ನಿಮ್ಮೂರಿನಲ್ಲಿ ಮಳೆ-ಬೆಳೆ ವಿಚಾರ ತಿಳಿಯಬೇಕೆ? ಈ ಆಪ್ ಎಲ್ಲದಕ್ಕೂ ಸಹಕಾರಿ!
ಈಗಂತೂ ಆಕಾಶ ನೋಡಿ ಮಳೆ ಬರುತ್ತದೆ ಅಥವಾ ಬರುವುದಿಲ್ಲ ಎಂದು ಹೇಳುವ ರೈತರ ಸಂಖ್ಯೆ ಕಡಿಮೆ ಆಗಿದೆ. ಯಾಕೆಂದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಎಲ್ಲರೂ ಸಹ ಎಲ್ಲಾ ವಿಷಯಕ್ಕೂ ಸ್ಮಾರ್ಟ್ಫೋನ್ ಅಥವಾ ಇಂಟರ್ನೆಟ್ ಅನ್ನೇ ಅವಲಂಬಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಮೇಘದೂತ್ ಆಪ್ ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದು ಕೇವಲ ರೈತರಿಗೆ ಮಾತ್ರವಲ್ಲದೆ ಎಲ್ಲರಿಗೂ ಉಪಯುಕ್ತ.
ಹೌದು, ಈಗಾಗಲೇ ರಾಜ್ಯದಲ್ಲಿ ಬೇಸಾಯ ಆರಂಭ ಆಗಿದ್ದು, ಅಲ್ಲಲ್ಲಿ ಬೀಜ ಬಿತ್ತನೆ ಮಾಡಲಾಗುತ್ತಿದೆ. ಇದಕ್ಕೆ ಕೃಪೆ ತೋರಿರುವ ವರುಣ ರಾಜ್ಯದ ಜನರಿಗೆ ಕೃಷಿಯಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾನೆ. ಈ ನಡುವೆ ಯಾವ ಸಮಯದಲ್ಲಿ ಮಳೆ ಬರಲಿದೆ, ಯಾವ ಸಮಯದಲ್ಲಿ ಬಿಸಿಲು ಇರಲಿದೆ ಎಂಬಿತ್ಯಾದಿ ಮಾಹಿತಿಯನ್ನು ನೀವು ಬೆರಳ ತುದಿಯಲ್ಲೇ ತಿಳಿದುಕೊಳ್ಳಬಹುದು. ಹಾಗಿದ್ರೆ, ಬನ್ನಿ ಈ ಬಗ್ಗೆ ಮಾಹಿತಿ ತಿಳಿಯೋಣ.

ರೈತರಿಗೆ ಅಗತ್ಯ ಈ ಮೇಘದೂತ್ ಆಪ್: ಮೇಘದೂತ್ ಆಪ್ ಅನ್ನು ಕೇಂದ್ರ ಸರ್ಕಾರದ ಕೃಷಿ ಹಾಗೂ ಭೂ ವಿಜ್ಞಾನ ಸಚಿವಾಲಯದ ನೆರವಿನೊಂದಿಗೆ ದೆಹಲಿಯ ಐಐಟಿಎಮ್, ಪುಣೆ ಮತ್ತು ಐಎಮ್ಡಿ ಸಹಯೋಗದಲ್ಲಿ ಹೈದರಾಬಾದ್ನ ಇಂಟರ್ನ್ಯಾಶನಲ್ ಕಾಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಸೆಮಿ ಆಂಡ್ ಟ್ರಾಫಿಕ್ ನಲ್ಲಿ ಡಿಜಿಟಲ್ ಅಗ್ರಿಕಲ್ಚರ್ ರಿಸರ್ಚ್ ಥೀಮ್ ಈ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಸೇವೆಯನ್ನು ವೆಬ್ ಹಾಗೂ ಆಪ್ ಮೂಲಕ ಈ ಪಡೆದುಕೊಳ್ಳಬಹುದಾಗಿದ್ದು, ರೈತರಿಗೆ ಯಾವ ಸಮಯದಲ್ಲಿ ಯಾವ ಬೆಲೆ ಬೆಳೆದರೆ ಸೂಕ್ತ ಎಂಬ ಆಲೋಚನೆಗೆ ಬರಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಈ ಆಪ್ ಅನ್ನು ಬಳಕೆ ಮಾಡಬಹುದಾಗಿದೆ. ಅದರಂತೆ ಕರ್ನಾಟಕದ 30ಜಿಲ್ಲೆಗಳು ಸೇರಿದಂತೆ ದೇಶದ 150ಜಿಲ್ಲೆಗಳಲ್ಲಿ ಈ ಸೇವೆ ಲಭ್ಯ ಇದ್ದು, ಆಪ್ ಬೆಳವಣಿಗೆ ಹೆಚ್ಚಾದಂತೆ ಇದೀಗ 668ಜಿಲ್ಲೆಗಳಿಗೆ ಇದರ ಸೇವೆ ವಿಸ್ತರಣೆ ಮಾಡಲಾಗಿದೆ.

