ಬೆಂಗಳೂರಿನಲ್ಲಿರುವ ನಿವೃತ್ತ ಸೇನಾಧಿಕಾರಿಗೆ ಮಹಾ ವಂಚನೆ... ಹೀಗಾದ್ರೆ ಸಾಮಾನ್ಯರ ಕಥೆ ಏನು?
ನಿವೃತ್ತ ಸೇನಾಧಿಕಾರಿಯೊಬ್ಬರಿಗೆ ಸ್ಕ್ಯಾಮರ್ಗಳು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಬಂಧಿಕರ ಸೋಗಿನಲ್ಲಿ ಕರೆ ಮಾಡಿ 3 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಯುಎಸ್ನಲ್ಲಿರುವ ಸಂಬಂಧಿಕರಂತೆ ನಟಿಸುವ ಮೂಲಕ ನಿವೃತ್ತ ಸೇನಾಧಿಕಾರಿಗೆ ಸ್ಕ್ಯಾಮರ್ಗಳು ವಂಚಿಸಿದ್ದಾರೆ ಎನ್ನಲಾಗಿದೆ.
ಹೌದು, ಪರಿಚಿತರಂತೆ ಕರೆ ಮಾಡಿ ಹಣ ಹಾಕಿಸಿಕೊಂಡು ಮೋಸ ಮಾಡುವ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿವೆ. ಆದರೆ ಈ ಪ್ರಕರಣದಲ್ಲಿ ನಿವೃತ್ತ ಸೇನಾಧಿಕಾರಿಯನ್ನೇ ಟಾರ್ಗೆಟ್ ಮಾಡಿ ಹಣ ವಂಚಿಸಿರುವುದು ವಿಪರ್ಯಾಸವೇ ಸರಿ. ಅಷ್ಟಕ್ಕೂ ಈ ಕರೆಯಿಂದ ನಿವೃತ್ತ ಸೇನಾಧಿಕಾರಿ ಮೋಸ ಹೋಗಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಎಸ್ನಲ್ಲಿರುವ ಸಂಬಂಧಿಕರ ಸೋಗಿನಲ್ಲಿ ಕರೆ ಮಾಡಿದ ವಂಚಕರು ನಿವೃತ್ತ ಸೇನಾಧಿಕಾರಿ ಮೋಸ ಮಾಡಿದ್ದಾರೆ. ಯೆಸ್, ಬಿಲ್ಲಮಾರನಹಳ್ಳಿಯಲ್ಲಿ ವಾಸವಾಗಿರುವ 64 ವರ್ಷ ವಯಸ್ಸಿನ ಕ್ಯಾಪ್ಟನ್ (ನಿವೃತ್ತ) ರಂಜಿತ್ ಸಿಂಗ್ ಎಂಬ ನಿವೃತ್ತ ಸೇನಾಧಿಕಾರಿಯೇ ಇಲ್ಲಿ ಮೋಸ ಹೋಗಿರುವುದು. ಸ್ಕ್ಯಾಮರ್ಗಳು ಯುಎಸ್ನಲ್ಲಿರುವ ಸಂಬಂಧಿಕರ ಸೋಗಿನಲ್ಲಿ ಆಗಸ್ಟ್ 17ರಂದು ಸುಮಾರು 10:56 AM ಕ್ಕೆ ಕರೆ ಮಾಡಿದ್ದಾರೆ. ಅದು ಕೂಡ ನ್ಯೂಯಾರ್ಕ್ ನಂಬರ್ನಿಂದಲೇ ಕರೆ ಮಾಡಿದ್ದಾರೆ.
ಕರೆ ಮಾಡಿದಾಗ ಲೈನ್ನಲ್ಲಿರುವ ವ್ಯಕ್ತಿ ಕ್ಯಾಪ್ಟನ್ ರಂಜಿತ್ ಸಿಂಗ್ ಅವರ ಸಂಬಂಧಿ ಸುಖ್ವಿಂದರ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ ತಾನು ಶೀಘ್ರದಲ್ಲೇ ಭಾರತಕ್ಕೆ ಬರುವುದಾಗಿಯು ಹೇಳಿದ್ದಾನೆ. ಆದರಿಂದ ಕ್ಯಾಪ್ಟನ್ ಸಿಂಗ್ ಅವರ ಖಾತೆಗೆ ಹಣ ಕಳುಹಿಸುತ್ತೇನೆ, ಭಾರತಕ್ಕೆ ಬಂದಾಗ ನನ್ನ ಬಳಕೆಗೆ ಅನುಕೂಲವಾಗಲಿದೆ ಎಂದು ರಂಜಿತ್ ಸಿಂಗ್ ಅವರಿಗೆ ಹೇಳಿದ್ದಾನೆ. ಅದರಂತೆ ರಂಜಿತ್ ಸಿಂಗ್ ಅವರಿಂದ ಬ್ಯಾಂಕ್ ವಿವರಗಳನ್ನು ಪಡೆದುಕೊಂಡು ಅವರ ಖಾತೆಗೆ 24,45,050 ರೂ. ಕಳುಹಿಸಿದ್ದೇನೆ ಎಂಬ ಸಂದೇಶ ಕಳುಹಿಸಿದ್ದಾರೆ.
