12.48 ಕೋಟಿ ಎಗರಿಸಿದ ಹ್ಯಾಕರ್ಸ್, ಬ್ಯಾಂಕ್ಗೆ ದಂಡ ಹಾಕಿದ ಆರ್ಬಿಐ, ನಿಮ್ಮ ಹಣ ಎಷ್ಟು ಸೇಫ್!?
ನಾವು ನಮ್ಮ ಹಣವನ್ನು ಬೇಗ ಖರ್ಚು ಮಾಡಿಬಿಡುತ್ತೇವೆ ಎಂಬ ಭಯದಿಂದ ಅಥವಾ ಯಾರಾದರೂ ಕದ್ದು ಬಿಡುತ್ತಾರೆ ಎನ್ನುವ ಆತಂಕದಿಂದಾಗಿ ಅದನ್ನು ಭದ್ರವಾಗಿ ಇಡಲು ಬ್ಯಾಂಕ್ ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ, ಬ್ಯಾಂಕ್ನಲ್ಲೇ ಹ್ಯಾಕರ್ಸ್ಗಳು ಹಣ ದೋಚಿದರೆ ಗತಿ ಏನು?, ಇದೇ ರೀತಿಯ ಘಟನೆ ಈಗಾಗಲೇ ನಡೆದಿದ್ದು, ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಬ್ಯಾಂಗ್ಗೆ ಆರ್ಬಿಐ ದಂಡ ವಿಧಿಸಿದೆ.
ಹೌದು, ಪ್ರಾಥಮಿಕ (ಅರ್ಬನ್) ಸಹಕಾರಿ ಬ್ಯಾಂಕ್ಗೆ ಸೈಬರ್ ಸೆಕ್ಯುರಿಟಿ ಫ್ರೇಮ್ವರ್ಕ್ ಅನ್ನು ಅನುಸರಿಸದಿದ್ದಕ್ಕಾಗಿ ಆರ್ಬಿಐ ದಂಡ ವಿಧಿಸಿದೆ. ಯಾಕೆಂದರೆ ಈ ಬ್ಯಾಂಕ್ನಲ್ಲಿ ಹ್ಯಾಕರ್ಸ್ಗಳು ತಮ್ಮ ಕೈಚಳಕ ತೋರಿಸಿದ್ದರು. ಅದರೆ, ಇದನ್ನು ತಡೆಯುವಲ್ಲಿ ಬ್ಯಾಂಕ್ ವಿಫಲವಾಗಿತ್ತು. ಹಾಗಿದ್ರೆ, ಯಾವ ಬ್ಯಾಂಕ್ ಇದು?, ಈ ಬ್ಯಾಂಕ್ಗೆ ವಿಧಿಸಲಾಗಿರುವ ದಂಡ ಎಷ್ಟು?, ಜೊತೆಗೆ ಬ್ಯಾಂಕ್ನಲ್ಲಿ ಇರುವ ನಿಮ್ಮ ಹಣ ಎಷ್ಟು ಸೇಫ್ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬ್ಯಾಂಕ್ಗೆ ದಂಡ ವಿಧಿಸಿದ ಆರ್ಬಿಐ: ಎಪಿ ಮಹೇಶ್ ಸಹಕಾರಿ ಅರ್ಬನ್ ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ. ಆರ್ಬಿಐನ ಸಂಪೂರ್ಣ ಸೈಬರ್ ಲೆಕ್ಕಪರಿಶೋಧನೆ ಮತ್ತು ಹೈದರಾಬಾದ್ ಪೊಲೀಸ್ ತನಿಖೆಯ ಬಳಿಕ ಈ ಬೆಳವಣಿಗೆ ಕಂಡುಬಂದಿದೆ. ಅದರಂತೆ ಎಪಿ ಮಹೇಶ್ ಕೋ-ಆಪರೇಟಿವ್ ಬ್ಯಾಂಕ್ಗೆ ಈಗ 65 ಲಕ್ಷ ರೂಪಾಯಿಗಳ ವಿತ್ತೀಯ ದಂಡ ಪಾವತಿ ಮಾಡಬೇಕಿದೆ.
