ಕಂಪ್ಯೂಟರ್ ಬೇಹುಗಾರಿಕೆಗೆ ತನಿಖಾ ಸಂಸ್ಥೆಗಳಿಂದ ಕಟ್ಟುನಿಟ್ಟಿನ ನಿಯಮ ಪಾಲಿನೆ!!
ದೇಶದ ಯಾವುದೇ ಕಂಪ್ಯೂಟರ್ಗಳ ಮಾಹಿತಿಯನ್ನು ಪಡೆಯುವ ಅಧಿಕಾರವನ್ನು ತನಿಖಾ ಸಂಸ್ಥೆಗಳಿಗೆ ನೀಡಲಾದ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ. ಕಂಪ್ಯೂಟರ್ನಿಂದ ಮಾಹಿತಿ ಸಂಗ್ರಹಿಸುವ ಹಾಗೂ ತಡೆ ಹಿಡಿಯುವ ಯಾವುದೇ ರೀತಿಯ ಸಂಪೂರ್ಣ ಅಧಿಕಾರವನ್ನು ಏಜೆನ್ಸಿಗಳಿಗೆ ಕೇಂದ್ರ ಸರಕಾರ ನೀಡಿಲ್ಲ. ಇಂತಹ ಕ್ರಮವನ್ನು ಜಾರಿಗೊಳಿಸಲು ಮೊದಲು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿರುವಂತೆ ಇದೇ ಮೊದಲ ಬಾರಿಗೆ ದತ್ತಾಂಶವನ್ನು ಸ್ಕ್ಯಾನಿಂಗ್ ಮಾಡುವ ಅಧಿಕಾರವನ್ನು 10 ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ. ಆದರೆ, ಇಂತಹ ಕ್ರಮವನ್ನು ಜಾರಿಗೊಳಿಸಲು ಮೊದಲು ಆ ಸಂಸ್ಥೆಗಳು ಚರ್ಚೆ ನಡೆಸಬೇಕಾಗುತ್ತದೆ. ಒಂದು ವೇಳೆ ಜಾರಿಯಾದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ರೀತಿಯ ಯಾವುದೇ ಕ್ರಮ ಜಾರಿ ಮಾಡುವ ಮುನ್ನ ಪೂರ್ವಾನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮೊದಲು ಕೇವಲ ಚಲನಾ ದತ್ತಾಂಶವನ್ನಷ್ಟೇ ತಡೆಹಿಡಿಯಬಹುದಿತ್ತು. ಆದರೆ ಈಗ ಸ್ವೀಕೃತವಾದ ದತ್ತಾಂಶ, ಕಂಪ್ಯೂಟರ್ನಲ್ಲಿ ಈಗಾಗಲೇ ಸ್ಟೋರ್ ಆಗಿರುವ ಮತ್ತು ಜನರೇಟ್ ಆಗಿರುವ ದತ್ತಾಂಶವನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಈ 10 ಸಂಸ್ಥೆಗಳು ಪಡೆದಿವೆ. ಹಾಗಾದರೆ, ಕಂಪ್ಯೂಟರ್ ಬೇಹುಗಾರಿಕೆ ಮಾಡಲು ಸರ್ಕಾರ ಆದೇಶ ನೀಡಿರುವುದು ಏಕೆ? ಇನ್ಮುಂದೆ ದೇಶದ ಕಂಪ್ಯೂಟರ್ ಬಳಕೆದಾರರ ಮಾಹಿತಿ ಹೇಗೆ ಸುರಕ್ಷಿತ ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ಓದಿ ತಿಳಿಯಿರಿ.

ಗುಪ್ತಚರ ಏಜೆನ್ಸಿಗಳಿಗೆ ಕಣ್ಗಾವಲು ಅಧಿಕಾರ!
ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಸಹಿ ಮಾಡಿರುವ ಆದೇಶದಲ್ಲಿ, ಕಂಪ್ಯೂಟರ್ ರಿಸೋರ್ಸ್ ( ಮಾಹಿತಿ) ಉಸ್ತುವಾರಿ ಹೊಂದಿರುವ ಯಾವುದೇ ಚಂದಾದಾರ ಅಥವಾ ಯಾವುದೇ ಸೇವಾದಾರ ಕಂಪನಿ ಅಥವಾ ಯಾವನೇ ವ್ಯಕ್ತಿ ತನಿಖಾ ಸಂಸ್ಥೆಗಳಿಗೆ ತಾಂತ್ರಿಕ ಸಹಕಾರ ಒದಗಿಸತಕ್ಕದ್ದು ಎಂದು ಹೇಳಿದೆ. ತಾಂತ್ರಿಕ ಸಹಾಯವನ್ನು ನೀಡದೇ ಇಲ್ಲವಾದಲ್ಲಿ ಆ ವ್ಯಕ್ತಿ ಅಥವಾ ಸಂಸ್ಥೆ ಶಿಕ್ಷೆಗೆ ಗುರಿಯಾಗಬೇಕಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ-2000
ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಉಪ ನಿಬಂಧನೆ 69(1)ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದ್ದು,, ಗೃಹಸಚಿವಾಲಯದ ಸೈಬರ್ ಮತ್ತು ಮಾಹಿತಿ ಭದ್ರತಾ ವಿಭಾಗವು ಈ ಆದೇಶವನ್ನು ಪ್ರಕಟಿಸಿದೆ. ಹಾಗಾಗಿ, ಇನ್ಮುಂದೆ ಕಂಪ್ಯೂಟರ್ ಮಾಹಿತಿ ಉಸ್ತುವಾರಿ ಹೊಂದಿರುವ ಯಾವುದೇ ಚಂದಾದಾರ, ಸೇವಾದಾರ ಕಂಪೆನಿಗಳು ಅಥವಾ ಯಾವನೇ ವ್ಯಕ್ತಿ ಕೂಡ ತನಿಖಾ ಸಂಸ್ಥೆಗಳಿಗೆ ಈಗ ತಾಂತ್ರಿಕ ಸಹಕಾರ ನೀಡಬೇಕಿದೆ.

