ಗೃಹಲಕ್ಷ್ಮಿ ಹಣ ಬಂದಿಲ್ಲವೇ?... ಚಿಂತೆ ಬೇಡ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಸರ್ಕಾರ!
ಹೊಸ ಸರ್ಕಾರ (Government of Karnataka) ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ (Guarantee scheme) ಜನರು ಒಂದಲ್ಲಾ ಒಂದು ರೀತಿಯಲ್ಲಿ ಸೌಲಭ್ಯ ಪಡೆಯುತ್ತಿದ್ದಾರೆ. ಈ ನಡುವೆ ಒಟ್ಟಾರೆ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಈ ಎಲ್ಲಾ ಕಾರಣಕ್ಕೆ ಈವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಕೆಲಸಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಇಂದಿನಿಂದ ಅವಕಾಶ ನೀಡಲಾಗಿದೆ.
ಹೌದು, ಸರ್ಕಾರದ ಹಲವಾರು ಯೋಜನೆಗಳನ್ನು ಪಡೆದುಕೊಳ್ಳಲು ಅಥವಾ ಅರ್ಜಿ ಸಲ್ಲಿಕೆ ಮಾಡಲು ಅದೆಲ್ಲಕ್ಕಿಂತ ಮಿಗಿಲಾಗಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ(Anna Bhagya, Gruha Lakshmi) ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ (Ration card) ಅಗತ್ಯವಾಗಿದೆ. ಈ ನಡುವೆ ರೇಷನ್ ಕಾರ್ಡ್ ಬಳಕೆದಾರರಿಗೆ ಸರ್ಕಾರ ಶುಭ ಸುದ್ದಿ ನೀಡಿದ್ದು, ಎಲ್ಲಾ ರೀತಿಯ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗಿದ್ರೆ ಈ ಕಾರ್ಯವನ್ನು ಎಲ್ಲಿ ಮಾಡಬೇಕು, ಲಾಸ್ಟ್ ಡೇಟ್ ಯಾವುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಇಂದಿನಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ: ಕಾಂಗ್ರೆಸ್ ಸರ್ಕಾರ ತನ್ನೆಲ್ಲಾ ಯೋಜನೆಗಳನ್ನು ಮಹಿಳೆಯರನ್ನೇ ಕೇಂದ್ರೀಕರಿಸಿಕೊಂಡು ಜಾರಿ ಮಾಡುತ್ತಿದೆ. ಅಂದರೆ ರೇಷನ್ ಕಾರ್ಡ್ನಲ್ಲಿ ಕುಟುಂಬದ ಯಜಮಾನಿಯಾಗಿದ್ದರೆ ಮಾತ್ರ ಆಕೆಗೆ ಗೃಹಲಕ್ಷ್ಮಿ ಹಣ ನೀಡುತ್ತೇವೆ ಎಂಬುದಾಗಿಯೂ ತಿಳಿಸಿದೆ. ಆದರೆ ಬಹುಪಾಲು ಕಾರ್ಡ್ನಲ್ಲಿ ಕುಟುಂಬದ ಮುಖ್ಯಸ್ಥರು ಪುರುಷ ಎಂದು ನಮೂದಾಗಿದೆ. ಇದರಿಂದ ಕೆಲ ಮಹಿಳೆಯರಿಗೆ ಸಂಕಷ್ಟ ಎದುರಾಗಿದೆ.
ಮನೆ ಮುಖ್ಯಸ್ಥರು ಪುರುಷನಾಗಿದ್ದರಿಂದ ಮಹಿಳೆಗೆ ಗೃಹಲಕ್ಷ್ಮೀ ಯೋಜನೆ ಸಿಕ್ಕಿಲ್ಲ. ಯಾಕೆಂದರೆ ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ವಯಸ್ಕ ಮಹಿಳೆ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ಸಿಗಲಿದೆ. ಈ ನಡುವೆ ಆಹಾರ ಇಲಾಖೆ ಅಚ್ಚರ ಅಂಕಿ ಅಂಶ ನೀಡಿದ್ದು, 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ನಲ್ಲಿ ಪುರುಷ ಮುಖ್ಯಸ್ಥರೇ ಇದ್ದಾರೆ ಎಂದು ತಿಳಿಸಲಾಗಿದೆ.
