Odisha Train Accident: ರೈಲು ಅಪಘಾತ ತಡೆಯುವ ಕವಚ್ ಇದ್ದರೂ ಒಡಿಶಾ ರೈಲು ದುರಂತ ನಡೆದಿದ್ದು ಹೇಗೆ?
ಇತ್ತೀಚಿಗಷ್ಟೇ ರೈಲ್ವೆ ಇಲಾಖೆ ರೈಲು ಅವಘಡಗಳನ್ನು ತಡೆಗಟ್ಟಲಿದೆ ಎನ್ನು ಕವಚ್ ಯೋಜನೆಯನ್ನು ಜಾರಿಗೊಳಿಸಿರುವುದಾಗಿ ಹೇಳಿತ್ತು. ಇದರಿಂದ ಎದರುಮುಖವಾಗಿ ಬರುವ ರೈಲು ಬಗ್ಗೆ ಮಾಹಿತಿ ತಿಳಿಯಲಿದ್ದು ಪರಸ್ಪರ ರೈಲು ಡಿಕ್ಕಿ ಹೊಡೆಯುವುದು ತಪ್ಪಲಿದೆ ಎಂದು ಹೇಳಲಾಗಿತ್ತು. ಆದರೆ ಒಡಿಶಾದ ದುರಂತ ನಿಜಕ್ಕೂ ಕವಚ್ ಎಷ್ಟು ಸುರಕ್ಷಿತ ಅನ್ನೊದು ಬಹಿರಂಗವಾಗಿದೆ.
ಹೌದು, ಒಡಿಶಾದಲ್ಲಿ ನೆನ್ನೆ ನಡೆದಿರುವ ರೈಲು ದುರಂತ (Odisha Train Accident)ಇಡೀ ದೇಶದಲ್ಲಿ ಶೋಕದ ಛಾಯೆ ಆವರಿಸುವಂತೆ ಮಾಡಿದೆ. ತಡ ರಾತ್ರಿಯಿಂದಲೂ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು ಮೃತಪಟ್ಟವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದರ ನಡುವೆ ಈ ಬೀಕರ ರೈಲು ದುರಂತಕ್ಕೆ ಕಾರಣ ಏನು ಅನ್ನೊದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹಾಗಾದ್ರೆ ಒಡಿಶಾ ರೈಲು ದುರಂತಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಕವಚ್?
ಮಾರ್ಚ್ 23, 2022 ರಂದು, ರೈಲ್ವೇ ಸಚಿವಾಲಯವು ಕವಾಚ್ ಎಂಬ ಸ್ಥಳೀಯ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯನ್ನು ಪರಿಚಯಿಸಿತ್ತು. ಇದನ್ನು ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಕವಚ್ ಅನ್ನು ಭಾರತೀಯ ರೈಲ್ವೇಗಳಿಗೆ ರಾಷ್ಟ್ರೀಯ ATP ವ್ಯವಸ್ಥೆಯಾಗಿ ಅಳವಡಿಸಲಾಗಿದೆ. ಇದನ್ನು ಲೋಕೋಮೋಟಿವ್ ಪೈಲಟ್ಗಳಿಗೆ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ ಮತ್ತು ಅತಿ ವೇಗವನ್ನು ತಪ್ಪಿಸುವಲ್ಲಿ ಸಹಾಯ ಮಾಡಲಿದೆ. ಅಷ್ಟೇ ಅಲ್ಲ ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್ಗಳನ್ನು ಅನ್ವಯಿಸುವ ಮೂಲಕ, ಸಿಸ್ಟಮ್ ರೈಲಿನ ವೇಗದ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸುತ್ತದೆ.

