ಪ್ರಗ್ಯಾನ್ ರೋವರ್ನ ಮೊದಲ ಫೋಟೋ ಇದು, ಕೇವಲ 14 ದಿನಗಳು ಮಾತ್ರ ಯಾಕೆ ಕಾರ್ಯಾಚರಣೆ?
ಇಡೀ ಜಗತ್ತೇ ಕುತೂಹಲದಿಂದ ನೋಡುತ್ತಿದ್ದ ಚಂದ್ರಯಾನ 3 (Chandrayaan 3) ಯಶಸ್ವಿಯಾಗಿದೆ. ಈ ನಡುವೆ ದೇಶ ಸಂಭ್ರಮಪಟ್ಟಿದ್ದು, ಇಸ್ರೋಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಪ್ರಗ್ಯಾನ್ ರೋವರ್ ರಾಂಪ್ನಿಂದ ಹೊರಬರುತ್ತಿರುವ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಬಹಳ ಸದ್ದು ಮಾಡುತ್ತಿದೆ.
ಹೌದು, ಆಗಸ್ಟ್ 23 ರಂದು ಅಂದರೆ ನಿನ್ನೆ ಭೂಮಿಯ ಮೇಲೆ ಸಂಜೆಯಾಗಿತ್ತು, ಆದರೆ ಚಂದ್ರನ ಮೇಲೆ ಸೂರ್ಯ ಉದಯಿಸುತ್ತಿದ್ದ. ಈ ಮೂಲಕ ಭಾರತದ ಚಂದ್ರಯಾನವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಜೆ 6.04 ಕ್ಕೆ ಇಳಿದಿದ್ದು, ಇಡೀ ದೇಶವೇ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಈ ಮೂಲಕ ಚಂದ್ರನ ಅತ್ಯಂತ ಕಠಿಣ ಭಾಗದಲ್ಲಿ ಇಳಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಕೇಂದ್ರದ (ISRO) ಮಿಷನ್ ಈಗ ಯಶಸ್ವಿಯಾಗಿದ್ದು, ಇದು ಇಸ್ರೋದ ಮೂರನೇ ಪ್ರಯತ್ನವಾಗಿತ್ತು. ಅಂದರೆ 2008 ರಲ್ಲಿ ಚಂದ್ರಯಾನ-1 ಚಂದ್ರನ ಮೇಲೆ ನೀರನ್ನು ಪತ್ತೆ ಮಾಡಿತ್ತು. 2019 ರಲ್ಲಿ ಚಂದ್ರಯಾನ-2 ಚಂದ್ರನನ್ನು ಸಮೀಪಿಸಿ ವಿಫಲವಾಯ್ತು. ಆದರೆ, ಈಗ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಿದಿದ್ದು, ಕಾರ್ಯಾಚರಣೆ ಆರಂಭಿಸಿದೆ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಗುರುವಾರ ಸುಮಾರು 7 ಕೋಟಿ ಜನರು ಇಸ್ರೋದ ಯೂಟ್ಯೂಬ್ ಚಾನೆಲ್ನಲ್ಲಿ ಲ್ಯಾಂಡಿಂಗ್ನ ಪ್ರಸಾರವನ್ನು ವೀಕ್ಷಣೆ ಮಾಡಿದ್ದಾರೆ.
ಇದೀಗ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ನಿಂದ (Vikram Lander) ಪ್ರಗ್ಯಾನ್ ರೋವರ್ (Pragyan Rover) ಹೊರಬಂದಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಟ್ಟ 14 ಗಂಟೆಗಳ ನಂತರ ಇಂದು ಬೆಳಗ್ಗೆ 8:31 ಕ್ಕೆ ಇಸ್ರೋ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅಂದರೆ ವಿಕ್ರಮ್ನ ಪ್ರಗ್ಯಾನ್ ಚಿತ್ರವನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದು, ನಾನು ಇಲ್ಲಿ ಸೇಫ್ ಆಗಿ ಕೆಲಸ ಆರಂಭಿಸಲು ಸಜ್ಜಾಗಿದ್ದೇನೆ ಎಂಬ ಸುಳಿವು ಕೊಟ್ಟಿದೆ.
