ನಮ್ಮ ಪಕ್ಕದ ರಾಜ್ಯದಲ್ಲಿ ವಿದ್ಯಾರ್ಥಿಗಳಿಗಷ್ಟೇ ಅಲ್ಲಾ ಶಿಕ್ಷಕರಿಗೂ ಸ್ಮಾರ್ಟ್ಫೋನ್ ನಿಷೇಧ! ಅದ್ಯಾಕೆ ಅಂತೀರಾ?
ಸ್ಮಾರ್ಟ್ಫೋನ್ಗಳು (Smartphone) ಅಥವಾ ಇನ್ನಿತರೆ ಸ್ಮಾರ್ಟ್ಡಿವೈಸ್ಗಳು ಎಲ್ಲಾ ರೀತಿಯಲ್ಲೂ ಬಳಕೆದಾರರಿಗೆ ಅನುಕೂಲವಾಗಿದೆ. ಈ ನಡುವೆ ವಿದ್ಯಾರ್ಥಿಗಳಿಗಂತೂ ಇವು ಅತ್ಯಾನುಕೂಲ. ಆದರೆ ಈ ವೇಳೆ ಕೆಲವು ವಿದ್ಯಾರ್ಥಿಗಳು ದುರುಪಯೋಗ ಮಾಡಿಕೊಳ್ಳುವುದುಂಟು. ಆದರೆ, ಈ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ (Teacher) ಸ್ಮಾರ್ಟ್ಫೋನ್ ಬಳಕೆ ನಿಷೇದ ಮಾಡಲಾಗಿದೆ.
ಹೌದು, ಸ್ಮಾರ್ಟ್ಫೋನ್ ಬಳಕೆ ಒಳ್ಳೆಯದೇ ಆದರೆ ಅದನ್ನು ಉತ್ತಮವಾಗಿ ಬಳಕೆ ಮಾಡಿದರೆ ಮಾತ್ರ. ಅದರಲ್ಲೂ ದೇಶ ಕಟ್ಟುವ ವಿದ್ಯಾರ್ಥಿಗಳು ಸದಾ ಸ್ಮಾರ್ಟ್ಫೋನ್ಲೋಕದಲ್ಲಿ ತೇಲುತ್ತಿದ್ದರೆ ದೇಶಕ್ಕೂ ಸಮಸ್ಯೆ, ಪೋಷಕರ ಆಸೆಗೂ ತಣ್ಣಿರು. ಈ ಕಾರಣ ಅಷ್ಟೇ ಅಲ್ಲದೆ ಕೆಲವು ಗಂಭೀರ ವಿಷಯಗಳನ್ನು ಮುಂದಿಟ್ಟುಕೊಂಡು ಈ ರಾಜ್ಯದಲ್ಲಿ ಸರ್ಕಾರವು ಮೊಬೈಲ್ ಫೋನ್ ಬಳಕೆಯನ್ನು ನಿರ್ಬಂಧಿಸಲು ಕರೆ ನೀಡಿದೆ. ಹಾಗಿದ್ರೆ, ಯಾವ ರಾಜ್ಯದಲ್ಲಿ ಈ ನಿರ್ಧಾರ ಮಾಡಲಾಗಿದೆ?, ಇದಕ್ಕೆ ಸರ್ಕಾರ ನೀಡಿರುವ ಕಾರಣಗಳು ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಶಾಲೆಗಳಿಗೆ ಸ್ಮಾರ್ಟ್ಫೋನ್ ತರುವಂತಿಲ್ಲ: ಸಾಮಾನ್ಯವಾಗಿ ದೇಶದ ಎಲ್ಲಾ ಶಾಲೆಗಳಲ್ಲೂ ಸಹ ಸ್ಮಾರ್ಟ್ಫೋನ್ಗಳಿಗೆ ನಿರ್ಬಂಧ ಇದೆ. ಆದರೆ ಆಂಧ್ರಪ್ರದೇಶ (Andhra Pradesh) ಮಾತ್ರ ವಿಶೇಷವಾದ ನಿರ್ಧಾರವೊಂದನ್ನು ಮಾಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಆಯುಕ್ತ ಎಸ್ ಸುರೇಶ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ವಿದ್ಯಾರ್ಥಿಗಳು ತರಗತಿಯೊಳಗೆ ಸೆಲ್ಫೋನ್ಗಳನ್ನು ತರುವಂತಿಲ್ಲ. ಜೊತೆಗೆ ತರಗತಿಯ ಸಮಯದಲ್ಲಿ ಶಿಕ್ಷಕರು ಅವುಗಳನ್ನು ಬಳಕೆ ಸಹ ಮಾಡುವ ಹಾಗಿಲ್ಲ ಎಂದು ಆದೇಶ ನೀಡಲಾಗಿದೆ.