12.28 ಕೋಟಿ ಆನ್ಲೈನ್ ದರೋಡೆ: ಎಷ್ಟೇ ಭದ್ರತಾ ವ್ಯವಸ್ಥೆ ಇದ್ದರೂ ಸಹ ಆನ್ಲೈನ್ ವಂಚನೆ ಸರಾಗವಾಗಿ ನಡೆಯುವ ಈ ಕಾಲದಲ್ಲಿ ಈ ಬ್ಯಾಂಕ್ ವಿಶೇಷ ಭದ್ರತಾ ಮಾರ್ಗಗಳನ್ನು ಅನುಸರಿಸಲು ವಿಫಲವಾದದ್ದಕ್ಕೆ ಸ್ಕ್ಯಾಮರ್ಗಳು ದೊಡ್ಡ ಮೊತ್ತದ ಈ ಹಣವನ್ನು ದರೋಡೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ. ಅಂದರೆ ಜನವರಿ 24, 2022 ರಂದು ಈ ಘಟನೆ ನಡೆದಿದ್ದು, ಇದರಲ್ಲಿ ಹ್ಯಾಕರ್ ಬ್ಯಾಂಕಿನ ವ್ಯವಸ್ಥೆಗಳಿಗೆ ನುಗ್ಗಿ ಬ್ಯಾಂಕಿನ ಸಿಬ್ಬಂದಿಗೆ ಫಿಶಿಂಗ್ ಇಮೇಲ್ಗಳ ಸರಣಿಯನ್ನು ಕಳುಹಿಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಅಂದರೆ ಮಾಲ್ವೇರ್ನೊಂದಿಗಿನ ಈ ಇಮೇಲ್ಗಳನ್ನು ಜಾಣತನದಿಂದ ಮರೆಮಾಚಿ ಬ್ಯಾಂಕ್ ಉದ್ಯೋಗಿಗಳಿಗೆ ಕಳುಹಿಸಲಾಗಿದ್ದು, ಉದ್ಯೋಗಿಗಳು ಈ ದುರುದ್ದೇಶಪೂರಿತ ಇಮೇಲ್ಗಳನ್ನು ಓಪನ್ ಮಾಡಿದ್ದಾರೆ. ಬಳಿಕ ಸೈಬರ್ ಅಪರಾಧಿಗಳು ಬ್ಯಾಂಕಿನ ವ್ಯವಸ್ಥೆಗಳಿಗೆ ಸಂಪೂರ್ಣ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಈ ಘಟನೆ ಸಂಬಂಧ ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ತನಿಖೆಯಿಂದ ತಿಳಿದುಬಂದ ಸಂಗತಿ ಏನು?: ಸೈಬರ್ ಭದ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಬ್ಯಾಂಕ್ನ ನಿರ್ಲಕ್ಷ್ಯವನ್ನು ಪೊಲೀಸ್ ತನಿಖೆಯು ಬಹಿರಂಗಪಡಿಸಿದೆ. ಈ ಲೋಪಗಳು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಅವರು ಆರ್ಬಿಐ ಗವರ್ನರ್ಗೆ ಪತ್ರ ಬರೆದು ನಿರ್ಣಾಯಕ ಭದ್ರತಾ ಲೋಪಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೆ ಬ್ಯಾಂಕಿನ ಪರವಾನಗಿಯನ್ನು ಅಮಾನತುಗೊಳಿಸುವಂತೆಯೂ ಮನವಿ ಮಾಡಿದ್ದಾರೆ.

