ಏನಿದು ಒನ್ ನೇಷನ್, ಒನ್ ಎಲೆಕ್ಷನ್.. ಜಾರಿಗೆ ಬಂದೇ ಬಿಡುತ್ತಾ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವಾರದ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನ ಇದೇ ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ. ಕೇಂದ್ರ ಸರ್ಕಾರ ಏಕಾಏಕಿ ಒಂದು ವಾರದ ವಿಶೇಷ ಅಧಿವೇಶನವನ್ನು ಕರೆದಿದ್ದೆ ತಡ ಇಡೀ ದೇಶದಾದ್ಯಂತ ಹೊಸ ಚರ್ಚೆ ಮುನ್ನಲೆಗೆ ಬಂದಿದೆ. ಅದುವೇ ಒನ್ ನೇಷನ್, ಒನ್ ಎಲೆಕ್ಷನ್.
ಹೌದು. ಒಂದು ರಾಷ್ಟ್ರ ಒಂದು ಚುನಾವಣೆ ಈ ಪರಿಕಲ್ಪನೆ ಹಲವು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ಕೇಳಿ ಬರುತ್ತಿದೆ. ಆದರೆ ಅದು ಇಲ್ಲಿಯವರೆಗೆ ಜಾರಿಯಾಗಿಲ್ಲ. ಆದರೆ ಈ ವಿಶೇಷ ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಮಂಡನೆ ಆಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ವಿಶೇಷ ಅಧಿವೇಶನ ಕರೆದಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಏನಿದು ಒಂದು ರಾಷ್ಟ್ರ ಒಂದು ಚುನಾವಣೆ ಕಲ್ಪನೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಒನ್ ನೇಷನ್, ಒನ್ ಎಲೆಕ್ಷನ್?
'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನೆಯು ದೇಶದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಸುವ ಪ್ರಕ್ರಿಯೆ ಆಗಿದೆ. ಅಂದರೆ ಒಂದೇ ಸಮಯದಲ್ಲಿ ಚುನಾವಣೆ ನಡೆಸುವುದರಿಂದ ಚುನಾವಣೆ ವೆಚ್ಚ ಹಾಗೂ ಸಮಯವನ್ನು ಉಳಿಸಬಹುದು ಅನ್ನೊದು ಕೇಂದ್ರ ಸರ್ಕಾರದ ವಾದವಾಗಿದೆ. ಪ್ರಸ್ತುತ, ರಾಜ್ಯ ಅಸೆಂಬ್ಲಿಗಳಿಗೆ ಮತ್ತು ಲೋಕಸಭೆಗೆ ಪ್ರತ್ಯೇಕವಾಗಿ ಚುನಾವಣೆಗಳು ನಡೆಯುತ್ತವೆ. ಕೆಲವೊಂದು ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗಳು ಒಂದೇ ಸಮಯದಲ್ಲಿ ನಡೆದಿರುವ ಉದಾಹರಣೆ ಕೂಡ ಇದೆ.
ಒನ್ ನೇಷನ್ ಒನ್ ಎಲೆಕ್ಷನ್ ಜಾರಿಯಾದರೆ ಲಾಭವೇನು?
ಇದರ ಮೂಲ ಉದ್ದೇಶವೇ ಪ್ರತ್ಯೇಕ ಚುನಾವಣೆಗಳಿಂದ ದೇಶದಲ್ಲಿ ಆಗುತ್ತಿರುವ ಚುನಾವಣೆ ವೆಚ್ಚವನ್ನು ಕಡಿತಗೊಳಿಸುವುದು. ವರದಿಗಳ ಪ್ರಕಾರ, 2019 ರ ಲೋಕಸಭೆ ಚುನಾವಣೆಗೆ 60,000 ಕೋಟಿ ರೂ. ಈ ಮೊತ್ತ ಖರ್ಚಾಗಿದೆ ಎನ್ನಲಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳು ಖರ್ಚು ಮಾಡಿದ್ದನ್ನು ಮತ್ತು ಚುನಾವಣೆಗಳನ್ನು ನಡೆಸಲು ಭಾರತೀಯ ಚುನಾವಣಾ ಆಯೋಗ ಮಾಡಿದ ವೆಚ್ಚಗಳು ಸೇರಿವೆ. ಇದಲ್ಲದೆ ಒಂದೇ ಬಾರಿಗೆ ಎಲ್ಲಾ ಚುನಾವಣೆಗಳು ನಡೆಯುವುದರಿಂದ ದೇಶದಾದ್ಯಂತ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ ತರುವ ಅವಕಾಶವಿದೆ ಎಂದು ವಾದವಿದೆ.
