Pragati App: ಕರ್ನಾಟಕದ ಸರ್ಕಾರದಿಂದ 'ಪ್ರಗತಿ ಆಪ್' ಲಾಂಚ್: ಇದರಿಂದಾಗುವ ಪ್ರಯೋಜನ ಏನು?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಸ್ಥಿತ್ವಕ್ಕೆ ಬಂದ ನಂತರದಲ್ಲಿ ವಿವಿಧ ಬೆಳವಣಿಗೆಗಳು ಕಂಡು ಬರುತ್ತಿವೆ. ಅದರಲ್ಲೂ ಗ್ಯಾರಂಟಿ ಯೋಜನೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸರ್ಕಾರ ಈ ಯೋಜನೆಗಳ ಸಂಬಂಧ ಹೊಸ ಆಪ್ವೊಂದನ್ನು ಬಿಡುಗಡೆ ಮಾಡಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇದೀಗ ಪ್ರಗತಿ ಮೊಬೈಲ್ ಅಪ್ಲಿಕೇಶನ್ (Pragati App) ಅನ್ನು ಲಾಂಚ್ ಮಾಡಿದ್ದಾರೆ. ಇದು ಎಲ್ಲ ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳ ಕ್ಷೇತ್ರ ಮಟ್ಟದ ಪ್ರಗತಿ ಪರಿವೀಕ್ಷಣೆಗೆ ಪೂರಕವಾಗಿ ಅಭಿವೃದ್ಧಿಪಡಿಸಿರುವ ಆಪ್ ಇದಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಹಾಗಿದ್ರೆ, ಈ ಆಪ್ ಹೇಗೆ ಕೆಲಸ ಮಾಡಲಿದೆ?, ಇದರಿಂದ ಆಗುವ ಅನುಕೂಲ ಏನು ಅಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಪ್ರಗತಿ ಆಪ್: ಈ ಪ್ರಗತಿ ಮೊಬೈಲ್ ಆಪ್ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ ಮತ್ತು ಅಧಿಕಾರಿಗಳು ವೇಳಾಪಟ್ಟಿಯ ಪ್ರಕಾರ ಸಂಸ್ಥೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಪರಿಹರಿಸಲು ಸಹಾಯ ಇದು ಮಾಡುತ್ತದೆ. ಈ ಮೂಲಕ ಎಲ್ಲಾ ಇಲಾಖೆಗಳ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ತಪಾಸಣೆಗಳನ್ನು ಸುಲಭಗೊಳಿಸುವುದು. ತಂತ್ರಾಂಶ ಹಸ್ತಕ್ಷೇಪದ ಅಗತ್ಯವನ್ನು ಅನುಷ್ಠಾನ ಮಾಡುವುದು ಈ ಆಪ್ನ ಮುಖ್ಯ ಉದ್ದೇಶ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಆಪ್ ಲಾಂಚ್ಗೆ ಪ್ರಮುಖ ಉದ್ದೇಶ ಏನು?: ಈ ಮೊದಲು ಯಾವುದೇ ಅಧಿಕಾರಿಗಳು ಸರಿಯಾಗಿ ನಿರ್ಧಿಷ್ಟಪಡಿಸಿದ್ದ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿ ಯಾವೆಲ್ಲಾ ಕಾರ್ಯಗಳು ಯಶಸ್ವಿಯಾಗಿವೆ ಎಂಬ ಬಗ್ಗೆ ವರದಿ ಮಾಡಲು ಮುಂದಾಗುತ್ತಿರಲಿಲ್ಲವಂತೆ. ಅಂದರೆ ಹಿರಿಯ ಅಧಿಕಾರಿಗಳು ನಿಯೋಜಿಸಿದ ಕ್ಷೇತ್ರಗಳಿಗೆ ಸರಿಯಾಗಿ ಭೇಟಿ ನೀಡಿ ಮೇಲ್ವಿಚಾರಣೆ ಮಾಡುವಲ್ಲಿ ವಿಫಲವಾಗುತ್ತಿದ್ದ ಹಿನ್ನೆಲೆ ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಾಡಲು ಈ ಆಪ್ ಅನಾವರಣ ಮಾಡಲಾಗಿದೆ. ಪರಿಣಾಮ ಅಧಿಕಾರಿ ಯಾವ ಸಮಯಕ್ಕೆ ಎಲ್ಲಿಗೆ ಹೋಗಿದ್ದಾರೆ?, ಏನೆಲ್ಲಾ ಸಮಸ್ಯೆ ಆಲಿಸಿದ್ದಾರೆ, ಅಥವಾ ಪರಿಹರಿಸಿದ್ದಾರೆ ಅನ್ನೋ ವಿವರ ಈ ಆಪ್ನಲ್ಲಿ ದಾಖಲಾಗಲಿದೆ.

