ಪರಮಹಂಸ ನಿತ್ಯಾನಂದನ ವೆಬ್ಸೈಟಿನಲ್ಲಿ ಏನಿದೆ ?

By Varun
|
ಪರಮಹಂಸ ನಿತ್ಯಾನಂದನ ವೆಬ್ಸೈಟಿನಲ್ಲಿ ಏನಿದೆ ?

ನಿತ್ಯಾನಂದನ ಬಿಡದಿ ಆಶ್ರಮಕ್ಕೆ ಬೀಗ ಜಡಿದಿರುವ ರಾಜ್ಯ ಸರ್ಕಾರಹಾಗು ಆತನ ಹುಡುಕಾಟದಲ್ಲಿರುವ ಸುದ್ದಿ ಎಲ್ಲ ವಾಹಿನಿಗಳಲ್ಲೂ ಬರುತ್ತಿದೆ. ಈಗಲೋ ಆಗಲೋ ಅರೆಸ್ಟ್ ಆಗುವ ಎಲ್ಲ ಸಾಧ್ಯತೆ ಇರುವುದರಿಂದ ಆತನಿಗೆ ತನ್ನ ಭಕ್ತರೊಡನೆ ಸಂಪರ್ಕ ಹೊಂದಲು ಹಾಗು ತನ್ನ ಮೇಲಿರುವ ಆರೋಪಗಳನ್ನು ಅಲ್ಲಗಳೆಯಲು ಇರುವ ಸುಲಭ ಸಾಧನವೆಂದರೆ, ಅದು ಆತನ www.nithyananda.org ವೆಬ್ಸೈಟ್.

ತನ್ನ ಲಕ್ಷಾಂತರ ಶಿಷ್ಯ/ಶಿಷ್ಯೆಯರನ್ನು ಹಾಗು ವಿದೇಶೀ ಭಕ್ತಾದಿಗಳನ್ನು ಸೆಳೆಯಲು ಆತನು ಕೇವಲ ತನ್ನ ಬುದ್ಧಿವಂತಿಕೆಯನ್ನು ತನ್ನ ಸತ್ಸಂಗದಲ್ಲಷ್ಟೇ ಅಲ್ಲ, ಅದಕ್ಕಿಂತ ಹರಿತವಾದ ಅಸ್ತ್ರಗಳನ್ನು ಆನ್ಲೈನಿನಲ್ಲಿ ಉಪಯೋಗಿಸಿಕೊಂಡಿದ್ದಾನೆ.

ಒಂದು ಕಡೆ ಕೂತು ಮಾತಾಡುವುದಕ್ಕಿಂತ, ಮಾತಾಡಿದ್ದನ್ನು ರೆಕಾರ್ಡ್ ಮಾಡಿ ವೆಬ್ಸೈಟಿನಲ್ಲಿ ಪ್ರಚಾರ ಮಾಡುವುದು, ಯೂಟ್ಯೂಬ್ ನಲ್ಲಿ ವೀಡಿಯೋ ಹಾಕುವುದು, ವೀಡಿಯೋ ಕಾನ್ಫರೆನ್ಸ್ ಮಾಡುವುದು, ಫೇಸ್ ಬುಕ್, ಟ್ವಿಟರ್ ನಲ್ಲಿ ಸಕ್ರಿಯವಾಗಿರುವುದು, ಈ ಬುಕ್ ನ ನಲ್ಲಿ ವಿಚಾರಧಾರೆ ಹರಡುವುದು, ಪಾಡ್ ಕ್ಯಾಸ್ಟ್ ಮೂಲಕ ಆಸಕ್ತ ಕಿವಿಗಳಿಗೆ ತಲುಪಿಸುವುದು, ಹೀಗೆ ಆನ್ಲೈನ್ ನಲ್ಲಿ ಹೇಗೆಲ್ಲಾ ಜನರನ್ನು ತಲುಪಿಸಲು ಸಾಧ್ಯವೂ ಅದೆಲ್ಲಾ ಟ್ರಿಕ್ ಗಳು ನಿತ್ಯಾನಂದ ಅದ್ಭುತವಾಗಿ ಬಳಸಿಕೊಂಡಿದ್ದಾನೆ.