ಇಸ್ರೋ ನಿರ್ದೇಶಕ ಎಸ್. ಸೋಮನಾಥ್ (S. Somanath) ಈ ಸಂಬಂಧ ಈ ಹಿಂದೆ ಮಾಹಿತಿ ನೀಡಿದ್ದು, ಮುಂದಿನ 14 ದಿನಗಳು ನಮಗೆ ಬಹಳ ಮುಖ್ಯವಾಗಿದೆ. ಪ್ರಗ್ಯಾನ್ ರೋವರ್ ಹೊರಬರಲು ಒಂದು ದಿನ ತೆಗೆದುಕೊಳ್ಳಬಹುದು. ಪ್ರಗ್ಯಾನ್ ಚಂದ್ರನ ವಾತಾವರಣದ ಬಗ್ಗೆ ನಮಗೆ ಮಾಹಿತಿ ನೀಡಲಿದೆ. ನಾವು ಈ ಸಂಬಂಧ ಹಲವಾರು ಮಿಷನ್ಗಳನ್ನು ಜೋಡಿಸಿದ್ದೇವೆ. ಆದಿತ್ಯ L-1 ಅನ್ನು ಶೀಘ್ರದಲ್ಲೇ ಸೂರ್ಯನಿಗೆ ಕಳುಹಿಸಲಾಗುವುದು. ಗಗನ್ಯಾನ್ ಕೂಡ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಈ ಬಾರಿ ಲ್ಯಾಂಡರ್ನಲ್ಲಿ 5 ಇಂಜಿನ್ ಬದಲಿಗೆ 4 ಎಂಜಿನ್!
ಈ ಚಂದ್ರಯಾನ ವಿಷಯದಲ್ಲಿ ಗಮನಿಸಬೇಕಾದ ಪ್ರಮುಖ ಮಾಹಿತಿ ಏನೆಂದರೆ ಲ್ಯಾಂಡರ್ನ ನಾಲ್ಕು ಮೂಲೆಗಳಲ್ಲಿ ನಾಲ್ಕು ಎಂಜಿನ್ಗಳನ್ನು (ಥ್ರಸ್ಟರ್ಗಳು) ಇನ್ಸ್ಟಾಲ್ ಮಾಡಲಾಗಿತ್ತು. ಆದರೆ, ಕಳೆದ ಬಾರಿ ಚಂದ್ರಯಾನ-2 ಕ್ಕೆ ಐದು ಇಂಜಿನ್ ಆಯ್ಕೆ ನೀಡಲಾಗಿತ್ತು. ಅವುಗಳಲ್ಲಿ ಎರಡು ಇಂಜಿನ್ಗಳ ಸಹಾಯದಿಂದ ಅಂತಿಮ ಲ್ಯಾಂಡಿಂಗ್ ಪ್ರಕ್ರಿಯೆ ಮಾಡಲಾಗಿದ್ದರೆ. ತುರ್ತು ಕಾರ್ಯಾಚರಣೆಗಾಗಿ ಎರಡು ಎಂಜಿನ್ಗಳನ್ನು ಬಳಕೆ ಮಾಡಲಾಗಿತ್ತು. ಜೊತೆಗೆ ಕೊನೆಯ ಕ್ಷಣದಲ್ಲಿ ಐದನೇ ಎಂಜಿನ್ ಅನ್ನು ಬಳಕೆ ಮಾಡಲಾಗಿತ್ತು. ಆದರೆ, ಈ ಬಾರಿ ಐದನೇ ಇಂಜಿನ್ ಆಲೋಚನೆಯನ್ನೇ ಕೈಬಿಡಲಾಗಿದೆ.
ಕೇವಲ 14 ದಿನಗಳು ಮಾತ್ರ ಯಾಕೆ ಕಾರ್ಯಾಚರಣೆ?
