Android 13: ಸರ್ಕಾರದಿಂದ ತುರ್ತು ಎಚ್ಚರಿಕೆ: ಆಂಡ್ರಾಯ್ಡ್ ಫೋನ್ ಬಳಕೆದಾರರೆಲ್ಲಾ ಈ ಕಡೆ ಒಮ್ಮೆ ಗಮನಿಸಿ!
ಆಂಡ್ರಾಯ್ಡ್ ಫೋನ್ (Android phone) ಬಳಕೆ ಅಥವಾ ಖರೀದಿ ಭಾರತದಲ್ಲೇ ಹೆಚ್ಚು. ಈ ಮೂಲಕ ಜಾಗತಿಕವಾಗಿ ಭಾರತ ದೊಡ್ಡ ಆಂಡ್ರಾಯ್ಡ್ ಡಿವೈಸ್ ಮಾರುಕಟ್ಟೆಯಾಗಿದೆ. ಈ ನಡುವೆ ಆಂಡ್ರಾಯ್ಡ್ ಫೋನ್ ಬಳಕೆದಾರರೇ ಹೆಚ್ಚು ಹೆಚ್ಚಾಗಿ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ.
ಹೌದು, ಸ್ಮಾರ್ಟ್ಫೋನ್ಗಳ ವಿಭಾಗದಲ್ಲಿ ಆಂಡ್ರಾಯ್ಡ್ ಫೋನ್ ಬಳಕೆದಾರರು ಆಗಾಗ್ಗೆ ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತಾರೆ. ಆದರೆ, ತಕ್ಷಣವೇ ಈ ಬಗ್ಗೆ ಎಚ್ಚೆತ್ತುಕೊಳ್ಳುವ ಸರ್ಕಾರ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತಾ ಮುಂದೆ ಆಗುವ ಸಮಸ್ಯೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತದೆ. ಈಗ ಮತ್ತೆ ಸರ್ಕಾರ ಆಂಡ್ರಾಯ್ಡ್ 13 (Android 13) ಹಾಗೂ ಅದಕ್ಕೂ ಮೊದಲಿನ ಓಎಸ್ನಲ್ಲಿ ರನ್ ಆಗುವ ಸ್ಮಾರ್ಟ್ಫೋನ್ ಬಳಕೆದಾರರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ಹಾಗಿದ್ರೆ ಏನಿದು ಸಮಸ್ಯೆ?, ಸ್ಮಾರ್ಟ್ಫೋನ್ ಬಳಕೆದಾರರು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಎಚ್ಚರಿಕೆ: CERT-In ಇದೀಗ ಆಂಡ್ರಾಯ್ಡ್ ಓಎಸ್ (Android OS) ನಲ್ಲಿ ಪತ್ತೆಯಾದ ದೋಷಗಳನ್ನು ವರ್ಗೀಕರಿಸಿದೆ ಅದು ಕ್ರಿಟಿಕಲ್ ಎಂದು ಹೇಳಿದ್ದು, ಈ ದುರ್ಬಲತೆಗಳು ಹ್ಯಾಕರ್ಗಳು ತಮ್ಮ ಕೋಡ್ ಅನ್ನು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ನಲ್ಲಿ ಕಾರ್ಯಗತಗೊಳಿಸಲು ಅವಕಾಶ ನೀಡಬಹುದು, ಇದು ಸೂಕ್ಷ್ಮ ಬಳಕೆದಾರರ ಮಾಹಿತಿಯನ್ನು ಪ್ರವೇಶಿಸಲು ಮತ್ತು ಸೇವೆಯ ನಿರಾಕರಣೆ (DoS) ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಸರ್ಕಾರ ಎಚ್ಚರಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಇತ್ತೀಚೆಗೆ ಹಳೆಯ ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಡಿವೈಸ್ಗಳಿಗೆ ಈ ನಿರ್ಣಾಯಕ ಎಚ್ಚರಿಕೆ ನೀಡಿದೆ. ಅಂದರೆ ಆಂಡ್ರಾಯ್ಡ್ 13 ಮತ್ತು ಇದಕ್ಕೂ ಕೆಳಗಿನ ಆವೃತ್ತಿಯ ಹಳೆಯ ಆವೃತ್ತಿಯಲ್ಲಿ ರನ್ ಆಗುವ ಡಿವೈಸ್ಗಳ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.