ಈ ಕಾರಣಕ್ಕೆ ವಯಸ್ಕ ಮಹಿಳೆ ಮನೆಯಲ್ಲಿ ಇದ್ದು, ಪುರುಷ ಮುಖ್ಯಸ್ಥನ ಹೆಸರು ಆ ಕಾರ್ಡ್ನಲ್ಲಿ ಇದ್ದರೆ ಅದನ್ನು ಮಾನ್ಯ ಮಾಡಲಾಗುತ್ತಿಲ್ಲ. ಈ ಕಾರಣಕ್ಕೆ ಈಗ ಸರ್ಕಾರ ಮನೆಯೊಡತಿ ಹೆಸರು ಬದಲಾವಣೆಗೆ ಅವಕಾಶ ನೀಡಿದೆ. ಅಂದರೆ ಸೆಪ್ಟೆಂಬರ್ 1 ರಿಂದ ಸೆ,10 ರ ವರೆಗೆ ಈ ಅವಕಾಶ ನೀಡಲಾಗಿದ್ದು, ಈ ಹತ್ತು ದಿನದಲ್ಲಿ ಅಗತ್ಯ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳಿ ಎಂದು ಸರ್ಕಾರ ಮಾಹಿತಿ ನೀಡಿದೆ.
ಏನೆಲ್ಲಾ ತಿದ್ದುಪಡಿ ಮಾಡಬಹುದು: ಈ ವಿಭಾಗದಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರ ಸೇರ್ಪಡೆ, ಮೃತಪಟ್ಟರೆ ಅಂಥವರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಮಾಡಲು ಈ ಬಾರಿ ಅನುಮತಿ ನೀಡಲಾಗಿದೆ. ಇದಕ್ಕಾಗಿ ನೀವು ನೇರವಾಗಿ ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಓನ್ ಹಾಗೂ ಕರ್ನಾಟಕ ಓನ್ ಸೇರಿದಂತೆ ಹಲವು ಕಚೇರಿಗಳಿಗೆ ಭೇಟಿ ನೀಡಬೇಕಿದೆ.
ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ತಿಳಿಯುವುದು ಹೇಗೆ?:
- ಮೊದಲು ನೀವು ಸರ್ಕಾರ ಆಹಾರ ಇಲಾಖೆಯ ಅಧಿಕೃತ ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ಇ ಸರ್ವಿಸ್ ಎಂಬ ವಿಭಾಗ ಕಾಣಿಸಿಕೊಳ್ಳುತ್ತವೆ ಅದರ ಮೇಲೆ ಕ್ಲಿಕ್ ಮಾಡಿ
- ಬಳಿಕ ಇ-ರೇಷನ್ ಕಾರ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಹಲವಾರು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ, ಅದರಲ್ಲಿ ಶೋ ರೇಷನ್ ಕಾರ್ಡ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಂತರದಲ್ಲಿ ನಿಮ್ಮ ರೇಷನ್ ಕಾರ್ಡ್ ಎಂಟ್ರಿ ಮಾಡಿ, ಇದಾದ ಬಳಿಕ ಯಾರ ಹೆಸರನ್ನು ಪರಿಶೀಲನೆ ಮಾಡಬೇಕೋ ಅದನ್ನು ಸೆಲೆಕ್ಟ್ ಮಾಡಿ.
-ಇದನ್ನು ಮಾಡಿದ ನಂತರ ಅವರ ಆಧಾರ್ ನಂಬರ್ಗೆ ಲಿಂಕ್ ಆದ ಫೋನ್ಗೆ ಓಟಿಪಿ ಬರುತ್ತದೆ, ಅದನ್ನು ಅಗತ್ಯ ಜಾಗದಲ್ಲಿ ಭರ್ತಿ ಮಾಡಿದರೆ ಆ ಅವರ ಹೆಸರು ನಿಷ್ಕ್ರಿಯಾಗಿದೆಯಾ ಅಥವಾ ಸಕ್ರಿಯವಾಗಿದೆಯಾ ಎಂಬುದನ್ನು ತೋರಿಸುತ್ತದೆ.
ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಯಾವಾಗ?: ಸರ್ಕಾರ ಸದ್ಯಕ್ಕೆ ತಿದ್ದುಪಡಿಗಷ್ಟೇ ಅನುಮತಿ ನೀಡಿದೆ. ಆದರೆ ಯಾವಾಗ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಆಹ್ವಾನಿಸುತ್ತೋ ಎಂಬ ಬಗ್ಗೆ ಮಾಹಿತಿ ಇಲ್ಲ. ಅದಾಗ್ಯೂ ಈಗಾಗಲೇ ಬಿಪಿಎಲ್ ಕಾರ್ಡ್ಗೆ ಸಲ್ಲಿಕೆಯಾದ ಅರ್ಜಿಗಳು ಇನ್ನೂ ಸರ್ಕಾರ ಕಚೇರಿಗಳ ಕಬೋರ್ಡ್ನಲ್ಲೇ ಇವೆ. ಇವುಗಳನ್ನು ಇನ್ನೂ ವಿಲೇವಾರಿ ಆಗಿಲ್ಲ. ಇದು ಆದ ನಂತರ ಹೊಸದಾಗಿ ಅರ್ಜಿ ಕರೆಯಲಾಗುತ್ತದೆ ಎನ್ನಲಾಗಿದೆ.


Click it and Unblock the Notifications








