ಪಬ್ಜಿ ಗೇಮ್ ಆಡಲು ತಂದೆಯನ್ನೇ ಕೊಂದವನು ಠಾಣೆಯಲ್ಲೂ ಮೊಬೈಲ್ ಕೇಳುತ್ತಿದ್ದ!
ಮಕ್ಕಳಿಗೆ ಮೊಬೈಲ್ ವ್ಯಸನದ ಬಗ್ಗೆ ಅರಿವು ಮೂಡಿಸದೇ ಇದ್ದರೆ ಏನಾಗಬಹುದು ಎಂಬುದಕ್ಕೆ ರಾಜ್ಯದಲ್ಲಿ ನಡೆದಿರುವ ಭೀಕರ ಘಟನೆಯೊಂದು ಸಾಕ್ಷಿಯಾಗಿದೆ. ಮೊಬೈಲ್ನಲ್ಲಿ ನಿರಂತರವಾಗಿ ಮೊಬೈಲ್ ನಲ್ಲಿ ಪಬ್ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ ತಂದೆಯನ್ನೇ ಪುತ್ರ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬೆಳಗಾವಿಯ ಕಾಕತಿಯ ಸಿದ್ದೇಶ್ವರ ನಗರದಲ್ಲಿ ನಡೆದಿದೆ. ಇದು ಪಬ್ಜಿ ವ್ಯಸನದ ಆಗಿರುವಂತಹ ಮತ್ತೊಂದು ದುರ್ಘಟನೆ ಎಂದು ಹೇಳಲಾಗುತ್ತಿದೆ.

ಹೌದು, ನಿರಂತರವಾಗಿ ಮೊಬೈಲ್ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದ ಮಗನಿಗೆ ಬುದ್ದಿವಾದ ಹೇಳಿದ ತಂದೆಯನ್ನೇ ಪುತ್ರ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕಾಕತಿಯ ನಿವಾಸಿ ಶಂಕರಪ್ಪ ದೇವಪ್ಪ ಕುಂಬಾರ ಎಂಬುವವರ ಪುತ್ರ ರಘುವೀರ ಇತ್ತೀಚೆಗೆ ಮೊಬೈಲ್ ಆಟದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದ. ಯಾವಾಗಲೂ ಮೊಬೈಲ್ನಲ್ಲಿ ಆಟವಾಡಿ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಎಂದು ಬೇಸರಗೊಂಡಿದ್ದ ತಂದೆ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಿಗೆದ್ದು ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪುತ್ರ ರಘುವೀರನಿಗೆ ರಾತ್ರಿ ಹೊತ್ತು ಹೆಚ್ಚು ಮೊಬೈಲ್ ಬಳಸದಂತೆ ಹಲವು ಬಾರಿ ಶಂಕರಪ್ಪ ದೇವಪ್ಪ ಕುಂಬಾರ ಅವರು ಬುದ್ದಿವಾದ ಹೇಳಿದ್ದರು. ಆದರೆ ಪುತ್ರ ಯಾರ ಮಾತನ್ನೂ ತಲೆಗೆ ಹಾಕಿಕೊಂಡಿರಲಿಲ್ಲ. ಹೀಗೆ ಬುದ್ಧಿ ಹೇಳಿದ್ದಕ್ಕೆ ಮಗ ಒಮ್ಮೆ ಕುಪಿತಗೊಂಡು ಅಕ್ಕಪಕ್ಕದ ಮನೆಯವರ ಕಿಟಕಿ ಗಾಜುಗಳನ್ನು ಒಡೆದುಹಾಕಿದ್ದ. ಆತನನ್ನು ಠಾಣೆಗೆ ಕರೆದೊಯ್ದಿದ್ದ ಕಾಕತಿ ಪೊಲೀಸರು ತಂದೆಯ ಸಮ್ಮುಖದಲ್ಲಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆ ಸಮಯದಲ್ಲೂ ಸಹ ಆತನ ಮೊಬೈಲ್ ಹುಚ್ಚು ಕಂಡುಬಂದಿದೆ.

ಮಗನಿಗೆ ಪೊಲೀಸರಿಂದ ಬುದ್ಧಿವಾದ ಹೇಳಿಸಿ ಕರೆದುಕೊಂಡು ಬಂದಿದ್ದ ಶಂಕರಪ್ಪ. ಕಳೆದ ರಾತ್ರಿ ಕೂಡ ಆತ ಮೊಬೈಲ್ನಲ್ಲಿ ಆಡುವುದನ್ನು ನೋಡಿ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ತೀವ್ರ ಕೋಪಗೊಂಡು ಮಗ ರಘುವೀರ್, ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಇಳಿಗೆಮಣೆಯಿಂದ ಶಂಕ್ರಪ್ಪನವರ ಕೈಕಾಲು ಹಾಗೂ ಕುತ್ತಿಗೆ ಭಾಗವನ್ನು ಕತ್ತರಿಸಿ ಭೀಕರವಾಗಿ ಕೊಲೆಗೈದಿದ್ದಾನೆ. ಇದೀಗ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರು ಹೇಳುವಂತೆ, ತನ್ನ ಇಚ್ಚೆಗೆ ಹೆಚ್ಚು ಅಡ್ಡಲಾಗಿ ನಿಲ್ಲುತ್ತಿದ್ದ ತಂದೆ ಮೇಲೆ ಆರೋಪಿ ತತಕ್ಷಣ ನಿರ್ಧಾರ ಕೈಂಗೊಡಿದ್ದಾನೆ. ಮಾನಸಿಕವಾಗಿ ಆತ ಬಹಳಷ್ಟು ಸಮಸ್ಯೆಯನ್ನು ಎದುರಿಸಿರಬಹುದು. ಅಕ್ಕಪಕ್ಕದ ಮನೆಯವರ ಕಿಟಕಿ ಗಾಜುಗಳನ್ನು ಒಡೆದುಹಾಕಿ ಠಾಣೆಗೆ ಬಂದಾಗಲೂ ಆತ ಮೊಬೈಲ್ ಬೇಕೆಂದು ಕೇಳುತ್ತಿದ್ದ ಎಂದು ತಿಳಿಸಿದ್ದಾರೆ. ಇದರಿಂದ ಆತ ಮೊಬೈಲ್ಗೆ ಎಷ್ಟು ವ್ಯಸನಿಯಾಗಿರಬಹುದು ಎಂದು ತಿಳಿಯುತ್ತದೆ. ಹಾಗಾಗಿ, ಮಕ್ಕಳ ಮೊಬೈಲ್ ಮೋಹದ ಬಗ್ಗೆ ನೀವು ಎಚ್ಚರವಾಗಿರಿ.


Click it and Unblock the Notifications