ಎಲ್ಲದಕ್ಕೂ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಅಂದರೆ ಮುಂದಿನ 14 ದಿನಗಳ ಕಾಲ ಮಾತ್ರ ಇದು ಚಂದ್ರನಲ್ಲಿ ಕೆಲಸ ಮಾಡಲಿದೆ. ಇದನ್ನು ಸರಳವಾಗಿ ಹೇಳಬೇಕೆಂದರೆ ಭೂಮಿಯ 14 ದಿನಗಳು ಚಂದ್ರನ ಒಂದು ದಿನಕ್ಕೆ ಸಮ ಆಗಿರಲಿದೆ. ಅಲ್ಲಿ ರಾತ್ರಿಯಾದಾಗ ತಾಪಮಾನವು -100 ಡಿಗ್ರಿ ಸೆಲ್ಸಿಯಸ್ಗಿಂತ ಕೆಳಗಿಳಿಯುತ್ತದೆ. ಚಂದ್ರಯಾನದ ಲ್ಯಾಂಡರ್ ಮತ್ತು ರೋವರ್ ತಮ್ಮ ಸೌರ ಫಲಕಗಳಿಂದ ವಿದ್ಯುತ್ ಉತ್ಪಾದಿಸಿಯೇ ಕೆಲಸ ಮಾಡುವುದರಿಂದ 14 ದಿನಗಳ ನಂತರ ಅದರ ಕಾರ್ಯಾಚರಣೆ ಸ್ಥಗಿತವಾಗುತ್ತದೆ. ಈ ಮೂಲಕ ವಿದ್ಯುತ್ ಉತ್ಪಾದನೆಯಾಗದೆ ಇಲೆಕ್ಟ್ರಾನಿಕ್ ಟೂಲ್ಸ್ಗಳು ವಿಪರೀತ ಚಳಿಗೆ ಹಾಳಾಗುತ್ತವೆ.
ಇನ್ನು ಚಂದ್ರನಿಗೂ ಭೂಮಿಗೂ ದೊಡ್ಡ ನಂಟಿದೆ. ಭೂಮಿಯ ಹೊರಗೆ ಮಾನವರು ತಲುಪಿದ ಏಕೈಕ ಆಕಾಶಕಾಯ ಇದಾಗಿದ್ದು, ಚಂದ್ರ ಇಲ್ಲದಿದ್ದರೆ ಭೂಮಿ ಸ್ಥಿರವಾಗಿ ಉಳಿಯುತ್ತಿರಲಿಲ್ಲ. ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಬಾಹ್ಯಾಕಾಶ ನೌಕೆಗಳನ್ನು ಚಂದ್ರನ ಬಳಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ 24 ಜನರು ಚಂದ್ರನ ಬಳಿ ಹೋಗಿದ್ದಾರೆ. ಅವರಲ್ಲಿ 12 ಜನರು ಅದರ ಮೇಲ್ಮೈಯಲ್ಲಿ ನಡೆದಿದ್ದಾರೆ. ಜೊತೆಗೆ ಪ್ರಯೋಗಕ್ಕಾಗಿ ಇದುವರೆಗೆ 382 ಕೆಜಿ ಮಣ್ಣು ಮತ್ತು ಕಲ್ಲುಗಳನ್ನು ಚಂದ್ರನಿಂದ ತರಲಾಗಿದೆ.
ಚಂದ್ರನ ನಂತರೆ ಸೂರ್ಯನೇ ಟಾರ್ಗೆಟ್: ಚಂದ್ರಯಾನ-3 ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಕಾಲಿಟ್ಟಿದ್ದು, ಈಗ ಸೂರ್ಯನ ಸರದಿ ಎನ್ನಲಾಗಿದೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳೂ ಸಿದ್ಧತೆ ನಡೆಸಿದ್ದಾರೆ. ಆದಿತ್ಯ L-1 ಅನ್ನು ಸೆಪ್ಟೆಂಬರ್ನಲ್ಲಿ ಸೂರ್ಯನಲ್ಲಿಗೆ ತಲುಪಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಈ ಮೂಲಕ ಭಾರತ ನಿರಂತರವಾಗಿ ಬಾಹ್ಯಾಕಾಶ ಸಂಶೋಧನೆಯನ್ನು ಮಾಡುತ್ತಲೇ ಇರುತ್ತದೆ.


Click it and Unblock the Notifications