ಹಾಗಿದ್ರೆ ಅಧಿಕಾರಿಗಳು ಹೇಗೆ ಈ ಆಪ್ ಮೂಲಕ ಕೆಲಸ ಮಾಡುತ್ತಾರೆ?: ಪೂರ್ವ ನಿಯೋಜಿತ ವೇಳಾಪಟ್ಟಿಯಂತೆ ಕಡ್ಡಾಯವಾಗಿ ಅಧಿಕಾರಿಗಳು ಸಂಬಂಧಿಸಿದ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಇವರ ಮೇಲೆ ಆಪ್ ಮೂಲಕವೇ ಹಿರಿಯ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರುತ್ತಾರೆ. ಅಲ್ಲದೆ ಈ ಆಪ್ ಬಳಕೆ ಮಾಡಿಕೊಂಡು ಕ್ರೋಢೀಕೃತ ಮಾಹಿತಿ ಆಧಾರದ ಮೇಲೆ ವಿವಿಧ ಎಂಐಎಸ್ ವರದಿಗಳನ್ನು ತಯಾರು ಮಾಡಬಹುದಾಗಿದೆ. ಇದರಲ್ಲಿ ಜಿಪಿಎಸ್ ಆಯ್ಕೆ ಸಹ ಇರುವುದು ಮುಖ್ಯವಾದ ವಿಷಯವಾಗಿದೆ.
ಭವಿಷ್ಯದಲ್ಲಿ ಇನ್ನಷ್ಟು ಸೌಲಭ್ಯ: ಸದ್ಯಕ್ಕೆ ಇದು ಅಧಿಕಾರಿಗಳ ಭೇಟಿ ಹಾಗೂ ಪರಿಶೀಲನೆಗೆ ಮಾತ್ರ ಸೀಮಿತವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅಂದರೆ ಇದನ್ನು ಸಾರ್ವಜನಿಕಗೊಳಿಸುವ ಮೂಲಕ ಇ-ಸ್ಪಂದನದೊಂದಿಗೆ ಲಿಂಕ್ ಮಾಡಲಾಗುತ್ತದೆ ಎನ್ನಲಾಗಿದೆ. ಈ ಮೂಲಕ ಜನರಿಂದ ದೂರುಗಳನ್ನು ಸ್ವೀಕಾರ ಮಾಡಿ ಅದನ್ನು ಪರಿಹರಿಸಲು ಅಧಿಕಾರಿಗಳನ್ನು ನಿಯೋಜನೆ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಸರ್ಕಾರದ ಇತರೆ ಆಪ್ಗಳು: ಈ ಆಪ್ನೊಂದಿಗೆ ಈಗಾಗಲೇ ಅಸ್ಥಿತ್ವದಲ್ಲಿರುವ ಸಾಕಷ್ಟು ಆಪ್ಗಳು ಸರ್ಕಾರದ ಯೋಜನೆಗಳ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯಲ್ಲಿ ಸಹಾಯಕವಾಗಿವೆ. ಅಂದರೆ ಅಂಗನವಾಡಿ, ಆಪ್ತಮಿತ್ರ, ಅರಣ್ಯ ಭೂಮಿ, ಬೆಂಗಳೂರು ಒನ್, ಬೆಳೆ ಸಮೀಕ್ಷೆ, ಭೂಮಿ, ಬೆಸ್ಕಾಂ ಮಿತ್ರ, ದಾಮಿನಿ, ಕಾನೂನು ಇಲಾಖೆ, ಗ್ರಾಮಸ್ವರಾಜ್, ಹಸಿರು, ಸರ್ಕಾರಿ ಇ-ಪ್ರೊಕ್ಯೂರ್ಮೆಂಟ್ ಸಿಸ್ಟಮ್ - NIC, ಇಂದಿರಾ ಕ್ಯಾಂಟೀನ್, ಜರೇಗಾ, ಕೆ ಕಿಸಾನ್, ಕಲಾ ತಂಡ ಸೇರಿದಂತೆ ವಿವಿಧ ಆಪ್ಗಳನ್ನು ಬಳಕೆ ಮಾಡಿಕೊಂಡು ಸರ್ಕಾರದ ಸವಲತ್ತನ್ನು ಪಡೆಯಬಹುದು, ಮಾಹಿತಿ ಪಡೆಯಬಹುದು. ಇದರಲ್ಲಿ ಕೆಲವು ಆಪ್ಗಳು ಸಾರ್ವಜನಿಕವಾಗಿದ್ದರೆ ಇನ್ನೂ ಕೆಲವು ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿವೆ.


Click it and Unblock the Notifications








