ಗಂಡಾಂತರದಿಂದ ಭಾರತ ಪಾರು.! ಪಾಕಿಸ್ತಾನಕ್ಕೆ FBಯಲ್ಲಿ ಮಾಹಿತಿ ನೀಡುತ್ತಿದ್ದವನ ಸೆರೆ
ಭಾರತೀಯ ಸೈನ್ಯದ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಶತ್ರು ರಾಷ್ಟ್ರಗಳು ಪಡೆದು ದಾಳಿ ಮಾಡಲು ಯಾವಾಗಲೂ ಹೊಂಚನ್ನು ಹಾಕುತ್ತಿರುತ್ತವೆ. ಅಂತಹದ್ದೇ ಒಂದು ಪ್ರಯತ್ನವನ್ನು ಪಾಕಿಸ್ತಾನ ನಡೆಸಿದ್ದು, ಸೈನ್ಯದ ಅನೇಕ ರಹಸ್ಯಗಳನ್ನು ತಿಳಿದುಕೊಳ್ಳಲು ವಾಮ ಮಾರ್ಗವನ್ನು ತುಳಿದಿದೆ. ಆದರೆ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಈ ಪ್ರಯತ್ನವನ್ನು ವಿಫಲಗೊಳಿಸಿದೆ.

ಹೌದು, ಸೋಮವಾರ ಭಾರತದ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಒಬ್ಬ ಉದ್ಯೋಗಿಯನ್ನು ಮಹಾರಾಷ್ಟ್ರದ ನಾಗ್ಪುರ್ನಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಘಟಕದಲ್ಲಿ ಬಂಧಿಸಲಾಗಿದ್ದು, ಕ್ಷಿಪಣಿಯ ಅನೇಕ ತಾಂತ್ರಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ತಿಳಿಸುತ್ತಿದ್ದ ಎಂಬುದು ಬಂಧನಕ್ಕೆ ಪ್ರಮುಖ ಕಾರಣವಾಗಿದೆ.

ನಾಲ್ಕು ವರ್ಷದಿಂದ DRDO ಉದ್ಯೋಗಿ
ಬಂಧಿತನನ್ನು ನಿಶಾಂತ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಬ್ರಹ್ಮೋಸ್ ಏರೋಸ್ಪೇಸ್ ಯುನಿಟ್ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ. Official Secrets Act ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಂಟಿ ಕಾರ್ಯಾಚರಣೆಯಲ್ಲಿ ನಿಶಾಂತ್ಗೆ ಖೆಡ್ಡಾ
ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಶಾಂತ್ ಅಗರ್ವಾಲ್ಗೆ ಖೆಡ್ಡಾ ತೊಡಲಾಗಿತ್ತು. ನಾಗ್ಪುರದಲ್ಲಿನ DRDOನ ವಾರ್ದಾ ರಸ್ತೆಯಲ್ಲಿ ನಿಶಾಂತ್ ಅಗರ್ವಾಲ್ನನ್ನು ಬಂಧಿಸಲು ಪೊಲೀಸರು ಸೋಮವಾರ ಯಶಸ್ವಿಯಾಗಿದ್ದಾರೆ.

ವಾರ್ದಾ ರಸ್ತೆಯಲ್ಲಿ ವಾಸ
ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ಇಂಜಿನಿಯರ್ ಆಗಿದ್ದ ನಿಶಾಂತ್ ಅಗರ್ವಾಲ್ ಕಳೆದ ಒಂದು ವರ್ಷದಿಂದ ನಾಗ್ಪುರ್ನ ವಾರ್ದಾ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಮನೆ ಮಾಲೀಕ ಮನೋಹರ್ ಕಾಳೆ ಹೇಳಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಹಸ್ಯ ಮಾಹಿತಿ ಪತ್ತೆ
ನಿಶಾಂತ್ ಅಗರ್ವಾಲ್ನ ಕಂಪ್ಯೂಟರ್ನಲ್ಲಿ ಪ್ರಮುಖ ರಹಸ್ಯ ಮಾಹಿತಿಗಳು ದೊರೆತಿವೆ. ಅದಲ್ಲದೇ ಪಾಕಿಸ್ತಾನ ಆಧಾರಿತ ಆಪರೇಟರ್ ಜತೆ ನಡೆಸಿದ ಫೇಸ್ಬುಕ್ ಚಾಟ್ ಕೂಡ ದೊರೆತಿದೆ ಎಂದು ಭಯೋತ್ಪಾದನಾ ನಿಗ್ರಹ ದಳದ IG ಆಸೀಮ್ ಅರುಣ್ ಹೇಳಿದ್ದಾರೆ.

