ತಿಮ್ಮಪ್ಪನ ಭಕ್ತರಿಗೆ ಶುಭ ಸುದ್ದಿ! ತಿರುಪತಿಯ ಇತಿಹಾಸ ಸಾರಲು ಟಿಟಿಡಿಯಿಂದ ಹೊಸ ನಿರ್ಧಾರ!
ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ಇತ್ತೀಚಿಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸಾಕಷ್ಟು ಗಮನಸೆಳೆಯುತ್ತಿವೆ. ಟೆಕ್ನಾಲಜಿಯನ್ನು ಅತ್ಯಂತ ಸಮರ್ಪಕವಾಗಿ ಅಳವಡಿಸಿಕೊಳ್ಳುತ್ತಿರುವ ಟಿಟಿಡಿ ಇದೀಗ ಮತ್ತೊಂದು ಮಹತ್ವದ ಘೋಷಣೆಯನ್ನು ಮಾಡಿದೆ. ಈ ಮೂಲಕ ಮುಂದಿನ ಪೀಳಿಗೆಗೂ ಅನುಕೂಲ ಮಾಡಿಕೊಡುವ ಹೆಜ್ಜೆ ಇಟ್ಟಿದೆ.
ಹೌದು, ಮುಂದಿನ 500 ವರ್ಷದ ಪೀಳಿಗೆಗೂ ಕೂಡ ತಿರುಪತಿಯ ಇತಿಹಾಸ ತಿಳಿಸುವ ಪ್ರಯತ್ನಕ್ಕೆ ಟಿಟಿಡಿ ಮುಂದಾಗಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿರುವ ಅಪರೂಪದ ಹಸ್ತಪ್ರತಿಗಳನ್ನು ಮುಂದಿನ ಪೀಳಿಗೆಗೂ ಕೂಡ ತಿಳಿಸುವುದಕ್ಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಬೇಕು ಎನ್ನುವ ಮಾತನ್ನು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ. ಹಾಗಾದ್ರೆ ಟಿಟಿಡಿ ಅಧಿಕಾರಿಗಳು ಇಂತಹದೊಂದು ನಿರ್ಧಾರಕ್ಕೆ ಬಂದಿರುವುದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ತಿರುಪತಿ ತಿರುಮಲ ದೇವಸ್ಥಾನದ ಅಧಿಕಾರಿಗಳು ತಿರುಪತಿಯಲ್ಲಿರುವ ಅಪರೂಪದ ಹಸ್ತಪ್ರತಿಗಳ ಮಹತ್ವವನ್ನು ಮುಂದಿನ ಐದು ನೂರು ವರ್ಷಗಳ ಪೀಳಿಗೆಗೂ ತಿಳಿಸಬೇಕು ಎಂದು ಪಣತೊಟ್ಟಿದ್ದಾರೆ. ಇದಕ್ಕಾಗಿ ಈಗಿನ ತಂತ್ರಜ್ಞಾನವನ್ನು ಬಳಸಿಕೊಂಡು ಹಸ್ತಪ್ರತಿಗಳನ್ನು ಡಿಜಿಟಲೀಕರಣ ಮಾಡಬೇಕೆಂದು ಪಣ ತೊಟ್ಟಿದ್ದಾರೆ. ಇದಕ್ಕಾಗಿ ಟಿಟಿಡಿಯು ಹಸ್ತಪ್ರತಿ ಯೋಜನೆಯನ್ನು ಕೈಗೆತ್ತಿಕೊಂಡಿದೆ, ಇದು ರಾಷ್ಟ್ರೀಯ ಹಸ್ತಪ್ರತಿ ಮಿಷನ್ ಸಹಯೋಗವನ್ನು ಹೊಂದಿರಲಿದೆ.
ಇನ್ನು ಟಿಟಿಡಿಯ ಹಸ್ತಪ್ರತಿ ಡಿಜಿಟಲೀಕರಣದಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿಸಿದ ಪುರಾತನ ಕೃತಿಗಳು, ಹಸ್ತಪ್ರತಿಗಳು, ತಾಳೆಗರಿ ಬರಹಗಳು ಎಲ್ಲವನ್ನು ಸಂರಕ್ಷಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಇನ್ನು ಈ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಸ್ಕ್ಯಾನ್ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಹಸ್ತಪ್ರತಿ ಮಿಷನ್ನ ಸಲಹೆ ಪಡೆದುಕೊಳ್ಳಲಿದ್ದೇವೆ ಎಂಬ ಮಾತನ್ನು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಹಸ್ತಪ್ರತಿ ಡಿಜಿಟಲೀಕರಣ?
ಹಸ್ತಪ್ರತಿಯ ಮೂಲರೂಪವನ್ನು ನೇರವಾಗಿ ಕಂಪ್ಯೂಟರ್ನಲ್ಲಿ ದಾಖಲಿಸುವುದಕ್ಕಾಗಿ, ಹಸ್ತಪ್ರತಿಯನ್ನು ಸ್ಕ್ಯಾನ್ ಮಾಡಿ ಚಿತ್ರ ರೂಪದಲ್ಲಿ ಸೇವ್ ಮಾಡುವುದಕ್ಕೆ ಹಸ್ತಪ್ರತಿಗಳ ಡಿಜಿಟಲೀಕರಣ ಎಂದು ಹೇಳಲಾಗುತ್ತದೆ. ಇದರಿಂದ ಮುಂದಿನ ಪೀಳಿಗೆಗೂ ಕೂಡ ಇಂದಿನ ಹಸ್ತಪ್ರತಿಗಳ ವಿವರಗಳನ್ನು ತಿಳಿಯುವುದಕ್ಕೆ ಅವಕಾಶ ಸಿಗಲಿದೆ. ಮೂಲರೂಪದಲ್ಲಿಯೇ ಹಸ್ತಪ್ರತಿಯ ಬಿಂಬವನ್ನಾಗಿ ಸ್ಕ್ಯಾನ್ ಮಾಡಿ ಸೇವ್ ಮಾಡುವುದಕ್ಕಾಗಿ 'ಡಾಕ್ಯುಮೆಂಟ್ ಮ್ಯಾನೇಜ್ಮೆಂಟ್ ಸಾಫ್ಟ್ವೇರ್'ನ್ನು ಬಳಸುವುದನ್ನು ಗಮನಿಸಬಹುದಾಗಿದೆ.
