ಪ್ರಾಣಿಗಳನ್ನು ದತ್ತು ಪಡೆಯುವುದು ಹೇಗೆ?.ಈ ಬಗ್ಗೆ ನಟ ದರ್ಶನ್ ನೀಡಿರುವ ಮಾಹಿತಿ ಇಲ್ಲಿದೆ!
ಕೋವಿಡ್ ಸಾಂಕ್ರಾಮಿಕ ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದು, ಜನರ ಜನಜೀವನಕ್ಕೆ ಭಾರೀ ಪೆಟ್ಟು ಕೊಟ್ಟಿದೆ. ಹಾಗೆಯೇ ಕೋವಿಡ್ ಪ್ರಾಣಿಗಳ ಪಾಲಿಗೂ ಕೆಟ್ಟ ಪರಿಣಾಮ ಉಂಟು ಮಾಡಿದೆ. ಏಕೆಂದರೇ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಇದರಿಂದಾಗಿ ಪ್ರಾಣಿ ಸಂಗ್ರಹಾಲಯ, ಮೃಗಾಲಯಗಳು/ಝೂ ಪ್ರವಾಸಿಗರಿಲ್ಲದೆ ಬಾಗಿಲು ಮುಚ್ಚಿವೆ. ಇದರಿಂದಾಗಿ ಮೃಗಾಲಯದಲ್ಲಿರುವ ಪ್ರಾಣಿಗಳ ನಿರ್ವಹಣೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ನಟ ದರ್ಶನ್ ಮೃಗಾಲಯದಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕೋರಿಕೊಂಡಿದ್ದಾರೆ.

ಕೋವಿಡ್ನಿಂದಾಗಿ ಲಾಕ್ಡೌನ್ ಜಾರಿ ಇರುವುದರಿಂದ ಮೃಗಾಲಯಗಳು ಬಂದ್ ಆಗಿವೆ. ಹೀಗಾಗಿ ಝೂಗಳಿಗೆ ಆದಾಯ ಬರುತ್ತಿಲ್ಲ. ಕರ್ನಾಟಕದಲ್ಲಿರುವ 9 ಝೂಗಳ ಪರಿಸ್ಥಿತಿಯು ಒಂದೇ ಆಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಝೂಗಳ ಪ್ರಾಣಿಗಳನ್ನು ದತ್ತು ಪಡೆಯಲು ಮುಂದಾಗಬೇಕು. ಇದರಿಂದ ಅಲ್ಲಿಯ ಪ್ರಾಣಿಗಳ ನಿರ್ವಹಣೆಗೆ ಮತ್ತು ಸಿಬ್ಬಂದಿಗಳಿಗೂ ನೆರವಾಗಲಿದೆ ಎಂದಿದ್ದಾರೆ.

ಅನೇಕರಿಗೆ ಪ್ರಾಣಿಗಳ ಮೇಲೆ ಪ್ರೀತಿ ಇರುತ್ತದೆ. ಆದರೆ ಎಲ್ಲರಿಗೂ ಇಷ್ಟದ ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಾಗುವುದಿಲ್ಲ. ಆದರೆ ಝೂಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ನಿರ್ವಹಣೆಗೆ ನೆರವಾಗಬಹುದು. ಲವ್ಬರ್ಡ್ಗೆ 1 ಸಾವಿರ, ಹುಲಿಗೆ 1 ಲಕ್ಷ ಮತ್ತು ಆನೆಗೆ 1.70 ಲಕ್ಷ ರೂಪಾಯಿ ನೀಡಿ ದತ್ತು ಪಡೆದರೆ ಒಂದು ವರ್ಷಗಳ ಕಾಲ ಅವುಗಳ ನಿರ್ವಹಣೆ ನಿಮ್ಮ ಹೆಸರಲ್ಲಾಗುತ್ತದೆ ಎಂದಿದ್ದಾರೆ.
ದತ್ತು ಪಡೆಯಲಿಚ್ಛಿಸುವವರು Zoos of Karnataka-ಝೂ ಆಫ್ ಕರ್ನಾಟಕ ಆಪ್ ಮೂಲಕ ಪ್ರಾಣಿಗಳನ್ನು ದತ್ತು ಪಡೆಯೋದನ್ನು ತಿಳಿಯಬಹುದು, ಇಲ್ಲವೇ ಹತ್ತಿರದ ಝೂಗೆ ಭೇಟಿ ನೀಡಿ ದತ್ತು ಪಡೆಯಬಹುದು. ಈ ಒಂದು ಉತ್ತಮ ಕಾರ್ಯಕ್ಕೆ ಕೈ ಜೋಡಿಸಿ ಎಂದು ನಟ ದರ್ಶನ್ ಕೋರಿದ್ದಾರೆ. ಹಾಗಾದರೇ ಝೂ ಆಫ್ ಕರ್ನಾಟಕ ಆಪ್ ಮೂಲಕ ಪ್ರಾಣಿಗಳನ್ನು ದತ್ತು ಪಡೆಯುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಝೂ ಆಫ್ ಕರ್ನಾಟಕ ಆಪ್
ಈ ಅಪ್ಲಿಕೇಶನ್ ಕರ್ನಾಟಕದ ಮೃಗಾಲಯಗಳಿಗೆ ದೇಣಿಗೆ ನೀಡಲು ಮತ್ತು ಪ್ರಾಣಿಗಳನ್ನು ದತ್ತು ಪಡೆಯಲು ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮ ನೆಚ್ಚಿನ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಕಾಡು ಪ್ರಾಣಿಗಳಿಗೆ ಬೆಂಬಲ ಮತ್ತು ಕಾಳಜಿಯನ್ನು ತೋರಿಸಲು ಇದು ಸಹಾಯ ಮಾಡುತ್ತದೆ. ಇದು ಮೃಗಾಲಯಗಳ ನಿರ್ವಹಣೆಗೆ ಸಹಕರಿಸುತ್ತದೆ.
ಈ ಆಪ್ನ ಪ್ರಮುಖ ಫೀಚರ್ಸ್:
- ನಿಮ್ಮ ನೆಚ್ಚಿನ ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಕಾಡು ಪ್ರಾಣಿಗಳಿಗೆ ನಿಮ್ಮ ಬೆಂಬಲ ಮತ್ತು ಕಾಳಜಿಯನ್ನು ತೋರಿಸಿ
- ದಾನ ಮಾಡುವ ಮೂಲಕ ಮೃಗಾಲಯದ ನಿರ್ವಹಣೆಗೆ ಕೊಡುಗೆ ನೀಡಿ
- ನಿಮ್ಮ ದತ್ತು ಮತ್ತು ದೇಣಿಗೆಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.


Click it and Unblock the Notifications