ಗುಜರಾತ್ನಲ್ಲಿದ್ದುಕೊಂಡು 1,400 ಕೋಟಿ ಹಣ ವಂಚಿಸಿದ ಚೀನಿ ಪ್ರಜೆ! ಈ ಆಪ್ ಬಳಕೆ ಮಾಡಿದವರಿಗೆ ಪಂಗನಾಮ!
ಆನ್ಲೈನ್ ವಂಚನೆ (Online fraud) ಅಂದ್ರೆ ಸಾಮಾನ್ಯವಾಗಿ ಇಂತಿಷ್ಟೇ ಹಣ ಅಂತೇನು ಇಲ್ಲ ಸಾವಿರವೂ ಆಗಿರಬಹುದು, ಲಕ್ಷವೂ ಆಗಿರಬಹುದು ಅಥವಾ ಒಂದೋ ಎರಡೋ ಕೋಟಿಯೂ ಆಗಿರಬಹುದು. ಆದರೆ, ಇಲ್ಲೊಂದು ಘಟನೆಯಲ್ಲಿ ಕೇವಲ ಒಂಬತ್ತು ದಿನಗಳಲ್ಲಿ ಬರೋಬ್ಬರಿ 1,400 ಕೋಟಿ ರೂ.ಗಳನ್ನು ವಂಚನೆ ಮಾಡಲಾಗಿದ್ದು, ಈ ವಿಷಯ ಈಗ ಬೆಳಕಿಗೆ ಬಂದಿದೆ.
ಹೌದು, ಗುಜರಾತ್ನಲ್ಲಿದ್ದ ಚೀನಾದ ವ್ಯಕ್ತಿಯೊಬ್ಬ ನಕಲಿ ಆಪ್ ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿದ್ದಾನೆ. ಇದರಿಂದಾಗಿ 1,200 ಕ್ಕೂ ಹೆಚ್ಚು ಜನರು ಭಾರೀ ಮೊತ್ತದ ಹಣ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿತ್ತು. ಹಾಗಿದ್ರೆ, ಏನಿದು ಘಟನೆ?, ಇಷ್ಟು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡಲು ಹೇಗೆ ಸಾಧ್ಯ? ಎಂಬ ಮಾಹಿತಿ ಇಲ್ಲಿದೆ ನೋಡಿ.

