Ayodhya Ram Mandir: ಅಯೋಧ್ಯೆಯ ಶ್ರೀರಾಮ ಮಂದಿರದ ಹೆಸರಲ್ಲೂ ವಂಚನೆ...
ಅಯೋಧ್ಯೆ (Ayodhya) ಈಗಂತೂ ಭಾರತೀಯರೆಲ್ಲರಲ್ಲೂ ಹರ್ಷ ಉಂಟು ಮಾಡುವ ಹೆಸರಾಗಿದೆ. ಯಾಕೆಂದರೆ ಅಯೋಧ್ಯೆಯ ರಾಮ ಮಂದಿರದಲ್ಲಿ(Ayodhya Ram Mandir) ಶ್ರೀರಾಮನ (Sri Rama) ಪ್ರಾಣ ಪ್ರತಿಷ್ಠಾಪನೆ ಶುಭ ಕಾರ್ಯ ಜರುಗಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾದು ಕುಳಿತಿದ್ದಾರೆ.
ಹೌದು, ಅಯೋಧ್ಯೆ ರಾಮ ಮಂದಿರ ಉದ್ಗಾಟನೆ ಹಾಗೂ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಅಮೂಲ್ಯ ಕ್ಷಣವನ್ನು ನೇರವಾಗಿ ಅಥವಾ ಇತರೆ ರೀತಿಯಲ್ಲಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತುರರಾಗಿದ್ದಾರೆ. ಅಂದರೆ 2024 ರ ಜನವರಿ 16 ರಿಂದ ಅಯೋಧ್ಯೆಯ ರಾಮ ಮಂದಿರದಲ್ಲಿ ಕಾರ್ಯಕ್ರಮಗಳು ಜರುಗಲಿದೆ. ಈ ಶುಭ ಕಾರ್ಯದ ಸಂದರ್ಭದಲ್ಲಿ ಅಶುಭವಾದ ಕಾರ್ಯಗಳನ್ನೂ ಸಹ ಕೆಲವರು ಮಾಡುತ್ತಿದ್ದು, ಪರಿಣಾಮ ಭಕ್ತರು ಬೇಸರಪಡುವಂತೆ ಆಗಿದೆ. ಹಾಗಿದ್ರೆ, ಏನಿದು ವಂಚನೆ ಪ್ರಕರಣ?, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಶ್ರೀರಾಮನ ಭಕ್ತರಿಗೆ ಮೋಸ: ಜನವರಿ 16 ರಂದು ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದ್ದು, ಇದಕ್ಕೂ ಮೊದಲೇ ಸ್ಕ್ಯಾಮರ್ಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಅಂದರೆ ಹೊಸ ಆನ್ಲೈನ್ ಹಗರಣಕ್ಕೆ ಎಲ್ಲಾ ಕಡೆ ಬಲೆ ಬೀಸಿದ್ದಾರೆ. ದುರುದ್ದೇಶ ಹೊಂದಿರುವ ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರತಿನಿಧಿಗಳಾಗಿ ಬಿಂಬಿಸಿಕೊಳ್ಳ್ಳುತ್ತಿದ್ದು, ಕ್ಯೂಆರ್ ಕೋಡ್ (QR code) ಬಳಕೆ ಮಾಡಿಕೊಂಡು ದೇಣಿಗೆ ಕೇಳುತ್ತಿದ್ದಾರೆ.
ಈ ಕ್ಯೂಆರ್ ಕೋಡ್ ಮೂಲಕ ಈಗಾಗಲೇ ಸಾಕಷ್ಟು ಜನರು ಮೋಸ ಹೋಗಿದ್ದಾರೆ ಎನ್ನಲಾಗಿದೆ. ಹಾಗೆಯೇ ಬ್ಯಾಂಕ್ ಖಾತೆಯು ವಂಚಕ ಅಥವಾ ಇತರ ವ್ಯಕ್ತಿಗೆ ಲಿಂಕ್ ಆಗಿದ್ದು, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಈ ಹಗರಣದ ಬಗ್ಗೆ ಜನರಿಗೆ ಮಾಹಿತಿ ನೀಡಲು ಎಕ್ಸ್ ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿ ಮಾಡಿ ಹಣ ವಂಚಿಸಲು ಯತ್ನಿಸುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕೆಲಸಕ್ಕೆ ಹಣವನ್ನು ಸಂಗ್ರಹಿಸಲು ಯಾರಿಗೂ ಅಧಿಕಾರ ನೀಡಿಲ್ಲ ಎಂದು ಬರೆದಿದ್ದಾರೆ. ಜೊತೆಗೆ ಕ್ಯೂಆರ್ ಕೋಡ್ನ ಸ್ಕ್ರೀನ್ಶಾಟ್ಗಳನ್ನೂ ಹಂಚಿಕೊಂಡಿದ್ದಾರೆ.

