ಕನ್ನಡಿಗರಿಂದ ಹೊಸ ಕ್ರಾಂತಿ! ವಾಹನಗಳಿಗೆ ಇನ್ಮುಂದೆ QRcode, ಅಪಘಾತವಾದ್ರೆ ಮನೆಯವರಿಗೆ ಹೋಗುತ್ತೆ ಮೆಸೆಜ್!
ಕನ್ನಡಿಗರು ಟೆಕ್ ವಲಯದಲ್ಲಿ ಮಾಡುತ್ತಿರುವ ಸಾಧನೆಗಳು ಸದಾ ಮೆಚ್ಚುವಂತಹುದು. ಅದರಂತೆ ಭಾರತದಲ್ಲಿ ಅದರಲ್ಲೂ ಬೆಂಗಳೂರಂತ ಮಹಾನಗರಗಳಲ್ಲಿ ಜನರಿಗಿಂತ ವಾಹನಗಳೇ ಹೆಚ್ಚಾಗಿದ್ದು, ಇದನ್ನೇ ಆಧಾರವಾಗಿ ಇಟ್ಟುಕೊಂಡು ಈ ಟೀಮ್ ವಾಹನಗಳಿಗೆ ಕ್ಯೂಆರ್ ಕೋಡ್ ನೀಡುವ ವಿಶೇಷ ಕಾರ್ಯಕ್ಕೆ ಮುಂದಾಗಿದೆ. ಈ ಕ್ಯೂಆರ್ ಕೋಡ್ ಜೀವ ಉಳಿಸಲಿದೆ.
ಹೌದು, ಅಚ್ಚರಿ ಎನಿಸಿದರೂ ಸತ್ಯ. ರಕ್ಷಾ ಕ್ಯೂಆರ್ ಕೋಡ್ (QRcode) ಕೋಡ್ ಅಂದಾಕ್ಷಣ ನೆನಪಿಗೆ ಬರುವುದು ಪಾವತಿ ಆಪ್ಗಳು.ಆದರೆ, ಇನ್ಮುಂದೆ ಎಲ್ಲಾ ವಾಹನ ಬಳಕೆದಾರರ ಜೀವವನ್ನು ರಕ್ಷಣೆ ಮಾಡುವಲ್ಲಿ ಈ ಕ್ಯೂಆರ್ ಕೋಡ್ಗಳು ಮಹತ್ವದ ಪಾತ್ರ ವಹಿಸಲಿವೆ. ಇಂತಹುದ್ದೊಂದು ಸಾಧನೆಯನ್ನು ಕನ್ನಡಿಗರ ತಂಡ ಮಾಡಿದೆ. ಹಾಗಿದ್ರೆ, ಏನಿದು ರಕ್ಷಾ ಕ್ಯೂಆರ್ ಕೋಡ್?, ವಾಹನ ಸವಾರರಿಗೆ ಹೇಗೆ ಸಹಾಯ? ಎಂಬ ಇಂಟ್ರೆಸಿಂಗ್ ಮಾಹಿತಿ ಇಲ್ಲಿದೆ ನೋಡಿ.

ಏನಿದು ರಕ್ಷಾ ಕ್ಯೂಆರ್ ಕೋಡ್?: ರಸ್ತೆ ಅಪಘಾತಗಳು ಇಂದಿನ ದಿನಗಳಲ್ಲಿ ಸಾಮಾನ್ಯವಾದ ವಿಷಯವಾಗಿವೆ. ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡುವ ಸಲುವಾಗಿ ಈ ರಕ್ಷಾ ಕ್ಯೂಆರ್ ಕೋಡ್ (Raksha QR Code) ಸಾಫ್ಟ್ವೇರ್ನ್ನು ಹೈವೇ ಡಿಲೈಟ್ ಸಂಸ್ಥೆ ಲಾಂಚ್ ಮಾಡಿದೆ. ಈ ಮೂಲಕ ಅಪಘಾತ ಸ್ಥಳದಲ್ಲಿ ಇರುವ ಸ್ಥಳೀಯರು ವಾಹನದ ಮೇಲೆ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮನೆಯವರಿಗೆ ಮಾಹಿತಿ ನೀಡಬಹುದು.