1,400 ಕೋಟಿ ವಂಚನೆ: ಗುಜರಾತ್ನಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಗುಂಪು ಕಟ್ಟಿಕೊಂಡು ನಕಲಿ ಫುಟ್ಬಾಲ್ ಬೆಟ್ಟಿಂಗ್ ಆಪ್ ಒಂದನ್ನು ರಚನೆ ಮಾಡಿದ್ದಾನೆ. ಅದರಲ್ಲೂ ಗುಜರಾತ್ ಹಾಗೂ ಉತ್ತಪ್ರದೇಶದ ಜನರನ್ನು ಕೇಂದ್ರೀಕರಿಸಿಕೊಂಡು ಈ ಮೋಸ ಮಾಡಲಾಗಿದ್ದು, ಈ ದೊಡ್ಡ ಹಗರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ದೊಡ್ಡ ಹಗರಣದ ಹಿಂದಿನ ಮಾಸ್ಟರ್ಮೈಂಡ್ ವೂ ಉಯಾನ್ಬೆ ಎಂಬ ಚೀನಾದ ಪ್ರಜೆ ಎಂದು ತಿಳಿದುಬಂದಿದೆ.
ಈ ಚೀನಾದ ವೂ ಉಯಾನ್ಬೆ ಎಂಬ ಆರೋಪಿ ಶೆನ್ಜೆನ್ ಪ್ರದೇಶದವನಾಗಿದ್ದು, 2020 ಮತ್ತು 2022ರ ನಡುವೆ ಭಾರತದಲ್ಲಿದ್ದ ಸಮಯದಲ್ಲಿ ಗುಜರಾತ್ನ ಪಟಾನ್ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಹಗರಣಕ್ಕೆ 'ಡಾನಿ ಡೇಟಾ' (Dani Data) ಎಂಬ ಮೊಬೈಲ್ ಆಪ್ ಬಳಕೆ ಮಾಡಲಾಗಿದೆ. ಅಪರಾಧಿಗಳು ಗುಜರಾತ್ ಮತ್ತು ಉತ್ತರ ಪ್ರದೇಶ ಎರಡರಲ್ಲೂ ಜನರನ್ನು ವಂಚಿಸುತ್ತಿದ್ದುದನ್ನು ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್ (ಸಿಐಡಿ) ಕಂಡುಕೊಂಡಿದ್ದು, ಜೂನ್ 2022 ರಲ್ಲಿ ದೂರು ದಾಖಲು ಮಾಡಿಕೊಂಡಿತ್ತು.
ಈ ಸಂಬಂಧ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಚೀನಾದ ಪ್ರಜೆಯು ಪಟಾನ್ ಮತ್ತು ಬನಸ್ಕಾಂತದಲ್ಲಿ ಸಮಯ ಕಳೆದಿದ್ದಾನೆ. ಅಲ್ಲಿ ಆತ ಅಪಾರ ಸಂಪತ್ತಿನ ಭರವಸೆಯೊಂದಿಗೆ ಸ್ಥಳೀಯರನ್ನು ಭೇಟಿ ಮಾಡಿ ಆಮಿಷ ಒಡ್ಡಿದ್ದ. ಇದನ್ನು ನಂಬಿ ಹಲವರು ಗುಜರಾತ್ನಲ್ಲಿ ಆತನಿಗೆ ಸಹಕರಿಸಿದ್ದಾರೆ. ಮೇ 2022 ರಲ್ಲಿ ಆಪ್ ಹಲವಾರು ಜನರನ್ನು ಈ ಕಡೆ ಆಕರ್ಷಿಸಿತ್ತು. ಅವರಿಗೆ ಹೆಚ್ಚಿನ ಆದಾಯವನ್ನು ನೀಡುವ ಭರವಸೆ ಸಹ ನೀಡಲಾಗಿತ್ತು.
ಫುಟ್ಬಾಲ್ ವೀಕ್ಷಕರೇ ಇವರ ಟಾರ್ಗೆಟ್: ಇನ್ನು ಫುಟ್ಬಾಲ್ ಆಟಗಳಲ್ಲಿ(Football game) ತೀವ್ರ ಆಸಕ್ತಿ ಹೊಂದಿದ್ದ 15 ರಿಂದ 75 ವರ್ಷ ವಯಸ್ಸಿನ ವಿವಿಧ ವಯೋಮಾನದ ಜನರನ್ನು ಈ ಮೋಸದ ಜಾಲಕ್ಕೆ ಬೀಳಿಸುವಲ್ಲಿ ಉಯಾನ್ಬೆ ಯಶಸ್ವಿಯಾದ್ದನಂತೆ. ಈ ಮೂಲಕ ದಿನಕ್ಕೆ ಸರಾಸರಿ 200 ಕೋಟಿ ರೂ.ಗಳನ್ನು ಗಳಿಕೆ ಮಾಡುತ್ತಿದ್ದ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಆರಂಭದಲ್ಲಿ ಜನರು ಆಪ್ ಇನ್ಸ್ಟಾಲ್ ಮಾಡಿಕೊಂಡು ಹೆಚ್ಚಿನ ಹಣವನ್ನು ಗಳಿಸುವ ಸಲುವಾಗಿ ದೊಡ್ಡ ಮಟ್ಟದಲ್ಲಿ ಹಣ ಹಾಕಲು ಮುಂದಾಗಿದ್ದಾರೆ. ದುರಂತ ಎಂದರೆ ಆಪ್ ಕೇವಲ ಒಂಬತ್ತು ದಿನಗಳ ನಂತರ ಥಟ್ಟನೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಇದಾದ ಬಳಿಕ ತಮಗೆ ಹಣದ ವಂಚನೆ ಮಾಡಲಾಗಿದೆ ಎಂದು ಅಷ್ಟೂ ಜನರು ಅರಿತುಕೊಂಡಿದ್ದಾರೆ.
ಇದಾದ ನಂತರದಲ್ಲಿ ಜನರು ದೂರು ದಾಖಲು ಮಾಡಲು ಮುಂದಾಗಿದ್ದಾರೆ. ಆದರೆ, ಪ್ರಕರಣ ದಾಖಲಾಗುವ ವೇಳೆಗೆ ಉಯಾನ್ಬೆ ಭಾರತ ತೊರೆದಿದ್ದಾನೆ. ಗುಜರಾತ್ ಪೊಲೀಸರು ವಂಚನೆಗೆ ಸಂಬಂಧಿಸಿದ ಮೊದಲ ಪ್ರಕರಣವನ್ನು ಆಗಸ್ಟ್ 2022 ರಲ್ಲಿ ದಾಖಲು ಮಾಡಿಕೊಂಡಿದ್ದರು. ಈತನ ವಿರುದ್ಧ ವಂಚನೆ ಮತ್ತು ಐಟಿ ಕಾಯ್ದೆಯ ಉಲ್ಲಂಘನೆ ಸಂಬಂಧ ತನಿಖೆ ಆರಂಭಿಸಿದ್ದರು.

ಇನ್ನು ತನಿಖೆಯ ಸಮಯದಲ್ಲಿ ಸಿಐಡಿಯು ಗುಜರಾತ್ನ ಒಂಬತ್ತು ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿದ್ದು, ಅವರು ಉಯಾನ್ಬೆಗೆ ಸಹಾಯ ಮಾಡುತ್ತಿದ್ದರು ಎಂದು ಕಂಡುಕೊಂಡಿದ್ದಾರೆ. ಈ ಸಹಚರರು (ಸ್ಥಳೀಯರು) ಕದ್ದ ಹಣವನ್ನು ವರ್ಗಾಯಿಸಲು ಅನುಕೂಲವಾಗುವಂತೆ ಶೆಲ್ ಕಂಪನಿಗಳನ್ನು ಸ್ಥಾಪಿಸಿದ್ದಾರೆ ಎಂದು ಸಿಐಡಿ ಮಾಹಿತಿ ಬಹಿರಂಗಪಡಿಸಿದೆ. ಪೊಲೀಸ್ ಮೂಲಗಳ ಪ್ರಕಾರ ಉಯಾನ್ಬೆ ಇನ್ನೂ ಶೆನ್ಜೆನ್ನಿಂದ ತನ್ನ ಮೋಸದ ಜಾಲವನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದಾನಂತೆ.


Click it and Unblock the Notifications








