'ಪೇಟಿಎಂ' ಮುಗಿಸಲು ಪಿತೂರಿ?..ದಿನಕ್ಕೊಂದು ಬಣ್ಣ ಪಡೆಯುತ್ತಿದೆ 20 ಕೋಟಿ ಹಫ್ತಾ ವಸೂಲಿ!!
20 ಕೋಟಿ ರೂಪಾಯಿ ಹಫ್ತಾ ವಸೂಲಿಗೆ ತಂತ್ರ ರೂಪಿಸಿದ್ದ ತಮ್ಮ ಆಪ್ತ ಕಾರ್ಯದರ್ಶಿ ಸೋನಿಯಾ ಧವನ್ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ, ಸೋನಿಯಾ ಒಬ್ಬರಿಂದಲೇ ನಡೆದ ಕೃತ್ಯ ಇದಲ್ಲ ಎನಿಸುತ್ತದೆ. ಇದು ಕಂಪನಿ ಮುಳುಗಿಸಲು ನಡೆದಿರಬಹುದಾದ ದೊಡ್ಡ ಪಿತೂರಿಯ ಭಾಗವಿದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಎಸಗಿದ ದ್ರೋಹದಿಂದ ನನಗೆ ಆಘಾತವಾಗಿದೆ. ಪ್ರಕರಣದ ಹಿಂದೆ ಇರುವ ಜನರು ಅದನ್ನು ಕಾರ್ಯರೂಪಕ್ಕಿಳಿಸಲು ಹೊರಟ ವಿಧಾನವನ್ನೆಲ್ಲ ನೋಡಿದರೆ ದಿಗಿಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾದರೆ, ಅಪರಾಧಿಗಳು ಹೊರ ಬರುತ್ತಾರೆ. ಇದೊಂದು ಪಿತೂರಿ ಎಂದು ಶರ್ಮಾ ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ, ಈ ಪ್ರಕರಣ ಮತ್ತೊಂದು ದಿಕ್ಕಿಗೆ ಹೊರಳಿದೆ.

ತಿಂಗಳಿಗೆ 15,000 ರೂಪಾಯಿ ಸಂಬಳ ಪಡೆಯುತ್ತಿದ್ದ ಸೋನಿಯಾ ವೇತನ ತಿಂಗಳಿಗೆ 6 ಲಕ್ಷ ದಾಟಿದ್ದರಿಂದ ಶರ್ಮಾ ಅವರ ಕುಟುಂಬ ವರ್ಗದವರಲ್ಲಿಯೇ ಅಸಮಾಧಾನ ಇತ್ತು ಎಂದು ಹೇಳಲಾಗಿದೆ. ಕಂಪನಿಯ ಉಪಾಧ್ಯಕ್ಷ ಹುದ್ದೆವರೆಗೂ ಏರಿದ್ದ ಸೋನಿಯಾ ಹಣಿಯಲು ಇದು ಪ್ಲ್ಯಾನ್ ಎಂದು ಹೇಳಲಾಗಿದೆ. ಇವೆಲ್ಲ ಸೇರಿ ಪೇಟಿಎಂ ಬಳಕೆದಾರರನ್ನು ಬಲಿತೆಗೆದುಕೊಂಡಿದೆ.

ಸೋನಿಯಾ ವಕೀಲರು ಹೇಳಿದ್ದೇನು?
ಪೇಟಿಎಂ ಕಂಪನಿ ಒಳಗೆ ಭಿನ್ನ ಬಣಗಳು ಸಕ್ರಿಯವಾಗಿವೆ. ಅಂತಹ ಬಣವೊಂದು ರೂಪಿಸಿ ಜಾರಿಗೊಳಿಸಿದ ಪಿತೂರಿಯಲ್ಲಿ ಸೋನಿಯಾ ಬಲಿಪಶುವಾಗಿದ್ದಾರೆ. ಇತ್ತೀಚೆಗಷ್ಟೇ ಸೋನಿಯಾ ಅವರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ನೀಡಲಾಗಿತ್ತು. ಆ ಬಗ್ಗೆ ಕೂಡ ಉಳಿದ ಉದ್ಯೋಗಿಗಳಲ್ಲಿ ಅತೃಪ್ತಿ ಇತ್ತು. ಅಂಥವರು ಹೊಟ್ಟೆ ಕಿಚ್ಚಿನಿಂದಲೇ ಈ ಸಂಚು ರೂಪಿಸಿ ಅವರನ್ನು ಸಿಕ್ಕಿಸಿದ್ದಾರೆ ಎಂದು ಸೋನಿಯಾ ಪರ ವಕೀಲರು ತಿಳಿಸಿದ್ದಾರೆ.