ಅಸಲಿಗೆ ರಂಜಿತ್ ಸಿಂಗ್ ಅವರ ಖಾತೆಗೆ ಯಾವುದೇ ಹಣ ಬಂದಿಲ್ಲ. ಆದರೆ ಇದೇ ಸಮಯದಲ್ಲಿ ಕ್ಯಾಪ್ಟನ್ ಸಿಂಗ್ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಿಬ್ಬಂದಿ ಎಂದು ಮತ್ತೊಂದು ಕರೆ ಬಂದಿದೆ. ಇದರಲ್ಲಿ ನಿಮ್ಮ ಖಾತೆಗೆ ದೊಡ್ಡ ಮೊತ್ತದ ಹಣವನ್ನು ಯಶಸ್ವಿಯಾಗಿ ಹಾಕಲಾಗಿದೆ. ಇದನ್ನು ನೀವು 24 ಗಂಟೆಗಳ ನಂತರ ಚೆಕ್ ಮಾಡಬಹುದು ಎಂದು ಹೇಳಿದ್ದಾರೆ. ಇದಾದ ನಂತರ ಮತ್ತೆ ನ್ಯೂಯರ್ಕ್ನಿಂದ ಕರೆ ಬಂದಿದ್ದು, ನಾನು ಹಣವನ್ನೆಲ್ಲಾ ನಿಮ್ಮ ಖಾತೆಗೆ ಹಾಕಿದ್ದೇನೆ, ನನಗೆ ವೀಸಾ ಸಮಸ್ಯೆಯಾಗಿದೆ ಐದು ಲಕ್ಷ ವಾಪಾಸ್ ಕಳುಹಿಸು ಎಂದಿದ್ದಾನೆ.
ಅದರಂತೆ ಟ್ರಾವೆಲ್ ಏಜೆಂಟರೊಬ್ಬರ ವಿವರಗಳನ್ನು ನೀಡಿ ಅವರ ಖಾತೆಗೆ ಹಣ ಹಾಕುವಂತೆ ಹೇಳಿದ್ದಾರೆ. ಇದನ್ನು ನಂಬಿದ ಕ್ಯಾಪ್ಟನ್ ರಂಜಿತ್ ಸಿಂಗ್ ತನ್ನ ಖಾತೆಯಲ್ಲಿದ್ದ 1 ಲಕ್ಷ ರೂ.ಗಳನ್ನು ಕಳುಹಿಸಿದ್ದಾರೆ. ಜೊತೆಗೆ ತಮ್ಮ ಸ್ನೇಹಿತರ ಮೂಲಕ ಅದೇ ಖಾತೆಗೆ 2 ಲಕ್ಷ ರೂ.ಗಳನ್ನು ಕಳುಹಿಸಿದ್ದಾರೆ. ಇದಾದ ನಂತರ ಇದು ಎಲ್ಲೋ ತಪ್ಪಾಗಿದೆ ಅಂದೆನಿಸಿ ಕ್ಯಾಪ್ಟನ್ ರಂಜಿತ್ ಸಿಂಗ್ ತನ್ನ ಸ್ನೇಹಿತರೊಬ್ಬರಿಗೆ ಈ ವಿಚಾರ ತಿಳಿಸಿದ್ದಾರೆ. ಅವರು ನಿಜವಾದ ಸುಖ್ವಿಂದರ್ ಸಿಂಗ್ ಅವರೊಂದಿಗೆ ಮಾತನಾಡಿದ್ದಾಗ, ತಾವು ಕ್ಯಾಪ್ಟನ್ ಸಿಂಗ್ ಅವರಿಗೆ ಕರೆಯೆ ಮಾಡಿಲ್ಲ ಎಂದಿದ್ದಾರೆ.
ಇದಾದ ನಂತರ ನಿವೃತ್ತಾ ಸೇನಾಧಿಕಾರಿಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಆದರೆ ಇಲ್ಲಿ ಸ್ಕ್ಯಾಮರ್ಗಳನ್ನು ತನ್ನ ಖಾಸಗಿ ಮಾತುಕತೆಗಳ ಬಗ್ಗೆ, ವಿಶೇಷವಾಗಿ ಸುಖ್ವಿಂದರ್ನಬಗ್ಗೆ ಹೇಗೆ ತಿಳಿದುಕೊಂಡರು ಅನ್ನೋದೇ ದೊಡ್ಡ ಪ್ರಶ್ನೇಯಾಗಿದೆ. ಸದ್ಯ ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಇದರ ಹಿಂದೆ ಯಾರಿದ್ದಾರೆ ಅನ್ನೊದನ್ನ ಪತ್ತೆ ಹಚ್ಚಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.


Click it and Unblock the Notifications








