ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ, ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!
ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಜನರಿಗೆ ಸಾಕಷ್ಟು ಅಕ್ಕಿ ನೀಡಲು ಸಾಧ್ಯ ಆಗುತ್ತಿಲ್ಲ. ಇದರಿಂದಾಗಿ ಐದು ಕೆಜಿಗೆ ಹಣವನ್ನು ನೀಡುವುದಾಗಿ ಘೋಷಣೆ ಮಾಡಿದೆ. ಈ ಹಣ ನೇರವಾಗಿ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತದೆ. ಆದಾಗ್ಯೂ ಕೆಲವರೂ ಇನ್ನೂ ಹಣವನ್ನೂ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಹೌದು, ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಬಂದಿದೆಯಾ ಎಂದು ತಿಳಿದುಕೊಳ್ಳಲು ಅಧಿಕೃತ ಸೈಟ್ನಲ್ಲಿ ಚೆಕ್ ಮಾಡಲು ಮುಂದಾಗಿದ್ದಾರೆ. ಆದರೆ ಅಲ್ಲಿ ಮೊತ್ತ ಕಾಣಿಸಿದ ಹಿನ್ನೆಲೆ ಕೆಲವರು ಬೇಸರ ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣ ಸರ್ಕಾರ ಹಣವನ್ನು ನಿಮ್ಮ ಖಾತೆಗೆ ಹಾಕಿಲ್ಲ ಎಂದಲ್ಲ, ಬದಲಾಗಿ ನಿಮ್ಮ ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ ಎಂದರ್ಥ. ಹೀಗಾಗಿ ತಕ್ಷಣವೇ ಇ-ಕೆವೈಸಿ ಮಾಡಿಸಿಕೊಳ್ಳಿ. ಹಾಗಿದ್ರೆ, ಯಾವೆಲ್ಲಾ ಸಮಸ್ಯೆಗಳಿಗೆ ಏನೆಲ್ಲಾ ದಾಖಲೆಗಳು ಬೇಕು? ಹಣ ಜಮೆ ಆಗಿದೆ ಎಂದು ಪತ್ತೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನಾಳೆಯೇ ಡೆಡ್ಲೈನ್: ಸರ್ಕಾರ ತಲಾ 10 ಕೆಜಿ ಅಕ್ಕಿ ನೀಡುವವರೆಗೆ ಐದು ಕೆಜಿ ಅಕ್ಕಿಯ ಹಣವನ್ನು ನೇರವಾಗಿ ಪಡಿತರದಾರರಿಗೆ ಜಮಾ ಮಾಡುತ್ತಿದ್ದು, ಈ ನಡುವೆ ಕೆಲವರು ಈ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲೂ ನಾಳೆಯೊಳಗೆ ಅಂದರೆ ಜುಲೈ 15 ರೊಳಗೆ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಲು ಕೆವೈಸಿ ಮಾಡಿಸಿ ಎಂದು ಸರ್ಕಾರ ತಿಳಿಸಿದ್ದು, ಯಾರೆಲ್ಲಾ ಈ ಕೆಲಸ ಮಾಡಿಲ್ಲವೋ ಅವರಿಗೆ ಹಣ ಜಮಾವಣೆ ಮಾಡಲು ಸಾಧ್ಯ ಇಲ್ಲ ಎಂದು ಸರ್ಕಾರ ಎಚ್ಚರಿಸಿದೆ.
ಲಕ್ಷಾಂತರ ಖಾತೆಗಳು ನಿಷ್ಕ್ರಿಯಗೊಂಡಿವೆ : ಪ್ರಧಾನಮಂತ್ರಿ ಜನಧನ ಯೋಜನೆ ಅಡಿಯಲ್ಲಿ ಬಡ, ಕೂಲಿ ಕಾರ್ಮಿಕರು ಸೇರಿದಂತೆ ಬಹುಪಾಲು ಜನರು ಖಾತೆಗಳನ್ನು ಓಪನ್ ಮಾಡಿಸಿದ್ದರು. ಆದರೆ ಈ ಖಾತೆಯಲ್ಲಿ ಯಾವುದೇ ವ್ಯವಹಾರಗಳನ್ನು ನಡೆಸಿಲ್ಲ. ಅದರಲ್ಲೂ ಆರ್ಬಿಐ ನಿಯಮದ ಪ್ರಕಾರ ಒಂದು ಬ್ಯಾಂಕ್ ಖಾತೆ ಎರಡು ವರ್ಷಗಳಿಗಿಂತ ಹೆಚ್ಚು ಅವಧಿಗೆ ಬಳಕೆಯಲ್ಲಿ ಇಲ್ಲದಿದ್ದರೆ ಅದು ನಿಷ್ಕ್ರಿಯವಾಗುತ್ತದೆ. ಈ ಕಾರಣಕ್ಕಾಗಿತೇ ಈಗ ಈ ಸಮಸ್ಯೆ ಎದುರಾಗಿದೆ.