ಈ ಆಪ್ನಿಂದ ಏನೆಲ್ಲಾ ಮಾಹಿತಿ ಲಭ್ಯ?: ರೈತರಿಗೆ ವಾರದಲ್ಲಿ ಎರಡು ಬಾರಿ ಈ ಆಪ್ ಮಾಹಿತಿ ನೀಡಲಿದೆ. ಜೊತೆಗೆ ಮುಂದಿನ ಐದು ದಿನಗಳಲ್ಲಿ ಇರಬಹುದಾದ ಉಷ್ಣಾಂಶ, ಆದ್ರತೆ, ಮಳೆ, ಮೋಡ, ಗಾಳಿಯ ದಿಕ್ಕು ಸೇರಿದಂತೆ ಯಾವ ಕಾಲಕ್ಕೆ ಯಾವ ಬೆಳೆಯನ್ನು ಬೆಳೆದರೆ ಸೂಕ್ತ ಎಂಬ ಮಾಹಿತಿಯನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಕೆಲವು ಪ್ರದೇಶದಲ್ಲಿ ಜಾನುವಾರು ಸಂಬಂಧಿ ಮಾಹಿತಿಯನ್ನೂ ಸಹ ಪಡೆದುಕೊಳ್ಳಬಹುದು.
ಅಪ್ ಬಳಕೆ ಮಾಡುವುದು ಹೇಗೆ?: ಈ ಆಪ್ ಅನ್ನು ಯಾರೇ ಆದರೂ ಸುಲಭವಾಗಿ ಬಳಕೆ ಮಾಡಬಹುದು. ಯಾಕೆಂದರೆ ಇದು ಕನ್ನಡ ಸೇರಿದಂತೆ ಭಾರತದ 10 ಭಾಷೆಗಳಲ್ಲಿ ಲಭ್ಯ ಇದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆಪ್ ಅನ್ನು ಇನ್ಸ್ಟಾಲ್ ಮಾಡಿದ ನಂತರ ಓಪನ್ ಮಾಡಿ. ಅದರಲ್ಲಿ ನೀವು ನೋಂದಣಿ ಪ್ರಕ್ರಿಯೆ ಮುಗಿಸಬೇಕಾಗುತ್ತದೆ. ಇದರಲ್ಲಿ ನಿಮ್ಮ ಹೆಸರು, ಫೋನ್ ನಂಬರ್, ಹಾಗೂ ನೀವು ಇರುವ ವಿಳಾಸದ ಮಾಹಿತಿಯನ್ನು ಭರ್ತಿ ಮಾಡಬೇಕು.

ಇದಾದ ನಂತರ ಮುಖ್ಯ ಡಿಸ್ಪ್ಲೇನಲ್ಲಿ ನಿಮ್ಮ ಪ್ರದೇಶದ ಮಳೆ ವಿವರ, ಗಾಳಿ ವಿವರ, ಬೆಳೆ ವಿವರ ಕಾಣಿಸಿಕೊಳ್ಳುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಅಲ್ಲೇ ನೀಡಲಾಗಿರುವ ಭೂತಕಾಲ, ಮುನ್ಸೂಚನೆ, ಸ್ಥಳಗಳು ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡುವ ಮೂಲಕ ಅಗತ್ಯವಾದ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು. ಇದರಿಂದಾಗಿ ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು, ಯಾವ ಸಮಯದಲ್ಲಿ ಕಳೆ ತೆಗೆಯಬೇಕು ಎನ್ನುವುದನ್ನು ರೈತರು ಪೂರ್ವದಲ್ಲಿಯೇ ತಿಳಿದುಕೊಳ್ಳಬಹುದು.


Click it and Unblock the Notifications








