರಿಯ ಅಕೌಂಟ್ ವಿವರಗಳನ್ನಾದರೂ ಸಹಾಯದ ನೆರವಿಗೆ ನೀಡಿ ಎಂದು ಟ್ವೀಟಿಗರು ಬೇಡಿಕೆ ಇಟ್ಟಿದ್ದರು.

ಅಕೌಂಟ್ ವಿವರಗಳನ್ನು ಪ್ರಕಟಿಸಿದ ಸರ್ಕಾರ
ಕೊಡಗು ಸಂತ್ರಸ್ತರಿಗೆ ವ್ಯಾಪಕ ಸಹಾಯ ಹಸ್ತ ವ್ಯಕ್ತವಾಗುತ್ತಿರುವ ಹಿನ್ನೆಲೆ ಕೇರಳದಂತೆ ಕೊಡಗು ಪರಿಹಾರ ನಿಧಿಯ ಅಕೌಂಟ್ ವಿವರಗಳನ್ನು ನೀಡಬೇಕೆಂಬ ಒತ್ತಾಯ ಬಂದಿದ್ದರಿಂದ, ಸರ್ಕಾರ ಇಂದು ಅಕೌಂಟ್ ವಿವರಗಳನ್ನು ನೀಡಿದೆ. ಡಿಜಿಟಲ್ ಇಂಡಿಯಾದಲ್ಲಿ ಡಿಜಿಟಲ್ ಪೇಮೆಂಟ್ಗೆ ಉತ್ತೇಜಿಸಬೇಕಿದ್ದ ಸರ್ಕಾರ ಇನ್ನು ಡಿಡಿ, ಚೆಕ್ ಮೊರೆ ಹೋಗಿದ್ದು, ಆನ್ಲೈನ್ನಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಆನ್ಲೈನ್ ಮೂಲಕವು ನೆರವಾಗಬಹುದು..!
ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವಾಗಿಯೇ ಸಹಾಯ ಮಾಡುವ ಆಯ್ಕೆಯು ಲಭ್ಯವಿದ್ದು, ಆನ್ಲೈನ್ ಪೇಮೆಂಟ್ ಆಪ್ಗಳ ಮೂಲಕ ನೆರವು ನೀಡಬಹುದು. ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಬ್ಯಾಂಕ್ ಖಾತೆ ವಿವರ ಹೀಗಿದೆ.
Chief Minister Releif Fund: Natural Calamity 2018.
A/C Number: 37887098605
IFSC code: SBIN0040277
MICR Numbr: 560002419
Branch: State Bank Of India, Vidhana Soudha, Bengaluru
ಈ ಬ್ಯಾಂಕ್ ಖಾತೆಗೆ ಪಾವತಿಸುವ ಮೂಲಕ ಕೊಡಗು ಸಂತ್ರಸ್ತರಿಗೆ ನೆರವು ನೀಡಬಹುದು.


Click it and Unblock the Notifications