Parliament Security Breach: ಸಂಸತ್ ಭವನಕ್ಕೆ ನುಗ್ಗಿದ ದುಷ್ಕರ್ಮಿಗಳು! ಸಂಸತ್ ಭವನದ ರಕ್ಷಣಾ ವ್ಯವಸ್ಥೆ ಹೇಗಿದೆ?
ಇಡೀ ದೇಶವೇ ಬೆಚ್ಚಿ ಬೀಳುವಂತಹ ಘಟನೆ ಇಂದು ಸಂಸತ್ ಭವನದಲ್ಲಿ ನಡೆದಿದೆ. ಸಂಸತ್ ಭವನದ ಒಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಸಂಸತ್ತಿನ ಒಳಗೆ ಹಳದಿ ಬಣ್ಣದ ಹೊಗೆಯನ್ನು ಸ್ಪ್ರೇ ಮಾಡಿದ್ದಾರೆ. ಈ ಮೂಲಕ ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಸಂಸತ್ ಅಧಿವೇಶನ ಸಮಯದಲ್ಲಿಯೇ ನಡೆದಿರುವ ಈ ಘಟನೆ ದೇಶವ್ಯಾಪಿ ಸಂಚಲನ ಮೂಡಿಸಿದೆ.
ಹೌದು, ಭಾರತದ ಸಂಸತ್ ಭವನ (parliament) ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವ ಘಟನೆ ನಡೆದಿದೆ. ದೇಶದ ಕಾನೂನು ರೂಪುಗೊಳ್ಳುವ ಸಂಸತ್ ಭವನದ ಸುರಕ್ಷತೆಯಲ್ಲಿ ಯಾಕಿಷ್ಟು ಲೋಪ ಅನ್ನೋದ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಸಂಸತ್ ಭವನದಲ್ಲಿ ನಡೆದಿದ್ದು ಏನು? ಸಂಸತ್ ಭವನ ರಕ್ಷಣಾ ವ್ಯವಸ್ಥೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಂಸತ್ ಭವನದ ಒಳಗಡೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಹಳದಿ ಬಣ್ಣದ ಹೊಗೆಯನ್ನು ಹರಡಿದ್ದಾರೆ. ಏಕಾಏಕಿ ವಿಕ್ಷಕರ ಗ್ಯಾಲರಿಯಿಂದ ಕೆಳಗೆ ಜಿಗಿದು ಸಂಸತ್ತಿನ ಭದ್ರತೆಯ ನಿಯಮಗಳನ್ನು ಮೀರಿದ್ದಾರೆ. ಇದು ಸಂಸತ್ ಭವನದ ರಕ್ಷಣಾ ವ್ಯವಸ್ಥೆಯಲ್ಲಿನ ಲೋಪ ಎಂದು ಇಡೀ ದೇಶದೆಲ್ಲೆಡೆ ಚರ್ಚೆಯಾಗ್ತಿದೆ. ಉಕ್ಕಿನ ಕೋಟೆಯಂತಹ ರಕ್ಷಣೆ ಹೊಂದಿರುವ ಸಂಸತ್ ಭವನದ ಒಳಗಡೆಗೆ ಈ ಇಬ್ಬರು ದುಷ್ಕರ್ಮಿಗಳು ಹಳದಿ ಬಣ್ಣದ ಹೊಗೆಯ ಡಬ್ಬಿಯನ್ನು ತೆಗೆದುಕೊಂಡು ಹೋಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.
ಇನ್ನು ಸಂಸತ್ ಭವನದ ಒಳಗಡೆ ನುಗ್ಗಿದ ಇಬ್ಬರು ದುಷ್ಕರ್ಮಿಗಳ ಪೈಕಿ ಒಬ್ಬ ಯುವಕನನ್ನು ಮೈಸೂರು ಮೂಲದವನು ಎಂದು ಗುರುತಿಸಲಾಗಿದೆ. ಅದರಲ್ಲೂ ಈ ಇಬ್ಬರು ಆರೋಪಿಗಳು ಕರ್ನಾಟಕದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರ ಹೆಸರನ್ನು ಬಳಸಿ ವಿಸಿಟರ್ ಪಾಸ್ ಪಡೆದಿದ್ದರು ಅನ್ನೊದು ಗಮನಿಸಬೇಕಾದ ವಿಚಾರವಾಗಿದೆ. ಸದ್ಯ ಈ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ಮಾಡಲಾಗ್ತಿದೆ.