ಇನ್ನು ಹಸ್ತಪ್ರತಿ ಡಿಜಿಟಲೀಕರಣ ಮಾಡುವುದಕ್ಕಾಗಿ ಸನಾತನ ಜೀವನ ಟ್ರಸ್ಟ್ ಆರ್ಥಿಕ ಬೆಂಬಲವನ್ನು ನೀಡಲಿದೆ. ಜೊತೆಗೆ ಪ್ರಾಚೀನ ಗ್ರಂಥಗಳ ವಿವರವಾದ ಕ್ಯಾಟಲಾಗ್ ಅನ್ನು ರಚಿಸುವುದು ಸೇರಿದಂತೆ ಹಸ್ತಪ್ರತಿಗಳನ್ನು ಸ್ಕ್ಯಾನ್ ಮಾಡುವ ಪುಸ್ತಕವನ್ನು ಪ್ರಕಟಿಸಲು ಸೂಚಿಸಲಾಗಿದೆ. ಇದಲ್ಲದೆ ವೈದಿಕ ವಿಶ್ವವಿದ್ಯಾನಿಲಯದಲ್ಲಿ ವಿಶೇಷವಾದ ಹಸ್ತಪ್ರತಿಗಳ ಕಟ್ಟಡವನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಟಿಟಿಡಿಯು ಸೂಚನೆ ನೀಡಿದೆ.

ಇತ್ತೀಚಿಗೆ ತಿರುಪತಿ ತಿಮ್ಮಪ್ಪನ್ನ ಸನ್ನಿಧಿಗೆ ತೆರಳುವ ಭಕ್ತರಿಗಾಗಿ ಟಿಟಿಡಿ ಹೊಸ ಆ್ಯಪ್ ಅನ್ನು ಪರಿಚಯಿಸಿದೆ. ಈ ಆ್ಯಪ್ ತಿರುಪತಿ ಯಾತ್ರೆಯ ಸಮಯದಲ್ಲಿ ನಿಮಗೆ ಉಪಯೋಗಕ್ಕೆ ಬರಲಿದೆ. ಇದು ತಿಮ್ಮಪ್ಪನ ಭಕ್ತರಿಗೆ ತಡೆರಹಿತ ತೀರ್ಥಯಾತ್ರೆಯ ಅನುಭವವನ್ನು ಒದಗಿಸಲಿದೆ ಎನ್ನಲಾಗಿದೆ. ಇನ್ನು ಈ ಆ್ಯಪ್ ಅನ್ನು JIO ಪ್ಲಾಟ್ಫಾರ್ಮ್ ಬೆಂಬಲದೊಂದುಗೆ ಅಭಿವೃದ್ಧಿಪಡಿಸಲಾಗಿದೆ. ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ವರ್ಷಪೂರ್ತಿ ಅಸಂಖ್ಯಾತ ಭಕ್ತರು ಬೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಸಂಬಂಧಿಸಿದ ಹಲವು ಸೇವೆಗಳನ್ನು ಬೆರಳ ತುದಿಯಲ್ಲಿಯೇ ನೀಡುವುದಕ್ಕೆ ಟಿಟಿಡಿ ಮುಂದಾಗಿದೆ. ಇದಕ್ಕಾಗಿ ಶ್ರೀ ಟಿಟಿ ದೇವಸ್ಥಾನಮ್ಸ್ ಎನ್ನುವ ಆ್ಯಪ್ ಅನ್ನು ಪರಿಚಯಿಸಿದೆ. ಇದರ ಮೂಲಕ ನೀವು ದೇವಸ್ಥಾನಕ್ಕೆ ಸಂಬಂಧಪಟ್ಟ ಹಲವು ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
ತಿಮ್ಮಪ್ಪನ್ನ ಸನ್ನಿಧಿಯಲ್ಲಿ ಬಿಡುಗಡೆಯಾಗಿರುವ ಈ ಆ್ಯಪ್ ಬಳಕೆದಾರರಿಗೆ ಬೆರಳ ತುದಿಯಲ್ಲಿಯೇ ಅನೇಕ ಮಾಹಿತಿಗಳನ್ನು ನೀಡಲಿದೆ. ಇದರಲ್ಲಿ ಮುಖ್ಯವಾಗಿ ದೇವರ ದರ್ಶನ ಟಿಕೆಟ್ ಬುಕಿಂಗ್, ದೇವಸ್ಥಾನಕ್ಕೆ ಸಂಬಂಧಿಸಿದ ರೂಮ್ಗಳ ಬುಕ್ಕಿಂಗ್, ಇ-ಹುಂಡಿ ಸೇವೆ ಸೇರಿದಂತೆ ವಿವಿಧ ಯಾತ್ರಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








