ಕೇಂದ್ರ ಸರ್ಕಾರದಿಂದ ಶಾಕಿಂಗ್ ನ್ಯೂಸ್!..ನಿಮ್ಮ ಕಂಪ್ಯೂಟರ್ ಕೊಡದಿದ್ರೆ 7 ವರ್ಷ ಜೈಲು!
ಆನ್ಲೈನ್ ಅಥವಾ ತಂತ್ರಜ್ಞಾನದ ಸಹಾಯದಿಂದ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿರುವವವರ ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಇದಕ್ಕಾಗಿ ದೇಶದ ಯಾವುದೇ ಕಂಪ್ಯೂಟರ್ನಲ್ಲಿ ಸಂಗ್ರಹಗೊಂಡಿರುವ ಮಾಹಿತಿಗಳ ಶೋಧನೆ, ಪರಿಶೀಲನೆ ಮತ್ತು ಪ್ರತಿಬಂಧದ ಅಧಿಕಾರವನ್ನು ಗುಪ್ತಚರ ಏಜೆನ್ಸಿಗಳಿಗೆ ನೀಡಿರುವ ಕ್ರಮವು ಅಚ್ಚರಿಯಾಗಿದೆ.
ಹೌದು, ದೇಶದ ಭದ್ರತೆಯ ದೃಷ್ಟಿಯಿಂದ ದೇಶದಲ್ಲಿನ ಯಾವುದೇ ಕಂಪ್ಯೂಟರ್ನಲ್ಲಿ ಸಂಗ್ರಹಿಸಿ ಇಟ್ಟಿರುವ ಮಾಹಿತಿಗಳ ಮೇಲೆ ಕಣ್ಗಾವಲು, ಬೇಧಿಸುವಿಕೆ ಮತ್ತು ಪ್ರತಿಬಂಧಿಸಲು 10 ಭದ್ರತಾ ಮತ್ತು ಗುಪ್ತಚರ ಏಜೆನ್ಸಿಗಳಿಗೆ ಕೇಂದ್ರ ಗೃಹಸಚಿವಾಲಯ ಇದೇ ಗುರುವಾರ ಅಧಿಕಾರ ನೀಡಿದೆ. ಡಿಸೆಂಬರ್ 20, 2018ರ ದಿನಾಂಕದ ಆದೇಶದಲ್ಲಿ ಈ ಬಗ್ಗೆ ಸರ್ಕಾರವು ಈ ಬಗ್ಗೆ ಪ್ರಕಟಿಸಿದೆ.

ಸರ್ಕಾರದ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದೇಶದ ಬಹುಪಾಲು ಮಂದಿ ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ. ಆದರೆ, ಸರ್ಕಾರದ ಈ ಕ್ರಮವನ್ನು ಟೀಕಿಸುವವರ ಪ್ರಮಾಣ ಕೂಡ ಬಲವಾಗಿದೆ. ಹಾಗಾದರೆ, ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಆದೇಶದಲ್ಲಿ ಏನಿದೆ?, ಈ ನಿರ್ಧಾರವನ್ನು ಹಲವರು ಟೀಕಿಸುತ್ತಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗುಪ್ತಚರ ಏಜೆನ್ಸಿಗಳಿಗೆ ಕಣ್ಗಾವಲು ಅಧಿಕಾರ!
ಮೊದಲೇ ಹೇಳಿದಂತೆ, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಸಹಿ ಮಾಡಿರುವ ಆದೇಶದಲ್ಲಿ, ಕಂಪ್ಯೂಟರ್ ರಿಸೋರ್ಸ್ ( ಮಾಹಿತಿ) ಉಸ್ತುವಾರಿ ಹೊಂದಿರುವ ಯಾವುದೇ ಚಂದಾದಾರ ಅಥವಾ ಯಾವುದೇ ಸೇವಾದಾರ ಕಂಪನಿ ಅಥವಾ ಯಾವನೇ ವ್ಯಕ್ತಿ ತನಿಖಾ ಸಂಸ್ಥೆಗಳಿಗೆ ತಾಂತ್ರಿಕ ಸಹಕಾರ ಒದಗಿಸತಕ್ಕದ್ದು ಎಂದು ಹೇಳಿದೆ. ತಾಂತ್ರಿಕ ಸಹಾಯವನ್ನು ನೀಡದೇ ಇಲ್ಲವಾದಲ್ಲಿ ಆ ವ್ಯಕ್ತಿ ಅಥವಾ ಸಂಸ್ಥೆ ಶಿಕ್ಷೆಗೆ ಗುರಿಯಾಗಬೇಕಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ-2000
ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಉಪ ನಿಬಂಧನೆ 69(1)ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದ್ದು,, ಗೃಹಸಚಿವಾಲಯದ ಸೈಬರ್ ಮತ್ತು ಮಾಹಿತಿ ಭದ್ರತಾ ವಿಭಾಗವು ಈ ಆದೇಶವನ್ನು ಪ್ರಕಟಿಸಿದೆ. ಹಾಗಾಗಿ, ಇನ್ಮುಂದೆ ಕಂಪ್ಯೂಟರ್ ಮಾಹಿತಿ ಉಸ್ತುವಾರಿ ಹೊಂದಿರುವ ಯಾವುದೇ ಚಂದಾದಾರ, ಸೇವಾದಾರ ಕಂಪೆನಿಗಳು ಅಥವಾ ಯಾವನೇ ವ್ಯಕ್ತಿ ಕೂಡ ತನಿಖಾ ಸಂಸ್ಥೆಗಳಿಗೆ ಈಗ ತಾಂತ್ರಿಕ ಸಹಕಾರ ನೀಡಬೇಕಿದೆ.

