ಹಣ ಡಬಲ್ ಮಾಡೋದಾಗಿ ಹೇಳಿ 9 ಕೋಟಿ ರೂ. ವಂಚನೆ: ಉದ್ಯಮಿ ಮೋಸ ಹೋಗಿದ್ದೇಗೆ ಗೊತ್ತಾ?
ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಎಂಬ ಗಾದೆ ಮಾತಿದೆ. ಯಾಕಂದ್ರೆ, ಜನ ಅಷ್ಟರ ಮಟ್ಟಿಗೆ ದುಡ್ಡಿಗೆ ಬೆಲೆ ಕೊಡ್ತಿದ್ದಾರೆ. ಆದ್ರೆ, ಜನರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ಹಣವನ್ನು ಡಬಲ್ (Money Double) ಮಾಡಿಕೊಡುತ್ತೇವೆ ಅಂತ ಆಸೆ ಹುಟ್ಟಿಸಿ, ಬಳಿಕ ಅವರ ಕೋಟಿ ಕೋಟಿ ಹಣ ಪಡೆದು ವಂಚನೆ ಮಾಡುತ್ತಿದ್ದಾರೆ. ದೇಶದಲ್ಲಿ ಇಂತಹ ವಂಚಕರ ಜಾಲ ದೊಡ್ಡದಿದೆ. ಸದ್ಯ, ಉತ್ತರ ಪ್ರದೇಶದ ನೋಯ್ಡಾದಲ್ಲಿ ಉದ್ಯಮಿಗೆ ಕೋಟಿ ಕೋಟಿ ವಂಚಿಸಿರುವ ಘಟನೆ ನಡೆದಿದೆ.
ಹೌದು, ಇಡೀ ದೇಶವೇ ಡಿಜಿಟಲೀಕರಣಗೊಂಡಿದೆ. ಎಲ್ಲಾ ಕಡೆ ಡಿಜಿಟಲ್ ವಹಿವಾಟು ಹೆಚ್ಚಾಗಿದೆ. ಇದನ್ನು ಸೈಬರ್ ಕಳ್ಳರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನೇ ಲಾಭವಾಗಿ ಪಡೆದ ಆನ್ಲೈನ್ ವಂಚಕರು, ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನೋಯ್ಡಾದ ಉದ್ಯಮಿಯೊಬ್ಬರಿಗೆ ಆನ್ಲೈನ್ ಟ್ರೇಡಿಂಗ್ (Online Trading) ವಂಚನೆಯಲ್ಲಿ ಬರೋಬ್ಬರಿ 9 ಕೋಟಿ ಪಂಗನಾಮ ಹಾಕಿದ್ದಾರೆ. ತನಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನೋಯ್ಡಾ ಮೂಲದ ಬೋತ್ರಾ ಎಂಬ ಉದ್ಯಮಿಯೇ ವಂಚನೆಗೊಳಗಾದ ಅಮಾಯಕ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಟ್ಸಪ್ ಗ್ರೂಪ್ನಲ್ಲಿ ಆರಂಭವಾದ ಆನ್ಲೈನ್ ಟ್ರೇಡಿಂಗ್ ಹಗರಣದಿಂದ ಇವರು 9 ಕೋಟಿ ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರ ಸಲಹೆಯಂತೆ ಬೋತ್ರಾ ಅವರು, ವಾಟ್ಸಪ್ ಗ್ರೂಪ್ಗೆ ಸೇರಿದ್ದಾರೆ. ಆನ್ಲೈನ್ ಟ್ರೇಡಿಂಗ್ (Online Trading) ಮೂಲಕ ಹೆಚ್ಚು ಲಾಭ ಗಳಿಸಬಹುದು ಅಂತ ನಂಬಿಸಿದ್ದಾರೆ. ಬಳಿಕ, ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದಾರೆ.
ಉದ್ಯಮಿ ಮೋಸ ಹೋಗಿದ್ದೇಗೆ ಗೊತ್ತಾ?
