ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯಾ ಹಾಗಿದ್ರೆ ಎಚ್ಚರ... ಈ ಸುದ್ದಿ ಓದಿ!
ಭಾರತದಲ್ಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ (PAN Card, Aadhaar Card and Ration Card) ಸೇರಿದಂತೆ ಅನೇಕ ದಾಖಲೆಗಳಿಗೆ ಹೆಚ್ಚಿನ ಮಹತ್ವ ಇದೆ. ಅದರಲ್ಲೂ ಕರ್ನಾಟಕದಲ್ಲಿ ಇವುಗಳ ಬಳಕೆ ಈಗ ಹೆಚ್ಚಾಗಿದೆ. ಈ ದಾಖಲೆಗಳ ಮೂಲಕ ಜನರು ಸರ್ಕಾರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಹಾಗೂ ಬ್ಯಾಂಕಿಂಗ್ ವ್ಯವಹಾರಗಳನ್ನು ಸುಲಭವಾಗಿ ಮಾಡಬಹುದು.
ಹೌದು, ಇಂದಿನ ದಿನಗಳಲ್ಲಿ ಈ ದಾಖಲೆಗಳು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ. ಇವುಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅನ್ಯ ಮಾರ್ಗದಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಅಂದರೆ ಸೈಬರ್ ಹಗರಣ ಹೆಚ್ಚಾಗುತ್ತಿದೆ. ಪರಿಣಾಮ ಇಲ್ಲೋರ್ವ ವ್ಯಕ್ತಿ ಪ್ಯಾನ್ ಕಾರ್ಡ್ ಸಂಬಂಧ 6.45 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಏನಿದು ಘಟನೆ?, ಯಾವ ಕಾರಣಕ್ಕೆ ಈ ರೀತಿ ಮೋಸ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಪ್ಯಾನ್ ಕಾರ್ಡ್ ಇ-ಕೆವೈಸಿ ಹೆಸರಲ್ಲಿ ಮೋಸ: ಮುಂಬೈ ವಿಕ್ರೋಲಿಯದ 64 ವರ್ಷದ ವ್ಯಕ್ತಿಯೊಬ್ಬರು ಸೈಬರ್ ವಂಚನೆ ಒಳಗಾಗಿದ್ದಾರೆ. ಈ ಮೂಲಕ ಇವರು 6.45 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಅಂದರೆ ಕೆವೈಸಿ ಮತ್ತು ಪ್ಯಾನ್ ಕಾರ್ಡ್ (PAN Card e-KYC) ವಿವರಗಳನ್ನು ನವೀಕರಿಸುವ ನೆಪದಲ್ಲಿ ವಂಚಕರು ಇವರನ್ನು ಮೋಸ ಮಾಡಿದ್ದಾರೆ. ಪರಿಣಾಮ ಇವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣಕ್ಕೆ ಮೂರು ನಾಮ ಹಾಕಲಾಗಿದೆ.
ಈ ಸಂಬಂಧ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದ್ದು, ಖಾಸಗಿ ಬ್ಯಾಂಕ್ನ ಥಾಣೆ ಶಾಖೆಯಲ್ಲಿ ಖಾತೆಯನ್ನು ಹೊಂದಿರುವ 64 ವರ್ಷದ ವ್ಯಕ್ತಿಯನ್ನು ಬ್ಯಾಂಕ್ ಎಕ್ಸಿಕ್ಯೂಟಿವ್ ಎಂದು ಹೆಸರಿಸಿಕೊಂಡ ವಂಚಕರೊಬ್ಬರು ಕರೆ ಮಾಡಿದ್ದಾನೆ. ಈ ವೇಳೆ ನಿಮ್ಮ ಇ-ಕೆವೈಸಿ ವಿವರಗಳು ಹಳೆಯದಾಗಿವೆ ಮತ್ತು ತಕ್ಷಣದ ನವೀಕರಣ ಅಗತ್ಯವಿದೆ ಎಂದು ಎಚ್ಚರಿಸಿದ್ದಾನೆ. ನಂತರ ಆತ ಪ್ಯಾನ್ ಕಾರ್ಡ್ ಸಂಖ್ಯೆ ಸೇರಿದಂತೆ ಕೆಲವು ವಿವರಗಳನ್ನು ಕೇಳಿದ್ದಾರೆ. ಕರೆ ಮಾಡಿದವರು ಬ್ಯಾಂಕ್ ಸಿಬ್ಬಂದಿ ಇರಬಹುದು ಎಂದು ನಂಬಿ ಎಲ್ಲಾ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ಇದಾದ ನಂತರದಲ್ಲಿ ವಂಚಕನು ಪ್ಯಾನ್ ವಿವರಗಳಿಗೂ ನವೀಕರಣದ ಅಗತ್ಯವಿದೆ ಎಂದು ಹೇಳಿದ್ದಾನೆ. ಹಾಗೆಯೇ ಬ್ಯಾಂಕಿನ ಮೊಬೈಲ್ ಆಪ್ ಮೂಲಕ ತನ್ನ ಪ್ಯಾನ್ ವಿವರಗಳು ಮತ್ತು ಜನ್ಮ ದಿನಾಂಕವನ್ನು ನವೀಕರಿಸಲು ವ್ಯಕ್ತಿಗೆ ತಿಳಿಸಿದ್ದಾನೆ. ಮುಂದೆ ಏನಾಗುತ್ತದೆ ಎಂಬ ಬಗ್ಗೆ ಅರಿವಿಲ್ಲದ ಆ ವ್ಯಕ್ತಿ ವಂಚಕ ಹೇಗೆ ಹೇಳಿದ್ದಾನೋ ಹಾಗೆ ಮಾಡಿದ್ದಾರೆ. ಇದಾದ ನಂತರದಲ್ಲಿ ಬ್ಯಾಂಕ್ನ ಸರ್ವರ್ನಲ್ಲಿ ಸಮಸ್ಯೆಯಾಗಿದೆ. ಪರಿಣಾಮ ಯಾವ ಕೆಲಸವನ್ನು ಮಾಡಲಾಗುತ್ತಿಲ್ಲ. ಇವಾಗ ಕರೆ ಕಡಿತಗೊಳಿಸಿ ಎಂದು ವ್ಯಕ್ತಿಗೆ ವಂಚಕ ಹೇಳಿದ್ದಾನೆ.