ಆರ್ಬಿಐ ಮಾರ್ಗಸೂಚಿಯಲ್ಲೇನಿದೆ?: ಆರ್ಬಿಐ ಎಲ್ಲಾ ಬ್ಯಾಂಕ್ಗಳಿಗೂ ಮಾರ್ಗಸೂಚಿ ನೀಡುತ್ತದೆ. ಅದರ ಪ್ರಕಾರವೇ ಬ್ಯಾಂಕ್ ವ್ಯವಹಾರ ನಡೆಸಬೇಕು. ಇಲ್ಲವಾದರೆ ಅದು ಬ್ಯಾಂಕ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತದೆ. ಅದರಂತೆ ಬ್ಯಾಂಕ್ಗಳು ಫಿಶಿಂಗ್ ವಿರೋಧಿ ಆಪ್, ಒಳನುಗ್ಗುವಿಕೆ ತಡೆಗಟ್ಟುವಿಕೆ ಮತ್ತು ಪತ್ತೆ ವ್ಯವಸ್ಥೆಗಳನ್ನು ಹೊಂದಿರಬೇಕು. ನೈಜ-ಸಮಯದ ಬೆದರಿಕೆ ರಕ್ಷಣೆ ಮತ್ತು ನಿರ್ವಹಣಾ ವ್ಯವಸ್ಥೆಗಳಂತಹ ಭದ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆದರೆ ಈ ಬ್ಯಾಂಕ್ ಇದ್ಯಾವುದನ್ನು ಮಾಡಿರಲಿಲ್ಲ.
ಬ್ಯಾಂಕ್ನಲ್ಲಿ ಇರಿಸುವ ಹಣ ಎಷ್ಟು ಸೇಫ್?: ಇನ್ನು ಬ್ಯಾಂಕಿನಲ್ಲಿ ನಾವು ನೀವೆಲ್ಲಾ ಇರಿಸುವ ಹಣದ ಸುರಕ್ಷತೆಯು ಹೆಚ್ಚಾಗಿ ಅಧಿಕಾರ ವ್ಯಾಪ್ತಿ ಮತ್ತು ನಿರ್ದಿಷ್ಟ ನಿಯಮಗಳು ಮತ್ತು ರಕ್ಷಣೆಗಳನ್ನು ಅವಲಂಬಿಸಿರುತ್ತದೆ. ಅದರಲ್ಲೂ ಹೆಚ್ಚಿನ ದೇಶಗಳು ನಿಯಂತ್ರಕ ಸಂಸ್ಥೆಗಳನ್ನು ಹೊಂದಿವೆ. ಅದರಂತೆ ಆರ್ಬಿಐ ಸಾಮಾನ್ಯ ಬ್ಯಾಂಕುಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವುಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಠೇವಣಿದಾರರನ್ನು ರಕ್ಷಿಸಲು ನಿಯಮಗಳನ್ನು ಜಾರಿಗೊಳಿಸುತ್ತದೆ.
ಅದರಲ್ಲೂ ಆರ್ಬಿಐ ಬ್ಯಾಂಕ್ಗಳಿಗೆ ವಿವೇಕದ ಮಾನದಂಡಗಳು ಮತ್ತು ಅಪಾಯ ನಿರ್ವಹಣೆ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಇದು ಕ್ರೆಡಿಟ್ ಅಪಾಯ, ದ್ರವ್ಯತೆ ಅಪಾಯ ಮತ್ತು ಕಾರ್ಯಾಚರಣೆಯ ಅಪಾಯವನ್ನು ನಿಯಂತ್ರಿಸುವ ಕ್ರಮಗಳನ್ನು ಹೊಂದಿದೆ. ಈ ಮೂಲಕ ಬ್ಯಾಂಕುಗಳು ವಿವೇಕಯುತ ಸಾಲ ನೀಡುವ ಅಭ್ಯಾಸಗಳನ್ನು ಸಹ ಅಳವಡಿಸಿಕೊಳ್ಳುತ್ತವೆ. ಈ ಮೂಲಕ ಬ್ಯಾಂಕ್ನಲ್ಲಿ ಏನೇ ಸಂಭವಿಸಿದರೂ ಸಹ ಗ್ರಾಹಕರು ಯಾವುದೇ ಉಳಿತಾಯ ಹಣದ ಬಗ್ಗೆ ಚಿಂತಿಸುವ ಅಗತ್ಯ ಇರುವುದಿಲ್ಲ.


Click it and Unblock the Notifications