ಸಂಸತ್ ಭವನದ ಸುರಕ್ಷತೆಯಲ್ಲಿ ಲೋಪವಾಯ್ತ?
ದೇಶದ ಕಾನೂನು ರೂಪಿಸುವ ಸಂಸತ್ ಭವನದ ಒಳಗಡೆ ನಡೆದ ಈ ಘಟನೆ ನಿಜಕ್ಕೂ ದಿಗ್ಬ್ರಮೆ ಮೂಡುವಂತೆ ಮಾಡಿದೆ. ಇದು ಸಂಸತ್ ಭವನದ ಸುರಕ್ಷತೆ ದೋಷಪೂರಿತವಾಗಿದೆಯಾ ಎನ್ನುವಂತಾಗಿದೆ. ಸಂಸತ್ ಒಳಗಡೆಗೆ ಹೋಗುವಾಗ ಹಳದಿ ಬಣ್ಣದ ಹೊಗೆಯ ಡಬ್ಬಿಗಳನ್ನು ಪರಿಶೀಲಿಸದೆ ಕಳುಹಿಸಿದ್ದು ಹೇಗೆ? ಯಾರು ಬೇಕಾದರೂ ಸಂಸದರ ಹೆಸರಿನಲ್ಲಿ ವಿಸಿಟರ್ ಪಾಸ್ ಪಡೆದುಕೊಂಡು ಹೋಗಿ ಈ ರೀತಿಯ ಕೃತ್ಯ ಮಾಡಬಹುದಾ ಎಂಬಿತ್ಯಾದಿ ಚರ್ಚೆ ಶುರುವಾಗಿದೆ.
ಹೇಗಿದೆ ಗೊತ್ತಾ ಸಂಸತ್ ಭವನದ ರಕ್ಷಣಾ ವ್ಯವಸ್ಥೆ
ಸಂಸತ್ ಭವನದ ಭದ್ರತಾ ವ್ಯವಸ್ಥೆ ಸಾಕಷ್ಟು ಸೂಕ್ಷ್ಮ, ಸದೃಢ ಹಾಗೂ ತಂತ್ರಜ್ಞಾನ ಆಧಾರಿತವಾಗಿದೆ. ಸಂಸತ್ ಭವನದ ರಕ್ಷಣೆಯ ಜವಬ್ದಾರಿ ಸಂಸತ್ ಭದ್ರತಾ ಸೇವಾ ಕಮಿಟಿಯದ್ದಾಗಿದೆ. ಇದು ಕೇವಲ ಸಂಸತ್ ಭವನದ ರಕ್ಷಣೆಗೆಂದೇ ಇರುವ ಕಮಿಟಿಯಾಗಿದ್ದು, ಇದರ ಮುಖ್ಯಸ್ಥರಾಗಿ ಭದ್ರತಾ ವಿಭಾಗದ ಜಂಟಿ ಕಾರ್ಯದರ್ಶಿಗಳು ಇರುತ್ತಾರೆ. ಸಂಸತ್ನ ಒಳಗಡೆಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯಾಗಲಿ ಅವರನ್ನು ಪರಿಶೀಲಿಸುವ ಹಾಗೂ ಅವರು ಹೊಂದಿರುವ ವಸ್ತುಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸುವುದು ಈ ಕಮಿಟಿಯ ಕೆಲಸವಾಗಿದೆ.

ಇನ್ನು ಈ ಕಮಿಟಿಯು ಕೂಡ ಕಾಲಕಾಲಕ್ಕೆ ಅನುಗುಣವಾಗಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಸಂಸತ್ ಭವನಕ್ಕೆ ಉಕ್ಕಿನ ಕೋಟೆಯ ಮಾದರಿಯ ರಕ್ಷಣೆಯನ್ನು ನೀಡುತ್ತಿದೆ. ಸಂಸತ್ ಭವನ ಪ್ರವೇಶಿಸುವವರಿಗೆ ಅನುಮತಿ ಪತ್ರ ನೀಡಿಕೆ, ಪರಿಶೀಲನೆ ಸೇರಿದಂತೆ ಎಲ್ಲ ಜವಾಬ್ದಾರಿಯೂ ಈ ಕಮಿಟಿಗೆ ಸೇರಿದೆ. ಯಾವುದೇ ಸಂಭಾವ್ಯ ದಾಳಿ, ಉಗ್ರರ ದಾಳಿ ವೇಳೆ ನಿರ್ವಹಣೆ, ತುರ್ತು ಪರಿಸ್ಥಿತಿ ವೇಳೆ ಕಾರ್ಯತಂತ್ರ, ಸಂಸತ್ನಲ್ಲಿ ಇರುವ ಸಂಸದರ ರಕ್ಷಣೆ ಈ ಕಮಿಟಿಯದ್ದಾಗಿದೆ.
ಈ ಏಜೆನ್ಸಿಗೆ ಭದ್ರತಾ ಏಜೆನ್ಸಿಗಳಿಂದ ಸಿಬ್ಬಂದಿ ನೆರವು ಸಿಗಲಿದ್ದು, ದಿಲ್ಲಿ ಪೊಲೀಸರು, ಕೇಂದ್ರೀಯ ಮೀಸಲು ಪಡೆ ಪೊಲೀಸರು, ದಿಲ್ಲಿ ಅಗ್ನಿಶಾಮಕ ದಳ, ಬೇಹುಗಾರಿಕಾ ದಳ, ಎಸ್ಪಿಜಿ ಹಾಗೂ ಎನ್ಎಸ್ಜಿ ತಂಡಗಳು ಸಂಸತ್ನ ಭದ್ರತಾ ಸೇವೆಗೆ ನೆರವು ನೀಡುತ್ತವೆ. ಇಷ್ಟಲ್ಲಾ ಭದ್ರತೆಯ ನಡುವೆಯೂ ಸಂಸತ್ ಭವನದ ಸುರಕ್ಷತೆಯಲ್ಲಿ ಉಂಟಾಗಿರುವ ಲೋಪ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.


Click it and Unblock the Notifications