ಇದು ಹೇಗೆ ಕೆಲಸ ಮಾಡುತ್ತದೆ?: ಈ ಸಂಬಂಧ ಡಿಲೈಟ್ ಸಂಸ್ಥೆಯ ಸಂಸ್ಥಾಪಕ ರಾಜೇಶ್ ಘಟನಟ್ಟಿ ಅವರು ಮಾಹಿತಿ ನೀಡಿದ್ದಾರೆ. ಈ ಕೋಡ್ ಅನ್ನು ಅಪಘಾತಕ್ಕೆ ಒಳಗಾವರನ್ನು ರಕ್ಷಣೆ ಮಾಡಲು ಅಭಿವೃದ್ಧಿಪಡಿಸಲಾಗಿದೆ. ಈ ಕ್ಯೂಆರ್ ಕೋಡ್ ಹೊಂದಿರುವ ಯಾರು ಎಲ್ಲಿಯೇ ಅಪಘಾತಕ್ಕೆ ಒಳಗಾದರೂ ಸಹ ಅಲ್ಲೇ ಇರುವ ಸ್ಥಳೀಯರು ಸುಲಭವಾಗಿ ಫೋನ್ ಮೂಲಕ ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಈ ಮಾಹಿತಿ ನೇರವಾಗಿ ಸಂಸ್ಥೆಗೆ ಹೋಗುತ್ತದೆ. ಆನಂತರ ಆ ಕರೆಯನ್ನು ಅಗತ್ಯ ಇರುವವರಿಗೆ ರವಾನಿಸುವ ಕೆಲಸ ಆಗುತ್ತದೆ ಎಂದು ಹೇಳಿದ್ದಾರೆ.
ಇದರಲ್ಲಿ ಭದ್ರತೆ ವಿಚಾರಕ್ಕೂ ಸಹ ಹೆಚ್ಚಿನ ಗಮನಹರಿಸಿದ್ದು, ಈ ಮೂಲಕ ಕರೆ ಮಾಡುವ ಮತ್ತು ಸ್ವೀಕರಿಸುವವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇದನ್ನು ಯಾರಾದರೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಂಡುಬಂದಲ್ಲಿ ಆ ಸಂಪರ್ಕವನ್ನು ಬ್ಲಾಕ್ ಮಾಡಲಾಗುತ್ತದೆ. ಉಳಿದಂತೆ ನಮ್ಮ ಸಂಸ್ಥೆ ಅಪಘಾತದ ಸ್ಥಳದ ಮಾಹಿತಿ ಪಡೆದು ಸ್ಥಳೀಯ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗೂ ಮಾಹಿತಿ ನೀಡುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಈ ಸಂಸ್ಥೆ ಜೀವ ರಕ್ಷಕವಾಗಿ ಕೆಲಸ ಮಾಡಲು ಸಜ್ಜಾಗಿದೆ.
ಇದಕ್ಕೆ ಎಷ್ಟು ಪಾವತಿ ಮಾಡಬೇಕು?: ಯಾವುದೇ ವಾಹನ ಸವಾರರು ಸಹ ಈ ಕ್ಯೂಆರ್ ಕೋಡ್ ಸ್ಟಿಕ್ಕರ್ ಅನ್ನು ತಮ್ಮ ವಾಹನದ ಮೇಲೆ ಅಂಟಿಸಿಕೊಳ್ಳಬಹುದಾಗಿದೆ. ಅದರಲ್ಲೂ ಬೈಕ್ಗಳು ಹೆಚ್ಚು ವಾತಾವರಣಕ್ಕೆ ತೆರೆದುಕೊಳ್ಳುವುದರಿಂದಾಗಿ ವಿಶೇಷ ಕ್ಯೂಆರ್ ಕೋಡ್ ಸ್ಟಿಕ್ಕರ್ ಆಯ್ಕೆಯನ್ನೂ ಸಹ ನೀಡಲಾಗುತ್ತದಂತೆ. ಇದರೊಂದಿಗೆ ಬಳಕೆದಾರರು ವಾರ್ಷಿಕವಾಗಿ ಈ ಸೇವೆಗೆ 365ರೂ.ಗಳನ್ನು ಪಾವತಿ ಮಾಡಬೇಕು. ಅಂದರೆ ದಿನಕ್ಕೆ ಒಂದು ರೂ. ಖರ್ಚು ಮಾಡಿದಂತೆ.
