ರದ್ದಾದ/ತಡೆಹಿಡಿಯಲಾದ ರೇಷನ್ ಕಾರ್ಡ್ನ ಈ ತಿಂಗಳ ಲಿಸ್ಟ್ ಬಿಡುಗಡೆ, ಚೆಕ್ ಮಾಡೋದೇಗೆ?
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಅಗತ್ಯವಾಗಿದೆ. ಇದರ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ನಡುವೆ ಹಲವರು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ ಹಣ ಪಡೆದುಕೊಂಡರೆ ಇನ್ನೂ ಕೆಲವರು ಈ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಪಡಿತರ ಚೀಟಿ.
ಹೌದು, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಹಾಯಕವಾಗುವಂತೆ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಿದೆ. ಈ ಹಿಂದೆ ವೆಬ್ಸೈಟ್ ಮೇಲೆ ಲೋಡ್ ಹೆಚ್ಚಾದ ಕಾರಣಕ್ಕೆ ತಾತ್ಕಾಲಿಕವಾಗಿ ಈ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಆದರೆ, ಈಗ ಮತ್ತೆ ಇದನ್ನು ಆರಂಭ ಮಾಡಿದ್ದು, ದಿನಾಂಕ ಕೂಡ ವಿಸ್ತರಣೆ ಮಾಡಲಾಗಿದೆ. ಇದರ ಜೊತೆಗೆ ಈಗ ಈ ತಿಂಗಳ ತಿರಸ್ಕೃತ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಲಾಗಿದೆ. ಹಾಗಿದ್ರೆ, ಸೆಪ್ಟೆಂಬರ್ ತಿಂಗಳಲ್ಲಿ ಯಾವ ತಾಲೂಕಲ್ಲಿ ಎಷ್ಟು ರೇಷನ್ ಕಾರ್ಡ್ ಮನವಿಗಳನ್ನು ತಿರಸ್ಕಾರ ಮಾಡಲಾಗಿದೆ ಎಂಬುದನ್ನು ನೋಡೋಣ ಬನ್ನಿ.