ಸಾಮಾನ್ಯವಾಗಿ ಅನೇಕ ವಂಚನೆಗಳು ಪ್ರಕರಣಗಳು, ಮೆಸೇಜಿಂಗ್ ಆಪ್ಗಳ ಮೂಲಕ ಆರಂಭವಾಗುತ್ತವೆ. ಅದರಂತೆ ಬೋತ್ರಾ ಅವರನ್ನು ಮೇ 1ರಂದು ವಾಟ್ಸಪ್ ಗ್ರೂಪ್ಗೆ ಸೇರಿಸಲಾಗಿದೆ. ಆನ್ಲೈನ್ ಟ್ರೇಡಿಂಗ್ನಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದಾರೆ. ವಂಚಕರ ಮಾತಿನ ಮೋಡಿಗೆ ಮರುಳಾದ ಉದ್ಯಮಿ, ಬಂಡವಾಳ ಹೂಡಿಕೆಗೆ ಮುಂದಾಗಿದ್ದರು. ಅಧಿಕ ಲಾಭ ಗಳಿಸಬಹುದೆಂಬ ಆಸೆಯನ್ನು ಇಟ್ಟುಕೊಂಡಿದ್ದರು. ಹೀಗಾಗಿ, ಸೇಬರ್ ಕಳ್ಳರ ಸಲಹೆಗಳಂತೆ ಆನ್ಲೈನ್ ಟ್ರೇಡಿಂಗ್ ಅಕೌಂಟ್ ಪ್ರಾರಂಭ ಮಾಡಿದ್ದರು. ವಾಟ್ಸಪ್ನಲ್ಲಿ ಬಂದ ಸಲಹೆಗಳ ಆಧಾರದ ಮೇಲೆ ಬಂಡವಾಳ ಹೂಡಲು ಆರಂಭಿಸಿದ್ದರು.
ಬರೋಬ್ಬರಿ 9.09 ಕೋಟಿ ರೂಪಾಯಿ ಹೂಡಿಕೆ
ಹೀಗೆ, ಆನ್ಲೈನ್ ಟ್ರೇಡಿಂಗ್ ವ್ಯಾಪಾರದ ಮೂಲಕ ಲಾಭ ಗಳಿಸುವ ಅತಿಯಾದ ಆಸೆ, ಉದ್ಯಮಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಮೊದ ಮೊದಲು ಸಣ್ಣ ಪ್ರಮಾಣದ ಹೂಡಿಕೆಯನ್ನು ಆರಂಭಿಸಿದ್ದರು. ಮೇ 27ರ ವೇಳೆಗೆ ಷೇರು ವ್ಯಾಪಾರದಲ್ಲಿ ಬರೋಬ್ಬರಿ 9.09 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಬಳಿಕ ಬೋತ್ರಾ ಅವರ ಅಕೌಂಟ್ ದಿಢೀರನೆ ಕ್ಲೋಸ್ ಆಗಿದೆ. ಈ ಬಗ್ಗೆ ವಿಚಾರಿಸಿದಾಗಲೇ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಉದ್ಯಮಿಗೆ ಅರಿವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ರಾಜ್ಯಗಳ ಬ್ಯಾಂಕ್ ಖಾತೆ ಮೂಲಕ ವಂಚನೆ
ನಾವು ಉದ್ಯಮಿ ಬೋತ್ರಾ ಅವರಿಂದ ದೂರು ಪಡೆದಾಗ, ಕೂಡಲೇ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ ನಾವು ಅವರ ಬ್ಯಾಂಕ್ ಖಾತೆಯಲ್ಲಿ 1.62 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲು ಯಶಸ್ವಿಯಾಗಿದ್ದೇವೆ. ವಂಚನೆಗೆ ಬಳಸಿದ ಬ್ಯಾಂಕ್ ಖಾತೆಗಳೆಲ್ಲವೂ ಚೆನ್ನೈ, ಅಸ್ಸಾಂ, ಭುವನೇಶ್ವರ, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಓಪನ್ ಆಗಿವೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ ವಿವೇಕ್ ರಂಜನ್ ರೈ ಮಾಹಿತಿ ನೀಡಿದ್ದಾರೆ.
ವಂಚಕರಿಂದ ಜಾಗೃತರಾಗಿ, 1930 ಅಥವಾ 112ಗೆ ಕರೆ ಮಾಡಿ
ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಸೈಬರ್ ಅಪರಾಧಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಈ ರೀತಿಯ ಆನ್ಲೈನ್ ವಂಚನೆಗಳ ಬಗ್ಗೆ ಜನರು ಜಾಗರೂಕರಾಗಿರಬೇಕು. ಸಾಧ್ಯವಾದಷ್ಟು ಬೇಗ ಕೇಂದ್ರ ಸಹಾಯವಾಣಿ 1930 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇಲ್ಲವೇ, ಸ್ಥಳೀಯ ಪೊಲೀಸ್ ಠಾಣೆಗಳ ಸೈಬರ್ ಡೆಸ್ಕ್ಗೆ ಭೇಟಿ ನೀಡಿ ದೂರು ದಾಖಲಿಸಿ ಎಂದು ಹೇಳಿದ್ದಾರೆ.


Click it and Unblock the Notifications