ನೋಂದಣಿ ಪ್ರಕ್ರಿಯೆ ಹೇಗಿರಲಿದೆ?: ಇದಕ್ಕಾಗಿ ಈಗಾಗಲೇ ವೆಬ್ಸೈಟ್ ಅನ್ನು ತೆರೆಯಲಾಗಿದೆ. ಈ ಕ್ಯೂಆರ್ ಕೋಡ್ ಅಗತ್ಯ ಇರುವವರು ಈ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಲ್ಲಿ ಅಗತ್ಯವಾಗಿ ರಕ್ತದ ಗುಂಪು, ವಾಹನದ ವಿಮೆ, ಆರೋಗ್ಯ ವಿಮೆ ಹಾಗೂ ಕುಟುಂಬದ ತುರ್ತು ಮಾಹಿತಿಯ ವಿವರಗಳನ್ನು ನಮೂದು ಮಾಡಬೇಕಿದೆ. ಇದಾದ ನಂತರದಲ್ಲಿ ಈ ಸೇವೆ ನಿಮಗೆ ಲಭ್ಯ ಇರಲಿದೆ. ಪ್ರಮುಖ ವಿಷಯ ಏನೆಂದರೆ ನೀವು ನೀಡುವ ಎಲ್ಲಾ ಮಾಹಿತಿಗಳು ಸುರಕ್ಷಿತವಾಗಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ನಿಮಗೂ ಈ ಸೇವೆ ಬೇಕು ಎಂದರೆ https://highwaydelite.com/#/raksha-agent-order ಗೆ ಭೇಟಿ ನೀಡಬಹುದು.
ಕ್ಯೂಆರ್ ಕೋಡ್ ಅನ್ನೇ ಯಾಕೆ ನೀಡಲಾಗಿದೆ?: ನಿಮಗೆ ಅನಿಸಿರಬಹುದು. ನೇರವಾಗಿ ಫೋನ್ ನಂಬರ್ ಅನ್ನೇ ನೀಡಿದ್ದರೆ ಆಗುತ್ತಿತ್ತಲ್ಲ ಅಂತ. ಆದರೆ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಹಾಗೂ ಟೆಕ್ನಾಲಜಿಯನ್ನು ದುರ್ಬಳಕೆ ಮಾಡಿಕೊಳ್ಳುವ ಅದೆಷ್ಟೋ ಜನರು ಇದ್ದಾರೆ. ಇದನ್ನು ತಪ್ಪಿಸುವ ಭಾಗವಾಗಿ ಹಾಗೂ ಕ್ಯೂಆರ್ ಕೋಡ್ ಇಂದು ವ್ಯಾಪಕವಾಗಿ ಬಳಕೆ ಆಗುತ್ತಿದ್ದು, ಅದರ ಬಗ್ಗೆ ಎಲ್ಲರಿಗೂ ಅರಿವು ಇರುವುದರಿಂದ ಇದನ್ನೇ ಬಳಕೆ ಮಾಡಲಾಗಿದೆ. ಈ ಮೂಲಕ ಮಾಹಿತಿ ಸುರಕ್ಷತೆಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ಸಂಸ್ಥೆಯ ಶಿಲ್ಪಾ ಅವರು ಗಿಜ್ಬಾಟ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ದೇಶದ ಹಲವು ಮಹಾನಗರಗಳಲ್ಲಿ ರಸ್ತೆ ಅಪಘಾತಗಳು ನಿರಂತವಾಗಿ ಹೆಚ್ಚಾಗುತ್ತಲೇ ಇರುತ್ತವೆ. ಇವುಗಳಿಂದ ಆಗುವ ಅನಾಹುತವನ್ನು ತಪ್ಪಿಸಲು ಹಾಗೂ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಸಮಸ್ಯೆಗಳನ್ನು ತಪ್ಪಿಸಲು ಈ ರಕ್ಷಾ ಕ್ಯೂಆರ್ ಕೋಡ್ ಸಹಾಯ ಮಾಡಲಿದೆ. ಅಷ್ಟೇ ಅಲ್ಲದೆ ಪೊಲೀಸರಿಗೆ ಈ ವ್ಯವಸ್ಥೆ ತುಂಬಾ ಅನುಕೂಲ ಮಾಡಿಕೊಡಲಿದೆ.


Click it and Unblock the Notifications