ತಿರಸ್ಕೃತ ಪಟ್ಟಿ ವೀಕ್ಷಣೆ ಮಾಡುವುದು ಹೇಗೆ?:
- ಈಗಾಗಲೇ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅದು ಯಾವ ಹಂತದಲ್ಲಿದೆ ಅಥವಾ ಸ್ವೀಕಾರ ಆಗಿದೆಯಾ ಹಾಗೂ ತಿರಸ್ಕೃತಗೊಂಡಿದೆಯಾ ಎಂದು ತಿಳಿದುಕೊಳ್ಳಲು ನಿಮ್ಮ ಬಳಿ ಸ್ಮಾರ್ಟ್ಫೋನ್ ಇದ್ದರೆ ಸಾಕು. ಅಂದರೆ ನೀವು ನಿಮ್ಮ ಫೋನ್ನಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.ಇದಕ್ಕಾಗಿ ನೀವು https://ahara.kar.nic.in/Home/Home ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು.
-ಇದಾದ ನಂತರದಲ್ಲಿ ನಿಮಗೆ ಸೇವೆ ನೀಡುವ ಪೇಜ್ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಇ-ಸೇವೆಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.
- ಬಳಿಕ ಈ ವಿಭಾಗದಲ್ಲಿ ಹಲವಾರು ಆಯ್ಕೆಗಳು ಲಭ್ಯ ಇದ್ದು, ನಿಮಗೆ ಅಗತ್ಯ ಇರುವ ಸೇವೆಗಾಗಿ ಇ-ಪಡಿತರ ಚೀಟಿ ವಿಭಾಗದ ಮೇಲೆ ಕ್ಲಿಕ್ ಮಾಡಿ.
-ಇದನ್ನು ಮಾಡಿದ ನಂತರ ಮತ್ತೆ ಕೆಲವು ಆಯ್ಕೆಗಳು ಅಲ್ಲಿ ತೆರೆದುಕೊಳ್ಳುತ್ತವೆ, ಅಲ್ಲಿ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಪಟ್ಟಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
-ಇಷ್ಟೆಲ್ಲಾ ಆದ ಮೇಲೆ ಮಾಹಿತಿ ಭರ್ತಿ ಮಾಡಬೇಕಾದ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲು ಜಿಲ್ಲೆಯನ್ನು ಆಯ್ಕೆ ಮಾಡಿ, ನಂತರ ತಾಲೂಕನ್ನು ಆಯ್ಕೆ ಮಾಡಿ. ಇದಾದ ನಂತರ ಈ ತಿಂಗಳನ್ನು ಆಯ್ಕೆ ಮಾಡಿ. ಅಂದರೆ ಸೆಪ್ಟೆಂಬರ್ ತಿಂಗಳ ಮೇಲೆ ಕ್ಲಿಕ್ ಮಾಡಿ ಜೊತೆಗೆ ಪಕ್ಕದಲ್ಲೇ ಇರುವ ಇಸವಿಯನ್ನೂ ಆಯ್ಕೆ ಮಾಡಿಕೊಳ್ಳಿ.
- ಮಾಹಿತಿಯನ್ನು ಭರ್ತಿ ಮಾಡಿದ ಮೇಲೆ ಗೋ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದರೆ ನಿಮ್ಮ ತಾಲೂಕಿನ ಅನರ್ಹ ಅಥವಾ ರದ್ದುಗೊಳಿಸಲಾದ/ ತಡೆಹಿಡಿಯಲಾದ ಪಟ್ಟಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ನಿಮ್ಮ ಹೆಸರಿದ್ದರೆ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಮುಂದಿನ ಪ್ರಕ್ರಿಯೆ ನಡೆಸಿ.
ತಿದ್ದುಪಡಿ ಅವಧಿ ವಿಸ್ತರಣೆ: ಈ ನಡುವೆ ಯಾರೆಲ್ಲಾ ಈವರೆಗೂ ಅನ್ನಭಾಗ್ಯದ ಹೆಚ್ಚುವರಿ ಪಡಿತರ ಹಣ ಹಾಗೂ ಗೃಹಲಕ್ಷ್ಮಿ ಹಣವನ್ನು ಪಡೆದಿಲ್ಲವೋ ಅವರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಈ ತಿಂಗಳ 14 ನೇ ತಾರೀಖಿನ ವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಜೊತೆಗೆ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ನೋಂದಾಯಿಸಿ ರೇಷನ್ ಕಾರ್ಡ್ನಲ್ಲಿ ಯಜಮಾನಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ ಎಂದೂ ಸಹ ಆಹಾರ ಇಲಾಖೆ ಮಾಹಿತಿ ನೀಡಿದೆ.

ಈ ಮೊದಲು ಈ ತಿದ್ದುಪಡಿ ಕಾರ್ಯಕ್ಕೆ ಸೆಪ್ಟೆಂಬರ್ 1 ರಿಂದ 10 ವರೆಗೂ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಆದರೆ ಸರ್ವರ್ ಸಮಸ್ಯೆ ಹಾಗೂ ತಿದ್ದುಪಡಿಗೆ ಹಲವಾರು ಜನರು ಬಾಕಿ ಇರುವ ಹಿನ್ನೆಲೆ ಈ ದಿನಾಂಕವನ್ನು ವಿಸ್ತರಣೆ ಮಾಡಿ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಯಾರೆಲ್ಲಾ ಈವರೆಗೂ ತಿದ್ದುಪಡಿ ಮಾಡಿಸಿಕೊಂಡಿಲ್ಲವೋ ಅವರು ಸಮೀಪದ ಕರ್ನಾಟಕ ಒನ್, ಅಟಲ್ ಕೇಂದ್ರ, ಬೆಂಗಳೂರು ಒನ್ ಸೇರಿದಂತೆ ಇತರೆ ಕೇಂದ್ರಗಳಿಗೆ ಹೋಗಿ ಸರಿಪಡಿಸಿಕೊಳ್ಳಬಹುದು.


Click it and Unblock the Notifications