ಈ 10 ಸಂಸ್ಥೆಗಳಿಗೆ ಅಧಿಕಾರ!
ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಮಾದಕ ವಸ್ತು ನಿಯಂತ್ರಣ ಬ್ಯೂರೋ, ಜಾರಿ ನಿರ್ದೇಶನಾಲಯ (ಇ.ಡಿ), ಕೇಂದ್ರ ನೇರ ತೆರಿಗೆಗಳ ಮಂಡಳಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ದಳ, ಸಂಪುಟ ಕಾರ್ಯಾಲಯ (R&AW), ಸಿಗ್ನಲ್ ಇಂಟೆಲಿಜೆನ್ಸ್ ನಿರ್ದೇಶನಾಲಯ (ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಸೀಮಿತ) ಮತ್ತು ದಿಲ್ಲಿ ಪೊಲೀಸ್ ಕಮಿಷನರ್- ಈ 10 ಸಂಸ್ಥೆಗಳಿಗೆ ದೇಶದ ಯಾವುದೇ ಕಂಪ್ಯೂಟರ್ನಲ್ಲಿ ಸಂಗ್ರಹಗೊಂಡಿರುವ ಮಾಹಿತಿಗಳ ಶೋಧನೆ, ಪರಿಶೀಲನೆ ಮತ್ತು ಪ್ರತಿಬಂಧದ ಅಧಿಕಾರ ನೀಡಲಾಗಿದೆ.

ಕನಿಷ್ಟ 7 ವರ್ಷಗಳ ಜೈಲುವಾಸ
ಒಂದು ವೇಳೆ ಕೇಂದ್ರ ಸರ್ಕಾರದ ಈ ಆದೇಶವನ್ನು ಧಿಕ್ಕರಿಸಿ ತನಿಖಾ ಸಂಸ್ಥೆಗಳಿಗೆ ಸಹಕರಿಸದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಉಪ ನಿಬಂಧನೆ 69(1)ರ ಅಡಿಯಲ್ಲಿ 7 ವರ್ಷಗಳ ಜೈಲುವಾಸ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ತಂತ್ರಜ್ಞಾನದ ಸಹಾಯದಿಂದ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿರುವವವರ ಹೆಡೆಮುರಿ ಕಟ್ಟಲು ಇದು ಸರ್ಕಾರದ ನಿರ್ದಾಕ್ಷಿಣ್ಯ ಕ್ರಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಕ್ರಮಕ್ಕೆ ಭಾರೀ ಟೀಕೆ!
ಸರ್ಕಾರದ ಈ ಕ್ರಮವನ್ನು ಅಸಾಂವಿಧಾನಿಕ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನನ್ನು ಅಪರಾಧಿಯಂತೆ ನೋಡುವುದೇಕೆ? ಪ್ರತಿ ನಾಗರಿಕನ ಖಾಸಗಿತನದ ಮೇಲೆ ಕಣ್ಣಿಡುವ ಸರಕಾರದ ಈ ಆದೇಶ ಅಸಾಂವಿಧಾನಿಕವೆಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಕಟುವಾಗಿ ಟೀಕಿಸಿದ್ದಾರೆ. ಹಿರಿಯ ರಾಜಕೀಯ ಪಟು ಪಿ. ಚಿದಂಬರಂ ಕೂಡ ಈ ಕ್ರಮವನ್ನು ಟೀಕಿಸಿದ್ದು, ಇದು ಸರ್ವಾಧಿಕಾರದ ನಡೆ ಎಂದು ಹೇಳಿದ್ದಾರೆ. ಹಾಗಾದರೆ, ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ.


Click it and Unblock the Notifications