ಶರ್ಮಾ ಕುಟುಂಬವೇ ಕಾರಣ?
ಸೋನಿಯಾ ಅವರಿಗೆ ಬಡ್ತಿ ನೀಡಿದ್ದರ ಬಗ್ಗೆ ವಿಜಯ್ ಶೇಖರ್ ಅವರ ಕುಟುಂಬ ವರ್ಗದವರಲ್ಲಿಯೇ ಅಸಮಾಧಾನ ಇತ್ತು ಎನ್ನಲಾಗಿದೆ ಇದುವೇ ಇಷ್ಟೆಲ್ಲ ಹಗರಣ ಸೃಷ್ಟಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ. ಕಾರ್ಯಕ್ಷಮತೆಯಿಂದ ಕಾಲಕಾಲಕ್ಕೆ ಬಡ್ತಿ ಪಡೆಯುತ್ತ ಹೋದ ಸೋನಿಯಾ ವೇತನ ತಿಂಗಳಿಗೆ 6 ಲಕ್ಷ ರೂಪಾಯಿ ದಾಟಿತ್ತಲ್ಲದೆ, ಕಂಪನಿಯ ಉಪಾಧ್ಯಕ್ಷ ಹುದ್ದೆವರೆಗೂ ಸೋನಿಯಾ ಏರಿದ್ದನ್ನು ಶರ್ಮಾ ಕುಟುಂಬ ವರ್ಗವೇ ಸಹಿಸಿಲ್ಲ ಎಂದು ಹೇಳಲಾಗಿದೆ.

ಕಳ್ಳತನ ಮಾಡಿದ್ದು ಯಾರು?
ಕಳೆದ 10 ವರ್ಷಗಳಿಂದಲೂ ವಿಜಯ್ ಶೇಖರ್ ಶರ್ಮಾ ಅವರ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸೋನಿಯಾ ಧವನ್ ಎಂಬ ಮಹಿಳೆ ತನ್ನ ಪತಿಯೊಂದಿಗೆ ಯೋಜನೆ ರೂಪಿಸಿ ವಿಜಯ್ ಅವರ ಖಾಸಾಗಿ ಹಾಗೂ ಹಣಕಾಸು ವಿಚಾರಗಳ ಮಾಹಿತಿಯನ್ನು ಕಲೆಹಾಕಿದ್ದಾಳೆ ಎಂದು ಹೇಳಲಾಗಿದೆ. ವಿಜಯ್ ಅವರ ಲ್ಯಾಪ್ಟಾಪ್ ನೋಡುವ ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂದ ಹೇಳಲಾಗಿತ್ತು. ಈಗ ಶರ್ಮಾ ಕುಟುಂಬ ಕೂಡ ಇದರಲ್ಲಿ ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಮಾಹಿತಿ ಸಂಪೂರ್ಣ ಸೋರಿಕೆಯಾಗಿದೆ!
ಸದ್ಯ ಪೊಲೀಸರು ಹೇಳುವ ಪ್ರಕಾರ, ಪೇಟಿಎಂ ಉದ್ಯೋಗಿಗಳು ಬಳಕೆದಾರರ ಸೂಕ್ಷ್ಮ ಮಾಹಿತಿಗಳನ್ನು ಕದ್ದು ಇನ್ನೊಬ್ಬರಿಗೆ ರವಾನಿಸಿದ್ದಾರೆ. ವಶಕ್ಕೆ ಪಡೆದಿರುವ ಲ್ಯಾಪ್ಟಾಪ್ಗಳಲ್ಲಿ ಈ ಮಾಹಿತಿ ಲಭ್ಯವಾಗಿದೆ. ಅಂದರೆ, ಈಗಾಗಲೇ ಪೇಟಿಎಂ ಮಾಹಿತಿ ಸೋರಿಕೆಯಾಗಿದ್ದು, ಅದು ಸಾರ್ವಜನಿಕಗೊಳ್ಳದಂತೆ ತಡೆಯುವುದು ಮುಂದಿರುವ ಸವಾಲಾಗಿದೆ ಎನ್ನಲಾಗಿದೆ.. ಏನಕ್ಕೂ ನೀವು ಪೇಟಿಎಂ ಬಳಸುತ್ತಿದ್ದರೆ, ನೀವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ.