ಈ 10 ಸಂಸ್ಥೆಗಳಿಗೆ ಅಧಿಕಾರ!
ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಮಾದಕ ವಸ್ತು ನಿಯಂತ್ರಣ ಬ್ಯೂರೋ, ಜಾರಿ ನಿರ್ದೇಶನಾಲಯ (ಇ.ಡಿ), ಕೇಂದ್ರ ನೇರ ತೆರಿಗೆಗಳ ಮಂಡಳಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ದಳ, ಸಂಪುಟ ಕಾರ್ಯಾಲಯ (R&AW), ಸಿಗ್ನಲ್ ಇಂಟೆಲಿಜೆನ್ಸ್ ನಿರ್ದೇಶನಾಲಯ (ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಸೀಮಿತ) ಮತ್ತು ದಿಲ್ಲಿ ಪೊಲೀಸ್ ಕಮಿಷನರ್- ಈ 10 ಸಂಸ್ಥೆಗಳಿಗೆ ದೇಶದ ಯಾವುದೇ ಕಂಪ್ಯೂಟರ್ನಲ್ಲಿ ಸಂಗ್ರಹಗೊಂಡಿರುವ ಮಾಹಿತಿಗಳ ಶೋಧನೆ, ಪರಿಶೀಲನೆ ಮತ್ತು ಪ್ರತಿಬಂಧದ ಅಧಿಕಾರ ನೀಡಲಾಗಿದೆ.

ಕನಿಷ್ಟ 7 ವರ್ಷಗಳ ಜೈಲುವಾಸ
ಒಂದು ವೇಳೆ ಕೇಂದ್ರ ಸರ್ಕಾರದ ಈ ಆದೇಶವನ್ನು ಧಿಕ್ಕರಿಸಿ ತನಿಖಾ ಸಂಸ್ಥೆಗಳಿಗೆ ಸಹಕರಿಸದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಉಪ ನಿಬಂಧನೆ 69(1)ರ ಅಡಿಯಲ್ಲಿ 7 ವರ್ಷಗಳ ಜೈಲುವಾಸ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ತಂತ್ರಜ್ಞಾನದ ಸಹಾಯದಿಂದ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿರುವವವರ ಹೆಡೆಮುರಿ ಕಟ್ಟಲು ಇದು ಸರ್ಕಾರದ ನಿರ್ದಾಕ್ಷಿಣ್ಯ ಕ್ರಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಕ್ರಮಕ್ಕೆ ಭಾರೀ ಟೀಕೆ!
ಸರ್ಕಾರದ ಈ ಕ್ರಮವನ್ನು ಅಸಾಂವಿಧಾನಿಕ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನನ್ನು ಅಪರಾಧಿಯಂತೆ ನೋಡುವುದೇಕೆ? ಪ್ರತಿ ನಾಗರಿಕನ ಖಾಸಗಿತನದ ಮೇಲೆ ಕಣ್ಣಿಡುವ ಸರಕಾರದ ಈ ಆದೇಶ ಅಸಾಂವಿಧಾನಿಕವೆಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಕಟುವಾಗಿ ಟೀಕಿಸಿದ್ದಾರೆ. ಹಿರಿಯ ರಾಜಕೀಯ ಪಟು ಪಿ. ಚಿದಂಬರಂ ಕೂಡ ಈ ಕ್ರಮವನ್ನು ಟೀಕಿಸಿದ್ದು, ಇದು ಸರ್ವಾಧಿಕಾರದ ನಡೆ ಎಂದು ಹೇಳಿದ್ದಾರೆ. ಹಾಗಾದರೆ, ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ.


Click it and Unblock the Notifications