ಇಷ್ಟೇಲ್ಲಾ ತಂತ್ರಜ್ಞಾನವಿದ್ದರೂ ಒಡಿಶಾದಲ್ಲಿ ಶುಕ್ರವಾರ ನಡೆದಿರುವ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ತೀರಾ ಇತ್ತೀಚಿಗೆ ನಡೆದ ಅತಿ ದೊಡ್ಡ ರೈಲು ದುರಂತ ಇದಾಗಿದ್ದು, ಇಲ್ಲಿಯವರೆಗೆ 280ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಲ್ಲದೆ ಸುಮಾರು 900ಕ್ಕೂ ಅಧಿಕ ಮಂದಿ ಗಂಬೀರ ಗಾಯಗೊಂಡಿದ್ದಾರೆ. ಅದರಲ್ಲೂ ಮೂರು ರೈಲುಗಳ ನಡುವೆ ಅಪಘಾತ ನಡೆದಿರುವುದು ದುರ್ದೈವದ ಸಂಗತಿಯಾಗಿದೆ. ಇದೇ ಕಾರಣಕ್ಕೆ ಕವಚ್ ವ್ಯವಸ್ಥೆ ಎಷ್ಟು ಸುರಕ್ಷಿತವಾಗಿದೆ ಅನ್ನೊ ಗಂಭೀರ ವಿಚಾರ ಚರ್ಚೆಯಾಗ್ತಿದೆ.

ಘಟನೆ ನಡೆದಿದ್ದು ಹೇಗೆ: ಶುಕ್ರವಾರ ಸಂಜೆ ಒಡಿಶಾದ ಬಾಲಸೋರ್ನಲ್ಲಿ ಈ ದುರಂತ ಸಂಭವಿಸಿದೆ. ಮೊದಲಿಗೆ ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂರಲ್ ಎಕ್ಸ್ಪ್ರೆಸ್ ರೈಲು ಪಕ್ಕದಲ್ಲಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೋರಮಂಡಲ್ ಎಕ್ಸ್ಪ್ರೆಸ್ನ 12 ಬೋಗಿಗಳು ಹಳಿ ತಪ್ಪಿ 3ನೇ ರೈಲು ಮಾರ್ಗದ ಮೇಲೆ ಬಿದ್ದಿವೆ. ಇದೇ ಸಮಯದಲ್ಲಿ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರ ಸೂಪರ್ಪಾಸ್ಟ್ ಟ್ರೈನ್ ಹಳಿ ಮೇಲೆ ಬಿದ್ದಿ ಕೋರಮಂಡಲ್ ಎಕ್ಸ್ಪ್ರೆಸ್ ಟ್ರೈನ್ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.
ದುರಂತಕ್ಕೆ ಪ್ರಾಥಮಿಕ ಕಾರಣ ಏನು: ಈ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿಯೂ ಈ ರೀತಿಯ ರೈಲು ದುರಂತ ನಿಜಕ್ಕೂ ದುರದೃಷ್ಟಕರ ಎಂದು ಹೇಳಬಹುದಾಗಿದೆ.

ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಮೀಪದ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸ್ಥಳದಲ್ಲಿ ಮೂರು ಎನ್ಡಿಆರ್ಎಫ್ ಘಟಕಗಳು, 4 ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳು, 15ಕ್ಕೂ ಹೆಚ್ಚು ಅಗ್ನಿಶಾಮಕ ರಕ್ಷಣಾ ತಂಡಗಳು, 30 ವೈದ್ಯರು, 200 ಪೊಲೀಸ್ ಸಿಬ್ಬಂದಿ ಮತ್ತು 60 ಆಂಬ್ಯುಲೆನ್ಸ್ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಇನ್ನು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ, ಹಾಗೂ ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ರೈಲು ದುರಂತ ತಡೆಗಟ್ಟಲು ಇರುವ ಮಾರ್ಗಗಳು: ರೈಲು ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಅತಿ ಅವಶ್ಯಕವಾದ ಬದಲಾವಣೆಗಳನ್ನು ಮಾಡಲೇಬೇಕಿದೆ. ರೈಲು ಹಳಿಗಳ ಉನ್ನತೀಕರಣ ಮತ್ತು ನಿರ್ವಹಣೆಗಾಗಿ ನೂತನ ತಂತ್ರಜ್ಞಾನವನ್ನು ಬಳಸಬೇಕಾದ ಅನಿವಾರ್ಯತೆಯಿದೆ. ಜೊತೆಗೆ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಇಂಟರ್ಲಾಕಿಂಗ್ ವ್ಯವಸ್ಥೆಗಳಲ್ಲಿ ಸುದಾರಣೆ ಮಾಡಬೇಕಾಗಿದೆ.


Click it and Unblock the Notifications