ಟ್ಯಾಬ್ಲೆಟ್, ಸ್ಮಾರ್ಟ್ಫೋನ್ ಬಳಕೆ ಮಾಡುವರು ಎಚ್ಚರ ವಹಿಸಬೇಕು: CERT-In ನೀಡಿದ ಮಾಹಿತಿ ಪ್ರಕಾರ, ಹೈಲೈಟ್ ಮಾಡಲಾದ ದೋಷಗಳು ಪ್ರಾಥಮಿಕವಾಗಿ ಓಎಸ್ನ ಹಳೆಯ ಆವೃತ್ತಿಗಳಲ್ಲಿ ಚಾಲನೆಯಲ್ಲಿರುವ ಆಂಡ್ರಾಯ್ಡ್ ಡಿವೈಸ್ಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವಂತೆ. ಮುಖ್ಯವಾಗಿ 11, 12, 12L, ಮತ್ತು 13 ನಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದು ತಿಳಿಸಲಾಗಿದೆ.
ವಿಷಯ ಏನೆಂದರೆ ಈ ದುರ್ಬಲತೆಗಳು ಒಂದೇ ಘಟಕಕ್ಕೆ ಸೀಮಿತವಾಗಿಲ್ಲ. ಅವುಗಳು ಗೂಗಲ್ ಪ್ಲೇ ಸಿಸ್ಟಮ್ ನವೀಕರಣಗಳು, ಫ್ರೇಮ್ವರ್ಕ್, ಸಿಸ್ಟಮ್ ಮತ್ತು ವಿವಿಧ ಹಾರ್ಡ್ವೇರ್ ತಯಾರಕರಿಗೆ ಸಂಬಂಧಿಸಿದ ಘಟಕಗಳಂತಹ ನಿರ್ಣಾಯಕ ಅಂಶಗಳಲ್ಲಿ ಹರಡಿವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಕಾರಣಕ್ಕೆ ಈಗ ಗೂಗಲ್ ನವೀಕರಣವೊಂದನ್ನು ಬಿಡುಗಡೆ ಮಾಡಿದ್ದು, ಇದು ನಿರ್ಣಾಯಕ ದೋಷಗಳನ್ನು ಪರಿಹರಿಸುತ್ತಿದೆ.
ಪರಿಣಾಮ ಈ ಓಎಸ್ನಲ್ಲಿನಲ್ಲಿ ರನ್ ಆಗುವ ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ ಬಳಕೆದಾರರು ತಮ್ಮ ಹ್ಯಾಂಡ್ಸೆಟ್ಗಳನ್ನು ತಕ್ಷಣವೇ ನವೀಕರಿಸಲು ಸೂಚಿಸಲಾಗಿದೆ. ಈ ಮೂಲಕ ಸ್ಮಾರ್ಟ್ ಡಿವೈಸ್ನಲ್ಲಿ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಈ ರೀತಿಯ ಸಮಸ್ಯೆಗಳು ಇದೇ ಹೊಸತಲ್ಲ, ಆಗಾಗ್ಗೆ ಜರುಗುತ್ತಲೇ ಇರುತ್ತವೆ. ಪರಿಣಾಮ ಬಳಕೆದಾರರಿಗೆ ಯಾವೆಲ್ಲಾ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸ್ಮಾರ್ಟ್ಫೋನ್ ಅನ್ನು ಸೇಫ್ ಆಗಿ ಇಡಬಹುದು ಅನ್ನೋದನ್ನೂ ತಿಳಿಸಿಕೊಡಲಾಗಿದೆ.