ಇದಾದ ಬಳಿಕ ಅಂದರೆ ಸಂಜೆಯ ವೇಳೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಯುಇಐ ಮೂಲಕ ಪಾವತಿ ಮಾಡುವಾಗ ತನ್ನ ಬ್ಯಾಂಕ್ ಬ್ಯಾಲೆನ್ಸ್ ಕಡಿಮೆ ಆಗಿರುವುದನ್ನು ಗಮನಿಸಿದ್ದಾನೆ. ಆತನ ಖಾತೆ ವಿವರಗಳನ್ನು ಪರಿಶೀಲಿಸಿದಾಗ 28 ಅನಧಿಕೃತ ವಹಿವಾಟು ನಡೆಸಲಾಗಿದ್ದು, ತಲಾ 25 ಸಾವಿರದಿಂದ 24,500ರೂ.ವರೆಗೆ ಒಟ್ಟು 6.45 ಲಕ್ಷ ರೂ.ಗಳನ್ನು ವಂಚಕರು ಡ್ರಾ ಮಾಡಿಕೊಂಡಿದ್ದಾರೆ. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ರೀತಿಯ ಘಟನೆಗಳು ನಿತ್ಯವೂ ಹಲವಾರು ಕಡೆ ನಡೆಯುತ್ತಲೇ ಇರುತ್ತವೆ. ಆದರೆ, ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ. ಅದರಲ್ಲೂ ಇಲ್ಲಿ ಮೋಸ ಹೋದ ವ್ಯಕ್ತಿ ತನ್ನ ಖಾತೆಯಲ್ಲಿ ನಡೆಸಿದ 28 ಮೋಸದ ವಹಿವಾಟುಗಳಿಗೆ ಒಂದೇ ಒಂದು ಎಸ್ಎಮ್ಎಸ್ ಅನ್ನೂ ಸ್ವೀಕರಿಸಿಲ್ಲ ಎಂಬುದು ಸಹ ದುರಂತದ ವಿಚಾರ. ಈ ಘಟನೆಯು ಸೈಬರ್ ವಂಚನೆಗಳ ಹೆಚ್ಚುತ್ತಿರುವ ಅತ್ಯಾಧುನಿಕತೆ ಶೈಲಿಯ ಮೋಸಕ್ಕೆ ಉದಾಹರಣೆ ಆಗಿದೆ.
ಬ್ಯಾಂಕ್ ಸಿಬ್ಬಂದಿ ಫೋನ್ನಲ್ಲಿ ಯಾವ ಮಾಹಿತಿಯನ್ನೂ ಕೇಳುವುದಿಲ್ಲ: ಪ್ರಮುಖವಾಗಿ ಯಾವುದೇ ಬ್ಯಾಂಕ್ ಸಿಬ್ಬಂದಿ ಸಹ ಗ್ರಾಹಕರಿಗೆ ಕರೆ ಮಾಡಿ ಈ ಮಾಹಿತಿಯನ್ನು ಕೇಳುವುದಿಲ್ಲ. ಯಾರಾದರೂ ಬ್ಯಾಂಕ್ನಿಂದ ಬಂದವರು ಎಂದು ಹೇಳಿಕೊಂಡು ನಿಮಗೆ ಕರೆ ಮಾಡಿದ್ರೆ ಹಾಗೂ ಅನಗತ್ಯ ಮಾಹಿತಿ ಕೇಳಿದರೆ ಆ ವ್ಯಕ್ತಿಯನ್ನು ಹಲವಾರು ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿ. ತಕ್ಷಣವೇ ಆ ಕರೆಯವನ್ನು ರಿಪೋರ್ಟ್ ಮಾಡಿ.

ಇದರೊಂದಿಗೆ ನಿಮ್ಮ ಬ್ಯಾಂಕ್ ವಹಿವಾಟುಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಲೇ ಇರಿ. ನಿಮ್ಮ ಬ್ಯಾಂಕ್ನಿಂದ ಹೇಳಿಕೊಳ್ಳುವ ಯಾವುದೇ ಅಪೇಕ್ಷಿಸದ ಕರೆಗಳು ಅಥವಾ ಮೆಸೆಜ್ಗಳ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಯಾಕೆಂದರೆ ಡಿಜಿಟಲ್ ಯುಗದಲ್ಲಿ ಆನ್ಲೈನ್ ವಹಿವಾಟುಗಳು ಸಾಮಾನ್ಯವಾಗಿದ್ದು, ಇದನ್ನು ಬಳಕೆ ಮಾಡುವ ಮುನ್ನ ಎಚ್ಚರಿಕೆಗಳ ಬಗ್ಗೆಯೂ ಗಮನಹರಿಸುವುದು ಅತಿ ಮುಖ್ಯವಾದ ವಿಷಯವಾಗಿದೆ.


Click it and Unblock the Notifications








