ಚಿನ್ನದ ನಾಡು ಕೋಲಾರದಲ್ಲಿ ಪ್ರಾರಂಭವಾಗಲಿದೆ ಆಪಲ್ ಸದ್ದು..!
ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿರುವ ಕರ್ನಾಟಕ ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಮಿಂಚಲು ತಯಾರಾಗಿದೆ. ವಿಶ್ವದ ಪ್ರತಿಷ್ಟಿತ ಐಟಿ ಕಂಪನಿಯ ತಯಾರಿಕಾ ಘಟಕ ರಾಜ್ಯದಲ್ಲಿ ಪ್ರಾರಂಭವಾಗುತ್ತಿದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ರಾಜ್ಯದ ಯುವಕರಿಗೆ ಬಂಪರ್ ಬರುವ ಸಾಧ್ಯತೆ ಇದೆ.

ಹೌದು, ವಿಶ್ವ ಸ್ಮಾರ್ಟ್ಫೋನ್ ಲೋಕದಲ್ಲಿ ರಾಜನಂತೆ ಮೆರೆಯುತ್ತಿರುವ ಐಫೋನ್ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ಪ್ರಾರಂಭ ಮಾಡಲು ನಿರ್ಧರಿಸಿದ್ದು, ರಾಜ್ಯ ಸರ್ಕಾರದ ಜತೆ ಥೈವಾನ್ ಕೈಗಾರಿಕಾ ಸಂಸ್ಥೆ ವಿಸ್ಟರ್ನ್ ಟೆಕ್ನಾಲಜಿಸ್ ಒಪ್ಪಂದ ಮಾಡಿಕೊಂಡಿದೆ. ಈ ತಯಾರಿಕಾ ಘಟಕ ದೇಶದಲ್ಲಿಯೇ ದೊಡ್ಡದೆನ್ನುವ ಖ್ಯಾತಿಗೂ ಒಳಗಾಗಲಿದೆ ಎಂಬ ಅಭಿಪ್ರಾಯವನ್ನು ವಿಸ್ಟರ್ನ್ ಟೆಕ್ನಾಲಜಿ ಹೊಂದಿದೆ.

ಕೋಲಾರದಲ್ಲಿ ಸ್ಥಾಪನೆ
ವಿಸ್ಟರ್ನ್ ಟೆಕ್ನಾಲಜಿಸ್ ಸ್ಥಾಪಿಸಲು ಉದ್ದೇಶಿಸಿರುವ ಐಫೋನ್ ತಯಾರಿಕಾ ಘಟಕ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭವಾಗಲಿದೆ. ಚಿನ್ನಕ್ಕೆ ಹೆಸರಾಗಿದ್ದ ಜಿಲ್ಲೆ ಟೆಕ್ ನಕ್ಷೆಯಲ್ಲಿ ಐಫೋನ್ ತಯಾರಿಕಾ ಘಟಕದಿಂದ ಸ್ಥಾನ ಪಡೆಯಲಿದೆ.

ಬರೋಬ್ಬರಿ ₹ 3000 ಕೋಟಿ ಹೂಡಿಕೆ
ಥೈವಾನ್ ಕೈಗಾರಿಕಾ ಸಂಸ್ಥೆಯಾದ ವಿಸ್ಟರ್ನ್ ಟೆಕ್ನಾಲಜಿ ಭಾರತದಲ್ಲಿ ಐಫೋನ್ ತಯಾರಿಕಾ ಘಟಕವನ್ನು ಪ್ರಾರಂಭ ಮಾಡಲು ಹೂಡಿಕೆ ಮಾಡುತ್ತಿರುವುದು ಬರೋಬ್ಬರಿ ₹ 3000 ಕೋಟಿ. ಇದು ಆರಂಭಿಕ ಹೂಡಿಕೆಯಾಗಿದ್ದು, ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

43 ಎಕರೆ ಪ್ರದೇಶದಲ್ಲಿ ಸ್ಥಾಪನೆ
ಇತ್ತೀಚೆಗೆ ನೋಯ್ಡಾದಲ್ಲಿ ಪ್ರಾರಂಭವಾದ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ತಯಾರಿಕಾ ಘಟಕ 35 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾದರೆ, ಹೊಸ ಐಫೋನ್ ತಯಾರಿಕಾ ಘಟಕ 43 ಎಕರೆ ವಿಶಾಲವಾದ ಪ್ರದೇಶದಲ್ಲಿ ಪ್ರಾರಂಭವಾಗಿಲಿದ್ದು, ದೇಶದಲ್ಲಿ ದೊಡ್ಡ ಉತ್ಪಾದನಾ ಘಟಕ ಎನಿಸಲಿದೆ ಎಂದು ವಿಸ್ಟರ್ನ್ ಟೆಕ್ನಾಲಜಿಸ್ ಭಾರತೀಯ ಮುಖ್ಯಸ್ಥ ಗುರುರಾಜ್ ಹೇಳಿದ್ದಾರೆ.

