ಹೊಟ್ಟೆ ಕಿಚ್ಚಿಗೆ ಗೆಳೆಯನ ಇಮೇಲ್ ಹ್ಯಾಕ್ !

ನಮ್ಮ ಮನೆಯವರ ಜೊತೆ ಬಿಟ್ಟರೆ ನಾವು ಅತೀ ಹೆಚ್ಚು ಸಮಯ ಕಳೆಯುವುದು ಸ್ನೇಹಿತರೊಡನೆಯೇ ಅಲ್ಲವೆ. ಕೆಲವೊಮ್ಮೆ ನಾವು ತಂದೆ ತಾಯಿಗಿಂತಾ ಹೆಚ್ಚಾಗಿ ಅವರನ್ನು ಹಚ್ಚಿ ಕೊಂಡಿರುತ್ತೇವೆ ಕೂಡ. ಆದರೆ ಹಣದ ವಿಷಯದಲ್ಲಿ, ಓದಿನ ವಿಷಯಕ್ಕೆ ಬಂದಾಗ ಯಾಕೊ ಸ್ನೇಹಭಾವ ಮರೆತು, ಕ್ಷುಲ್ಲಕವಾಗಿ ವರ್ತಿಸುತ್ತಾರೆ ಕೆಲವರು.
ಅಕಸ್ಮಾತ್ ನಿಮಗೆ ಚಡ್ಡಿ ದೋಸ್ತ್ ಇದ್ದಾನೆ ಎಂದು ತಿಳಿದುಕೊಳ್ಳಿ. ನೀವಿಬ್ಬರು ಶಾಲೆಯ ದಿನಗಳಿಂದ ಒಟ್ಟಿಗೆ ಇದ್ದು, ಒಂದೇ ಕಾಲೇಜಿಗೆ ಸೇರಿ, ಇಬ್ಬರೂ ಒಂದೇ ಪದವಿ ಪಡೆದು ಆಪ್ತ ಸ್ನೇಹಿತರು ಅಂತ ಕರೆಸಿಕೊಂಡು ಎಲ್ಲರ ಮೆಚ್ಚ್ಚುಗೆ ಗಳಿಸಿದಿರಿ ಅಂದುಕೊಳ್ಳೋಣ. ಆದ್ರೆ ನಿಮಗೆ ವಿದೇಶದಲ್ಲಿ ಓದುವ ಅವಕಾಶ ಸಿಕ್ಕಿ ನಿಮ್ಮ ಗೆಳೆಯನಿಗೆ ಅದು ಹೊಟ್ಟೆ ಉರಿಯುವುದಕ್ಕೆ, ನಿಮ್ಮ ಮೇಲೆ ಅಸೂಯೆ ಮೂಡುವುದಕ್ಕೆ ಕಾರಣವಾಗಿ ಆ ಅವಕಾಶ ಸಿಗದಂತೆ ಮಾಡಲು ನಿಮ್ಮ ಸ್ನೇಹಿತ ಪ್ರಯತ್ನ ಪಟ್ಟಿದ್ದಾನೆ ಎಂದು ನಿಮಗೆ ತಿಳಿದರೆ ಎಷ್ಟು ಬೇಜಾರಾಗುತ್ತೆ ಅಲ್ವಾ ? ಗೆಳೆಯ ಅನ್ನಿಸಿಕೊಂಡು ದ್ರೋಹ ಮಾಡಿದರೆ ಬೆನ್ನಿಗೆ ಚೂರಿ ಹಾಕಿದಂತೆ ಅನ್ನಿಸುತ್ತೆ ಅಲ್ವಾ?