ನೀವು ನಿತ್ಯಾನಂದನ ವೆಬ್ಸೈಟನ್ನು ಒಮ್ಮೆ ನೋಡಿಬಿಟ್ಟರೆ ಸಾಕ್ಷಾತ್ಕಾರವಾದಂತೆಯೇ. ನೀವೆಲ್ಲಿಗೂ, ಯಾವ ಗುರುವಿನ ಹತ್ತಿರವೂ ಹೋಗುವುದೇ ಬೇಡ ಕಣ್ರೀ. ಬುದ್ಧ, ಮಹಾವೀರ ರಂತಹ ಮಹಾಪುರುಷರ ತಲೆಯ ಹಿಂದೆ ಕಾಣುವ ಪ್ರಭಾವಳಿ ನೀವು ವೆಬ್ಸೈಟ್ ಕ್ಲಿಕ್ ಮಾಡಿದರೇನೇ ಬಂದುಬಿಡುತ್ತೆ! ಯಾಕೆಂದರೆ ಅಂತಹ ಅದ್ಭುತ ವಿಷಯಗಳು ಆವೆಬ್ಸೈಟಿನಲ್ಲಿವೆ. ಅವುಗಳ ಸ್ಯಾಂಪಲ್ ನೀವೇ ನೋಡಿ:

  • ಅವರು ಸಾಕ್ಷಾತ್ಕಾರದೆಡೆಗೆ ನಮ್ಮನ್ನು ಕೊಂಡೊಯ್ಯುತ್ತಿರುವ ಮಹಾ ಸ್ವಾಮಿಯಂತೆ

  • ಜಗತ್ತಿನ ಟಾಪ್ 100 ಆಧ್ಯಾತ್ಮ ಕ್ಷೇತ್ರದಲ್ಲಿ ಪ್ರಭಾವ ಬೀರುತ್ತಿರುವ ಗುರುಗಳಲ್ಲಿ ಇವರೂ ಒಬ್ಬರಂತೆ.

  • ಆಂಟಿಗಳ ಸೀರಿಯಲ್ ಸಮಯದಲ್ಲಿ ಇರುವ TRP ಗಿಂತಾ ಹೆಚ್ಚು ಇರುವ ನಿತ್ಯಾನಂದ ಟಿವಿ 320 ನಗರಗಳಲ್ಲಿ, ಹಾಗು 33 ದೇಶಗಳಲ್ಲಿ ಪ್ರಸಾರವಾಗುತ್ತಂತೆ

  • 150 ದೇಶಗಳಿಂದ ಒಂದು ಕೋಟಿಗೂ ಹೆಚ್ಚು ಭಕ್ತರನ್ನು, ಸುಮಾರು ಸಾವಿರಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ನಿತ್ಯಾನಂದ, ಈ ಭೂಮಿಯಲ್ಲ್ಲಿ ಸದ್ಯಕ್ಕೆ ಬದುಕಿರುವ ಅತ್ಯಂತ ಕಿರಿಯ ಆಧ್ಯಾತ್ಮ ಗುರುವಂತೆ.

  • ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಆಧ್ಯಾತ್ಮಿಕ ಗುರು ಇವರೇ ಅಂತೆ. ಅದೂ ಅಲ್ಲದೆ, ಇವರ ಸತ್ಸಂಗದ 2000 ಗಂಟೆಗೂ ಹೆಚ್ಚು ವೀಡಿಯೋ (ಜಿಂಗಿ ಚಕ್ಕ ವೀಡಿಯೋ ಅಲ್ಲ) ಇದೆಯಂತೆ.

  • ವೇದಗಳ ಅಧ್ಯಯನದಲ್ಲಿ ಮುಂಚೂಣಿಯಲ್ಲಿ ಇರುವ ಇವರು, 30 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವೇದ ಕಾಲದ ಆಚರಣೆಗಳು, ಹಬ್ಬಗಳನ್ನು ಆಚರಣೆಗೆ ತಂದಿದ್ದಾರಂತೆ.

  • ಇನ್ನು ಯೋಗದ ವಿಷಯಕ್ಕೆ ಬಂದರಂತೂ, ಮಹಾಸ್ವಾಮಿಗಳು ಹೊಸ ಭಾಶ್ಯೆಯನ್ನೇ ಬರೆದಿದ್ದಾರಂತೆ. ಕುಂಡಲಿನಿ ಜಾಗೃತಿ, ದೂರಸ್ಥಚಾಲನೆ, ಗಾಳಿಯಲ್ಲಿ ತೇಲುವುದು, ಕ್ವಾಂಟಮ್ ವಿಜ್ಞಾನ, ಮನಃಶಾಸ್ತ್ರದ ವಿಷಯದಲ್ಲಿ ಪರಿಣಿತಿ ಪಡೆದಿದ್ದಾರಂತೆ.

