ಮಳೆಗಾಲದಲ್ಲಿ ಬೀಳುವ ಸಿಡಿಲುಗಳ ಬಗ್ಗೆ ನಿಖರ ಮುನ್ಸೂಚನೆ ನೀಡಲಿದೆ ಈ ಆಪ್!
ಕರ್ನಾಟಕ ರಾಜ್ಯದಲ್ಲಿಗ ಮುಂಗಾರು ಮಳೆ ಶುರುವಾಗುವ ಸಮಯ. ಈ ದಿನಗಳಲ್ಲಿ ಆರಂಭದ ಮಳೆಯೊಂದಿಗೆ ಭಾರಿ ಗುಡುಗು, ಸಿಡಿಲು ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಯಾವಾಗ ಎಲ್ಲಿ ಸಿಡಿಲು ಬೀಳುತ್ತವೆ ಎಂದು ನಿಖರವಾಗಿ ಊಹಿಸುವುದು ಕಷ್ಟ. ಆದರೆ 'ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು' ಅಭಿವೃದ್ದಿ ಪಡಿಸಿರುವ 'ಸಿಡಿಲು' ಆಪ್ ಮೂಲಕ ಸಿಡಿಲಿನ ಅಪಾಯದ ಕುರಿತು ಮುನ್ಸೂಚನೆ ಪಡೆಯಬಹುದಾಗಿದೆ.

ಹೌದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (Karnataka State Natural Disaster Monitoring Committee) 'ಸಿಡಿಲು ಆಪ್' ಅನ್ನು ಕಳೆದ ವರ್ಷವೇ ಪರಿಚಯಿಸಿದ್ದು, ಈ ಆಪ್' ಮಳೆ, ಸಿಡಿಲು ಮತ್ತು ಪ್ರಕೃತಿ ವಿಕೋಪಗಳ ಬಗ್ಗೆ ಬಳಕೆದಾರರಿಗೆ ಮೂನ್ಸೂಚನೆಯನ್ನು ನೀಡುತ್ತದೆ. ಮೂನ್ಸೂಚನೆ ಅರಿತು ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಿದೆ.

ಲೊಕೇಶನ್ ಆಧಾರದ ಮೇಲೆ ಈ ಆಪ್ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಇರುವ ಸುತ್ತಮುತ್ತ ಏನಾದರೂ ಸಿಡಿಲು ಅಥವಾ ಹವಾಮಾನ ವೈಪರಿತ್ಯ ಉಂಟಾಗುವ ಸನ್ನಿವೇಶಗಳಿದ್ದರೇ ಮುಂಚಿತವಾಗಿಯೇ ಬಳಕೆದಾರರಿಗೆ ಮಾಹಿತಿ ನೀಡುತ್ತದೆ. ಸಿಡಿಲು ಮುನ್ಸೂಚನೆ ಪಡೆಯಲು ಸಂಸ್ಥೆಯು ರಾಜ್ಯದ ಆಯ್ದ ಪ್ರದೇಶಗಳಲ್ಲಿ ಸುಮಾರು 10 ಸೆನ್ಸಾರ್ಗಳನ್ನು ಅಳವಡಿಸಿದ್ದು, ಇವು ವಿಕೋಪದ ಕುರಿತು ಮುನ್ನೆಚ್ಚರಿಕೆ ನೀಡಲಿವೆ.

ಅಪಾಯದ ಮುನ್ಸೂಚನೆಯ ಮಟ್ಟವನ್ನು ತಿಳಿಸಲು ನಾಲ್ಕು ಕೆಟಗರಿಗಳನ್ನು ಮಾಡಿದ್ದು, ಅವುಗಳಲ್ಲಿ ರೆಡ್ ಬಣ್ಣವು ಅಪಾಯದ ಮಟ್ಟ ಹೆಚ್ಚಿದೆ ಎಂಬುದನ್ನು ಸೂಚಿಸುತ್ತದೆ. ಈ ಕೆಂಪು ಬಣ್ಣದ ಸೂಚನೆ ಬಂದರೇ, ಬಳಕೆದಾರರ ಸ್ಥಳದ ಸುತ್ತ ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿಯ ಒಳಗೆ ಶೇ.90% ಸಿಡಿಲು ಬೀಳುವ ಸಾಧ್ಯತೆ ಇರಲಿದೆ ಎಂದರ್ಥ. ಹಾಗೆಯೇ ಆರೆಂಜ್ ಬಣ್ಣದ ಸೂಚನೆಯು 5ಕಿ.ಲೋ ವ್ಯಾಪ್ತಿಯಲ್ಲಿ ಸಿಡಿಲು ಬೀಳುವ ಸೂಚನೆ ಬೀರುತ್ತದೆ.
ಅದೇರೀತಿ ಯೆಲ್ಲೊ ಬಣ್ಣವು ಸುಮಾರು 15ಕಿ.ಲೋ ವ್ಯಾಪ್ತಿಯಲ್ಲಿ ಸಿಡಿಲು ಬೀಳುವ ಸಾಧ್ಯತೆಗಳಿವೆ ಎಂಬುದನ್ನು ಸೂಚಿಸಿದರೇ, ಗ್ರೀನ್ ಬಣ್ಣವು ಸುರಕ್ಷಿತ ಎಂಬ ಮುನ್ಸೂಚನೆ ಆಗಿದೆ. ಸಿಡಿಲು ಅಪಾಯಕಾರಿಯಾಗಿದ್ದು, ಕಳೆದ ಆರು ವರ್ಷದಲ್ಲಿ ಸುಮಾರು 630 ಜೀವಗಳು ಬಲಿಯಾಗಿವೆ. ಹೀಗಾಗಿ ಮಳೆಗಾಲದಲ್ಲಿ ಬೀಳುವ ಸಿಡಿಲುಗಳ ಬಗ್ಗೆ ಮುನ್ಸೂಚನೆ ಪಡೆಯಲು ಈ ಆಪ್ ಉಪಯುಕ್ತ ಎನ್ನಬಹುದು.


Click it and Unblock the Notifications