ಈ ಥರದ ಸ್ನೇಹಕ್ಕೆ ದ್ರೋಹ ಬಗೆಯುವ ಘಟನೆಯೊಂದು ಕೊಲ್ಕತ್ತಾದಲ್ಲಿ ನಡೆದಿದೆ. ನಿಜವಾದ ಕಥೆ ಏನೆಂದರೆ, ಸೋಮನಾಥ್ ಮುಖರ್ಜಿ ಹಾಗು ಅಗ್ನಿರೂಪ್ ಸರ್ಕಾರ್ ಇಬ್ಬರೂ ಬಾಲ್ಯದಿಂದ ಗೆಳೆಯರು. ಇಬ್ಬರೂ ಒಟ್ಟಿಗೆ ಎಂಎಸ್ಸಿ ಡಿಗ್ರಿ (ಅರ್ಥಶಾಸ್ತ್ರ) ವನ್ನು ಕೊಲ್ಕತಾ ವಿವಿಯಿಂದ ಮುಗಿಸಿದರು. ನಂತರ ವಿದೇಶದಲ್ಲಿ Ph.D ಪಡೆಯಲು ಇಬ್ಬರೂ ವರ್ಜೀನಿಯಾ ವಿವಿ ಸೇರಿದಂತೆ ಅನೇಕ ವಿವಿಗಳಿಗೆ ಅರ್ಜಿ ಸಲ್ಲಿಸಿದರು.
ಆದರೆ ಸೋಮನಾಥ್ ಮುಖರ್ಜಿಗೆ ಗೆಳೆಯ ಅಗ್ನಿರೂಪ್ ಸರ್ಕಾರ್ ಮೇಲೆ ಅದ್ಯಾಕೆ ಅಸೂಯೆ ಮೂಡಿತೋ ಏನೋ, ತನ್ನ ಗೆಳೆಯ ವಿದೇಶದಲ್ಲಿ ತನಗಿಂತಾ ಒಳ್ಳೆಯ ಯೂನಿವರ್ಸಿಟಿಯಲ್ಲಿ ಓದದಂತೆ ಹೇಗಾದರೂ ತಪ್ಪಿಸಬೇಕು ಎಂದು ತನ್ನ ಗೆಳೆಯನ ಇಮೇಲ್ ಖಾತೆಯನ್ನು ಹ್ಯಾಕ್ ಮಾಡಿ ಗೆಳೆಯನ ಖಾತೆಯಿಂದ ಸರ್ಕಾರ್ ಯಾವ ಯಾವ ವಿವಿಗಳಿಗೆ ಅರ್ಜಿ ಹಾಕಿದ್ದನೋ ಅವುಗಳಿಗೆ ಮೇಲ್ ಮಾಡಿ ತನಗೆ ಅಲ್ಲಿ ಓದಲು ಆಸಕ್ತಿ ಇಲ್ಲ ಎಂದು ಮೇಲ್ ಮಾಡಿಬಿಟ್ಟ.
ಇತ್ತ ಯೂನಿವರ್ಸಿಟಿಗಳಿಂದ ತನ್ನ ಮೇಲ್ ಗೆ ಉತ್ತರ ನಿರೀಕ್ಷಿಸಿದ್ದ ಸರ್ಕಾರ್ ಗೆ ಯಾವೂ ಬರದಿದ್ದರಿಂದ ಅವುಗಳಿಗೆ ಕರೆ ಮಾಡತೊಡಗಿದ.ಅಸಲಿ ವಿಷಯ ಗೊತ್ತಾಗಿದ್ದೇ ಆಗ. ಯಾರೂ ತನ್ನ ಖಾತೆಯನ್ನು ಹ್ಯಾಕ ಮಾಡಿದ್ದಾರೆ ಎಂದು ಅನುಮಾನಗೊಂಡು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಜಾಲಾಡಿ ಮುಖರ್ಜಿ ಅನ್ನು ಬಂಧಿಸಿದರು.
ಈ ಕೇಸಿನಲ್ಲಿ ಕುತೂಹಲಕಾರಿ ವಿಷಯ ಏನೆಂದರೆ ಆರೋಪಿ ಗೆಳೆಯ ಮುಖರ್ಜಿಗೆ ಕೂಡ ಎರಡು ಯೂನಿವರ್ಸಿಟಿಗಳಿಂದ ಕರೆ ಬಂದಿತ್ತಂತೆ. ಗೆಳೆಯನ ಏಳಿಗೆಯನ್ನ ಸಹಿಸದ ಸ್ನೇಹಿತನ ಸ್ನೇಹ ಇದ್ದರೂ ಒಂದೇ ಬಿಟ್ಟರೂ ಒಂದೇ. ಏನಂತೀರ ?


Click it and Unblock the Notifications