ಅದರಂತೆ ಈಗ ಪಡಿತರದಾರರು ಆಧಾರ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಿ ನಂತರ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ಸಮೀಪದ ತಹಸೀಲ್ದಾರ್ ಕಚೇರಿ ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ಹಾಗೂ ನ್ಯಾಯಬೆಲೆ ಅಂಗಡಿಗೆ ಒದಗಿಸಬೇಕು ಎಂದು ಮಾಹಿತಿ ನೀಡಲಾಗಿದೆ. ಅದರಲ್ಲೂ ಇದನ್ನು ನಾಳೆಯೊಳಗೆ ಮಾಡಿದ್ದೇ ಆದರೆ ಆಗಸ್ಟ್ ತಿಂಗಳಲ್ಲಿ ಇದರ ಲಾಭ ಪಡೆದುಕೊಳ್ಳಬಹುದು.
ಇನ್ನು ಇನ್ ಆಕ್ಟಿವ್ ಕೇಸ್ಗೆ ಸಂಬಂಧಿಸಿದಂತೆ ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಬೇಕು. ನಾಟ್ ವ್ಯಾಲಿಡ್ ಆಧಾರ್ ನಂಬರ್ ಎಂದು ತೋರಿಸಿದರೆ ಪಡಿತರದಾರರು ನಿಖರವಾದ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಹೊಂದಾಣಿಕೆ ಮಾಡಿಸಬೇಕು. ಹಾಗಿದ್ರೆ ಎಸ್ಬಿಐ ಖಾತೆ ಹೊಂದಿರುವರು ಹೇಗೆ ಆನ್ಲೈನ್ ಮೂಲಕ ಇ-ಕೆವೈಸಿ ಮಾಡುವುದು ಎಂದು ಇಲ್ಲಿ ತಿಳಿಯಿರಿ.

ಹಂತ 1: ಆನ್ಲೈನ್ನಲ್ಲಿ ಇ- ಕೆವೈಸಿ ಮಾಡಲು ಇಚ್ಚಿಸುವವರು ಅಗತ್ಯವಾಗಿ ಬೇಕಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ. ಬಳಿಕ ಅದನ್ನು ಎಸ್ಬಿಐ ಶಾಖೆಗೆ ನೋಂದಾಯಿತ ಇಮೇಲ್ ಐಡಿಯಿಂದ ಇಮೇಲ್ ಮಾಡಿ. ಇದಾದ ನಂತರದಲ್ಲಿ ಬ್ಯಾಂಕ್ ನಿಮ್ಮ ಇಮೇಲ್ ಐಡಿಯನ್ನು ಸ್ವೀಕರಿಸಿ ಬಳಿಕ ಡಾಕ್ಯುಮೆಂಟ್ ಅನ್ನು ಪರಿಶೀಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಂತರದಲ್ಲಿ ಅಂದರೆ ಡಾಕ್ಯುಮೆಂಟ್ಗಳನ್ನು ಪರಿಶೀಲಿಸಿದ ಬಳಿಕ ನಿಮ್ಮ ಖಾತೆಯ ಕೆವೈಸಿ ವಿವರ ನವೀಕರಣ ಆಗುತ್ತವೆ.
ಹಣ ಪಾವತಿ ಆಗಿದೆಯೇ ಎಂದು ತಿಳಿಯುವುದು ಹೇಗೆ?: ಇನ್ನು ಬ್ಯಾಂಕ್ ವಿಷಯವನ್ನು ಹೊರತುಪಡಿಸಿ ನಿಮ್ಮ ಖಾತೆಗೆ ಆಹಾರ ಇಲಾಖೆಯಿಂದ ಹಣ ವರ್ಗಾವಣೆ ಆಗಿದೆಯೇ ಅಥವಾ ಅದರಲ್ಲಿ ಏನಾದರೂ ಸಮಸ್ಯೆ ಉಂಟಾಗಿದೆಯೇ ಎಂದು ತಿಳಿದುಕೊಳ್ಳಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ಗೆ ಲಾಗಿನ್ ಆಗಬೇಕಿದೆ. ಇದಕ್ಕಾಗಿ ನೀವು https://ahara.kar.nic.in/status2/ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು.
ನಂತರದಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಎನ್ನುವ ಆಯ್ಕೆ ಕೊನೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಸ್ಟೇಟಸ್ ಆಫ್ ಡಿಬಿಟಿ ಅನ್ನುವ ಆಯ್ಕೆ ಗೋಚರಿಸುತ್ತದೆ, ಅದನ್ನು ಆಯ್ಕೆ ಮಾಡಿ. ಅಲ್ಲಿ ವರ್ಷ, ತಿಂಗಳು ಹಾಗೂ ಆರ್ಸಿ ನಂಬರ್ ಅನ್ನು ಎಂಟ್ರಿ ಮಾಡಿ. ಬಳಿಕ ಅಲ್ಲೇ ಕಾಣಿಸಿಕೊಳ್ಳುವ ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಿ ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದ್ರೆ ಸಾಕು. ಎಲ್ಲಾ ಮಾಹಿತಿ ತೆರೆದುಕೊಳ್ಳುತ್ತದೆ.


Click it and Unblock the Notifications