ಏಕಕಾಲದಲ್ಲಿ ಚುನಾವಣೆ ನಡೆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯವಾಗಲಿದೆ. ಏಕೆಂದರೆ ಪ್ರಸ್ತುತ ದಿನಗಳಲ್ಲಿ ಚುನಾವಣೆಗಳು ನಡೆಯುವಾಗ ಚುನಾವಣೆ ನೀತಿ ಸಂಹಿತೆಯನ್ನು ವಿಧಿಸಲಾಗುತ್ತದೆ. ಈ ಸಮಯದಲ್ಲಿ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಸಾಧ್ಯವಿಲ್ಲ. ಇದಲ್ಲದೆ, ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಮತದಾನದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕಾನೂನು ಆಯೋಗ ಹೇಳಿದೆ.
ಒಂದು ರಾಷ್ಟ್ರ ಒಂದು ಚುನಾವಣೆಗೆ ವಿರೋದ ಏಕೆ?
ಇದು ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ಎಂಬುದು ವಿರೋದ ಪಕ್ಷಗಳ ವಾದವಾಗಿದೆ. ಅಲ್ಲದೆ ಒಂದೇ ಪಕ್ಷ ಇಡೀ ದೇಶದಾದ್ಯಂತ ಏಕಸ್ವಾಮ್ಯ ಸಾಧಿಸುವುದಕ್ಕಾಗಿ ಈ ನಿಯಮ ತರಲು ಹೊರಟಿದೆ ಅನ್ನೊದು ಪ್ರಮುಖ ಆರೋಪವಾಗಿದೆ. ಏಕೆಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಲೋಕಸಭೆ ಮತ್ತು ವಿಧಾನಸಭೆ ಎಲೆಕ್ಷನ್ ಒಂದೇ ಭಾರಿಗೆ ನಡೆಸಿದರೆ ಅದರ ಲಾಭ ಪಡೆಯಲಿದೆ ಅನ್ನೊದು ವಿಪಕ್ಷಗಳ ವಾದವಾಗಿದೆ. ಅಲ್ಲದೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಲೋಕಸಭೆಯ ನಿಯಮಗಳೊಂದಿಗೆ ರಾಜ್ಯ ಶಾಸಕಾಂಗ ಸಭೆಗಳ ನಿಯಮಗಳನ್ನು ಸಿಂಕ್ ಮಾಡಲು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿರುತ್ತದೆ.
ಒಂದು ರಾಷ್ಟ್ರ ಒಂದು ಚುನಾವಣೆಯಿಂದ ಟೆಕ್ ವಲಯದಲ್ಲಾಗುವ ಪರಿಣಾಮ ಏನು?
ಒಂದು ರಾಷ್ಟ್ರ ಒಂದು ಚುನಾವಣೆ ಎಲ್ಲಾ ವಲಯಗಳ ಮೇಲೂ ಕೂಡ ಪರಿಣಾಮ ಬೀರಲಿದೆ. ಆದರೆ ಟೆಕ್ ವಲಯದಲ್ಲಿ ವಿಶೇಷವಾಗಿ ಚುನಾವಣೆ ವ್ಯವಸ್ಥೆಗೆ ಹೊಸ ತಂತ್ರಜ್ಞಾನ ರೂಪಿಸುವುದಕ್ಕೆ ಅವಕಾಶ ಸಿಗಲಿದೆ. ಹೆಚ್ಚು ಇವಿಎಂಗಳ ಪೂರೈಕೆ ಹಾಗೂ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಟೆಕ್ನಾಲಜಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬಹುದಾಗಿದೆ. ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆಗೆ ಕಾಯುವ ಬದಲು ಫೇಸ್ ರೆಕಗ್ನಿಷನ್ ಟೆಕ್ನಾಲಜಿ ಮೂಲಕ ನೇರವಾಗಿ ಹೋಗಿ ಮತ ಚಲಾವಣೆ ಮಾಡುವುದಕ್ಕೆ ಸಾಧ್ಯವಾಗಲಿದೆ.


Click it and Unblock the Notifications