ಕಳೆದ ತಿಂಗಳು ಒಂದು ಪ್ರಕರಣ
ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಕಳೆದ ತಿಂಗಳು ನೋಯ್ಡಾದಲ್ಲಿ BSF ಜವಾನ್ನನ್ನು ಪಾಕಿಸ್ತಾನದ ISI ಏಜೆಂಟ್ಗಳ ಜತೆ ಅನೇಕ ರಹಸ್ಯ ಮಾಹಿತಿ ಹಂಚಿಕೊಂಡಿರುವ ಕಾರಣ ನೀಡಿ ಬಂಧಿಸಿತ್ತು. ಆ ಪ್ರಕರಣ ಮಾಸುವ ಮುನ್ನವೇ ಈಗ ಮತ್ತೊಂದು ದೇಶವೇ ಬೆಚ್ಚಿ ಬೀಳುವ ಪ್ರಕರಣ ಬೆಳಕಿಗೆ ಬಂದಿದೆ.

ಹನಿಟ್ರಾಪ್ನಲ್ಲಿ ಸಿಕ್ಕಿ ಬಿದ್ದಿದ್ದ ಅಚ್ಯುತಾನಂದ್
ಮಧ್ಯಪ್ರದೇಶದ ರೇವಾ ಜಿಲ್ಲೆಯ ಅಚ್ಯುತಾನಂದ ಮಿಶ್ರಾ ಹನಿಟ್ರಾಪ್ನಿಂದ ಸಿಕ್ಕಿಬಿದ್ದಿದ್ದ. ಡಿಫೆನ್ಸ್ ರಿಪೋರ್ಟರ್ ಎಂದು ಹೇಳಿಕೊಂಡು ಪರಿಚಯವಾಗಿದ್ದ ಮಹಿಳೆಯ ಜತೆ ಪೊಲೀಸ್ ಅಕಾಡೆಮಿ ಮತ್ತು ತರಬೇತಿ ಕೇಂದ್ರದ ಕಾರ್ಯಾಚರಣೆಯ ಮಾಹಿತಿಗಳನ್ನು ಹಂಚಿಕೊಂಡಿದ್ದ.

ಉತ್ತರಾಖಂಡ್ನಲ್ಲೂ ಬಂಧನ
ಪಾಕಿಸ್ತಾನ ಗುಡಾಚಾರಿ ಏಜೆನ್ಸಿ Inter Service Inteligence (ISI)ಗೆ ಸಹಾಯ ಮಾಡುತ್ತಿದ್ದ ಎಂದು ಉತ್ತರಾಖಂಡ್ನಲ್ಲೂ ಕೂಡ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ರಮೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಅನೇಕ ಬಾರಿ ಇಸ್ಲಾಮಬಾದ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹೋಗಿಬಂದಿದ್ದ. ಅದಲ್ಲದೇ, ಮಾಜಿ ಭಾರತೀಯ ರಾಯಭಾರಿ ನಿವಾಸದಲ್ಲಿ 2015ರಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ. ಇಷ್ಟೇ ಅಲ್ಲದೇ ISI ಏಜೆಂಟ್ಗಳ ಕಾರುಗಳನ್ನು ರಾಯಭಾರಿ ಮನೆಯ ಎದುರು ಪಾರ್ಕಿಂಗ್ ಮಾಡಲು ಅವಕಾಶ ನೀಡಿದ್ದ ಎಂದು ಬಂಧಿಸಲಾಗಿದೆ.

ಎಲ್ಲದಕ್ಕೂ ಫೇಸ್ಬುಕ್ ವೇದಿಕೆ
ಸಾಮಾಜಿಕ ಜಾಲತಾಣದ ದೈತ್ಯ ಫೇಸ್ಬುಕ್ ಎಲ್ಲ ರಹಸ್ಯ ದಾಖಲೆಗಳ ಹಂಚಿಕೆಗೆ ವೇದಿಕೆಯಾಗಿರುವುದು ಕಾಣುತ್ತದೆ. ನಿಶಾಂತ್ ಅಗರ್ವಾಲ್ ಪಾಕಿಸ್ತಾನದ ಆಪರೇಟರ್ಗಳ ಜತೆ ಫೇಸ್ಬುಕ್ ಚಾಟ್ ಮಾಡಿರುವುದು, ಅಚ್ಯುತಾನಂದ ಮಿಶ್ರಾ ಹನಿಟ್ರಾಪ್ನಲ್ಲಿ ಮಹಿಳೆಗೆ ಸಿಕ್ಕಿ ಹಾಕಿಕೊಂಡಿದ್ದು, ಎಲ್ಲವೂ ಫೇಸ್ಬುಕ್ನಿಂದ ಎನ್ನುವುದು ಬಹಿರಂಗವಾಗಿದೆ.


Click it and Unblock the Notifications








