ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
ಸಾಧಕರು ನಮ್ಮ ನಡುವೆಯೇ ಇರುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನ. ನಾವು ದಿನನಿತ್ಯ ಬಳಕೆ ಮಾಡುವ ಸ್ಮಾರ್ಟ್ ಡಿವೈಸ್ಗಳಲ್ಲಿ ಆಪ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಬೇಕಾದ ವಿಷಯಕ್ಕೆ ತಕ್ಕಂತೆ ಹಲವಾರು ಆಪ್ಗಳು ಲಭ್ಯ. ಆದರೆ, ಈ ಆಪ್ಗಳನ್ನು ಪ್ರಮುಖವಾಗಿ ಟೆಕ್ ಬಗ್ಗೆ ಮಾಹಿತಿ ಇರುವವರು ಅಭಿವೃದ್ಧಿಪಡಿಸುವುದು ಸಾಮಾನ್ಯ. ಆದರೆ ಬೆಂಗಳೂರಿನ ಬಾಲಕ ಪ್ರಮುಖ ಆಂಡ್ರಾಯ್ಡ್ ಆಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಇಡೀ ದೇಶವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದೆ.

ಹೌದು, ರಿಷಿ ಶಿವ ಪ್ರಸನ್ನ ಎಂಬ ಎಂಟು ವರ್ಷದ ಪೋರ ಪ್ರತಷ್ಠಿತ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೊಬೈಲ್ ಆಪ್ ಡೆವಲಪರ್ ಆಗಿರುವ ಇವರು ಇದಿಷ್ಟೇ ಅಲ್ಲದೆ, ಲೇಖಕರಾಗಿಯೂ ಹೆಸರು ಮಾಡಿದ್ದಾರೆ. ಪ್ರಮುಖ ವಿಷಯ ಎಂದರೆ ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ಸ್ಟೈನ್ಗಿಂತ ಹೆಚ್ಚಿನ ಐಕ್ಯೂ ಹೊಂದಿರುವ ಬಾಲಕ ಎನ್ನಲಾಗಿದೆ. ಹಾಗಿದ್ರೆ, ಈ ಬಾಲಕ ಅಭಿವೃದ್ಧಿ ಪಡಿಸಿರುವ ಆಪ್ಗಳಾವುವು?, ಈ ಬಾಲಕ ಯಾರ ಮಗ, ಮೂಲತಃ ಈ ಕುಟುಂಬ ಎಲ್ಲಿಯದು ಎಂಬ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪರ್ ರಿಷಿ ಶಿವ ಪ್ರಸನ್ನ
ಬೆಂಗಳೂರಿನ ರಿಷಿ ಶಿವ ಪ್ರಸನ್ನ ಈವರೆಗೂ ಯಾರಿಗೂ ಸಾಮಾನ್ಯವಾಗಿ ತಿಳಿದಿರಲಿಲ್ಲ. ಆದರೆ, ಭಾರತ ಸರ್ಕಾರದ ವತಿಯಿಂದ ಈತನ ಸಾಧನೆಯನ್ನು ಗುರುತಿಸಿದ ಹಿನ್ನೆಲೆ ಎಲ್ಲಾ ಕಡೆ ಇವನ ಬಗ್ಗೆ ಚರ್ಚೆಯಾಗುತ್ತಿದೆ. ಆಂಡ್ರಾಯ್ಡ್ ಅಪ್ಲಿಕೇಶನ್ ಡೆವಲಪರ್ ಆಗಿರುವ ಈತ, ಪ್ರತಿಷ್ಠಿತ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಗೆ ಭಾಜನವಾಗಿದ್ದಾನೆ.
ಐನ್ಸ್ಟೈನ್ಗಿಂತಲೂ ಹೆಚ್ಚಿನ ಐಕ್ಯೂ
ರಿಷಿ ಶಿವ ಪ್ರಸನ್ನ ಶ್ರೇಷ್ಠ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಆಲ್ಬರ್ಟ್ ಐನ್ಸ್ಟೈನ್ಗಿಂತ ಹೆಚ್ಚಿನ ಐಕ್ಯೂ ಹೊಂದಿದ್ದಾನೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಅಂದರೆ ರಿಷಿ ಶಿವ ಪ್ರಸನ್ನನ ಐಕ್ಯು ಮಟ್ಟ 180 ಇದ್ದು, ಐನ್ಸ್ಟೈನ್ ಐಕ್ಯು 160 ಇತ್ತು. ಈ ಮೂಲಕ ಐನ್ಸ್ಟೈನ್ ಗಿಂತ ಹೆಚ್ಚಿನ ಬುದ್ಧಿ ಈ ಬಾಲಕನಿಗೆ ಇದೆ. ಸಾಮಾನ್ಯವಾಗಿ 130ಕ್ಕಿಂತ ಹೆಚ್ಚು ಐಕ್ಯು ಇರುವವರನ್ನು ಹೆಚ್ಚು ಬುದ್ಧಿವಂತರೆಂದು ಗುರುತಿಸಲಾಗುತ್ತದೆ.