  • ನಿಮ್ಮ ತಲೆಗೆ ಹುಳ ಬಿಡುವ ಸಾಕ್ಷಾತ್ಕಾರದ ಬಗೆಗಿನ 250 ಉಚಿತ ಈ ಪುಸ್ತಕಗಳ ಬಗ್ಗೆ ಮಾಹಿತಿ ಇದೆ.

  • ಸಕ್ಕರೆ ರೋಗವನ್ನು 21 ದಿನದಲ್ಲಿ ಗುಣಪಡಿಸುವ ನಿತ್ಯಕ್ರಿಯೆ ಹೇಳಿಕೊಡುತ್ತೀವಿ, ಬನ್ನಿ ಅನ್ನುವ ಫೋಟೋ ಇದೆ.

  • ಕುಂಡಲಿನಿ ಜಾಗೃತಿ ಮಾಡಿಸಿ 1000 % ಶಕ್ತಿ ಬರಿಸಿಕೊಳ್ಳುವುದು ಹೇಗೆ ಎಂಬ ತಂತ್ರ ಕೂಡ ಹೇಳಿಕೊಡುತ್ತಾರಂತೆ.

  • ಜುಲೈ 27 ರಿಂದ ಸ್ವಾಮಿಗಳು ಕೈಲಾಸ ಯಾತ್ರೆಗೆ ಹೊರಡುವ ಮಾಹಿತಿಯೂ ಇದೆ. ಬೇಕಾದರೆ ನೀವೂ ಅವರ ಜೊತೆ ಹೋಗಲು ನೋಂದಣಿ ಮಾಡಬಹುದು.

  • ಮಾಹಾ ಅವತಾರ ನಿತ್ಯಾನಂದರಿಗೆ ನೀವು 918027279999 ಸಂಖ್ಯೆಗೆ ಫೋನ್ ಮಾಡಿ ಮಾತಾಡಬಹುದಂತೆ.

  • ಆನ್ಲೈನ್ ನಲ್ಲಿ ಕಮಲ ಪಾದಪೂಜೆ ಸೌಲಭ್ಯವೂ ಇದೆ.

ಇವಿಷ್ಟೇ ಅಲ್ಲದೆ ವಿವಿಧ ಭಂಗಿಗಳ ಫೋಟೋಗಳು, ನಿತ್ಯಾನಂದನಿಂದ ಆದ ಪವಾಡಗಳ ಬಗ್ಗೆ ಸಮಗ್ರವಾದ ಮಾಹಿತಿ ಇದೆ. ನಿತ್ಯ ಬರೆದರೂ ಸಾಲದ ಇನ್ನೂ ಹಲವಾರು ವಿಷಯಗಳು ಇನ್ನೂ ಇದ್ದು, ಮೇಲೆ ಹೇಳಿದ್ದು ನಿಜ ಅಲ್ಲ ಅಂತ ನಿಮಗೆ ಅನ್ನಿಸಿದ್ರೆ, ನೀವೇ ಒಮ್ಮೆ ಅವನ ವೆಬ್ಸೈಟ್ ನೋಡಿ.

ಆದರೆ ವೆಬ್ಸೈಟ್ ನೋಡಿ ನಿಮಗೆ ಕುಂಡಲಿನಿ ಜಾಗೃತವಾಗಿ, ಸಾಕ್ಷಾತ್ಕಾರವಾಗಿ ನೀವು ಮನೆ ಮಠ ಬಿಟ್ಟು ಸ್ವಾಮಿಯ ಹಿಂಬಾಲಕರಾದರೆ ನಾವು ಜವಾಬ್ದಾರರಲ್ಲ.

ಉಫ್ಫ್. ಇಷ್ಟೆಲ್ಲಾ ಜ್ಞಾನವಿದ್ದರೂ ನಾವು ಇಂಟರ್ನೆಟ್ ನಲ್ಲಿ ಈ ರೀತಿಯ ವೆಬ್ಸೈಟನ್ನು ಬಳಸಿಕೊಂಡಿಲ್ಲವೆಂದರೆ ಅದು ಇಂಟರ್ನೆಟ್ ಗೆ ಅವಮಾನ. ಏನಂತೀರ? ( ನಿತ್ಯಾನಂದನ ಕುರಿತ ಎಲ್ಲ ಲೇಖನಗಳು)

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X