ಶಿಕ್ಷಕರು ತರಗತಿಗಳಿಗೆ ಹೋಗುವ ಮುನ್ನವೇ ತಮ್ಮ ಸೆಲ್ಫೋನ್ಗಳನ್ನು ಮುಖ್ಯೋಪಾಧ್ಯಾಯರು ಅಥವಾ ಮುಖ್ಯೋಪಾಧ್ಯಾಯಿನಿಯರಿಗೆ (HM) ನೀಡಬೇಕು. ಅದಾಗ್ಯೂ ಶೈಕ್ಷಣಿಕ ಅನುಕೂಲಕ್ಕೆ ಫೋನ್ ಬಳಕೆ ಮಾಡಬೇಕು ಎಂದಾದರೂ ಸಹ ಬೋಧನಾ ಸಮಯದ ಮೊದಲು ಅಥವಾ ನಂತರ ಫೋನ್ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಭೋಧನೆ ಮಾಡುವಾಗ ಫೋನ್ ಬಳಕೆ ಮಾಡಬಾರದು ಎಂದು ಶಿಕ್ಷಕರಿಗೆ ತಾಕೀತು ಮಾಡಲಾಗಿದೆ.
ಇನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಜಾಗತಿಕ ಶಿಕ್ಷಣ ಮೇಲ್ವಿಚಾರಣಾ ವರದಿಯ ಆಧಾರದ ಮೇಲೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚಿನ 2023 ರ ವರದಿಯಲ್ಲಿ ಉಲ್ಲೇಖ ಮಾಡಿರುವಂತೆ, ಸ್ಮಾರ್ಟ್ಫೋನ್ಗಳು ಸೇರಿದಂತೆ ಇತರೆ ತಂತ್ರಜ್ಞಾನವನ್ನು ಕಲಿಕೆಯ ಫಲಿತಾಂಶಕ್ಕೆ ಅನುಗುಣವಾಗಿ ಮಾತ್ರ ತರಗತಿಯಲ್ಲಿ ಬಳಸಬೇಕು ಎಂದು ತಿಳಿಸಿದೆ.
ವಿಷಯ ಏನೆಂದರೆ ಈ ಮೊದಲು ತರಗತಿಯಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ನಿಲ್ಲಿಸುವಂತೆ ಶಿಕ್ಷಕರಿಗೆ ತಿಳಿಸಲಾಗಿದ್ದರೂ ಸಹ ಅದನ್ನು ಶಿಕ್ಷಕರು ಪಾಲನೆ ಮಾಡುತ್ತಿಲ್ಲ. ಮೊಬೈಲ್ ಫೋನ್ ಕೆಲವು ಶಿಕ್ಷಕರ ತರಗತಿ ಟೈಮ್ ಅನ್ನು ಪಾಸ್ ಮಾಡುವ ಏಕೈಕ ಎಲೆಕ್ಟ್ರಾನಿಕ್ ಗ್ಯಾಜೆಟ್ ಆಗಿ ಕಾಣಿಸಿಕೊಂಡಿದೆ. ಅನೇಕ ಶಿಕ್ಷಕರು ತಮ್ಮ ವೈಯಕ್ತಿಕ ಬಳಕೆಗಾಗಿ ಬೋಧನಾ ಸಮಯದಲ್ಲಿ ತರಗತಿಗಳಿಗೆ ಮೊಬೈಲ್ ಫೋನ್ಗಳನ್ನು ತೆಗೆದುಕೊಂಡು ಹೋಗುತ್ತಾರೆ, ಬದಲಾಗಿ ಯಾವುದೇ ವೃತ್ತಿಪರ ಅಗತ್ಯಕ್ಕಾಗಿ ಅಲ್ಲ ಎಂದು ಸರ್ಕಾರ ಒತ್ತಿ ಹೇಳಿದೆ.
