ಕರ್ನಾಟಕ ಚುನಾವಣೆ 2023: ಚುನಾವಣಾ ಅಕ್ರಮ ಕಂಡುಬಂದ್ರೆ ಫೋನ್ನಲ್ಲಿಯೇ ಕಂಪ್ಲೇಟ್ ನೀಡಿ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಈ ಸಂಬಂಧ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಈವರೆಗೂ ವಿವಿಧ ರೀತಿಯಲ್ಲಿ ಮತದಾರರನ್ನು ಸೆಳೆಯುತ್ತಿದ್ದ ಅಭ್ಯರ್ಥಿಗಳು ಇನ್ಮುಂದೆ ಪರೋಕ್ಷವಾಗಿ ಮತದಾರರ ಮೇಲೆ ಪರಿಣಾಮ ಬೀರಲಿದ್ದಾರೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದಿದ್ದರೆ ಆಮಿಷ, ಹಣ-ಹೆಂಡದ ಕೆಟ್ಟ ಪದ್ಧತಿ ವಿರುದ್ಧ ಸಮರ ಸಾರಬಹುದು.
ಹೌದು, ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಯಾವದೇ ಪಕ್ಷದ ಅಭ್ಯರ್ಥಿಗಳು ಒಂದಲ್ಲಾ ಒಂದು ರೀತಿಯಲ್ಲಿ ಜನರಿಗೆ ಪರೋಕ್ಷವಾಗಿ ಕೆಲವು ಆಶ್ವಾಸನೆಗಳನ್ನು ನೀಡುವುದು ಹಾಗೂ ಹಣ-ಹೆಂಡ ಹಂಚುವುದು ಸಾಮಾನ್ಯ ಸಂಗತಿ. ಇದನ್ನು ಕಟ್ಟುನಿಟ್ಟಾಗಿ ತಡೆಯಲು ಮುಂದಾಗಿರುವ ಚುನಾವಣಾ ಆಯೋಗ cVIGIL ಆಪ್ ಅನ್ನು ಪರಿಚಯಿಸಿದೆ. ಈ ಮೂಲಕ ನೀವು ಯಾರಿಗೂ ತಿಳಿಯದ ಹಾಗೆ ದೂರು ಸಲ್ಲಿಕೆ ಮಾಡಬಹುದು.

ಚುನಾವಣಾ ನೀತಿ ಉಲ್ಲಂಘನೆಗಳನ್ನು ವರದಿ ಮಾಡಲು ನಾಗರಿಕರಿಗೆ cVIGIL ಆಪ್ ಅನ್ನು ಪರಿಚಯಿಸಲಾಗಿದ್ದು, ಈ ಮೂಲಕ ಅಭ್ಯರ್ಥಿಗಳು ಉಚಿತ ಕೊಡುಗೆಗಳು ಹಾಗೂ ಇನ್ನಿತರೆ ಆಮಿಷದ ವಿಷಯಗಳನ್ನು ವರದಿ ಮಾಡಬಹುದಾಗಿದೆ. ಇವುಗಳನ್ನು ವಿಡಿಯೋಗಳು ಅಥವಾ ಫೋಟೋಗಳ ರೂಪದಲ್ಲಿ ಸೆರೆಹಿಡಿದುಕೊಳ್ಳಬಹುದಾಗಿದ್ದು, ಈ ಆಪ್ ಅನ್ನು ಬಳಕೆ ಮಾಡುವುದು ಹೇಗೆ? ಎಂಬುದನ್ನು ತಿಳಿಸಿಕೊಡಲಾಗಿದೆ ಓದಿರಿ.
ಹಂತ 1: ಮೊದಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿ cVIGIL ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ಲಾಗಿನ್ ಆಗುವ ಮೂಲಕ ಹಾಗೂ ಲಾಗಿನ್ ಆಗದೆಯೂ ಇದನ್ನು ಬಳಕೆ ಮಾಡಲು ಅನುವು ಮಾಡಿಕೊಡುತ್ತದೆ. ಲಾಗಿನ್ ಆಗುವ ಮೂಲಕ ಈ ಆಪ್ ಬಳಕೆ ಮಾಡಬೇಕು ಎಂದರೆ ನೀವು ನಿಮ್ಮ ಹೆಸರು,ಫೋನ್ ನಂಬರ್ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಭರ್ತಿ ಮಾಡಬೇಕಿದೆ.
ಹಂತ 2 : ಇದರಲ್ಲಿ ನೀವು ಅನಾಮಿಕವಾಗಿ ದೂರು ಸಲ್ಲಿಸಬೇಕು ಎಂದರೆ ಆಪ್ನಲ್ಲಿ ಅನಾನಿಮಸ್ ಐಕಾನ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ನಂತರ ಫೋಟೋ ಹಾಗೂ ವಿಡಿಯೋ ಎಂಬ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಯಾವ ಮಾದರಿಯ ದಾಖಲೆ ಇವೆಯೋ ಅವುಗಳನ್ನು ಅಪ್ಲೋಡ್ ಮಾಡಬಹುದು. ಅದರಂತೆ ರಿಜಿಸ್ಟರ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ.
ಹಂತ 3 : ಮೊಬೈಲ್ ನಂಬರ್ ಬಳಕೆ ಮಾಡಿಕೊಂಡು ಈ ಆಪ್ನಲ್ಲಿ ದೂರು ಸಲ್ಲಿಸಲು ಇಚ್ಚಿಸುವವರು ಆಪ್ ತೆರೆದ ತಕ್ಷಣ ಮೊಬೈಲ್ ನಂಬರ್ ಭರ್ತಿ ಮಾಡಲು ಕೇಳುತ್ತದೆ. ಅಲ್ಲಿ ನಿಮ್ಮ ಫೋನ್ ನಂಬರ್ ಎಂಟ್ರಿ ಮಾಡಿ ನಂತರ ನಿಮ್ಮ ಮೊಬೈಲ್ಗೆ ಓಟಿಪಿ ಬರುತ್ತದೆ ಅದನ್ನು ಕೇಳಲಾದ ಜಾಗದಲ್ಲಿ ಭರ್ತಿ ಮಾಡಿ.