ಇನ್ನು ರಾಮ ಮಂದಿರದ ಹೆಸರಿನಲ್ಲಿ ಮೋಸ ಮಾಡಲಾಗುತ್ತಿರುವ ಸ್ಕ್ಯಾಮರ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈಗಾಗಲೇ ದೂರು ಸಹ ನೀಡಲಾಗಿದೆ. ಅದಾಗ್ಯೂ ಈ ರೀತಿಯ ವಂಚನೆಗಳು ಬೇರೆ ಬೇರೆ ರೀತಿಯಲ್ಲಿ ಮುಖವಾಡ ಹಾಕಿಕೊಂಡು ಬರುತ್ತಲೇ ಇರುತ್ತವೆ. ಆದ ಕಾರಣ ಇಂತಹ ವಂಚನೆಗಳಿಂದ ನಿಮ್ಮನ್ನು ನೀವು ಪಾರುಮಾಡಿಕೊಳ್ಳಲು ಅದರಲ್ಲೂ ಕ್ಯೂಆರ್ ಕೋಡ್ನಿಂದ ಮೋಸ ಹೋಗುವುದನ್ನು ತಪ್ಪಿಸಲು ಈ ಮಾರ್ಗ ಅನುಸರಿಸಬಹುದಾಗಿದೆ.
- ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿಭಾಗಕ್ಕೂ ಸಹ ಕ್ಯೂಆರ್ ಕೋಡ್ ಬಳಕೆ ಮಾಡಲಾಗುತ್ತದೆ. ಅಂದರೆ ಕೇವಲ ಪಾವತಿ ವಿಚಾರಕ್ಕೆ ಅಷ್ಟೇ ಅಲ್ಲದೆ ಇತರೆ ವಿಚಾರಕ್ಕೂ ಸಹ ಈ ಕೋಡ್ ಬಳಕೆ ಆಗುತ್ತಿದ್ದು, ಸಿಕ್ಕ ಸಿಕ್ಕ ಕ್ಯೂಆರ್ ಕೋಡ್ಗಳನ್ನು ಯಾವುದೇ ಕಾರಣಕ್ಕೂ ಸ್ಕ್ಯಾನ್ ಮಾಡಲು ಮುಂದಾಗಬೇಡಿ. ಯಾಕೆಂದರೆ ಅವುಗಳು ದುರುದ್ದೇಶಪೂರಿತ ಲಿಂಕ್ಗಳಿಗೆ ಮರುನಿರ್ದೇಶಿಸಬಹುದು.
- ಅದರಲ್ಲೂ ಯಾವುದೇ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಮೊದಲು ಯುಪಿಐ ಐಡಿಯ ಮೂಲವನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಈ ವೇಳೆ ನೀವು ಖಾತೆದಾರರ ವಿವರಗಳನ್ನು ಕ್ರಾಸ್ ಚೆಕ್ ಮಾಡಿ ಅಥವಾ ಸೈಟ್ನಲ್ಲಿ ಒದಗಿಸಲಾದ ಸಂಪರ್ಕ ವಿವರಗಳ ಮೂಲಕ ಅಧಿಕೃತ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ನಂತರ ಅದಕ್ಕೆ ಹಣ ಹಾಕುವ ಕೆಲಸ ಮಾಡಿ.

- ಇನ್ನು ನೀವು ಯಾವುದೇ ನಕಲಿ ಅಥವಾ ದುರುದ್ದೇಶಪೂರಿತ ಕ್ಯೂಆರ್ ಕೋಡ್ಗಳನ್ನು ಗಮನಿಸಿದರೆ ತಕ್ಷಣವೇ ಸಾಮಾಜಿಕ ಮಾಧ್ಯಮ ವೆಬ್ಸೈಟ್ ಮತ್ತು ಸಂಬಂಧಪಟ್ಟ ಸೈಬರ್ ಅಧಿಕಾರಿಗಳಿಗೆ ವರದಿ ಮಾಡಿ. ಅದಾಗ್ಯೂ ಈಗಾಗಲೇ ಈ ರೀತಿಯ ಕ್ಯೂಆರ್ ಕೋಡ್ ವಂಚನೆಗೆ ಒಳಗಾಗಿದ್ದರೆ ಸೈಬರ್ ಕ್ರೈಮ್ ಪೋರ್ಟಲ್ನಲ್ಲಿ ದೂರು ಸಲ್ಲಿಸಿ. ಈ ರೀತಿ ಮಾಡುವುದರಿಂದ ಹೆಚ್ಚಾಗುತ್ತಿರುವ ಸೈಬರ್ ಅಫರಾಧಗಳಿಗೆ ಕೊಂಚ ಕಡಿವಾಣ ಹಾಕಬಹುದಾಗಿದೆ.


Click it and Unblock the Notifications