ಭದ್ರತಾ ಪ್ಯಾಚ್ಗಳನ್ನು ಅನ್ವಯಿಸಿ: ಸಂಭಾವ್ಯ ಸಕ್ರಿಯ ಶೋಷಣೆಯಿಂದ ಪಾರಾಗಲ ಓಎಸ್ ನವೀಕರಣದೊಂದಿಗೆ ಭದ್ರತಾ ಪ್ಯಾಚ್ಗಳನ್ನು (Security patch) ತ್ವರಿತವಾಗಿ ಅನ್ವಯಿಸಲು ಬಳಕೆದಾರರು ಮುಂದಾಗಬೇಕಿದೆ. ಗುರುತಿಸಲಾದ ದೋಷಗಳನ್ನು ನಿರ್ದಿಷ್ಟವಾಗಿ ಪರಿಹರಿಸಲು ಮತ್ತು ಡಿವೈಸ್ನ ಸುರಕ್ಷತೆಯನ್ನು ಹೆಚ್ಚಿಸಲು ಈ ಪ್ಯಾಚ್ಗಳನ್ನು ವಿನ್ಯಾಸಗೊಳಿಸಲಾಗುತ್ತದೆ.
ಆಂಡ್ರಾಯ್ಡ್ ಓಎಸ್ ಅನ್ನು ನವೀಕರಿಸಿ: ಬಳಕೆದಾರರು ಆಂಡ್ರಾಯ್ಡ್ ಓಎಸ್ ಅನ್ನು ನವೀಕರಿಸುವ ಅಗತ್ಯವಿದೆ. ಇದು ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿ ಮತ್ತು ದೋಷ-ಮುಕ್ತವಾಗಿ ಇರಿಸಿಕೊಳ್ಳಲು ಅತ್ಯಂತ ನಿರ್ಣಾಯಕ ಮಾರ್ಗವಾಗಿದೆ. ಇದು ಯಾವುದೇ ಅಪಾಯದ ವಿರುದ್ಧ ಡಿವೈಸ್ ಅನ್ನು ಸುರಕ್ಷಿತಗೊಳಿಸುವುದರ ಜೊತೆಗೆ ಇತ್ತೀಚಿನ ಭದ್ರತಾ ಫೀಚರ್ಸ್ಗಳು ಮತ್ತು ಸುಧಾರಣೆಗಳಿಗೆ ಪ್ರವೇಶವನ್ನು ನೀಡುತ್ತದೆ.
ಆಪ್ ಅನ್ನು ಎಚ್ಚರಿಕೆಯಿಂದ ಡೌನ್ಲೋಡ್ ಮಾಡಿ: ನೀವು ಯಾವುದೇ ಆಪ್ಗಳನ್ನು ಡೌನ್ಲೋಡ್ ಮಾಡುವಾಗ ಮತ್ತು ಇನ್ಸ್ಟಾಲ್ ಮಾಡುವಾಗ ಎಚ್ಚರಿಕೆ ವಹಿಸಿ. ಅಂದರೆ ನೀವು ಗೂಗಲ್ ಪ್ಲೇ ಸ್ಟೋರ್ (Google Play Store) ಮೂಲಕವೇ ಆಪ್ಗಳನ್ನು ಇನ್ಸ್ಟಾಲ್ ಮಾಡಿದ್ರೆ ಈ ರೀತಿಯ ಸಮಸ್ಯೆಗಳು ಕಂಡುಬರುವುದಿಲ್ಲ. ಇದರೊಂದಿಗೆ ಅನುಮತಿಗಳನ್ನು ನೀಡುವಲ್ಲಿ ನೀವು ಎಚ್ಚರವಾಗಿರಬೇಕು.
ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ: ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಅಮೂಲ್ಯವಾದ ಮಾಹಿತಿಯನ್ನು ರಕ್ಷಿಸಲು ಬಾಹ್ಯ ಮೂಲಗಳು ಮತ್ತು ಕ್ಲೌಡ್ ಸಂಗ್ರಹಣೆಗಾಗಿ (Cloud storage) ನಿಮ್ಮ ಡೇಟಾವನ್ನು ನಿಯಮಿತವಾಗಿ ಬ್ಯಾಕಪ್ ಮಾಡಬೇಕಾಗುತ್ತದೆ. ಇದು ಎಲ್ಲಾ ರೀತಿಯಲ್ಲೂ ಅನುಕೂಲಕರವಾದ ಮಾರ್ಗವಾಗಿದೆ.


Click it and Unblock the Notifications