ಹಂತ 4: ಇದಾದ ನಂತರ ಅಗತ್ಯ ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ ಅಂದರೆ ಹೆಸರು, ವಿಳಾಸ, ವಿಧಾನಸಭೆ ಕ್ಷೇತ್ರ ಸೇರಿದಂತೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ಬಳಿಕ ನೀವು ನಿಮ್ಮ ಫೋನ್ನಲ್ಲಿ ಸೆರೆಹಿಡಿಯಲಾದ ವಿಡಿಯೋ ಅಥವಾ ಫೋಟೋ ರೂಪದ ದಾಖಲೆಗಳ ಮೂಲಕ ಸುಲಭವಾಗಿ ದೂರು ಸಲ್ಲಿಸಿ.
ಈ ಆಪ್ ಜಿಪಿಎಸ್ ಆಧಾರಿತವಾಗಿ ಕೆಲಸ ಮಾಡಲಿದ್ದು, ನೀವು ಸಲ್ಲಿಸುವ ವಿಳಾಸ ಚುನಾವಣಾ ಆಯೋಗಕ್ಕೆ ಹಾಗೂ ಸಂಬಂಧಿಸಿದ ಪೊಲೀಸರಿಗೆ ತಿಳಿಯುತ್ತದೆ. ಇದರಿಂದ ಆರೋಪಿತರನ್ನು ಸುಲಭವಾಗಿ ಪತ್ತೆಮಾಡಲು ಸಹಕಾರಿಯಾಗಲಿದೆ. ಹಾಗಿದ್ರೆ, ಯಾವೆಲ್ಲಾ ಸಮಯದಲ್ಲಿ ದೂರನ್ನು ಸಲ್ಲಿಸಬಹುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಇಲ್ಲಿದೆ ನೋಡಿ ವಿವರ.
ಹಣ ಹಂಚುವುದು, ಉಡುಗೊರೆಗಳು/ಕೂಪನ್ಗಳ ವಿತರಣೆ,ಮದ್ಯ ವಿತರಣೆ, ಅನುಮತಿಯಿಲ್ಲದೆ ಪೋಸ್ಟರ್ಗಳು/ಬ್ಯಾನರ್ಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಬೆದರಿಕೆ, ಅನುಮತಿಯಿಲ್ಲದೆ ವಾಹನಗಳು ಅಥವಾ ಬೆಂಗಾವಲುಗಳನ್ನು ಬಳಕೆ ಮಾಡುವುದು, ಪಾವತಿಸಿದ ಸುದ್ದಿ, ಆಸ್ತಿ ವಿರೂಪಗೊಳಿಸುವಿಕೆ, ಮತದಾನದ ದಿನದಂದು ಮತದಾರರ ಸಾಗಣೆ, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ.

ಧಾರ್ಮಿಕ ಅಥವಾ ಕೋಮು ಭಾಷಣಗಳು/ಸಂದೇಶಗಳು, ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್ಗಳ ಬಳಕೆ, ರ್ಯಾಲಿಗಳಿಗೆ ಸಾರ್ವಜನಿಕರ ಸಾರಿಗೆ ಬಳಕೆ ಸೇರಿದಂತೆ ಇನ್ನಿತರೆ ದೂರುಗಳನ್ನು ನೀವು ಸಲ್ಲಿಕೆ ಮಾಡಬಹುದು. ದೂರು ಸಲ್ಲಿಸಿದ ನಂತರ ನಿಮಗೆ ರಶೀದಿ ದೊರೆಯಲಿದ್ದು, ಅದು ಯಾವ ಹಂತದ ವಿಚಾರಣೆಯಲ್ಲಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಈ ಮೂಲಕ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೈಜೋಡಿಸಬಹುದು.
ಕರ್ನಾಟಕದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಅದರಂತೆ ಇನ್ನೂ ಹೆಚ್ಚಿನ ಕುಂದುಕೊರತೆ ಸಮಸ್ಯೆಗಳು ಕಂಡು ಬಂದರೆ ನೀವು ರಾಷ್ಟ್ರೀಯ ಸಂಪರ್ಕ ಕೇಂದ್ರಕ್ಕೆ 1800111950 ಅಥವಾ 1950 ರಲ್ಲಿ ರಾಜ್ಯ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ ದೂರು ನೀಡಬಹುದಾಗಿದೆ.


Click it and Unblock the Notifications