ಅಷ್ಟಕ್ಕೂ ಮಾಹಿತಿ ಸೋರಿಕೆ ಎಂದರೇನು?
ಇಂದಿಗೆ 70 ಲಕ್ಷ ಮಾರಾಟಗಾರರು ತಮ್ಮ ಬ್ಯಾಂಕ್ ಖಾತೆಗಳನ್ನು ಪೇಟಿಎಂಗೆ ನೇರವಾಗಿ ವಿಲೀನ ಮಾಡಿದ್ದಾರೆ. ಅವರ ನಿತ್ಯ ವ್ಯವಹಾರ ನಡೆಸುವ ಖಾತೆಗಳು ಇವಾಗಿರುವುದರಿಂದ, ಅವು ಹೊಂದಿರುವ ಮಾಹಿತಿ ಮಾರಾಟಗಾರರ ಬದುಕಿನ ಜತೆ ನೇರ ಸಂಬಂಧ ಹೊಂದಿದೆ. ಇದೇ ರೀತಿ ಕೋಟ್ಯಾಂತರ ಗ್ರಾಹಕರು ಪೇಟಿಎಂ ಸೇವೆ ಬಳಸುತ್ತಿದ್ದಾರೆ. ಈ ಮಾಹಿತಿ ಕೂಡ ಆರ್ಥಿಕ ನೆಲೆಯಲ್ಲಿ ಸೂಕ್ಷ್ಮವಾದದ್ದು. ಇದನ್ನು ಸೋರಿಕೆ ಮಾಡಿದರೆ ಮಾರಾಟಗಾರರ ಹಾಗೂ ಗ್ರಾಹಕರ ಖಾಸಗಿ ವ್ಯವಹಾರಗಳಿಗೆ ಹೊಡೆತ ಬೀಳುತ್ತದೆ.

ನೀವು ಮಾಡಬೇಕಿರುವುದು ಏನು?
ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನೇ ತಮ್ಮ ಕಂಪನಿಯ ಪ್ರಚಾರಕ್ಕೆ ಅಕ್ರಮವಾಗಿ ಬಳಸಿಕೊಂಡಿದ್ದ ಪೇಟಿಎಂ ಕಂಪನಿಯ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಇಂದು ಮತ್ತೊಂದು ದೊಡ್ಡ ತಪ್ಪನ್ನು ಮಾಡಿದ್ದಾರೆ. ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದಾಗಿ ಹೇಳಿಕೊಂಡಿದ್ದ ಕಂಪನಿ ಈಗ ಗ್ರಾಹಕರ ಸುರಕ್ಷತೆಯನ್ನು ಸಹ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಹಾಗಾಗಿ, ನೀವು ಪೇಟಿಎಂ ಬಳಸದೇ ಇರುವುದು ಒಳ್ಳೆಯದು. ನಂಬಿಕೆ ಉಳಿಸಿಕೊಳ್ಳಲಾಗದ ಈ ಆಪ್ ನಿಮಗೆ ಮತ್ತೇನು ಸಹಾಯಮಾಡಬಲ್ಲದು?.


Click it and Unblock the Notifications