ಯಾವೆಲ್ಲಾ ಆಪ್ ಅಭಿವೃದ್ಧಿಪಡಿಸಿದ್ದಾನೆ?
ರಿಷಿ ಈವರೆಗೆ ಮೂರು ಮೊಬೈಲ್ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಿದ್ದು, ಐಕ್ಯು ಟೆಸ್ಟ್ ಆ್ಯಪ್, ಕಂಟ್ರೀಸ್ ಆಫ್ ದಿ ವರ್ಲ್ಡ್, ಕೋವಿಡ್ ಹೆಲ್ಪ್ಲೈನ್ ಬೆಂಗಳೂರು ಆಪ್ಗಳು ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲ ಕಲ್ಪಿಸಿವೆ. ಇದೆಲ್ಲದರ ನಡುವೆ ಈತ ಉತ್ತಮ ಯೂಟ್ಯೂಬರ್ ಆಗಿಯೂ ಗುರುತಿಸಿಕೊಂಡಿದ್ದಾನೆ. ಈ ಮೂಲಕ ವಿಜ್ಞಾನಕ್ಕೆ ಸಂಬಂಧಿಸಿದ ಶೈಕ್ಷಣಿಕ ವಿಡಿಯೋಗಳನ್ನು ಈತ ಪೋಸ್ಟ್ ಮಾಡುತ್ತಿರುತ್ತಾನೆ.
ರಿಷಿ ಕುಟುಂಬ ಮೂಲತಃ ನಂಜನಗೂಡಿನವರು
ಇನ್ನು ಮೈಸೂರು ಜಿಲ್ಲೆಯ ನಂಜನಗೂಡು ಮೂಲದವರಾದ ರಿಷಿ ಪ್ರಸ್ತುತ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ತಂದೆ ಪ್ರಸನ್ನಕುಮಾರ್ ಎಂ ಮತ್ತು ರೇಚೇಶ್ವರಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಪ್ರಸನ್ನ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ರೇಚೇಶ್ವರಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ನನಗೆ ತುಂಬಾ ಖುಷಿ. ನಾನು ಅಭಿವೃದ್ಧಿಪಡಿಸಿದ ಆಪ್ಗಳು ಮತ್ತು ಅವುಗಳ ಉಪಯೋಗಗಳ ಬಗ್ಗೆ ಪ್ರಧಾನ ಮಂತ್ರಿ ನನ್ನನ್ನು ಕೇಳಿದ್ದಾರೆ. ನಾನು ಅವರಿಗೆ ಆಪ್ಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ ಹಾಗೆಯೇ ನನ್ನ ಆಲೋಚನೆಗಳು ಮತ್ತು ನಾವೀನ್ಯತೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಅವರ ಸಹಾಯವನ್ನು ಕೇಳಿದ್ದೇವೆ ಎಂದು ಬಾಲಕ ತಿಳಿಸಿದ್ದಾನೆ.


Click it and Unblock the Notifications