ಏನೀದು ವಿಸ್ಟರ್ನ್ ಟೆಕ್ನಾಲಜಿಸ್
ಆಪಲ್ ಐಫೋನ್ ತಯಾರಿಸಲು ಆಪಲ್ ಕಂಪನಿ ಹೂಡಿಕೆ ಮಾಡಬೇಕಿತ್ತು. ಇದ್ಯಾವುದೋ ವಿಸ್ಟರ್ನ್ ಟೆಕ್ನಾಲಜಿಸ್ ಹೂಡಿಕೆ ಮಾಡ್ತಿದೆ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆದರೆ, ವಿಸ್ಟರ್ನ್ ಟೆಕ್ನಾಲಜಿಸ್ ಆಪಲ್ ಕಂಪನಿಯ ಮೂಲ ಉತ್ಪನ್ನ ತಯಾರಕ ಎಂಬುದು ಬಹಳಷ್ಟು ಜನಕ್ಕೆ ಗೊತ್ತೆ ಇಲ್ಲ.

ಸಿಎಂ ಕಚೇರಿಯಿಂದ ಸಿಕ್ಕಿದೆ ಸಮ್ಮತಿ
ಹೀಗಾಗಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆ ಸಭೆ ನಡೆಸಿರುವ ವಿಸ್ಟರ್ನ್ ಟೆಕ್ನಾಲಜಿಸ್ ಮುಖ್ಯಸ್ಥರು ತಯಾರಿಕಾ ಘಟಕದ ಪ್ರಾರಂಭಕ್ಕೆ ಸಮ್ಮತಿ ಸಿಕ್ಕಿದೆ ಎಂದಿದ್ದು, ಬುಧವಾರ ಮುಖ್ಯಮಂತ್ರಿ ಕಚೇರಿಯಿಂದ ಹೇಳಿಕೆ ಬಿಡುಗಡೆಯಾಗಿದೆ. ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ತಯಾರಿಕಾ ಘಟಕದ ಹತ್ತಿರ ಮೊಬೈಲ್ ರಿಪೇರಿ ತಂತ್ರಜ್ಞಾನವನ್ನು ಸ್ಥಾಪಿಸುವಂತೆ ವಿಸ್ಟರ್ನ್ ಟೆಕ್ನಾಲಜಿಸ್ಗೆ ಸಲಹೆ ನೀಡಿದ್ದಾರೆ.

ಉದ್ಯೋಗ ಸೃಷ್ಟಿ
ಕೋಲಾರದಲ್ಲಿ ಪ್ರಾರಂಭವಾಗುವ ಐಫೋನ್ ತಯಾರಿಕಾ ಘಟಕದಿಂದ 10,500 ಉದ್ಯೋಗಗಳು ಸೃಷ್ಟಿಯಾಗಲಿದ್ದು, ತಯಾರಿಕಾ ಘಟಕ ಪ್ರಾರಂಭವಾದ ನಂತರ ಇದು ಹೆಚ್ಚಾಗುವ ಸಾಧ್ಯತೆ ಇದೆ.

ಕನ್ನಡಿಗರಿಗೆ ಆದ್ಯತೆ
ವಿಸ್ಟರ್ನ್ ಟೆಕ್ನಾಲಜಿಸ್ ಜತೆ ಒಪ್ಪಂದ ಮಾಡಿಕೊಂಡಿರುವ ರಾಜ್ಯ ಸರ್ಕಾರ ಉದ್ಯೋಗ ನೀಡುವಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಷರತ್ತು ಹಾಕಿದೆ. ಇದರಿಂದ ಕನ್ನಡಿಗರಿಗೆ ಪ್ರತಿಷ್ಟಿತ ಐಫೋನ್ ತಯಾರಿಕಾ ಘಟಕದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಗುತ್ತದೆ ಎಂದು ಕಂದಾಯ ಸಚಿವ ಆರ್.ವಿ.ದೇಶ್ಪಾಂಡೆ ಹೇಳಿದ್ದಾರೆ.


Click it and Unblock the Notifications