ಆಗಸ್ಟ್ 3 ರಂದು ರಾಜ್ಯ ಶಿಕ್ಷಣ ಸಚಿವ ಬೋತ್ಸಾ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನೂ ಸಹ ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಫೋನ್ಗಳ ಋಣಾತ್ಮಕ ಪರಿಣಾಮದಿಂದಾಗಿ ತರಗತಿಗಳಲ್ಲಿ ಫೋನ್ ಬಳಕೆಯನ್ನು ನಿರ್ಬಂಧಿಸುವುದು ಶಿಕ್ಷಕರು, ಒಕ್ಕೂಟದ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರ ಸಾಮಾನ್ಯ ಒಮ್ಮತವಾಗಿದೆ. ಇದರಿಂದಾಗಿ ಉತ್ತಮ ಕಲಿಕೆ ಸಾಧ್ಯ ಎಂದು ತಿಳಿಸಲಾಗಿದೆ.
ಇಷ್ಟೇ ಅಲ್ಲದೆ ಸ್ಮಾರ್ಟ್ಫೋನ್ಗಳ ಬಳಕೆಯು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಮಾತ್ರವಲ್ಲದೆ ಯೋಗಕ್ಷೇಮ, ಸೈಬರ್ಬುಲ್ಲಿಂಗ್ ಮತ್ತು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ತರಗತಿಯ ಡೈನಾಮಿಕ್ಸ್ನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸರ್ಕಾರ ಕಳವಳ ಹೊರಹಾಕಿದೆ. ಆದ್ದರಿಂದ ಶಿಕ್ಷಕರು ತರಗತಿಗೆ ಹೋಗುವ ಮುನ್ನ ಶಾಲೆಯ ಎಚ್ಎಂ ಬಳಿ ತಮ್ಮ ಫೋನ್ಗಳನ್ನು ಕೊಟ್ಟು ಹೋಗಬೇಕು ಎಂದು ತಿಳಿಸಲಾಗಿದೆ.
ಅದಾಗ್ಯೂ ಶಿಕ್ಷಕರು ಮೊಬೈಲ್ ಫೋನ್ ಅನ್ನು ಸೂಚನಾ ಉದ್ದೇಶಗಳಿಗಾಗಿ ಬಳಕೆ ಮಾಡಲು ಮುಂದಾದರೆ ಆ ಫೋನ್ ಅನ್ನು ಭೋದನಾ ವಿಚಾರಕ್ಕೆ ಸಂಬಂಧಿಸಿದಂತೆ ಹೇಗೆ ಬಳಕೆ ಮಾಡಲಾಗುತ್ತದೆ ಎಂಬುದನ್ನು ಮೊದಲೇ ಮುಖ್ಯೋಪಾಧ್ಯಾಯರಿಗೆ ತಿಳಿಸಿ ಅನುಮೋದನೆ ಪಡೆಯಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ.

ನಿಯಮ ಉಲ್ಲಂಘನೆಗೆ ಶಿಕ್ಷಕರಿಗೆ ಎಚ್ಚರಿಕೆ: ಇನ್ನು ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡದೆ ಇದ್ದರೆ ಮಾಡಿದ ಅಪರಾಧಗಳ ಬಗ್ಗೆ ಮಂಡಲ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ (MEO/DEO) ವಿವರಣೆಯನ್ನು ನೀಡಬೇಕು. ಇದರೊಂದಿಗೆ ವಿದ್ಯಾರ್ಥಿಗಳು ಏನಾದರೂ ಫೋನ್ ತಂದಿದ್ದರೆ ಅದನ್ನು ಸ್ಟಾಫ್ ರೂಮ್ನಲ್ಲಿ ಅಥವಾ ಶಾಲೆಯ ಯಾವುದೇ ಉದ್ಯೋಗಿಗೆ ನೀಡಿ ಕ್ಲಾಸ್ಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಜೊತೆಗೆ ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲು ಎಚ್ಎಂ ಅನುಮತಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








